ವಾಸ್ತು, ಸಮೃದ್ಧಿ, ಆರೋಗ್ಯಕ್ಕೆ ಮನಿ ಪ್ಲ್ಯಾಂಟ್, ಸೊಂಪಾಗಿ ಬೆಳೆಸೋದು ಹೇಗೆ?
ಮನೆ ಮಲೆನಾಡಲ್ಲಿ ಇರಲಿ, ಬಿಸಿಲ ನಾಡಲ್ಲಿ ಇರಲಿ, ಮನಗೊಂದು ಹಸಿರು ಲುಕ್ ನೀಡುವುದು ಮನಿ ಪ್ಲ್ಯಾಂಟ್. ಮನೆಯೊಳಗೂ, ಹೊರಗೂ ಬೆಳೆಯಬಹುದಾದ ಈ ಸಸಿಯನ್ನು ಗೋಡೆ ತುಂಬಾ ಹಬ್ಬಿಸಿ, ಹುಲುಸಾಗಿ ಬೆಳೆಯಲು ಬಿಟ್ಟು ಬಿಟ್ಟರೆ, ಅಬ್ಬಾ. ಹಸಿರಿನ ವನವೇ ಮೈದಾಳಿದಂತೆ ಕಾಣಿಸುತ್ತದೆ. ಇದು ಸೊಂಪಾಗಿ ಬೆಳೆದಷ್ಟೂ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ ಅನ್ನುತ್ತೆ ವಾಸ್ತು ಶಾಸ್ತ್ರ. ಹಾಗಂತ ಇದು ಎಲ್ಲೆಡೆ ಹಬ್ಬಿ ಬೆಳೆಯುವುದೂ ಇಲ್ಲ. ಹಾಗಂಥ ನಿಮ್ಮ ಕೈಯಲ್ಲಿರೋ ದುಡ್ಡೆಲ್ಲಾ ಖಾಲಿಯಾಗುತ್ತೆ ಅಂತ ಯೋಚಿಸಬೇಡಿ. ಅದನ್ನು ಬೆಳೆಸಲು ಕೆಲವು ಸಿಂಪಲ್ ಟ್ರಿಕ್ಸ್ ಇವೆ. ಬಳಸಿದರೆ ಸಾಕು, ನೋಡಿ ಮನೆ ತುಂಬಾ ಹಸಿರಾಗುತ್ತದೆ. ಕೈಗೆ ದುಡ್ಡು ಸೇರುವುದು ನಿಜವೋ ಸುಳ್ಳೋ ಪಕ್ಕಕ್ಕಿರಲಿ. ಹಸಿರನ್ನು ಕಣ್ತುಂಬಿಕೊಂಡರೆ ಮನಸ್ಸಂತೂ ನೆಮ್ಮದಿಯಾಗಿರುವುದು ಹೌದು. ಈ ಮನಿ ಪ್ಲ್ಯಾಂಟ್ ಬಗ್ಗೆ ವಾಸ್ತು ಏನು ಹೇಳುತ್ತೆ, ಬಾಡದಿರಲು ಏನು ಮಾಡಬೇಕು? ನಾವು ಹೇಳುತ್ತೇವೆ ಇಲ್ ಕೇಳಿ.
ಮನಿ ಪ್ಲ್ಯಾಂಟ್ ಮತ್ತು ವಾಸ್ತು
ವಾಸ್ತು ಪ್ರಕಾರ ಮನಿ ಪ್ಲ್ಯಾಂಟ್ ಸಕಾರಾತ್ಮಕ ಶಕ್ತಿಯ (Positive Energy) ಸಂಕೇತ. ಇದು ಆರ್ಥಿಕ ಸಮಸ್ಯೆಯನ್ನು ಕಡಿಮೆ ಮಾಡಿ, ಮನೆಗೆ ಸಮೃದ್ಧಿ ಮತ್ತು ನೆಮ್ಮದಿ ತರುತ್ತೆ ಅನ್ನೋ ನಂಬಿಕೆ ಇದೆ. ಆದರೆ ಒಂದು ವಿಷಯ ನೆನಪಿಡಿ - ಬಾಡಿದ, ಒಣಗಿದ ಗಿಡ ಮನೆಯಲ್ಲಿರೋದು ಅಶುಭ| ಹಾಗಾಗಿ ಗಿಡವನ್ನ ಯಾವಾಗಲೂ ಹಸಿರಾಗಿ, ಆರೋಗ್ಯವಾಗಿ ಇಟ್ಟುಕೊಳ್ಳೋದು ಮುಖ್ಯ.

ವಾಸ್ತು:ಯಾವ ದಿಕ್ಕಲ್ಲಿಟ್ಟರೆ ಒಳ್ಳೆಯದು?
- ವಾಸ್ತು ಪ್ರಕಾರ ಮನಿ ಪ್ಲ್ಯಾಂಟ್ಗೆ ಆಗ್ನೇಯ (South-East) ದಿಕ್ಕು ಶ್ರೇಷ್ಠ. ಇದು ಶುಕ್ರ ಗ್ರಹ ಮತ್ತು ಗಣಪತಿಯ ದಿಕ್ಕೆನ್ನುತ್ತಾರೆ.
- ಈಶಾನ್ಯ (North-East) ದಿಕ್ಕಿನಲ್ಲಿ ಇಡೋದನ್ನ ತಪ್ಪಿಸಿ ಅನ್ನುತ್ತೆ ವಾಸ್ತು.
- ಗಿಡ ನೆಲದ ಮೇಲೆ ಹರಡದೆ, ಮೇಲ್ಮುಖವಾಗಿ ಹಬ್ಬಿ ಬೆಳೆದರೆ ಶುಭ. ಬಳ್ಳಿಗೆ ಒಂದು ಆಧಾರವಿರಲಿ.
- ಮನೆಯ ಒಳಗೆ ಬೆಳೆಸಿದರೂ ಒಳ್ಳೇದು.
ಸೊಂಪಾಗಿ ಬೆಳೆಯೋಕೆ ಏನ್ ಮಾಡ್ಬೇಕು?
- ಬೆಳಕು: ನೇರ ಬಿಸಿಲಲ್ಲ, ಪರೋಕ್ಷ (indirect) ಬೆಳಕು ಬೀಳೋ ಕಡೆ ಇರಲಿ. ಕಡು ಬಿಸಿಲಿಗೆ ಎಲೆಗಳು ಸುಟ್ಟು, ಹಳದಿಯಾಗ್ತವೆ.
- ನೀರು: ಮಣ್ಣಿನ ಮೇಲ್ಭಾಗ ಒಣಗಿದಾಗ ಮಾತ್ರ ನೀರು ಹಾಕಿ. ಜಾಸ್ತಿ ನೀರು ಹಾಕಿದರೆ ಬೇರು ಕೊಳೆಯೋಕೆ (root rot) ಕಾರಣ ಆಗುತ್ತೆ. ಬಾಟಲಿಯಲ್ಲಿ ಬೆಳೆಸಿದರೆ ವಾರಕ್ಕೊಮ್ಮೆ ನೀರು ಬದಲಿಸಿದರೂ ಸಾಕು.
- ಎಲೆ ಸ್ವಚ್ಛತೆ: ಒದ್ದೆ ಬಟ್ಟೆಯಿಂದ ಎಲೆಗಳ ಮೇಲಿನ ಧೂಳು ಒರೆಸಿ. ಇದರಿಂದ ಗಿಡ ಚೆನ್ನಾಗಿ ಉಸಿರಾಡುತ್ತೆ.
- ಕಟ್ ಮಾಡೋದು ಹೇಗೆ: ಹಳದಿಯಾದ, ಒಣಗಿದ ಎಲೆಗಳನ್ನ ತೆಗೆದು ಹಾಕಿ. ಆಗಾಗ ಬಳ್ಳಿ ಕತ್ತರಿಸಿದರೆ ಹೊಸ ಚಿಗುರು ದಟ್ಟವಾಗಿ ಬರುತ್ತೆ.
- ಗೊಬ್ಬರ: ತಿಂಗಳಿಗೊಮ್ಮೆ ಸ್ವಲ್ಪ ಸಾವಯವ ಗೊಬ್ಬರ ಹಾಕಿದರೂ ಸಾಕು.
ಒಂದು ಸಣ್ಣ ಟಿಪ್ ಹೇಳ್ತೀನಿ ಕೇಳಿ, ಮನಿ ಪ್ಲ್ಯಾಂಟ್ ಮಣ್ಣಲ್ಲೂ, ನೀರಿನ ಬಾಟಲಿ ಎರಡರಲ್ಲಿಯೂ ಚೆನ್ನಾಗಿ ಬೆಳೆಯುತ್ತೆ. ಬಾಟಲಿಯಲ್ಲಿ ಬೆಳೆಸಿದರೆ ಎಲೆಗಳು ಹೆಚ್ಚು ಹೊಳಪಾಗಿರುತ್ತವೆ. ಮಣ್ಣಲ್ಲಿ ಬೆಳೆಸಿದರೆ ಬಳ್ಳಿ ದಪ್ಪಗೆ, ಗಟ್ಟಿಯಾಗಿ ಬೆಳೆಯುತ್ತೆ. ಎರಡರಲ್ಲೂ ಒಂದು ಆರೋಗ್ಯವಂತ ಬಳ್ಳಿಯ ತುಂಡನ್ನ (cutting) ಕತ್ತರಿಸಿ ನೆಟ್ಟರೆ, ಸುಲಭವಾಗಿ ಹೊಸ ಗಿಡ ರೆಡಿ. ಮನೆಗೆ ಬಂದವರಿಗೆ ಕುಂಕುಮ ಕೊಟ್ಟು, ಏನು ಕೊಡುವುದು ಅಂತ ಯೋಚಿಸೋ ಬದಲು, ಮನಿ ಪ್ಲ್ಯಾಂಟ್ ಗಿಡ ಕೊಟ್ಟರೆ ಸಿಗೋ ಸಂತೋಷವೇ ಬೇರೆ.
ಆರೋಗ್ಯಕ್ಕೂ ಒಳ್ಳೇದು
ವಾಸ್ತುವಿನ ನಂಬಿಕೆ ಒಂದೆಡೆ ಇರಲಿ. ಆದರೆ ವಿಜ್ಞಾನವೂ ಈ ಗಿಡವನ್ನ ಹೊಗಳುತ್ತೆ. ನಾಸಾದ (NASA) ಪ್ರಸಿದ್ಧ 'ಕ್ಲೀನ್ ಏರ್ ಸ್ಟಡಿ' ಪ್ರಕಾರ, ಮನಿ ಪ್ಲ್ಯಾಂಟ್ (Epipremnum aureum) ಮನೆಯೊಳಗಿನ ಗಾಳಿಯಲ್ಲಿನ ಫಾರ್ಮಲ್ಡಿಹೈಡ್ನಂತಹ ವಿಷಕಾರಿ ಅಂಶಗಳನ್ನ ಹೀರಿಕೊಂಡು ಗಾಳಿಯನ್ನ ಶುದ್ಧೀಕರಿಸುತ್ತೆ. ಮನೆ ಸೌಂದರ್ಯ, ಶುದ್ಧ ಗಾಳಿ ಮತ್ತು ಸಮೃದ್ಧಿಯ ಭಾವ - ಮೂರೂ ಒಟ್ಟಾಗಿ ಬೇಕು ಅಂದ್ರೆ, ಮನಿ ಪ್ಲ್ಯಾಂಟ್ ಬೆಳೆಸಿ.
ಹಾಗಾದ್ರೆ ಈ ಮಳೆಗಾಲದಲ್ಲಿ ನಿಮ್ಮ ಮನೆಗೂ ಒಂದು ಮನಿ ಪ್ಲ್ಯಾಂಟ್ ತಂದು, ಆಗ್ನೇಯ ಮೂಲೆಯಲ್ಲಿಟ್ಟು, ಪ್ರೀತಿಯಿಂದ ಆರೈಕೆ ಮಾಡಿ ನೋಡಿ. ನಿಮ್ಮ ಮನಿ ಪ್ಲ್ಯಾಂಟ್ ಎಷ್ಟು ಸೊಂಪಾಗಿ ಬೆಳೀತಿದೆ ಅಂತ ನಮಗೂ ಹೇಳಿ.
ಸೂಚನೆ: ಇಲ್ಲಿ ನೀಡಿರೋ ವಾಸ್ತು ಮಾಹಿತಿ ಸಾಂಪ್ರದಾಯಿಕ ನಂಬಿಕೆಗಳನ್ನ ಆಧರಿಸಿದೆ. ಇದನ್ನ oneindia ಖಚಿತಪಡಿಸೋಲ್ಲ. ಸೂಕ್ತ ತಜ್ಞರ ಸಲಹೆ ಪಡೆಯೋದು ಒಳ್ಳೆಯದು.














Click it and Unblock the Notifications