ಹನ್ನೆರಡು ರಾಶಿಯವರ ಮೇಲೆ ಚಂದ್ರ ಗ್ರಹಣದ ಪರಿಣಾಮಗಳು..
ಹೇವಿಳಂಬಿ ಸಂವತ್ಸರದ ಶ್ರಾವಣ ಮಾಸದ ಶುಕ್ಲ ಪಕ್ಷ ಹುಣ್ಣಿಮೆಯಾದ ಇದೇ ಆಗಸ್ಟ್ 7ರಂದು ಸೋಮವಾರ ಶ್ರವಣ ನಕ್ಷತ್ರ, ಮಕರ ರಾಶಿಯಲ್ಲಿ ಕೇತುಗ್ರಸ್ತ ಚಂದ್ರ ಗ್ರಹಣ ಇದೆ.
ಖಗ್ರಾಸ ಚಂದ್ರಗ್ರಹಣ: ತಿರುಪತಿ ದೇವಾಲಯ ಬಂದ್
ಗ್ರಹಣದ ವಿವರ
ಗ್ರಹಣ ಸ್ಪರ್ಶ ರಾತ್ರಿ 10.52
ಗ್ರಹಣ ಮಧ್ಯ ರಾತ್ರಿ 11.50
ಗ್ರಹಣ ಮೋಕ್ಷ ಮಧ್ಯರಾತ್ರಿ 01.49 (8-8-2017)
ಈ ಗ್ರಹಣದಿಂದ ಹನ್ನೆರಡು ರಾಶಿಗಳ ಮೇಲೆ ಆಗುವ ಪರಿಣಾಮಗಳೇನು ಎನ್ನುವುದನ್ನು ತಿಳಿಯುವುದಕ್ಕಾಗಿ ಈ ಲೇಖನ ಓದಿ. ಗ್ರಹಣವು ಆಯಾ ರಾಶಿಯವರಿಗೆ ಶುಭ ಅಥವಾ ಅಶುಭ ಫಲವನ್ನು ನೀಡುತ್ತದೆ. ಆದರೆ ಅದು ಯಾವ ರೀತಿ ಎಂಬುದು ಈ ಲೇಖನದ ಮೂಲಕ ತಿಳಿಯುತ್ತದೆ.
ಆಗಸ್ಟ್ 7-8 ಚಂದ್ರಗ್ರಹಣ, ಆಚರಣೆ-ನಿಯಮಗಳೇನು?
ಶುಭಾಶುಭ ಫಲಗಳ ಆಧಾರದಲ್ಲಿ ನೀವು ತೆಗೆದುಕೊಳ್ಳಬೇಕಾದ ಮುಂಜಾಗ್ರತೆಯನ್ನು ತಿಳಿದುಕೊಳ್ಳಿ. ಆ ದಿನ ದೇವರ ಆರಾಧನೆ ಕಡೆಗೆ ಗಮನಕೊಡಿ.
ಮೇಷ
ಈ ಬಾರಿಯ ಚಂದ್ರಗ್ರಹಣ ನಿಮ್ಮ ಮೇಲೆ ಹಾಗೂ ನಿಮ್ಮ ರಾಶ್ಯಾಧಿಪತಿ ಮೇಲೆ ಪ್ರಭಾವ ಬೀರುತ್ತದೆ. ಸಮಾಧಾನ ಇರುವುದು ಹಾಗೂ ವಿಷಯಗಳನ್ನು ಸುಲಭವಾಗಿ ತೆಗೆದುಕೊಳ್ಳುವುದು ಒಳ್ಳೆಯದು. ಕುಟುಂಬ ಹಾಗೂ ಸ್ನೇಹಿತರ ಜೀವನದಲ್ಲಿ ಆಗುವ ಘಟನೆಗಳು ನಿಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ.
ಈ ವರೆಗೆ ಚೆನ್ನಾಗಿದ್ದವರು ನಿಮ್ಮ ಜತೆ ನಡವಳಿಕೆ ಬದಲಾಯಿಸುತ್ತಾರೆ. ಮನೆಯಲ್ಲಿನ ಕೆಲ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಬೇಕಾಗುತ್ತದೆ. ನಿಮ್ಮ ಹಾಗೂ ಬಾಳಸಂಗಾತಿಯಲ್ಲಿ ಬದಲಾವಣೆಗಳು ಕಾಣುತ್ತೀರಿ. ಜನರು ನಿಮ್ಮನ್ನು ನೋಡುವ ವಿಧಾನದಲ್ಲಿ ಬದಲಾವಣೆ ಆಗಬೇಕು ಎಂದು ಬಯಸುತ್ತೀರಿ. ನಿಮ್ಮ ಒಳಮನಸ್ಸು ಸದಾ ಎಚ್ಚರವಾಗಿರಲಿ.
ವೃಷಭ
ಉದ್ಯೋಗ ಮತ್ತು ವ್ಯವಹಾರದ ವಿಚಾರವಾಗಿ ಯಾವುದೇ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ಸ್ವಂತ ವ್ಯಾಪಾರ ಇದ್ದರೆ ಅಥವಾ ಪಾರ್ಟ್ ನರ್ ಷಿಪ್ ವ್ಯವಹಾರ ಮಾಡುತ್ತಿದ್ದರೆ ನಿರ್ಧಾರ ತೆಗೆದುಕೊಳ್ಳುವ ಅನಿವಾರ್ಯ ಸೃಷ್ಟಿಯಾಗುತ್ತದೆ. ದೊಡ್ಡ ಮಟ್ಟದ ಹೂಡಿಕೆ ಮಾಡದಿರುವುದು ಉತ್ತಮ.
ಮೊಬೈಲ್ ಫೋನ್, ಲ್ಯಾಪ್ ಟಾಪ್ ನಂತಹ ವಸ್ತುಗಳ ಬಗ್ಗೆ ಹೆಚ್ಚಿನ ಗಮನವಿರಲಿ. ಮುಖ್ಯವಾದ ಫೈಲ್ ಗಳನ್ನು ಸರಿಯಾಗಿ ಎತ್ತಿಟ್ಟುಕೊಳ್ಳಿ. ವಾಹನ ಚಾಲನೆಯಲ್ಲಿ ಹೆಚ್ಚಿನ ಜಾಗ್ರತೆ ಇರಲಿ.
ಮಿಥುನ
ದಿಢೀರ್ ಖರ್ಚು ಕಾಣಿಸಿಕೊಳ್ಳಬಹುದು. ಉದ್ಯೋಗದಲ್ಲಿ ಒತ್ತಡ ಕಾಣಿಸಿಕೊಳ್ಳುತ್ತದೆ. ಉದ್ಯೋಗ-ಹಣಕಾಸು ವಿಚಾರದಲ್ಲಿ ಎಚ್ಚರದಿಂದ ವರ್ತಿಸಿ. ವಿದೇಶ ಪ್ರಯಾಣ-ದೂರಪ್ರಯಾಣಗಳು ಬೇಡ. ಈ ರೀತಿ ಪ್ರಯಾಣದಿಂದ ಸಮಸ್ಯೆಗಳು ಎದುರಾಗಬಹುದು. ವಿದೇಶದಲ್ಲಿ ನೆಲೆಸಿರುವ ಸ್ನೇಹಿತರು ಅಥವಾ ಸಂಬಂಧಿಕರು ಚಿಂತೆಗೆ ಕಾರಣವಾಗಬಹುದು.
ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಹಾದಿ ಬದಲಿಸುವ ಪ್ರಯತ್ನ ಮಾಡಬಹುದು. ಶಿಕ್ಷಣ ಸಂಸ್ಥೆಯಿಂದ ಬಲವಂತಾಗಿ ಹೀಗೆ ಮಾಡಿಸಬಹುದು. ಇದರಿಂದ ಒತ್ತಡ ಆಗುವ ಸಾಧ್ಯತೆ ಇದೆ. ಅದಕ್ಕೆ ಬೆಂಬಲ ಸಿಗಲಿದೆ. ಹಲವರಿಗೆ ಇದರಿಂದ ಒಳಿತಾಗಲಿದೆ. ಸೋದರ ಸಂಬಂಧಿಗಳ ವಿಚಾರದಲ್ಲಿ ಮಾನಸಿಕ ತಾಕಲಾಟ ಏರ್ಪಡುತ್ತದೆ.
ಕರ್ಕಾಟಕ
ಚಂದ್ರಗ್ರಹಣ ಈ ರಾಶಿಯವರು ಬದುಕಲ್ಲಿ ಯಾವಾಗಲೂ ಮುಖ್ಯ ಪರಿಣಾಮ ಬೀರುತ್ತದೆ. ಈ ಹಿಂದಿನ ಗ್ರಹಣಗಳಿಗೆ ಹೋಲಿಸಿದರೆ ಇದು ಶುಭ ತರುವ ಸಾಧ್ಯತೆಯಿದೆ. ಪ್ರೀತಿಪಾತ್ರರು ಅಥವಾ ಬಾಳಸಂಗಾತಿ ಮೇಲೆ ಗ್ರಹಣದ ಪ್ರಭಾವ ಹೆಚ್ಚಿರುತ್ತದೆ. ಹಣಕಾಸು ವಿಚಾರಗಳಲ್ಲಿ ಬದಲಾವಣೆ ಕಾಣುತ್ತೀರಿ.
ಗ್ರಹಣದ ಪ್ರಭಾವದಿಂದ ಶಕ್ತಿ ವೃದ್ಧಿಯಾಗುತ್ತದೆ. ಬಹಳ ದಿನಗಳಿಂದ ಬಾಹ್ಯ ಬದಲಾವಣೆ ಬಗ್ಗೆ ಯೋಚಿಸುತ್ತಿದ್ದರೆ ಅದಕ್ಕೆ ಈಗ ಸೂಕ್ತ ಕಾಲ. ಹಾಗೆ ಮಾಡುವುದು ಬುದ್ಧಿವಂತಿಕೆ ಕೂಡ. ಆದರೆ ಅದಕ್ಕಾಗಿ ಹೆಚ್ಚಿನ ಖರ್ಚು ಮಾಡಬೇಡಿ.
ಸಿಂಹ
ಈ ಸಮಯದಲ್ಲಿ ನೀವು ಕಂಡ ಕನಸಿನಿಂದಲೇ ಹಿಂಸೆಯಾಗುತ್ತದೆ. ಸರಿಯಾಗಿ ನಿದ್ರೆ ಬರದೆ ಹಿಂಸೆಯಾಗುತ್ತದೆ. ಕೆಟ್ಟ ಕನಸುಗಳು ಬೀಳುತ್ತವೆ. ಎಲ್ಲ ಕೆಟ್ಟ ಕನಸುಗಳು ನಿಜವಾಗುತ್ತವೆ ಎಂಬ ಆತಂಕ ಬೇಡ. ಹಾಗಾಗುವುದಿಲ್ಲ.
ಕಾನೂನು ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಅಥವಾ ಪರಿಹಾರವೂ ಕಾಣಿಸಿಕೊಳ್ಳಬಹುದು. ಇದರಿಂದ ಒಂದೋ ತೀರಾ ಅನುಕೂಲವಾಗುತ್ತದೆ ಅಥವಾ ತೊಂದರೆ ಎದುರಾಗುತ್ತದೆ. ಇಂಥ ವಿಚಾರದಲ್ಲಿ ಎಚ್ಚರ ವಹಿಸಿ. ಅಧ್ಯಯನ, ಅಧ್ಯಾಪನ ಹಾಗೂ ವೈಯಕ್ತಿಕ ಸಿದ್ಧಾಂತದಲ್ಲಿ ಬದಲಾವಣೆಗಳಾಗಬಹುದು. ವಿದೇಶ ಪ್ರಯಾಣಗಳು ಬೇಡ.
ಕನ್ಯಾ
ವಿಶ್ರಾಂತಿ ಪಡೆಯಲು ಏನು ಮಾಡಬೇಕೋ ಅದನ್ನು ಮಾಡಿ. ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕು. ಸಮಸ್ಯೆಗಳು ಮತ್ತೆ ಕಾಣಿಸಿಕೊಳ್ಳಬಹುದು. ಬಹುತೇಕ ಇವು ತಾತ್ಕಾಲಿಕವಾದವು. ಇದರಿಂದ ಭಯ ಮತ್ತು ನಿರಾಶೆ ಕಾಣಿಸಿಕೊಳ್ಳುತ್ತದೆ. ಗಂಭೀರವಾದ ಅಪಘಾತ ಸಾಧ್ಯತೆಯಿದ್ದು, ಆರೋಗ್ಯದ ಬಗ್ಗೆ ಮಾತ್ರ ವಿಪರೀತ ಎಚ್ಚರ ವಹಿಸಿ.
ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆಯಿದೆ. ನಿಮ್ಮ ಅಥವಾ ಬಾಳಸಂಗಾತಿಯ ಅಥವಾ ಪ್ರೀತಿಪಾತ್ರರ ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆಯಿದೆ. ದುಡ್ಡು ಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಜತೆಗೆ ಪ್ರಶಾಂತವಾದ ಮನಸ್ಸನ್ನು ಕಾಪಾಡಿಕೊಳ್ಳಿ.
ತುಲಾ
ಈ ಬಾರಿಯ ಗ್ರಹಣ ಅಂಥ ಒಳ್ಳೆಯದಲ್ಲ. ಪ್ರಣಯ ಹಾಗೂ ಪ್ರೇಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈಗಾಗಲೇ ಮದುವೆಯಾದವರು ಅಥವಾ ಪ್ರೇಮದಲ್ಲಿ ಇರುವವರಿಗೆ ಸಮಸ್ಯೆಗಳು ಬೆಳಕಿಗೆ ಬರುತ್ತವೆ. ಇಂಥ ವಿಚಾರದಲ್ಲಿ ಸಮಾಧಾನದಿಂದ ವರ್ತಿಸಿ. ಸಂಬಂಧ ಇನ್ನೂ ಗಟ್ಟಿ ಆಗಿಲ್ಲ ಎಂದರೆ ಮುರಿದು ಬೀಳುವ ಸಾಧ್ಯತೆ ಇದೆ. ವಿಚ್ಛೇದನ ಕೂಡ ಆಗಬಹುದು.
ಈ ರೀತಿ ಆದ ನಂತರ ಹೊಸ ಸಂಬಂಧ ಏರ್ಪಡಬಹುದು. ನಿಶ್ಚಿತಾರ್ಥ ಆಗುವ ಅವಕಾಶಗಳು ಹೆಚ್ಚಿವೆ.
ವೃಶ್ಚಿಕ
ಗ್ರಹಣದ ದಿನ ಅಥವಾ ಗ್ರಹಣದ ಹತ್ತಿರ ದಿನಗಳಲ್ಲಿ ಯಾವುದೇ ಕೆಲಸವನ್ನು ಹಚ್ಚಿಕೊಳ್ಳಬೇಡಿ. ಮನೆಯಲ್ಲಿ ಇದ್ದು, ವಿಶ್ರಾಂತಿ ಪಡೆಯಿರಿ. ಎಷ್ಟೇ ಶ್ರಮ ಹಾಕಿದ ಕೆಲಸವು ಅಂದುಕೊಂಡ ರೀತಿಯಲ್ಲಿ ಮುಗಿಯುವುದು ಅನುಮಾನ. ಮನೆಯ ದುರಸ್ತಿ ಅದೂ ಇದು ಎಂದು ಖರ್ಚು ಎದುರಾಗಲಿದೆ. ಪೋಷಕರು-ಪೋಷಕ ಸಮಾನರಿಂದ ಒತ್ತಡ ಬೀಳಲಿದೆ. ಅವರು ಸಿಟ್ಟಾಗಿ ರೇಗಾಡಿದರು ಅಂತ ನೀವೂ ಕೂಗಾಟ-ಚೀರಾಟ ಮಾಡಬೇಡಿ.
ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಪ್ರಭಾವ ಇದೆ. ಉದ್ಯೋಗದ ಮೇಲೆ ಪರಿಣಾಮ ಬೀರಲಿದ್ದು, ಬದಲಾವಣೆ ನಿರೀಕ್ಷೆ ಮಾಡಬಹುದು. ಒಳ್ಳೆ ಕೆಲಸ ಎಂದು ಖಾತ್ರಿ ಆಗುವವರೆಗೆ, ಕೆಲಸ ಬದಲಾಯಿಸಲು ಸರಿಯಾದ ಕಾರಣ ಇಲ್ಲ ಅಂದರೆ ಬದಲಾಯಿಸಬೇಕು. ಪ್ರಯಾಣ ಮಾಡುವುದು ಬೇಡ. ಕನಿಷ್ಠ ಪಕ್ಷ ಗ್ರಹಣದ ದಿನ ಬೇಡ. ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಹಾಗಂತ ಸಣ್ಣ-ಪುಟ್ಟದಕ್ಕೂ ಗಾಬರಿಯಾಗ ಬೇಡಿ.
ಧನು
ಈ ರಾಶಿಯವರ ಮೇಲೆ ಪರೋಕ್ಷವಾಗಿ ಪರಿಣಾಮ ಆಗುತ್ತದೆ. ಸೋದರ ಸಂಭಂಧಿ, ವ್ಯವಹಾರ ಭಾಗೀದಾರರು, ಬಾಳಸಂಗಾತಿ ಅಥವಾ ಪ್ರೀತಿಪಾತ್ರರು, ಹತ್ತಿರದ ಸ್ನೇಹಿತರ ಮೇಲೆ ಆಗುವ ಬದಲಾವಣೆ ನಿಮ್ಮ ಮೇಲೂ ಆಗುತ್ತದೆ. ನಿಮಗೆ ಮಕ್ಕಳಿದ್ದಲ್ಲಿ ಅವರ ಬಗ್ಗೆ ಹೆಚ್ಚಿನ ಜಾಗ್ರತೆಯನ್ನು ವಹಿಸಿ.
ಆರ್ಥಿಕ ವಿಚಾರದ ಮೇಲೆ ಹೆಚ್ಚಿನ ಪರಿಣಾಮ ಆಗುತ್ತದೆ. ಹೊಸ ಒಪ್ಪಂದಗಳಿಗೆ ಸಹಿ ಹಾಕದಿದ್ದರೆ ಒಳ್ಳೆಯದು. ಜೂಜು-ಸಟ್ಟಾ ಬೇಡ. ಸಂವಹನದ ವಸ್ತುಗಳು ನಷ್ಟವಾಗದಂತೆ ಎಚ್ಚರ ವಹಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಮಾಡುವ ಪೋಸ್ಟ್ ಗಳ ಬಗ್ಗೆ ಕೂಡ ಎಚ್ಚರಿಕೆ ಅಗತ್ಯ. ವಾಹನಗಳಿಗೆ ಸಣ್ಣ-ಪುಟ್ಟ ತೊಂದರೆ ಇದೆ. ಇದರಿಂದ ಆರೊಗ್ಯಕ್ಕಿಂತ ಹೆಚ್ಚಿನ ಆರ್ಥಿಕ ನಷ್ಟವಿದೆ.
ಮಕರ
ಆರ್ಥಿಕ ವಿಚಾರದ ಮೇಲೆ ಗ್ರಹಣದ ಪರಿಣಾಮ ಇದೆ. ಆರ್ಥಿಕ ವಿಚಾರಗಳನ್ನು ಚೆನ್ನಾಗಿ ಪ್ಲಾನ್ ಮಾಡಿ. ಇದರಿಂದ ಅನುಕೂಲವೇ ಕಾಣುತ್ತದೆ. ಅನಿರೀಕ್ಷಿತವಾದ ಖರ್ಚು ಕಾಣುತ್ತಿದೆ. ಮನೆಯಲ್ಲಿನ ಕೆಲವು ಸಮಸ್ಯೆಗಳ ಬಗ್ಗೆ ತಕ್ಷಣ ಗಮನ ಹರಿಸಬೇಕಾಗುತ್ತದೆ.
ಪ್ರೀತಿಪಾತ್ರರು, ಬಾಳ ಸಂಗಾತಿ ಅಥವಾ ಮಕ್ಕಳಲ್ಲಿ ಭಾವನಾತ್ಮಕವಾಗಿ ಅಸ್ಥಿರತೆ ಕಾಡುತ್ತದೆ. ಆದರೆ ಇಂಥ ಸಂದರ್ಭದಲ್ಲೇ ತಾಳ್ಮೆ ಅವಶ್ಯ. ಇಲ್ಲದಿದ್ದರೆ ಬೇರೆಯಾಗುವ ಸಾಧ್ಯತೆ ಇದೆ. ಎಲ್ಲರಿಗೂ ಹಾಗೆ ಆಗುತ್ತದೆ ಅಂತಲ್ಲ. ಹಲವು ಪ್ರಕರಣಗಳು ಮಾತುಕತೆಯಿಂದಲೇ ಬಗೆಹರಿಯುತ್ತವೆ.
ಕುಂಭ
ಈ ಗ್ರಹಣದಿಂದ ಆರೋಗ್ಯ ಸಂಬಂಧಿ ವಿಚಾರಗಳ ಬಗ್ಗೆ ಆತಂಕ ಹೆಚ್ಚಾಗುತ್ತದೆ. ಈ ಭಯಕ್ಕೆ ತುಂಬ ಪ್ರಬಲವಾದ ಕಾರಣಗಳೇನೂ ಇರುವುದಿಲ್ಲ. ಆದ್ದರಿಂದ ತುಂಬ ಚಿಂತೆ ಮಾಡುವ ಅಗತ್ಯವಿಲ್ಲ. ಕೆಲ ಕಾಲ ಅಥವಾ ದೀರ್ಘಾವಧಿಗೆ ಆಹಾರದ ಪಥ್ಯ ಬದಲಾವಣೆ ಮಾಡುವ ಸಂದರ್ಭ ಎದುರಾಗುತ್ತದೆ. ವಾಹನ ಚಲಾಯಿಸುವಾಗ ಮತ್ತು ರಸ್ತೆಯಲ್ಲಿ ಓಡಾಡುವಾಗ ತುಂಬ ಎಚ್ಚರದಿಂದ ಇರಬೇಕು. ಏಕೆಂದರೆ ಅಪಘಾತ ಸಾಧ್ಯತೆ ಇದೆ.
ಬಾಹ್ಯವಾಗಿ ಹೇಗೆ ಕಾಣಿಸಿಕೊಳ್ಳುತ್ತೀರಿ ಎಂಬುದು ತುಂಬ ಮುಖ್ಯ. ಬದಲಾವಣೆ ಸಾಧ್ಯತೆ ಹೆಚ್ಚಾಗಿದೆ. ಹಲವರಲ್ಲಿ ಆಂತರಿಕ ಬದಲಾವಣೆಯೂ ಕಾಣಿಸಿಕೊಳ್ಳುತ್ತದೆ. ಯೌವನಾವಸ್ಥೆಯಲ್ಲಿ ಇರುವವರಲ್ಲಿ ನಾಟಕೀಯ ಬದಲಾವಣೆಗಳು ಗೋಚರಿಸುತ್ತವೆ. ಅನಗತ್ಯವಾದ ಬದಲಾವಣೆಗಳನ್ನು ಮೇಲೇ ಹೇರಲಾಗುತ್ತದೆ.
ಮೀನ
ಆಧ್ಯಾತ್ಮಿಕ ಜೀವನ ನಡೆಸುವವರಿಗೆ ಈ ಗ್ರಹಣ ಬಹಳ ಮುಖ್ಯವಾದುದು. ಮುಖ್ಯ ಬದಲಾವಣೆಗಳು ಆಗುತ್ತವೆ. ಅವುಗಳಿಂದ ಒಳ್ಳೆಯದೇ ಆಗುತ್ತದೆ. ಆದರೆ ತಕ್ಷಣದಲ್ಲಿ ಗೊತ್ತಾಗುವುದಿಲ್ಲ. ಆಧ್ಯಾತ್ಮಿಕ ಗುರುಗಳ ಬದಲಾವಣೆ ಆಗಬಹುದು. ಅವರ ಉಪನ್ಯಾಸ ನಿಲ್ಲಿಸಬಹುದು. ಆದರೆ ತಾಳ್ಮೆಯಿಂದ ಇರಿ. ಉತ್ತಮವಾದುದು ನಿಮ್ಮ ಪಾಲಿಗೆ ಬರುತ್ತಿದೆ. ನಿಮ್ಮ ಹಾದಿಯಲ್ಲಿ ಬೆಳವಣಿಗೆ ಕಾಣಿಸುತ್ತಿದೆ.
ಹಲವು ವಿಚಾರಗಳಲ್ಲಿ ಆರ್ಥಿಕ ಸಂಗತಿಗಳು ಪರಿಣಮ ಬೀರುತ್ತವೆ. ನಿಮ್ಮ ಸುತ್ತಮುತ್ತಲಿನ ಜನರಿಗೆ ಅವರದೇ ಆದ ಸಮಸ್ಯೆಗಳಿವೆ. ಆ ಹೊರೆಗಳನ್ನು ನಿಮ್ಮ ಮೇಲೆ ಹೊರೆಸಬಹುದು. ಅನಿರೀಕ್ಷಿತ ಖರ್ಚು ಅಥವಾ ಸಂಬಳದಲ್ಲಿ ಕಡಿತ ಆಗುವ ಸಂಭವ ಗೋಚರಿಸುತ್ತಿದೆ. ಹಣವನ್ನು ಉಳಿಸಲು ಏನು ಮಾಡಬೇಕು ಎಂಬ ಬಗ್ಗೆ ಯೋಚಿಸಿ. ಭವಿಷ್ಯದಲ್ಲಿ ಉತ್ತಮ ದಿನಗಳು ಬರಲಿವೆ. ಮಕ್ಕಳ ಬಗ್ಗೆ ಹಾಗೂ ಸ್ವಂತ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.