Karnataka Election 2023 Astrology Prediction : ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ ಯಾರಿಗೆ ಕಿರೀಟ?
ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೆ ಗೆಲುವು ಸಿಗಲಿದೆ. ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರಲಿದೆಯಾ? ಖ್ಯಾತ ಜ್ಯೋತಿಷಿ ಕೆ.ಎಂ.ಸಿನ್ಹಾ ಭವಿಷ್ಯ ಹೀಗಿದೆ..
ಇನ್ನೇನು ಕೆಲವೇ ದಿನಗಳಲ್ಲಿ ಭಾರತೀಯ ಚುನಾವಣಾ ಆಯೋಗ, ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕವನ್ನು ಪ್ರಕಟಿಸಲಿದೆ. ಇದೇ ಮೇ ಹದಿನೈದನೇ ತಾರೀಕಿನೊಳಗೆ ಹೊಸ ಸರಕಾರ ಅಸ್ತಿತ್ವಕ್ಕೆ ಬರುವ ಪ್ರಕ್ರಿಯೆ ಮುಕ್ತಾಯಗೊಳ್ಳಬೇಕಿದೆ. ಹಲವು ಆಂತರಿಕ ಸಮೀಕ್ಷೆಗಳನ್ನು ಮೂರು ಪಕ್ಷಗಳು (ಜೆಡಿಎಸ್, ಕಾಂಗ್ರೆಸ್, ಬಿಜೆಪಿ) ಮಾಡಿಕೊಂಡಿವೆ. ಇದರ ಆಧಾರದ ಮೇಲೆ ಕಾಂಗ್ರೆಸ್, ಭಾರೀ ಹುಮ್ಮಸ್ಸಿನಲ್ಲಿದೆ.
ಚುನಾವಣಾ ವರ್ಷವಾಗಿರುವುದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಹಲವು ಆಶ್ವಾಸನೆಯನ್ನು ಜನರ ಮುಂದಿಡುತ್ತಿದೆ. ರಾಜಕೀಯ ಪಕ್ಷಗಳು ತಮ್ಮತಮ್ಮ ಕ್ಷೇತ್ರದ ಮತದಾರರನ್ನು ಧಾರ್ಮಿಕ ಸ್ಥಳಗಳಿಗೆ ಪ್ರವಾಸ ಕಳುಹಿಸುವುದು, ಗಿಫ್ಟ್ ಕೊಡುವ ಕಾರ್ಯದಲ್ಲಿ ನಿರತವಾಗಿವೆ. ಮಾರ್ಚ್ 9ರಂದು ಚುನಾವಣಾ ಆಯೋಗದ ಅಧಿಕಾರಿಗಳು, ಕರ್ನಾಟಕದ ವಿವಿಧ ಪಕ್ಷಗಳ ಮುಖಂಡರ ಜೊತೆ ಮಾತುಕತೆ ನಡೆಸಲಿದ್ದಾರೆ.

ಜಾತಕ ಫಲಾಫಲಗಳನ್ನು ಆಧರಿಸಿ ಭವಿಷ್ಯವನ್ನು ನುಡಿಯುವ ಉತ್ತರ ಭಾರತ ಮೂಲದ ಕೆ.ಎಂ.ಸಿನ್ಹಾ ಅವರು, ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೆ ಮುನ್ನಡೆಯಾಗಲಿದೆ ಎನ್ನುವುದರ ಬಗ್ಗೆ ತಮ್ಮ 'ಕುಂಡಲಿ ಎಕ್ಸಪರ್ಟ್' ಯೂಟ್ಯೂಬ್ ಚಾನೆಲ್ ನಲ್ಲಿ ಹೇಳಿದ್ದಾರೆ. ಪ್ರತಿಪಕ್ಷಗಳಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕೆಗೆ ಒಳಗಾಗುತ್ತಿರುವ ಬಗ್ಗೆಯೂ ತಮ್ಮ ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ, ಇನ್ನೊಂದು ಕಡೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ಕುಂಡಲಿಯನ್ನು ಪ್ರಮುಖವಾಗಿ ಆಧರಿಸಿ ಈ ಭವಿಷ್ಯವನ್ನು ನುಡಿಯುತ್ತಿರುವುದಾಗಿ ಸಿನ್ಹಾ ಹೇಳಿದ್ದಾರೆ. ಒಟ್ಟಾರೆಯಾಗಿ ಕಾಂಗ್ರೆಸ್ಸಿನ ಕುಂಡಲಿ ಪ್ರಭಾವಶಾಲಿ ಆಗಿಲ್ಲದಿದ್ದರೂ, ಇದು ಬೇರೆ ಬೇರೆ ಪ್ರದೇಶಗಳಿಗೆ ಬದಲಾವಣೆಯಾಗುತ್ತದೆ ಎಂದು ತಮ್ಮ ವಿಡಿಯೋದ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ.
ಸದ್ಯದ ಮಟ್ಟಿಗೆ ಬಿಜೆಪಿ ಕುಂಡಲಿ ಚೆನ್ನಾಗಿದ್ದರೂ ಅದು ಎಲ್ಲಾ ರಾಜ್ಯದಲ್ಲೂ ಹಾಗೇ ಇರಬೇಕೆಂದೇನೂ ಇಲ್ಲ. ಬಸವರಾಜ ಬೊಮ್ಮಾಯಿಯವರ ಜಾತಕದ ಪ್ರಕಾರ ಅವರ ಸಮಯ ಉತ್ತಮವಾಗಿದೆ. ರಾಹು ಮಹಾದೆಸೆ ಮತ್ತು ಆರನೇ ಮನೆಯಲ್ಲಿ ಇರುವುದರಿಂದ ಪ್ರತಿಸ್ಪರ್ಧಿಗಳ ಜೊತೆಗಿನ ಪೈಪೋಟಿಯಲ್ಲಿ ಎಲ್ಲರಿಗಿಂತ ಇವರು ಮುಂದಕ್ಕೆ ಸಾಗಲಿದ್ದಾರೆ. ಕಾಂಗ್ರೆಸ್ಸಿನ ಜಾತಕ ಸರಿಯಿಲ್ಲದಿದ್ದರೂ, ಸಿದ್ದರಾಮಯ್ಯನವರ ರಾಶಿಫಲ ಚೆನ್ನಾಗಿ ಇರಬಹುದು.

ಸಿದ್ದರಾಮಯ್ಯನವರ ಜನಪ್ರಿಯತೆ ಹೆಚ್ಚಿಸಲಿದೆ
ಸಿದ್ದರಾಮಯ್ಯನವರದ್ದು ಸದ್ಯ ಕನ್ಯಾ ಲಗ್ನ, ಕೇತು ಮಹಾದೆಸೆ ನಡೆಯುತ್ತಿದೆ. ಕೇತು ಮೂರನೇ ಮನೆಯಲ್ಲಿ ಇರುವುದರಿಂದ ಇದು ಉತ್ತಮ ಫಲವನ್ನು ನೀಡಲಿದೆ ಮತ್ತು ಜನಪ್ರಿಯತೆಯನ್ನು ಹೆಚ್ಚಿಸಲಿದೆ. ಆದರೂ, ಪ್ರತಿಸ್ಪರ್ಧಿಗಳ ಜಾತಕವೂ ಉತ್ತಮವಾಗಿರುವುದರಿಂದ ಕಾಂಗ್ರೆಸ್ ಸರಕಾರ ರಚಿಸಲು ಬೇಕಾದ ಸ್ಥಾನಗಳು ಸಿಗುವ ಸಾಧ್ಯತೆ ಕಮ್ಮಿ ಎಂದು ಜ್ಯೋತಿಷಿ ಕೆ.ಎಂ.ಸಿನ್ಹಾ ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಂಗ್ ಮೇಕರ್
ಬಿಜೆಪಿಯ ಮತ್ತು ಬೊಮ್ಮಾಯಿಯವರ ರಾಶಿಫಲ ಚೆನ್ನಾಗಿದ್ದರೂ ಕೂಡಾ, ಸರಕಾರ ರಚಿಸಲು ಸಾಕಷ್ಟು ಶ್ರಮ ವಹಿಸಿದರೂ ಕೂಡಾ, ಬಿಜೆಪಿ ಸ್ವಂತ ಬಲದಿಂದ ಸರಕಾರ ರಚಿಸುವ ಸಾಧ್ಯತೆ ಕಮ್ಮಿ. ಗ್ರಹಗತಿಗಳನ್ನು ಆಧರಿಸಿ ಹೇಳುವುದಾದರೆ ಕಾಂಗ್ರೆಸ್ - ಜೆಡಿಎಸ್ ಸರಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬಹುದು. ಆ ಮೂಲಕ, ಜೆಡಿಎಸ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಂಗ್ ಮೇಕರ್ ಆಗಲಿದ್ದಾರೆ ಎನ್ನುವ ಸೂಚ್ಯ ಭವಿಷ್ಯವನ್ನು ಕೆ.ಎಂ.ಸಿನ್ಹಾ ನೀಡಿದ್ದಾರೆ.












Click it and Unblock the Notifications