6 ವರ್ಷದ ಮಗನ ಪುಸ್ತಕದಲ್ಲಿ ಮನಿ ಮ್ಯಾನೇಜ್ಮೆಂಟ್ ಪಾಠ ನೋಡಿ ಬೆಂಗಳೂರಿನ ಸಿಇಒಗೆ ಅಚ್ಚರಿ
ಬೆಂಗಳೂರು ಮೂಲದ ಸಿಇಒ ಕುನಾಲ್ ಕಾಬ್ರಾ ಅವರು ತಮ್ಮ ಆರು ವರ್ಷದ ಮಗ ಶಾಲೆಯಲ್ಲಿಯೇ 'ಹಣಕಾಸು ಸಾಕ್ಷರತೆ' ಕಲಿಯುತ್ತಿರುವುದನ್ನು ನೋಡಿ ತೀವ್ರ ಅಚ್ಚರಿ ಹಾಗೂ ಸಂತಸ ವ್ಯಕ್ತಪಡಿಸಿದ್ದಾರೆ. ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಹಣದ ಮೌಲ್ಯವನ್ನು ಕಲಿಸುತ್ತಿರುವ ಈ ನಡೆಯನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಲಿಂಕ್ಡ್ಇನ್ನಲ್ಲಿ ಈ ಕುರಿತು ಸುದೀರ್ಘವಾದ ಪೋಸ್ಟ್ ಹಂಚಿಕೊಂಡಿರುವ ಅವರು, ತಮ್ಮ ಮಗನ ಪಠ್ಯಪುಸ್ತಕದ ಹೆಸರನ್ನು ಬಹಿರಂಗಪಡಿಸಿದ್ದಾರೆ. 'ಮೈ ಪೈಸೊ: ಮನಿ ಮೈಂಡ್ಫುಲ್ನೆಸ್' ಎಂಬ ಹೆಸರಿನ ಈ ಪುಸ್ತಕವು ಮಕ್ಕಳಲ್ಲಿ ಹಣಕಾಸಿನ ಅರಿವು ಮೂಡಿಸುವಲ್ಲಿ ಹೇಗೆ ಸಹಾಯಕವಾಗಲಿದೆ ಎಂಬುದನ್ನು ಅವರು ವಿವರಿಸಿದ್ದಾರೆ.

ಒಂದನೇ ತರಗತಿಯ ಈ ಪುಸ್ತಕದಲ್ಲಿ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ), ಭಾರತ್ ಇಂಟರ್ಫೇಸ್ ಫಾರ್ ಮನಿ (ಭೀಮ್), ಹಣದ ಉಳಿತಾಯ ಮತ್ತು ಜವಾಬ್ದಾರಿಯುತ ಖರ್ಚಿನ ಕುರಿತಾದ ಪ್ರಮುಖ ಅಧ್ಯಾಯಗಳಿವೆ ಎಂದು ಅವರು ಸಂತಸದಿಂದ ಹೇಳಿಕೊಂಡಿದ್ದಾರೆ.
ವಿಶೇಷವೆಂದರೆ, ಈ ಪುಸ್ತಕದ ಮುಖಪುಟದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಗಳ ಐಕಾನ್ಗಳನ್ನು ಮುದ್ರಿಸಲಾಗಿದೆ. "ನನ್ನ ಕುಟುಂಬದಲ್ಲಿರುವ ಅರ್ಧದಷ್ಟು ವಯಸ್ಕರಿಗೆ ಈ ಡಿಜಿಟಲ್ ಪಾವತಿಗಳ ಬಗ್ಗೆ ಇನ್ನೂ ಸಂಪೂರ್ಣ ಅರಿವಿಲ್ಲ, ಆದರೆ ಒಂದನೇ ತರಗತಿಯ ಮಗುವಿಗೆ ಇದನ್ನು ಪರಿಚಯಿಸುತ್ತಿರುವುದು ನಿಜಕ್ಕೂ ಭರವಸೆ ಮೂಡಿಸುವ ವಿಚಾರ. ಏಕೆಂದರೆ, ಈ ಮಕ್ಕಳು ವಯಸ್ಕರಾದಾಗ ಹಣಕಾಸಿನ ವಿಚಾರದಲ್ಲಿ ಅತ್ಯಂತ ಸ್ಪಷ್ಟತೆ ಹೊಂದಿರುತ್ತಾರೆ" ಎಂದು ಕಾಬ್ರಾ ಬರೆದುಕೊಂಡಿದ್ದಾರೆ.
ಹಣಕಾಸು ಕ್ಷೇತ್ರದಲ್ಲಿಯೇ ವೃತ್ತಿಜೀವನ ಕಳೆದಿರುವ ಕಾಬ್ರಾ, ಶಿಕ್ಷಣ ವ್ಯವಸ್ಥೆಯಲ್ಲಿನ ಹಳೆಯ ಕೊರತೆಗಳನ್ನು ಪ್ರಸ್ತಾಪಿಸಿದ್ದಾರೆ. "ನಾನು ನನ್ನ ಸುತ್ತಮುತ್ತಲಿನ ಎಲ್ಲರಿಗೂ ಅನಧಿಕೃತ ಹಣಕಾಸು ಸಲಹೆಗಾರನಾಗಿದ್ದೆ. ಆಗೆಲ್ಲಾ ಶಾಲಾ-ಕಾಲೇಜುಗಳಲ್ಲಿ ಈ ವಿಚಾರಗಳ ಬಗ್ಗೆ ಏಕೆ ಕಲಿಸುವುದಿಲ್ಲ ಎಂಬ ಪ್ರಶ್ನೆ ಕಾಡುತ್ತಿತ್ತು. ನಾವು ಶಾಲೆಯಲ್ಲಿ ತ್ರಿಕೋನಮಿತಿ, ಆವರ್ತಕ ಕೋಷ್ಟಕ, ಯುದ್ಧಗಳ ಇತಿಹಾಸವನ್ನು ಕಂಠಪಾಠ ಮಾಡುತ್ತೇವೆ.
ಆದರೆ ನಮ್ಮ ಸಂಬಳದ ರಸೀದಿ ಹೇಗೆ ಕೆಲಸ ಮಾಡುತ್ತದೆ, ಟಿಡಿಎಸ್ ಎಂದರೇನು, ಹೆಸರಿನಲ್ಲಿರುವ ಸಣ್ಣ ತಪ್ಪಿನಿಂದಾಗಿ ಪಿಎಫ್ (PF) ಹಣ ಹೇಗೆ ಸಿಲುಕಿಕೊಳ್ಳುತ್ತದೆ ಎಂಬುದನ್ನು ಯಾರೂ ವಿವರಿಸುವುದಿಲ್ಲ. ನಮ್ಮಲ್ಲಿ ಹೆಚ್ಚಿನವರು ಹಣದ ವಿಚಾರದಲ್ಲಿ ತಪ್ಪುಗಳನ್ನು ಮಾಡುವ ಮೂಲಕವೇ ಪಾಠ ಕಲಿತಿದ್ದಾರೆ" ಎಂದು ಅಸಮಾಧಾನ ಹೊರಹಾಕಿದ್ದಾರೆ.
"ಆದರೆ ಈಗ ಭಾರತ ಬದಲಾಗುತ್ತಿದೆ. ದಶಕಗಳ ಹಿಂದೆಯೇ ಬರಬೇಕಿದ್ದ ಈ ಬದಲಾವಣೆ ಈಗ ಬಂದಿರುವುದು ಸ್ವಾಗತಾರ್ಹ. ಚೆಕ್ ಎಂದರೇನು ಎಂದು ತಿಳಿಯುವ ಮುನ್ನವೇ ಯುಪಿಐ ಐಡಿ ಬಗ್ಗೆ ತಿಳಿದುಕೊಳ್ಳುವ ಪೀಳಿಗೆ ಇದೀಗ ಬೆಳೆಯುತ್ತಿದೆ. ಈ ಮಕ್ಕಳು ತಮ್ಮ 25ನೇ ವಯಸ್ಸಿನಲ್ಲಿ ಮೊದಲ ಸಂಬಳ ಪಡೆದಾಗ ಆರ್ಥಿಕ ವಿಚಾರಗಳ ಬಗ್ಗೆ ಗೊಂದಲಕ್ಕೀಡಾಗಿ ಒದ್ದಾಡುವುದಿಲ್ಲ. ಬದಲಾಗಿ, ಹಣ ಉಳಿತಾಯ, ಖರ್ಚು ಮತ್ತು ಆರ್ಥಿಕ ಜವಾಬ್ದಾರಿಯನ್ನು ಬಹಳ ಹಿಂದೆಯೇ ಕಲಿತಿರುತ್ತಾರೆ" ಎಂದು ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.












Click it and Unblock the Notifications