Raghav Chadha: ಬಿಜೆಪಿಗೆ ಸೇರಿದ ಎಎಪಿ ಪ್ರಮುಖ ರಾಜಕೀಯ ನಾಯಕ ರಾಘವ್ ಚಡ್ಡಾ: ಪಕ್ಷಾಂತರಕ್ಕೆ ಕೊಟ್ಟ ಕಾರಣವೇನು
Raghav Chadha: ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಆಮ್ ಆದ್ಮಿ ಪಾರ್ಟಿಯ ಸಂಸದರಾಗಿದ್ದ ರಾಘವ್ ಚಡ್ಡಾ ಅವರು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ. ಈಚೆಗೆ ಆಮ್ ಆದ್ಮಿ ಪಾರ್ಟಿಯು ರಾಘವ್ ಚಡ್ಡಾ ಅವರಿಗೆ ನೀಡಿದ್ದ ಮಹತ್ವದ ಹುದ್ದೆಯನ್ನು ಕಸಿದುಕೊಂಡಿತ್ತು. ಅವರು ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದೂ ಹೇಳಲಾಗಿತ್ತು. ಅಲ್ಲದೆ ಇದೇ ಕಾರಣಕ್ಕೆ ಅವರು ಬಿಜೆಪಿಯ ಬಗ್ಗೆ - ಕೆಲವೊಂದು ನಿರ್ದಿಷ್ಟ ವಿಷಯಗಳ ಬಗ್ಗೆ ಮಾತನಾಡುತ್ತಿಲ್ಲ ಎನ್ನುವ ಆರೋಪಗಳೂ ಸಹ ಕೇಳಿ ಬಂದಿದ್ದವು. ಇನ್ನು ಈಚೆಗೆ ನರೇಂದ್ರ ಮೋದಿ ಅವರ ಬಗ್ಗೆ ಈ ಹಿಂದೆ ರಾಘವ್ ಚಡ್ಡಾ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಾಡಿದ್ದ ಟ್ವೀಟ್ಗಳನ್ನು ಸಹ ಡಿಲೀಟ್ ಮಾಡಿದ್ದರು.
ದೇಶದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಎಎಪಿಯ ಪ್ರಮುಖ ಮೂರು ಜನ ರಾಜಕೀಯ ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಎಎಪಿಯ ರಾಜ್ಯಸಭಾ ಸಂಸದರಾದ ರಾಘವ್ ಚಡ್ಡಾ, ಅಶೋಕ್ ಮಿತ್ತಲ್ ಮತ್ತು ಸಂದೀಪ್ ಪಾಠಕ್ ಶುಕ್ರವಾರ ಎಎಪಿ ತೊರೆದಿದ್ದಾರೆ. ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ರಾಘವ್ ಚಡ್ಡಾ ಅವರು, ರಾಜ್ಯಸಭೆಯಲ್ಲಿ ಎಎಪಿಗೆ ಸೇರಿದ 2/3 ನೇ ಸದಸ್ಯರಾಗಿರುವ ನಾವು ಭಾರತದ ಸಂವಿಧಾನದ ನಿಬಂಧನೆಗಳನ್ನು ಚಲಾಯಿಸುತ್ತೇವೆ ಮತ್ತು ಬಿಜೆಪಿಯೊಂದಿಗೆ ವಿಲೀನಗೊಳ್ಳುತ್ತೇವೆ ಎಂದು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ರಾಘವ್ ಚಡ್ಡಾ ಆಮ್ ಆದ್ಮಿ ಪಕ್ಷವನ್ನು ತೊರೆದಿದ್ಯಾಕೆ ?
ಆಮ್ ಆದ್ಮಿ ಪಾರ್ಟಿಯನ್ನು ಯಾವ ಕಾರಣಕ್ಕೆ ತೊರೆದಿದ್ದೇನೆ ಎನ್ನುವ ಬಗ್ಗೆಯೂ ರಾಘವ್ ಚಡ್ಡಾ ಅವರು ಪ್ರತಿಕ್ರಿಯಿಸಿದ್ದಾರೆ. ನಾನು ಪಕ್ಷದ ಚಟುವಟಿಕೆಗಳಿಂದ ದೂರವಿದ್ದಕ್ಕೆ ನಿಜವಾದ ಕಾರಣವನ್ನು ನಾನು ನಿಮಗೆ ಈಗ ಹೇಳುತ್ತಿದ್ದೇನೆ. ನಾನು ಅವರ ಅಪರಾಧಗಳ ಭಾಗವಾಗಲು ಬಯಸಲಿಲ್ಲ. ನಾನು ಅವರ ಅಪರಾಧದಲ್ಲಿ ಭಾಗವಾಗದೆ ಇರುವ ಕಾರಣಕ್ಕೆ ಅವರ ಸ್ನೇಹಕ್ಕೆ ನಾನು ಅರ್ಹನಾಗಿರಲಿಲ್ಲ.
ನಮಗೆ ಕೇವಲ ಎರಡು ಆಯ್ಕೆಗಳಿದ್ದವು - ರಾಜಕೀಯವನ್ನು ತ್ಯಜಿಸಿ ಕಳೆದ 15-16 ವರ್ಷಗಳಲ್ಲಿ ನಮ್ಮ ಸಾರ್ವಜನಿಕ ಕೆಲಸವನ್ನು ತ್ಯಜಿಸುವುದು. ಇಲ್ಲವೇ ನಮ್ಮ ಶಕ್ತಿ ಮತ್ತು ಅನುಭವದೊಂದಿಗೆ ನಾವು ಸಕಾರಾತ್ಮಕ ರಾಜಕೀಯ ಮಾಡುವುದು. ಹೀಗಾಗಿ, ರಾಜ್ಯಸಭಾದಲ್ಲಿ ಎಎಪಿಗೆ ಸೇರಿದ 2/3ನೇ ಸದಸ್ಯರಾಗಿರುವ ನಾವು ಭಾರತದ ಸಂವಿಧಾನದ ನಿಬಂಧನೆಗಳಿಗೆ ಒಳಪಟ್ಟು ಮತ್ತು ಬಿಜೆಪಿಯೊಂದಿಗೆ ವಿಲೀನವಾಗುವುದಕ್ಕೆ ನಿರ್ಧರಿಸಿದ್ದೇವೆ ಎಂದಿದ್ದಾರೆ.
ಎಎಪಿಯ ಮೂರು ಸಂಸದರು ಬಿಜೆಪಿಗೆ
ಇನ್ನು ಸಂಸದ ರಾಘವ್ ಚಡ್ಡಾ ಅವರೊಂದಿಗೆ ಅವರೊಂದಿಗೆ ಗುರ್ಮೀತ್ ಸಿಂಗ್ ಮೀತ್ ಹೇಯರ್ (ಸಂಗ್ರೂರ್), ರಾಜ್ ಕುಮಾರ್ ಚಬ್ಬೇವಾಲ್ (ಹೊಶಿಯಾರ್ಪುರ್) ಹಾಗೂ ಮಲ್ವಿಂದರ್ ಸಿಂಗ್ ಕಾಂಗ್ (ಆನಂದಪುರ ಸಾಹಿಬ್) ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮೂವರು ಪಂಜಾಬ್ ರಾಜ್ಯದವರಾಗಿದ್ದಾರೆ. ಆಮ್ ಆದ್ಮಿ ಪಕ್ಷದ ಮೂವರು ಲೋಕಸಭಾ ಸಂಸದರು 2022ರಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ. ರಾಘವ್ ಚಡ್ಡಾ, ಅಶೋಕ್ ಕುಮಾರ್ ಮಿತ್ತಲ್ ಮತ್ತು ಸಂದೀಪ್ ಪಾಠಕ್ ಅವರು 2022 ರಿಂದ ಆಮ್ ಆದ್ಮಿ ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.
ಎಎಪಿ ಮೊದಲನಿಂತೆ ಇಲ್ಲ ಎಂದ ರಾಘವ್ ಚಡ್ಡಾ
ಇನ್ನು ನಾನು ನನ್ನ ರಕ್ತ ಮತ್ತು ಬೆವರಿನಿಂದ ಪೋಷಿಸಿ ನನ್ನ 15 ವರ್ಷಗಳ ಯೌವನವನ್ನು ನೀಡಿದ ಆಮ್ ಆದ್ಮಿ ಪಕ್ಷವು ಈಗ ಅದರ ತತ್ವಗಳು, ಮೌಲ್ಯಗಳು ಮತ್ತು ಮೂಲ ನೈತಿಕತೆಗಳಿಂದ ಸಂಪೂರ್ಣವಾಗಿ ವಿಮುಖವಾಗಿದೆ. ಪಕ್ಷವು ದೇಶಕ್ಕಾಗಿ ಅಥವಾ ರಾಷ್ಟ್ರೀಯ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿಲ್ಲ. ಆದರೆ ವೈಯಕ್ತಿಕ ಲಾಭಕ್ಕಾಗಿ ಕೆಲಸ ಮಾಡುತ್ತಿದೆ.
ನಿಮ್ಮಲ್ಲಿ ಹಲವರು ಕಳೆದ ಕೆಲವು ವರ್ಷಗಳಿಂದ ಇದನ್ನು ನನಗೆ ಹೇಳುತ್ತಿದ್ದೀರಿ ಮತ್ತು ನಾನು ಕೂಡ ತಪ್ಪು ಪಕ್ಷದಲ್ಲಿ ಸರಿಯಾದ ವ್ಯಕ್ತಿ ಎಂದು ವೈಯಕ್ತಿಕವಾಗಿ ಭಾವಿಸಿದ್ದೇನೆ. ನಾನು ಪುನರಾವರ್ತಿಸುತ್ತೇನೆ, ನಾನು ತಪ್ಪು ಪಕ್ಷದಲ್ಲಿ ಸರಿಯಾದ ವ್ಯಕ್ತಿಯಾಗಿದ್ದೆ. ಹೀಗಾಗಿ, ಇಂದು ನಾನು ಆಮ್ ಆದ್ಮಿ ಪಕ್ಷದಿಂದ ದೂರ ಸರಿದು ಜನರ ಬಳಿಗೆ ಹೋಗುತ್ತಿದ್ದೇನೆ ಎಂದು ಘೋಷಿಸಿದ್ದಾರೆ.












Click it and Unblock the Notifications