Advertisement

ಅಭಿವೃದ್ಧಿಗಾಗಿ ಸುಧಾರಣೆ ಅಗತ್ಯ, ಹಳೆಯ ಕಾನೂನುಗಳು ಹೊರೆಯಾಗುತ್ತಿವೆ: ಪ್ರಧಾನಿ ಮೋದಿ


ಲಕ್ನೋ, ಡಿಸೆಂಬರ್ 7: ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ಬೃಹತ್ ಪ್ರತಿಭಟನೆ ನಡೆಸುತ್ತಿರುವುದರ ನಡುವೆಯೇ, ಅಭಿವೃದ್ಧಿಗೆ ಸುಧಾರಣೆಗಳು ಅಗತ್ಯವಾಗಿವೆ ಮತ್ತು ಕಳೆದ ಶತಮಾನದಿಂದ ಇರುವ ಕೆಲವು ಕಾನೂನುಗಳು ಈಗ ಹೊರೆಯಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆಗ್ರಾ ಮೆಟ್ರೋ ರೈಲು ಯೋಜನೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ ಪ್ರಧಾನಿ, ತಮ್ಮ ಸರ್ಕಾರ ನಡೆಸುತ್ತಿರುವ ಅಭಿವೃದ್ಧಿಗಳು ಚುನಾವಣಾ ಫಲಿತಾಂಶದಲ್ಲಿ ಪ್ರತಿಫಲಿಸುತ್ತಿವೆ ಎಂದಿದ್ದಾರೆ.

ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ಮಂಗಳವಾರ ಭಾರತ್ ಬಂದ್‌ಗೆ ಕರೆ ನೀಡಿವೆ. ಈ ಸಂದರ್ಭದಲ್ಲಿ ಸುಧಾರಣೆಗಾಗಿ ಕಾನೂನಿನ ಬದಲಾವಣೆಗಳ ಅಗತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

ಅಗ್ರಾ ಮೆಟ್ರೋ ಯೋಜನೆ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

'ಅಭಿವೃದ್ಧಿಗೆ ಸುಧಾರಣೆಗಳು ಅಗತ್ಯ. ಹೊಸ ವ್ಯವಸ್ಥೆಗೆ ಮತ್ತು ಹೊಸ ಸೌಲಭ್ಯಗಳನ್ನು ನೀಡಲು ಸುಧಾರಣೆಗಳು ಬಹಳ ಅವಶ್ಯಕವಾಗಿವೆ. ಹಿಂದಿನ ಶತಮಾನದ ಕಾನೂನುಗಳನ್ನು ಇರಿಸಿಕೊಂಡು ಮುಂದಿನ ಶತಮಾನವನ್ನು ನಾವು ಕಟ್ಟಲು ಸಾಧ್ಯವಿಲ್ಲ' ಎಂದು ಮೋದಿ ಹೇಳಿದ್ದಾರೆ.

Advertisement
Advertisement

'ಕೆಲವು ಕಾನೂನುಗಳು ಕಳೆದ ಶತಮಾನದಲ್ಲಿ ಒಳ್ಳೆಯದ್ದು ಎನಿಸಿಕೊಂಡಿದ್ದವು. ಆದರೆ ಅವು ಈಗಿನ ಶತಮಾನದಲ್ಲಿ ಹೊರೆಯಾಗಿ ಪರಿಣಮಿಸಿವೆ. ಸುಧಾರಣೆ ಎನ್ನುವುದು ನಿರಂತರ ಪ್ರಕ್ರಿಯೆಯಾಗಬೇಕು' ಎಂದು ತಿಳಿಸಿದ್ದಾರೆ.

ತಮ್ಮ ಸರ್ಕಾರವು ಆಮೂಲಾಗ್ರ ಸುಧಾರಣೆಗಳನ್ನು ನಡೆಸುತ್ತಿದೆ ಎಂದು ಮೋದಿ ಹೇಳಿಕೊಂಡಿದ್ದಾರೆ. 'ಈ ಮುಂಚೆ ಸುಧಾರಣೆಗಳು ತುಂಡು ತುಂಡಾದ ಸ್ವರೂಪಗಳಲ್ಲಿ ಅಥವಾ ಕೆಲವು ವಲಯಗಳನ್ನು ಮತ್ತು ವಿಭಾಗಗಳನ್ನು ಗಮನದಲ್ಲಿರಿಸಿಕೊಂಡು ನಡೆಯುತ್ತಿದ್ದವು' ಎಂದಿದ್ದಾರೆ.

ಪ್ರಶಸ್ತಿ ಪಡೆದವರೆಲ್ಲ ದೇಶಭಕ್ತರಲ್ಲ: ಸಚಿವರ ವಿಚಿತ್ರ ಹೇಳಿಕೆ

'ಸರ್ಕಾರದ ಈ ಪ್ರಯತ್ನಗಳಿಗಾಗಿ ಬಡ ಮತ್ತು ಮಧ್ಯಮ ವರ್ಗದ ಜನರು ಇತ್ತೀಚಿನ ವರ್ಷಗಳಲ್ಲಿ ತಮ್ಮ ಅಭೂತಪೂರ್ವ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಅವರ ಬೆಂಬಲವು ಹೊಸ ಕೆಲಸಗಳನ್ನು ಮಾಡಲು ಮತ್ತು ಹೊಸ ಹೆಜ್ಜೆಗಳನ್ನು ಇರಿಸಲು ನನಗೆ ಧೈರ್ಯ ನೀಡುತ್ತಿದೆ' ಎಂದು ಹೇಳಿದ್ದಾರೆ.

English Summary

Prime Minister Narendra Modi said reforms are needed for development. We cannot build the next century with the laws of the previous century.
Read more...