ಐಪಿಎಲ್ ಫೈನಲ್ ಬೆಂಗಳೂರಿನಿಂದ ಗುಜರಾತ್ಗೆ ಶಿಫ್ಟ್; ಬಿಸಿಸಿಐನಿಂದ ಕನ್ನಡಿಗರಿಗೆ ಮಹಾಮೋಸ ಎಂದ ರೂಪೇಶ್ ರಾಜಣ್ಣ
ಬೆಂಗಳೂರು: ಐಪಿಎಲ್ 2026 ಟೂರ್ನಿಯ ಫೈನಲ್ ಪಂದ್ಯವನ್ನು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ಗುಜರಾತ್ನ ಅಹಮದಾಬಾದ್ಗೆ ಸ್ಥಳಾಂತರಿಸಿದ ಬಿಸಿಸಿಐ (BCCI) ನಿರ್ಧಾರದ ವಿರುದ್ಧ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕ್ರೀಡಾಭಿಮಾನಿಗಳು ಹಾಗೂ ಕನ್ನಡ ಪರ ಹೋರಾಟಗಾರರು ಬಿಸಿಸಿಐ ನಡೆಯನ್ನು ಕಟುವಾಗಿ ಟೀಕಿಸುತ್ತಿದ್ದು, 'ಒನ್ ನೇಷನ್ ಒನ್ ಸ್ಟೇಡಿಯಂ' ಎಂಬ ವಾಕ್ಯದೊಂದಿಗೆ ಅಭಿಯಾನ ಆರಂಭಿಸಿದ್ದಾರೆ.
ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗ ರೂಪೇಶ್ ರಾಜಣ್ಣ ಸೇರಿದಂತೆ ಹಲವರು ಈ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. "ಟಿಕೆಟ್ ದಂಧೆ ಕಾರಣವೋ ಅಥವಾ ಮತ್ಯಾವುದೋ ಕಾರಣವೋ, ಹೇಗಾದ್ರು ಮಾಡಿ ಗುಜರಾತ್ಗೆ ಮ್ಯಾಚ್ ಶಿಫ್ಟ್ ಮಾಡ್ಬೇಕಿತ್ತು, ಮಾಡಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಅದನ್ನೇ ಅಲ್ಲವೇ ಮಾಡ್ತಿರೋದು? ಅಂತಾರಾಷ್ಟ್ರೀಯ ಪಂದ್ಯ ಕೂಡ ಅಲ್ಲೇ ಆಗ್ಬೇಕು ಅಂದ್ರೆ ಉಳಿದ ರಾಜ್ಯಗಳಿಗೆ ಮತ್ತು ಕ್ರೀಡಾಂಗಣಗಳಿಗೆ ಬೆಲೆ ಇಲ್ಲವೇ? ಒನ್ ನೇಷನ್ ಒನ್ ಸ್ಟೇಡಿಯಂ. ದಯವಿಟ್ಟು ಎಲ್ಲಾ ರಾಜ್ಯದ ಜನರ ಭಾವನೆಗಳಿಗೂ ಗೌರವ ಕೊಡಿ" ಎಂದು ಬಿಸಿಸಿಐ ಅನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ವಿಶ್ವಕಪ್ ಫೈನಲ್, ಐಪಿಎಲ್ ಫೈನಲ್ ಸೇರಿದಂತೆ ಬಹುತೇಕ ಎಲ್ಲಾ ಪ್ರಮುಖ ಮತ್ತು ಹೈವೋಲ್ಟೇಜ್ ಪಂದ್ಯಗಳನ್ನು ಕೇವಲ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಮಾತ್ರ ಸೀಮಿತಗೊಳಿಸುತ್ತಿರುವುದು ಇತರ ರಾಜ್ಯಗಳ ಕ್ರಿಕೆಟ್ ಅಭಿಮಾನಿಗಳಲ್ಲಿ ತಾರತಮ್ಯದ ಭಾವನೆ ಮೂಡಿಸಿದೆ. ಪ್ರಮುಖ ಪಂದ್ಯಗಳನ್ನು ಆಯೋಜಿಸುವ ಅವಕಾಶದಿಂದ ಇತರ ಐತಿಹಾಸಿಕ ಕ್ರೀಡಾಂಗಣಗಳನ್ನು ವಂಚಿಸಲಾಗುತ್ತಿದೆ ಎಂಬುದು ಅಭಿಮಾನಿಗಳ ಪ್ರಮುಖ ಆರೋಪವಾಗಿದೆ.
ಈ ಪೋಸ್ಟ್ಗಳಿಗೆ ಜಾಲತಾಣ ಬಳಕೆದಾರರು ವ್ಯಾಪಕವಾಗಿ ಪ್ರತಿಕ್ರಿಯಿಸುತ್ತಿದ್ದು, ಕಾಮೆಂಟ್ಗಳ ಮೂಲಕ ತಮ್ಮ ಕೋಪ ಹೊರಹಾಕಿದ್ದಾರೆ:
"ಬಿಸಿಸಿಐ ಎಂದರೆ ಕೇವಲ ಗುಜರಾತ್ ಕ್ರಿಕೆಟ್ ಮಂಡಳಿಯಲ್ಲ. ಭಾರತದ ಎಲ್ಲ ರಾಜ್ಯಗಳಿಗೂ ಸಮಾನ ಅವಕಾಶ ಸಿಗಬೇಕು. ಕೇವಲ ಒಂದು ಸ್ಟೇಡಿಯಂಗೆ ಮಣೆ ಹಾಕುವುದು ತಾರತಮ್ಯದ ಪರಮಾವಧಿ." ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬ ಬಳಕೆದಾರರು "ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೈನಲ್ ನೋಡುವ ನಮ್ಮ ಆಸೆಗೆ ತಣ್ಣೀರು ಎರಚಲಾಗಿದೆ. ಕೇವಲ ಹಣ, ರಾಜಕೀಯ ಲಾಭ ಮತ್ತು ಪ್ರಾಯೋಜಕರ ಲೆಕ್ಕಾಚಾರಕ್ಕಾಗಿ ಹೀಗೆ ಪಂದ್ಯಗಳನ್ನು ಸ್ಥಳಾಂತರಿಸುವುದು ಕ್ರೀಡೆಗೆ ಹಾಗೂ ಅಭಿಮಾನಿಗಳಿಗೆ ಮಾಡುವ ಅಪಮಾನ." ಎಂದಿದ್ದಾರೆ.
ಕಾರಣ ಟಿಕೆಟ್ ದಲ್ಲ
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) May 7, 2026
ಹೇಗಾದ್ರು ಮಾಡಿ ಗುಜರಾತ್ ಗೆ ಮ್ಯಾಚ್ ಶಿಫ್ಟ್ ಮಾಡ್ಬೇಕಿತ್ತು ಮಾಡಿದ್ದಾರೆ.
ಕಳೆದ ನಾಲ್ಕೈದು ವರ್ಷದಿಂದ ಅದನ್ನೇ ಅಲ್ಲವೇ ಮಾಡ್ತಿರೋದು.
ಅಂತಾರಾಷ್ಟ್ರೀಯ ಪಂದ್ಯ ಕೂಡ ಅಲ್ಲೇ ಆಗ್ಬೇಕು ಅಂದ್ರೆ ಉಳಿದವರಿಗೆ ಬೆಲೆ ಇಲ್ಲವೇ?
One nation one stadium
ದಯವಿಟ್ಟು ಎಲ್ಲಾ ರಾಜ್ಯದ ಜನರ ಭಾವನೆಗಳಿಗೂ ಗೌರವ ಕೊಡ್ರಪ್ಪ.@BCCI pic.twitter.com/urY4WbTrg5
ಹಾಗೆಯೇ ಮತ್ತೊಬ್ಬರು "ಎಲ್ಲಾ ಪ್ರಮುಖ ಪಂದ್ಯಗಳು ಒಂದೇ ಸ್ಟೇಡಿಯಂಗೆ ಹೋದರೆ ಉಳಿದ ರಾಜ್ಯಗಳಲ್ಲಿರುವ ಅಂತರಾಷ್ಟ್ರೀಯ ಕ್ರೀಡಾಂಗಣಗಳು ಯಾಕಿರಬೇಕು? ಬಿಸಿಸಿಐ ಆಟವನ್ನು ಆಟವಾಗಿ ನೋಡದೆ ಕೇವಲ ಬಿಸಿನೆಸ್ ಮಾಡುತ್ತಿದೆ." ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಒಟ್ಟಾರೆಯಾಗಿ, ಕ್ರೀಡೆಯನ್ನು ಕ್ರೀಡೆಯಾಗಿ ನೋಡದೆ ವಾಣಿಜ್ಯ ಮತ್ತು ಪ್ರಾದೇಶಿಕ ಒಲವುಗಳ ಆಧಾರದ ಮೇಲೆ ಬಿಸಿಸಿಐ ತೆಗೆದುಕೊಳ್ಳುತ್ತಿರುವ ಇಂತಹ ನಿರ್ಧಾರಗಳು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿವೆ. ಮುಂದಿನ ದಿನಗಳಲ್ಲಿ ಈ 'ಒನ್ ನೇಷನ್ ಒನ್ ಸ್ಟೇಡಿಯಂ' ಟೀಕೆ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.












Click it and Unblock the Notifications