ಭಾರತದ ಗಡಿಯನ್ನು ನಾವು ಆಕ್ರಮಿಸಿಕೊಂಡಿದ್ದೇವೆ: ನೇಪಾಳದ ಪ್ರಧಾನಿ ಹೇಳಿಕೆಗೆ ಭಾರೀ ಆಕ್ರೋಶ
ನೇಪಾಳದ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿರುವ ಬಾಲೆನ್ ಶಾ (Balen Shah) ಅವರು ಅಲ್ಲಿನ ಸಂಸತ್ತಿನಲ್ಲಿ ಆಡಿರುವ ಒಂದು ಮಾತು, ಈಗ ಅವರದ್ದೇ ದೇಶದಲ್ಲಿ ಅವರ ವಿರುದ್ಧ ದೊಡ್ಡ ಮಟ್ಟದ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿದೆ. "ನಾವು ಭಾರತದ ಗಡಿಯನ್ನು ಆಕ್ರಮಿಸಿಕೊಂಡಿದ್ದೇವೆ" ಎಂದು ಪ್ರಧಾನಿ ಬಹಿರಂಗವಾಗಿ ಹೇಳಿರುವುದು ನೇಪಾಳ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಗಡಿ ಪ್ರದೇಶಗಳ ಹೆಸರು ಬಹಿರಂಗ
ಲಿಪುಲೇಖ್, ಲಿಂಪಿಯಾಧುರಾ ಮತ್ತು ಕಾಲಾಪಾನಿ ಗಡಿ ಪ್ರದೇಶಗಳಿಗೆ ಸಂಬಂಧಿಸಿದಂತೆ ಭಾರತ ಮತ್ತು ನೇಪಾಳ ನಡುವೆ ದೀರ್ಘಕಾಲದಿಂದ ಗಡಿ ವಿವಾದ ಮುಂದುವರಿದಿದೆ. ಇಂತಹ ಸೂಕ್ಷ್ಮ ಸಮಯದಲ್ಲಿ, ನೇಪಾಳವೇ ಭಾರತದ ಗಡಿಯನ್ನು ಆಕ್ರಮಿಸಿದೆ ಎಂದು ಖುದ್ದು ಪ್ರಧಾನಿಯೇ ಒಪ್ಪಿಕೊಂಡಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಗಡಿ ವಿವಾದದ ಕುರಿತು ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ಬಾಲೆನ್ ಶಾ, "ನಾನು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರವೇ ನನಗೆ ಒಂದು ಶಾಕಿಂಗ್ ಸತ್ಯ ಗೊತ್ತಾಗಿದ್ದು. ಕೇವಲ ಭಾರತ ಮಾತ್ರವಲ್ಲ, ನೇಪಾಳ ಕೂಡ ಹಲವು ಕಡೆಗಳಲ್ಲಿ ಭಾರತದ ಗಡಿ ಪ್ರದೇಶವನ್ನು ಆಕ್ರಮಿಸಿಕೊಂಡಿದೆ. ಆದ್ದರಿಂದ ಉಭಯ ದೇಶಗಳೂ ಸ್ನೇಹಿತರಂತೆ ಕುಳಿತುಕೊಂಡು, ಸತ್ಯಾಸತ್ಯತೆಗಳನ್ನು ಪರಿಶೀಲಿಸಿ ಈ ಗಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು" ಎಂದು ಹೇಳಿದರು.
ಉಲ್ಟಾ ಹೊಡೆದ ವಿದೇಶಾಂಗ ಸಚಿವಾಲಯ
ಸ್ವತಃ ದೇಶದ ಪ್ರಧಾನಿಯೇ "ನಾವು ಭಾರತದ ನೆಲವನ್ನು ಆಕ್ರಮಿಸಿದ್ದೇವೆ" ಎಂದು ಸಂಸತ್ತಿನಲ್ಲಿ ಹೇಳಿದ್ದು, ನೇಪಾಳದ ಜನರಲ್ಲಿ ಮತ್ತು ರಾಜಕೀಯ ವಲಯದಲ್ಲಿ ತೀವ್ರ ಆಘಾತ ಮೂಡಿಸಿತು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ನೇಪಾಳದ ವಿದೇಶಾಂಗ ಸಚಿವಾಲಯವು ತಕ್ಷಣವೇ ಧಾವಿಸಿ ಅಧಿಕೃತ ಸ್ಪಷ್ಟನಾ ಪತ್ರವನ್ನು ಬಿಡುಗಡೆ ಮಾಡಿತು.
ಅದರಲ್ಲಿ "ಪ್ರಧಾನಿಯವರು 'ಆಕ್ರಮಣ' ಎಂದು ಹೇಳಿದ್ದು ಅಧಿಕೃತ ಭೂಪ್ರದೇಶದ ಹಕ್ಕನ್ನು ಅಲ್ಲ. ಬದಲಿಗೆ, ಉಭಯ ದೇಶಗಳ ನಡುವಿನ 'ನೋ-ಮ್ಯಾನ್ಸ್ ಲ್ಯಾಂಡ್' (ಜನರ ಸಂಚಾರವಿಲ್ಲದ ಗಡಿರೇಖೆ) ಪ್ರದೇಶದಲ್ಲಿ ಗಡಿ ಗುರುತಿನ ಕಂಬಗಳು ಹಾನಿಗೊಳಗಾಗಿವೆ. ಅಂತಹ ಕೆಲವು ಕಡೆಗಳಲ್ಲಿ ಉಭಯ ದೇಶಗಳ ರೈತರು ಗಡಿ ದಾಟಿ ಕೃಷಿ ಮಾಡುತ್ತಿರುವುದನ್ನು ಉಲ್ಲೇಖಿಸಿ ಪ್ರಧಾನಿ ಆ ರೀತಿ ಮಾತನಾಡಿದ್ದಾರಷ್ಟೇ" ಎಂದು ಡ್ಯಾಮೇಜ್ ಕಂಟ್ರೋಲ್ ಮಾಡಲು ಯತ್ನಿಸಿದೆ.
ಈ ಗಡಿ ಸಮಸ್ಯೆಯು ಬ್ರಿಟಿಷರು ಭಾರತವನ್ನು ಬಿಟ್ಟು ಹೋದ ಕಾಲದಿಂದಲೂ ಇರುವುದರಿಂದ, ಈ ವಿಷಯದಲ್ಲಿ ಬ್ರಿಟನ್ ಸರ್ಕಾರ ಕೂಡ ಆಸಕ್ತಿ ವಹಿಸಬೇಕು ಎಂದು ಪ್ರಧಾನಿ ಬಾಲನ್ ಶಾ ಒತ್ತಾಯಿಸಿದ್ದಾರೆ. ಈ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನೇಪಾಳ ಸರ್ಕಾರವು ಈಗಾಗಲೇ ಭಾರತ, ಚೀನಾ ಮತ್ತು ಬ್ರಿಟನ್ ಒಟ್ಟು ಮೂರು ದೇಶಗಳೊಂದಿಗೆ ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ನಡೆಸಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಕ್ಷಮೆಯಾಚನೆಗೆ ವಿಪಕ್ಷಗಳ ಪಟ್ಟು
ನೇಪಾಳ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷದ ವಿರೋಧ ಪಕ್ಷದ ಸಂಸದರು ಪ್ರಧಾನಿ ಬಾಲೆನ್ ಶಾ ಅವರ ಮಾತಿಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. "ನೇಪಾಳ ಎಂದಿಗೂ ಭಾರತದ ಭೂಮಿಯನ್ನು ಆಕ್ರಮಿಸಿಲ್ಲ. ಪ್ರಧಾನಿ ತಮ್ಮ ಮಾತಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಬೇಕು, ಇಲ್ಲವೇ ಸಂಸತ್ತಿನಲ್ಲಿ ಬೇಷರತ್ ಕ್ಷಮೆಯಾಚಿಸಿ ತಮ್ಮ ಹೇಳಿಕೆಯನ್ನು ಸದನದ ಕಡತದಿಂದ ತೆಗೆದುಹಾಕಬೇಕು" ಎಂದು ವಿಪಕ್ಷಗಳು ಪಟ್ಟು ಹಿಡಿದು ಗದ್ದಲ ಸೃಷ್ಟಿಸಿವೆ.
ಈ ವಿಷಯದ ಕುರಿತು ಸಂಸದರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಪ್ರಧಾನಿ ಬಾಲೆನ್ ಶಾ, ಲಿಪುಲೇಖ್ ಪಾಸ್ (ಲಿಪುಲೇಖ್ ಕಣಿವೆ) ವಿವಾದವನ್ನು ರಾಜತಾಂತ್ರಿಕ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಹೇಳಿದರು. ಅಷ್ಟೇ ಅಲ್ಲದೆ ಈ ನಿಟ್ಟಿನಲ್ಲಿ ತಮ್ಮ ಸರ್ಕಾರವು ಈಗಾಗಲೇ ಯುನೈಟೆಡ್ ಕಿಂಗ್ಡಮ್ (ಬ್ರಿಟನ್) ಮತ್ತು ಚೀನಾ ದೇಶಗಳನ್ನು ಸಂಪರ್ಕಿಸಿದೆ ಎಂಬ ವಿಷಯವನ್ನು ಅವರು ಬಹಿರಂಗಪಡಿಸಿದರು. ಈ ವಿವಾದದ ಮೂಲ ಇತಿಹಾಸವು ಬ್ರಿಟಿಷ್ ಇಂಡಿಯಾದ ಕಾಲಕ್ಕೆ ಹೋಗುವುದರಿಂದ, ಇದರಲ್ಲಿ ಬ್ರಿಟನ್ ದೇಶದ ಪಾಲ್ಗೊಳ್ಳುವಿಕೆ ಅತ್ಯಗತ್ಯ ಎಂದು ವಾದಿಸಿದರು. ಆದರೆ, ಈ ಎಲ್ಲದರ ನಡುವೆ ಪ್ರಧಾನಿ ಶಾ ಅವರು ಆಡಿದ ಅತ್ಯಂತ ವಿವಾದಾತ್ಮಕ ಮಾತು ಎಂದರೆ, ಗಡಿ ಭಾಗದ ಭೂಪ್ರದೇಶಗಳ ಅತಿಕ್ರಮಣವು ಕೇವಲ ಒಂದು ಕಡೆಯಿಂದ ಮಾತ್ರ ನಡೆದಿಲ್ಲ, ಎರಡೂ ಕಡೆಯಿಂದ ನಡೆದಿದೆ ಎಂದಿದ್ದಾರೆ.













Click it and Unblock the Notifications