Savarkar: ಸಾವರ್ಕರ್ ಬ್ರಿಟಿಷರ ಬಳಿ 5 ಬಾರಿ ಕ್ಷಮಾದಾನ ಕೇಳಿದ್ದು ನಿಜ, ಗೋವನ್ನು ಪೂಜಿಸಲಿಲ್ಲ: ನ್ಯಾಯಾಲಯದಲ್ಲಿ ಮೊಮ್ಮಗ ಹೇಳಿಕೆ
Savarkar: ಸಾವರ್ಕರ್ ಬಗ್ಗೆ ಅವರ ಮೊಮ್ಮಗ ಹೇಳಿರುವ ಮಾತುಗಳು ಭಾರೀ ಸಂಚಲನವನ್ನು ಸೃಷ್ಟಿ ಮಾಡಿದೆ. ವಿನಾಯಕ ದಾಮೋದರ ಸಾವರ್ಕರ್ ಅವರು ಬ್ರಿಟಿಷರ ಮುಂದೆ ಐದು ಬಾರಿ ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸಿದ್ದರು. ಅಲ್ಲದೆ ಅವರು ಗೋವನ್ನು ಪೂಜಿಸಲಿಲ್ಲ ಎಂದು ಅವರ ಮರಿ ಮೊಮ್ಮಗ ಸತ್ಯಕಿ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ದೇಶದಾದ್ಯಂತ ಕಳೆದ ಹಲವು ವರ್ಷಗಳಿಂದ ಸಾವರ್ಕರ್ ಅವರು ಬ್ರಿಟಿಷರ ಬಳಿ ಕ್ಷಮಾಪಣೆ ಕೇಳಿದ್ದರು ಎನ್ನುವ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಈ ಗೊಂದಲಗಳಿಗೆ ಅವರ ಮೊಮ್ಮಗ ನೇರವಾಗಿ ಉತ್ತರ ನೀಡಿದ್ದಾರೆ.
ವಿನಾಯಕ ದಾಮೋದರ್ ಸಾವರ್ಕರ್ ಅವರ ಮೊಮ್ಮಗ, ಸಾವರ್ಕರ್ ಅವರು ಬ್ರಿಟಿಷರ ಮುಂದೆ 5 ಬಾರಿ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದ ವಿಷಯವು ಸತ್ಯವಾಗಿದೆ ಎಂದು ಮಹಾರಾಷ್ಟ್ರದ ಪುಣೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮುಂದೆ ಹೇಳಿದ್ದಾರೆ ಎಂದು ವರದಿಯಾಗಿದೆ. ಸಾವರ್ಕರ್ ಅವರು ಎರಡನೇ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷ್ ಆಡಳಿತದಲ್ಲಿ ನೇಮಕಾತಿಗಾಗಿ ಐದು ಬಾರಿ ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸಿದ್ದರು ಎಂದು ಹೇಳಿದ್ದಾರೆ.

ಸಾವರ್ಕರ್ ಅವರ ಮುಖವಾಡದ ಜೊತೆಜೊತೆಯಲ್ಲೇ ಸಂಘಪರಿವಾರ ಮತ್ತು ಬಿಜೆಪಿಯ ಮುಖವಾಡ ಸಹ ಕಳಚುತ್ತದೆ. ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲು ಸಾಧ್ಯವೇ ಇಲ್ಲ. ಇತಿಹಾಸವನ್ನು ತಿರುಚುವ ಕೈಗಳು ಯಾವಾಗಲೂ ನಡುಗುತ್ತಿರುತ್ತವೆ. ಆದರೆ ಸತ್ಯವನ್ನು ಹಿಡಿದ ಕೈಗಳು ಎಂದಿಗೂ ತಲೆಬಾಗಲ್ಲ ಎನ್ನುವುದನ್ನು ಬಿಜೆಪಿ ನಾಯಕರುಗಳು, ವಾಟ್ಸಪ್ ಯೂನಿವರ್ಸಿಟಿಯ ಮಬ್ಭಕ್ತರು ಅರ್ಥಮಾಡಿಕೊಳ್ಳಬೇಕಿದೆ ಎಂದೂ ಅವರು ಕಿಡಿಕಾರಿದ್ದಾರೆ ಎಂದು ಹೇಳಲಾಗಿದೆ.
ವಿನಾಯಕ ದಾಮೋದರ ಸಾವರ್ಕರ್ ಅವರ ಮೊಮ್ಮಗನ ಮಗ ಸತ್ಯಕಿ ಸಾವರ್ಕರ್ ಅವರು ಪುಣೆಯ ವಿಶೇಷ ನ್ಯಾಯಾಲಯದಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಸಾವರ್ಕರ್ ಅವರು ಬ್ರಿಟಿಷರ ಕಾಲದಲ್ಲಿ ಸೆಲ್ಯುಲರ್ ಜೈಲಿನಲ್ಲಿ ಇದ್ದಾಗ ಐದು ಬಾರಿ ಕ್ಷಮಾ ಅರ್ಜಿಗಳನ್ನು ಸಲ್ಲಿಸಿದ್ದರು ಎನ್ನುವುದನ್ನು ಅವರು ಒಪ್ಪಿಕೊಂಡಿದ್ದಾರೆ. ಅಲ್ಲದೆ ಇದೇ ಮಾದರಿಯಲ್ಲಿ ಹಲವು ಸ್ವಾತಂತ್ರ್ಯ ಹೋರಾಟಗಾರರೂ ಸಹ ಅರ್ಜಿಗಳನ್ನು ಸಲ್ಲಿಸಿದ್ದರು ಎಂದು ಹೇಳಿದ್ದಾರೆ.
ಸಾವರ್ಕರ್ ಅವರು ಎರಡು ರಾಷ್ಟ್ರ ಸಿದ್ಧಾಂತವನ್ನು ಮುಂದಿಟ್ಟರು ಎಂಬ ಆರೋಪ ಸರಿಯಲ್ಲ. ಆ ಸಿದ್ಧಾಂತವನ್ನು ಮೊದಲಿಗೆ ಸರ್ ಸಯ್ಯದ್ ಅಹ್ಮದ್ ಖಾನ್ ಪ್ರಸ್ತಾಪಿಸಿದ್ದರು, ಸಾವರ್ಕರ್ ಅವರು ಕೇವಲ ಅದ ಬಗ್ಗೆ ಮಾತನಾಡಿದ್ದರು. ಸಾವರ್ಕರ್ ಅವರು ಹಸುವನ್ನು ದೇವರಂತೆ ಪೂಜಿಸಲಿಲ್ಲ, ಉಪಯುಕ್ತ ಪ್ರಾಣಿಯಂತೆ ನೋಡುತ್ತಿದ್ದರು ಎಂದು ತಿಳಿಸಿದ್ದಾರೆ.
ದ್ವಿತೀಯ ವಿಶ್ವಯುದ್ಧದ ಸಮಯದಲ್ಲಿ ಬ್ರಿಟಿಷರ ಸೇನೆಗೆ ಸೇರುವಂತೆ ಯುವಕರಿಗೆ ಕರೆ ನೀಡಿದ ವಿಚಾರಕ್ಕೂ ಅವರು ಸ್ಪಷ್ಟನೆ ನೀಡಿದ್ದಾರೆ. ಅದರ ಉದ್ದೇಶ ಯುವಕರಿಗೆ ಸೈನಿಕ ತರಬೇತಿ ನೀಡುವುದು, ಮುಂದೆ ಸ್ವಾತಂತ್ರ್ಯ ಬಂದ ನಂತರ ದೇಶಕ್ಕೆ ತರಬೇತಿ ಪಡೆದ ಸೇನೆ ಇರಲು ಸಹಾಯವಾಗಬೇಕು ಎಂಬುದಾಗಿತ್ತು ಎಂದು ಹೇಳಿದ್ದಾರೆ. ಮಹಾತ್ಮ ಗಾಂಧಿ ಹತ್ಯೆ ಪ್ರಕರಣದಲ್ಲಿ ಸಾವರ್ಕರ್ ಅವರನ್ನು ನ್ಯಾಯಾಲಯ ಈಗಾಗಲೇ ನಿರ್ದೋಷಿ ಎಂದು ಬಿಡುಗಡೆ ಮಾಡಿತ್ತು ಎಂದೂ ಸತ್ಯಕಿ ಸಾವರ್ಕರ್ ತಿಳಿಸಿದ್ದಾರೆ.
ರಾಹುಲ್ ಗಾಂಧಿ ವಿರುದ್ಧದ ಪ್ರಕಣದ ತನಿಖೆ
ಮುಂದುವರಿದು, ಸಾವರ್ಕರ್ ಅವರ ಬಗ್ಗೆ ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ದಾಖಲಾದ ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪರವಾಗಿ ವಕೀಲ ಮಿಲಿಂದ್ ಪವಾರ್ ನಡೆಸಿದ ಅಡ್ಡಪರೀಕ್ಷೆಯ ವೇಳೆ ಸತ್ಯಕಿ ಸಾವರ್ಕರ್ ಈ ಹೇಳಿಕೆಗಳನ್ನು ನೀಡಿದ್ದಾರೆ.












Click it and Unblock the Notifications