Tungabhadra Dam: 315 ಕೋಟಿ ರೂ ವೆಚ್ಚದಲ್ಲಿ 33 ಕ್ರಸ್ಟ್ಗೇಟ್ ಅಳವಡಿಕೆ ಪೂರ್ಣ, ಉದ್ಘಾಟನೆ ಶೀಘ್ರ: ಡಿಕೆ ಶಿವಕುಮಾರ್
ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ವ್ಯಾಪ್ತಿಯಲ್ಲಿನ ತುಂಗಭದ್ರಾ ಅಣೆಕಟ್ಟಿಗೆ ಅಳವಡಿಸಲಾಗಿದ್ದ ದಶಕಗಳಷ್ಟು ಹಳೆಯದಾದ ಕ್ರಸ್ಟ್ಗೇಟ್ಗಳನ್ನು ಇದೀಗ ಬದಲಾಯಿಸಿ ರಾಜ್ಯ ಸರ್ಕಾರ ಈ ಭಾಗದ ರೈತರಿಗೆ ಗುಡ್ ನ್ಯೂಸ್ ನೀಡಿದೆ. ಮಳೆಗಾಲದಲ್ಲಿ ನೀರು ನಿಲ್ಲದಿದ್ದರೆ ಕೃಷಿ ಗತಿ ಏನೆಂಬ ಚಿಂತೆಯನ್ನು ದೂರ ಮಾಡಲಾಗಿದೆ. ಜೊತೆಗೆ ಡ್ಯಾಂ ಲೋಕಾರ್ಪಣೆಗೆ ದಿನಾಂಕ ಸಹ ಫಿಕ್ಸ್ ಮಾಡಿದೆ.
ಇಂದು ಭಾನುವಾರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತುಂಗಭದ್ರಾ ಜಲಾಶಯದ ಹೊಸ ಕ್ರಸ್ಟ್ಗೇಟ್ಗಳ ಅಳವಡಿಕೆ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೊಸ ಕ್ರಸ್ಟ್ ಗೇಟ್ಗಳನ್ನು ಪರಿಶೀಲಿಸಿದರು. 'ತುಂಗಭದ್ರಾ ಜಲಾಶಯ ಮುಂದಿನ 50 ವರ್ಷ ಸುಭದ್ರ' ಎಂದು ಎಂಬ ಶಿರ್ಷಿಕೆಯಡಿ ಅವರು 'ಎಕ್ಸ್' ಪೋಸ್ಟ್ ಮಾಡಿ ಮಾಹಿತಿ ನೀಡಿದರು.

ತುಂಗಭದ್ರಾ ಜಲಾಶಯಕ್ಕೆ 33 ಹೊಸ ಕ್ರಸ್ಟ್ಗೇಟ್ಗಳನ್ನು ಅಳವಡಿಸಿರುವುದು ಸಂತಸದ ವಿಷಯವಾಗಿದೆ. ಇದರಿಂದ 7.5 ಲಕ್ಷ ರೈತರಿಗೆ ಅನುಕೂಲವಾಗಲಿದೆ. ಈ ಮೂಲಕ ಟೀಕೆ ಮಾಡಿದವರಿಗೆ ನಾವು ಉತ್ತರ ನೀಡಿದ್ದೇವೆ. ಕ್ರಸ್ಟ್ಗೇಟ್ಗಳ ಕಾಮಗಾರಿ ಪೂರ್ಣಗೊಂಡಿದ್ದು, ಅಂತಿಮ ಸಣ್ಣ ಪುಟ್ಟ ಕೆಲಸಗಳು ಮಾತ್ರ ಬಾಕಿಯಿದೆ ಎಂದು ತಿಳಿಸಿದರು.
ಹೊಸ ಕ್ರಸ್ಟ್ ಗೇಟ್ಗೊಂದಿಗೆ ಅಣೆಕಟ್ಟನ್ನು ಇದೇ ತಿಂಗಳ ಮೇ 15ರಂದು ಉದ್ಘಾಟನೆ ಮಾಡಲು ಸಿದ್ಧತೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೇ 7ರೊಳಗೆ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಳೆಯಾದ್ರೆ 44 ಟಿಎಂಸಿ ನೀರು
ಸದ್ಯ ತುಂಗಭದ್ರಾ ಜಲಾಶಯದಲ್ಲಿ 10.5 ಟಿಎಂಸಿ ನೀರಿದೆ. ಮುಂದಿನ 2 ತಿಂಗಳಲ್ಲಿ ಉತ್ತಮ ಮಳೆಯಾದರೆ 44 ಟಿಎಂಸಿ ನೀರು ತುಂಬುವ ಸಾಧ್ಯತೆಯಿದೆ. ಒಟ್ಟು ಕ್ರಸ್ಟ್ಗೇಟ್ಗಳನ್ನು ಅಳವಡಿಸುವ ಕಾಮಗಾರಿಗೆ ಇದುವರೆಗೆ 54 ಕೋಟಿ ರೂ. ವೆಚ್ಚ ಮಾಡಲಾಗಿದೆ.
315 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ
ಇನ್ನು 33 ಹೊಸ ಗೇಟ್ಗಳನ್ನು ಅಳವಡಿಸಿರುವುದು ದೇಶಕ್ಕೆ ಮಾದರಿಯಾಗಿದೆ. ಕಾಲುವೆಗಳ ದುರಸ್ತಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸುಮಾರು 315 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕ್ರಸ್ಟ್ಗೇಟ್ಗಳ ಚೈನ್ಗಳನ್ನೂ ಬದಲಾಯಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮೇ 7ರಂದು ಹೊಸ ಚೈನ್ಗಳು ಬರಲಿವೆ ಎಂದು ಅವರು ವಿವರಿಸಿದರು.
ರೈತರ ಸಮ್ಮುಖದಲ್ಲಿ ಉದ್ಘಾಟನೆ, 50 ವರ್ಷ ಡ್ಯಾಂ ಭದ್ರ
ಹೊಸ ಕ್ರಸ್ಟ್ಗೇಟ್ಗಳನ್ನು ಅಳವಡಿಸಿದ್ದಕ್ಕೆ ರೈತರು ಸಂತೋಷವಾಗಿದ್ದಾರೆ. ಇದಕ್ಕೆ ಅಧಿಕಾರಿಗಳು, ರೈತರು ಹಾಗೂ ಎಲ್ಲರ ಸಹಕಾರವೇ ಕಾರಣವಾಗಿದೆ. ರೈತರು ಒಂದು ಬೆಳೆಯನ್ನು ತ್ಯಾಗ ಮಾಡಿದ್ದಾರೆ, ಅವರಿಗೆ ನನ್ನ ಕೋಟಿ ನಮಸ್ಕಾರಗಳು. ಮುಂದಿನ 50 ವರ್ಷಗಳ ಕಾಲ ಈ ಜಲಾಶಯ ಭದ್ರವಾಗಿರಲಿದೆ. ಸಂಪೂರ್ಣ ಕಾಮಗಾರಿ ಮುಗಿದ ನಂತರ ವಿಜಯನಗರ, ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಯ ರೈತರನ್ನು ಕರೆಸಿ ಉದ್ಘಾಟನೆ ಮಾಡಲು ನಿರ್ಧರಿಸಲಾಗಿದೆ.
ತುಂಗಭದ್ರಾ ನದಿ ತಟದ ಅನ್ನದಾತರ ಬದುಕು ಭದ್ರ
— DK Shivakumar (@DKShivakumar) May 3, 2026
ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್ಗೇಟ್ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ಕಾಮಗಾರಿಯನ್ನು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡೆನು.
ಮುಂಗಾರು ಆರಂಭಕ್ಕೂ ಮುನ್ನವೇ 33 ಹೊಸ ಕ್ರಸ್ಟ್ಗೇಟ್ಗಳನ್ನು ಅಳವಡಿಸುವುದಾಗಿ ತುಂಗಭದ್ರಾ ತಟದ ರೈತರಿಗೆ… pic.twitter.com/4ip27YahPv














Click it and Unblock the Notifications