ಇನ್ನು 40 ವರ್ಷ ವಿಜಯ್ ರಾಜ್ಯಭಾರ, ಇಂಥ ಸುನಾಮಿ ಜಾತಕ ಅಪರೂಪದಲ್ಲಿ ಅಪರೂಪ: ಜ್ಯೋತಿಷಿ ನುಡಿದ ಭವಿಷ್ಯವಾಣಿ ವೈರಲ್
ಚೆನ್ನೈ: ಸೋಮವಾರ ಪ್ರಕಟವಾದ 2026ರ ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶಗಳು ರಾಜ್ಯದ ರಾಜಕೀಯ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸಿವೆ. ದಶಕಗಳ ಕಾಲ ತಮಿಳುನಾಡಿನಲ್ಲಿ ಪಾರುಪತ್ಯ ಮೆರೆದಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ದ್ರಾವಿಡ ಪಕ್ಷಗಳನ್ನು ಹಿಂದಿಕ್ಕಿ, ನಟ ದಳಪತಿ ವಿಜಯ್ ನೇತೃತ್ವದ ನೂತನ ರಾಜಕೀಯ ಪಕ್ಷ 'ತಮಿಳಗ ವೆಟ್ರಿ ಕಳಗಂ' (TVK) ಭರ್ಜರಿ ಜಯಭೇರಿ ಬಾರಿಸಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ. ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ, ವಿಜಯ್ ಅವರ ಚುನಾವಣಾ ಯಶಸ್ಸಿನ ಕುರಿತು ಮೊದಲೇ ನಿಖರ ಭವಿಷ್ಯ ನುಡಿದಿದ್ದ ಖ್ಯಾತ ಜ್ಯೋತಿಷಿ ರಾಧನ್ ಪಂಡಿತ್ ಇದೀಗ ಎಲ್ಲರ ಗಮನ ಸೆಳೆದಿದ್ದಾರೆ.
ರಾಧನ್ ಪಂಡಿತ್ ಯಾರು ?
ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದಲ್ಲಿ ಅಪಾರ ಅನುಭವ ಹೊಂದಿರುವ ರಾಧನ್ ಪಂಡಿತ್, ವಿಜಯ್ ಅವರು ತಮಿಳುನಾಡಿನ ನಿರ್ಣಾಯಕ ರಾಜಕೀಯ ನಾಯಕರಾಗಿ ಹೊರಹೊಮ್ಮಲಿದ್ದಾರೆ ಎಂದು ಈ ಹಿಂದೆಯೇ ಘೋಷಿಸಿದ್ದರು. ಅನೇಕ ರಾಜಕೀಯ ವಿಶ್ಲೇಷಕರು ವಿಜಯ್ ಅವರ ರಾಜಕೀಯ ಪ್ರವೇಶದ ಸಾಧ್ಯಾಸಾಧ್ಯತೆಗಳ ಬಗ್ಗೆ ಅನಿಶ್ಚಿತತೆ ವ್ಯಕ್ತಪಡಿಸುತ್ತಿದ್ದ ಸಂದರ್ಭದಲ್ಲಿ, ಪಂಡಿತ್ ಅವರು ಮಾತ್ರ ವಿಜಯ್ ಅವರ ಜಾತಕವು ಚುನಾವಣೆಯಲ್ಲಿ ದೊಡ್ಡ ಮಟ್ಟದ ಪ್ರಭಾವ ಬೀರಲಿದೆ ಎಂದು ದೃಢವಾಗಿ ಪ್ರತಿಪಾದಿಸಿದ್ದರು.

ಸಾರ್ವಜನಿಕ ಸಭೆಗಳು ಹಾಗೂ ಆನ್ಲೈನ್ ವಿಡಿಯೋಗಳಲ್ಲಿ ವಿಜಯ್ ಅವರ ಜಾತಕವನ್ನು 'ಸುನಾಮಿ'ಗೆ ಹೋಲಿಸಿದ್ದ ಅವರು, ರಾಜ್ಯ ರಾಜಕೀಯದಲ್ಲಿ ಇದು ಭಾರೀ ಸಂಚಲನ ಮೂಡಿಸಲಿದೆ ಎಂದಿದ್ದರು. ಅಷ್ಟೇ ಅಲ್ಲದೆ, ವಿಜಯ್ ಅವರ ಪಕ್ಷದ ಹೆಸರಾದ 'ತಮಿಳಗ ವೆಟ್ರಿ ಕಳಗಂ' ಕೂಡ ಅವರ ಜನ್ಮ ವಿವರಗಳಿಗೆ ಸಂಬಂಧಿಸಿದಂತೆ ಸಂಖ್ಯಾಶಾಸ್ತ್ರ ಮತ್ತು ಜ್ಯೋತಿಷ್ಯದ ಪ್ರಕಾರ ಅತ್ಯಂತ ಶುಭದಾಯಕವಾಗಿದೆ ಎಂದು ವಿಶ್ಲೇಷಿಸಿದ್ದರು.
ಇದೀಗ ಚುನಾವಣಾ ಫಲಿತಾಂಶಗಳು ಹೊರಬಿದ್ದು, ಟಿವಿಕೆ (TVK) ಪಕ್ಷವು ನಿರೀಕ್ಷೆಗೂ ಮೀರಿ ಅದ್ಭುತ ಸಾಧನೆ ಮಾಡಿದ ಬಳಿಕ, ರಾಧನ್ ಪಂಡಿತ್ ಅವರ ಭವಿಷ್ಯವಾಣಿಗಳು ಮತ್ತೆ ಮುನ್ನೆಲೆಗೆ ಬಂದಿವೆ. ವಿಜಯ್ ಬೆಂಬಲಿಗರು ಮತ್ತು ಅಭಿಮಾನಿಗಳು ಜ್ಯೋತಿಷಿಯ ನಿಖರತೆಯನ್ನು ಕೊಂಡಾಡುತ್ತಿದ್ದಾರೆ.
ಫಲಿತಾಂಶ ಪ್ರಕಟವಾದ ಬೆನ್ನಲ್ಲೇ, ರಾಧನ್ ಪಂಡಿತ್ ಅವರು ಚೆನ್ನೈನಲ್ಲಿರುವ ವಿಜಯ್ ಅವರ ನಿವಾಸಕ್ಕೆ ತೆರಳಿ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ. ವಿಜಯ್ ಅವರೊಂದಿಗೆ ಇವರು ಸಂವಾದ ನಡೆಸುತ್ತಿರುವ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಕೇವಲ ಭವಿಷ್ಯ ನುಡಿಯುವುದಷ್ಟೇ ಅಲ್ಲದೆ, ರಾಧನ್ ಪಂಡಿತ್ ಅವರು ಟಿವಿಕೆ ಪಕ್ಷದ ವಕ್ತಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಮಾಧ್ಯಮಗಳ ಚರ್ಚೆಗಳಲ್ಲಿ ಭಾಗವಹಿಸುವ ಅವರು, ಜ್ಯೋತಿಷ್ಯದ ವಿಶ್ಲೇಷಣೆಯೊಂದಿಗೆ ರಾಜಕೀಯ ವಿಚಾರಗಳನ್ನು ಅತ್ಯಂತ ಸ್ಪಷ್ಟವಾಗಿ ಮಂಡಿಸುತ್ತಾರೆ. ತಮಿಳುನಾಡಿನ ಪ್ರಭಾವಿ ನಾಯಕರಾದ ಎಂ.ಕೆ. ಸ್ಟಾಲಿನ್ ಮತ್ತು ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರಿಗೆ ವಿಜಯ್ ಪ್ರಬಲ ಪೈಪೋಟಿ ನೀಡಲಿದ್ದು, ಭವಿಷ್ಯದ ಮುಖ್ಯಮಂತ್ರಿಯಾಗುವ ಎಲ್ಲಾ ಲಕ್ಷಣಗಳು ಅವರ ಜಾತಕದಲ್ಲಿದೆ ಎಂದು ಸತತವಾಗಿ ಬಿಂಬಿಸುತ್ತಾ ಬಂದಿದ್ದರು.
ರಾಧನ್ ಪಂಡಿತ್ ಅವರು ತಮಿಳುನಾಡಿನಲ್ಲಿ ಪ್ರಮುಖ ಆಧ್ಯಾತ್ಮಿಕ ಮಾರ್ಗದರ್ಶಕರೆಂದು ಪರಿಗಣಿಸಲ್ಪಟ್ಟಿದ್ದು, ರಾಜಕೀಯ ಮತ್ತು ಉದ್ಯಮ ವಲಯಗಳಲ್ಲಿ ಅಪಾರ ಪ್ರಭಾವ ಹೊಂದಿದ್ದಾರೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರು ಕೂಡ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಇವರ ಬಳಿ ಜ್ಯೋತಿಷ್ಯ ಕೇಳುತ್ತಿದ್ದರು ಎಂಬುದು ಗಮನಾರ್ಹ.












Click it and Unblock the Notifications