ಕಲ್ಲಂಗಡಿ ಬೆಳೆಯಲು ಈಗ ಸಕಾಲ; ರೈತರಿಗೆ ಸಲಹೆಗಳು

ಕೊಪ್ಪಳ, ನವೆಂಬರ್ 27; ಕಲ್ಲಂಗಡಿ ಬೆಳೆಯಲು ಈಗ ಸಕಾಲವಾಗಿದೆ. ರೈತರು ಈ ಋತುವಿನಲ್ಲಿ ಕಲ್ಲಂಗಡಿ ಬೆಳೆಯಲು ತಯಾರಿಯನ್ನು ನಡೆಸಿದ್ದಾರೆ. ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಂ. ವಿ. ರವಿ ರೈತರಿಗೆ ಬೆಳೆಯ ಕುರಿತು ಹಲವು ಸಲಹೆಗಳನ್ನು ನೀಡಿದ್ದಾರೆ.

ಉಷ್ಣಾಂಶ ಪಡೆದುಕೊಳ್ಳುವ ಸಾಮರ್ಥ್ಯ ಇರುವ ಕಲ್ಲಂಗಡಿ ಬೆಳೆಗೆ ಕೊಪ್ಪಳ ಜಿಲ್ಲೆ ತುಂಬಾ ಸೂಕ್ತ ಪ್ರದೇಶವಾಗಿದೆ. ಭೂಮಿಯ ಉಷ್ಣತೆ 20 ಡಿಗ್ರಿ ಸೆಲ್ಸಿಯಸ್‌ಕ್ಕಿಂತ ಹೆಚ್ಚಿರುವ ಮತ್ತು ಹವಾಗುಣ 25-32 ಡಿಗ್ರಿ ಸೆಲ್ಸಿಯಸ್ ಇರುವ ಬಯಲು ಸೀಮೆ ಪ್ರದೇಶ, ನೀರು ಬಸಿದು ಹೋಗುವ ಸಾಧಾರಣ ಎರೆ ಮಣ್ಣು, ಮರಳು ಮಿಶ್ರಿತ ಕೆಂಪು ಮಣ್ಣು ಹಾಗೂ ನದಿ ತೀರದ ಪ್ರದೇಶ ಈ ಬೆಳೆಗೆ ಸೂಕ್ತವಾಗಿದೆ.

watermelon-cultivation

ನೇರ ಬೀಜ ಬಿತ್ತನೆ ಮಾಡಿದರೆ 400-500 ಗ್ರಾಂ. ಬೀಜ ಬೇಕು. 4 ರಿಂದ 6 ಅಡಿ ಸಾಲಿನಿಂದ ಸಾಲಿಗೆ ಹಾಗೂ 1.1/ 2-2 ಅಡಿ ಬೀಜ/ ಸಸಿಗಳ ನಡುವಿನ ಅಂತರ ಸೂಕ್ತ. ಎಕರೆಗೆ 3700 ರಿಂದ 5500 ಸಸಿಗಳ ಸಂಖ್ಯೆ ಉತ್ತಮ. ಬಿತ್ತನೆಗೆ ಮೊದಲು ಭೂಮಿ ಉಳುಮೆ ಮಾಡಿ 5 ಟನ್ ಕಾಂಪೋಸ್ಟ್ ಗೊಬ್ಬರ ಅಥವಾ 10-12 ಟನ್ ಚೆನ್ನಾಗಿ ಕಳಿತ ಕೊಟ್ಟಿಗೆ ಗೊಬ್ಬರ ಜೊತೆಗೆ ಜೈವಿಕ ಗೊಬ್ಬರಗಳಾದ ಸೂಡೋಮೊನಾಸ, ಟ್ರೆಕೊರ‍್ಮಾ ಮತ್ತು ಬೇವಿನ ಹಿಂಡಿ 1 ಕ್ವಿಂಟಲ್ ಪ್ರತಿ ಎಕರೆಗೆ ಬೆರೆಸಿ ಮೂರು ವಾರಗಳ ನಂತರ 30 ರಿಂದ 40 ಸೆಂ. ಮೀ. ಎತ್ತರದ ಮಡಿಗಳನ್ನು 4 ರಿಂದ 6 ಅಡಿ ಅಂತರದಲ್ಲಿ ನಿರ್ಮಿಸಿ ಅವುಗಳ ಮೇಲೆ ಹನಿಕೆ (ಲ್ಯಾಟರಲ್) ಗಳನ್ನು ಎಳೆದು ಪ್ಲಾಸ್ಟಿಕ್ ಹೊದಿಕೆ ಹಾಕಿ, 2 ಅಡಿಗೊಂದರಂತೆ ನಾಟಿ ಮಾಡಬೇಕು.

ಪ್ರಮುಖ ತಳಿಗಳು: ಶುಗರ್ ಬೇಬಿ, ಅರ್ಕಾ ಮಾಣಿಕ, ಅರ್ಕಾ ಆಕಾಶ, ಐಶ್ವರ್ಯ ಅಲ್ಲದೇ ನಾನಾ ಕಂಪನಿಗಳ ಹೈಬ್ರಿಡ್ ತಳಿಗಳು ಮಾರುಕಟ್ಟೆಯಲ್ಲಿ ಲಭ್ಯ. ಮಾರುಕಟ್ಟೆ ನೋಡಿ ಸೂಕ್ತ ತಳಿ ಆಯ್ಕೆ ಮಾಡಬೇಕು. ಸಸಿಗಳು ನಾಟಿ ಮಾಡುವಾಗ ಸೂಕ್ಷ್ಮಾಣು ಜೀವಿಗಳ ಮಿಶ್ರಣವಾದ ಅರ್ಕಾಕನ್ಸೋರ್ಶಿಯಂ 15-20 ಗ್ರಾಂ. ಹಾಕಿ ನಾಟಿ ಮಾಡಿ 15 ನಿಮಿಷಗಳ ಕಾಲ ಡ್ರಿಪ್ ಮೂಲಕ ನೀರು ಕೊಡುವುದು ಉತ್ತಮ ಪದ್ದತಿಯಾಗಿದೆ.

ಪ್ರತಿ ದಿನ ತೇವಾಂಶ ನೋಡಿ 8-10 ದಿನಗಳವರೆಗೆ 15 ನಿಮಿಷದಿಂದ 30 ನಿಮಿಷಗಳವರೆಗೆ ನೀರೊದಗಿಸಬೇಕು. ಪ್ರತಿ ವಾರ ನೀರು ಕೊಡುವ ಪ್ರಮಾಣ ಹೆಚ್ಚಿಸಬೇಕು. ಹೂವು ಬಿಡುವ ಸಮಯ ಮತ್ತು ಕಾಯಿ ಕಟ್ಟುವ ಸಮಯದಲ್ಲಿ ನೀರಿನ ಅಭಾವ ಇರದಂತೆ ನೋಡಿಕೊಳ್ಳಬೇಕು. ತಳಿಗಳನ್ನಾಧರಿಸಿ ನಾಟಿ ಮಾಡಿದ 3 ರಿಂದ 5 ವಾರಗಳ ನಂತರ ಹೂವು ಬಿಡಲು ಆರಂಭವಾಗುತ್ತದೆ.

ಮೊದಲು ಗಂಡು ಹೂವು ಆರಂಭವಾಗಿ ನಂತರ ಹೆಣ್ಣು ಹೂವು ಬರುತ್ತದೆ. ಗಂಡು ಹೂವು ಕಿತ್ತು ಹಾಕಿ, ಹೆಣ್ಣು ಹೂವು ಬೆಳೆಯಲು ಬಿಡಬೇಕು. ಪ್ರತಿ ಬಳ್ಳಿಗೆ ಎರಡೇ ಹೆಣ್ಣು ಹೂವು ಬಿಟ್ಟು ಉಳಿದವುಗಳನ್ನು ತೆಗೆದು ಹಾಕಬೇಕು.

ರೋಗ/ ಕೀಟಗಳ ಹತೋಟಿ ಮಾಹಿತಿ: ಬೂದಿ ರೋಗ, ಬೂಜು ತುಪ್ಪಟ ರೋಗ ಮತ್ತು ಅಂಗಮಾರಿ ರೋಗಗಳಲ್ಲದೆ ಕುಡಿ ಸಾಯುವ ರೋಗಗಳು ಮತ್ತು ಥ್ರಿಪ್ಸ ನುಸಿ, ಮೈಟ್ಸ ನುಸಿಗಳ ಹತೋಟಿಗೆ ತಜ್ಞರ ಸಲಹೆ ಪಡೆದು ಸೂಕ್ತ ಶಿಲೀಂಧ್ರ/ ಕೀಟ ನಾಶಕಗಳನ್ನು ಬಳಸಬೇಕು.

ಹನಿ ನೀರಾವರಿ ಮೂಲಕ ತಜ್ಞರ ಸಲಹೆ ಪಡೆದು ನೀರಿನಲ್ಲಿ ಕರಗುವ ಗೊಬ್ಬರ ನಿಯಮಿತವಾಗಿ ಕೊಡಬೇಕು. ಬೆಳೆಗೆ ಸೂಕ್ಷ್ಮ ಲಘು ಪೋಷಕಾಂಶ ಸತು, ಬೋರಾನ್ ಮತ್ತು ಕ್ಯಾಲ್ಸಿಯಂ ಸೂಕ್ತ ಪ್ರಮಾಣದಲ್ಲಿ ಬಳಸಬೇಕು. ಪ್ರತಿ ಎಕರೆಗೆ ಒಂದು ಜೇನು ಪೆಟ್ಟಿಗೆ ಅಳವಡಿಸಿದರೆ ಪರಾಗಸ್ಪರ್ಷದಿಂದಾಗಿ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ.

ಆಸಕ್ತ ರೈತರು ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಂ. ವಿ. ರವಿ ಅವರನ್ನು ಸಂಪರ್ಕಿಸಬಹುದು. ಮೊಬೈಲ್ ಸಂಖ್ಯೆ 9480247745.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+