ಅಧಿಕಾರಕ್ಕೆ ಬಂದ್ರೆ 24 ಗಂಟೆಯಲ್ಲಿ ರೈತರ ಸಾಲ ಮನ್ನಾ- ಕುಮಾರಸ್ವಾಮಿ
ಮುಂದಿನ ವಿಧಾನಸಭೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ 24 ಗಂಟೆಗಳೊಳಗೆ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು, ಮಾರ್ಚ್ 23: ಮುಂದಿನ ವಿಧಾನಸಭೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ 24 ಗಂಟೆಗಳೊಳಗೆ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಜಾತ್ಯಾತೀತ ಜನತಾದಳ ಹಮ್ಮಿಕೊಂಡಿದ್ದ ನೂತನ ಕಚೇರಿಗೆ ಜೆ.ಪಿ ಭವನ ನಾಮಕರಣ ಮತ್ತು ಬೃಹತ್ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.[ಜೆಡಿಎಸ್ ಸಮಾವೇಶದಲ್ಲಿ ಜೆಡಿಎಸ್ ಮುಖಂಡನ ಜೇಬಿಗೆ ಕತ್ತರಿ!]
ಇದೇ ವೇಳೆಯಲ್ಲಿ ಸಮಾವೇಶದಲ್ಲಿ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ವಿಧಾನಸಭಾ ಚುನಾವಣೆಗೆ ಒಂದು ವರ್ಷವಿರುವಾಗಲೇ ಜೆಡಿಎಸ್ ಪಕ್ಷ ಪ್ರಣಾಳಿಕೆಯ ರೀತಿಯಲ್ಲಿ ಈ ನಿರ್ಣಯವನ್ನು ಬಿಡುಗಡೆ ಮಾಡಿದ್ದು ಇದರಲ್ಲೂ ಸಾಲ ಮನ್ನಾ ಉಲ್ಲೇಖ ಮಾಡಲಾಗಿದೆ.
ನಾನು ಅಧಿಕಾರಕ್ಕೆ ಬಂದರೆ 24 ಗಂಟೆಗಳೊಳಗೆ ರೈತರ ಸಾಲ ಮನ್ನಾ ಮಾಡಲಾಗುವುದು. ಟ್ರಾಕ್ಟರ್ ಖರೀದಿ, ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಬ್ಯಾಂಕುಗಳಲ್ಲಿ ಪಡೆದ ಸಾಲ ಮನ್ನಾ ಮಾಡಲಾಗುವುದು ಎಂದು ಅವರು ತಿಳಿಸಿದರು. ಕುಮಾರಸ್ವಾಮಿ ಸಾಲ ಮನ್ನಾ ಘೋಷಣೆ ಮಾಡುತ್ತಿದ್ದಂತೆ ಕಾರ್ಯಕರ್ತರು ಕರತಾಡನದ ಮೂಲಕ ಹೇಳಿಕೆಯನ್ನು ಬೆಂಬಲಿಸಿದ್ದು ಕಂಡು ಬಂತು.[ಗಣಿಧಣಿ ಕೇಸ್ ಕೈ ಬಿಡಲು ಬಿಜೆಪಿ ಜತೆ 500 ಕೋಟಿ ಡೀಲ್- ಹೆಚ್ಡಿಕೆ]
ಇದೇ ವೇಳೆ ಅವರು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಮೇಲೆ ಅವರು ವಾಗ್ದಾಳಿ ನಡೆಸಿದರು.

ಕಲ್ಲಪ್ಪ ಆತ್ಮಹತ್ಯೆಗೆ ಬಿಜೆಪಿ ಕಾರ್ಯಕರ್ತರು ಕಾರಣ
ನರೇಂದ್ರ ಮೋದಿ ದೇಶವನ್ನು ಭ್ರಷ್ಟಾಚಾರ ಮುಕ್ತ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಆದರೆ ಪ್ರಾಮಾಣಿಕ ಅಧಿಕಾರಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆಗೆ ಬಿಜೆಪಿ ಕಾರ್ಯಕರ್ತರೇ ಕಾರಣ. ಮರಳು ಮಾಫಿಯಾ, ಲಾಟರಿ ಟಿಕೆಟ್ ದಂಧೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದೀರಿ. ಇವತ್ತು ಅವರ ಪರವಾಗಿ ಧ್ವನಿ ಎತ್ತಿದವರು ಯಾರೂ ಇಲ್ಲ. ನಾನು ಧ್ವನಿ ಎತ್ತಿದ್ದರಿಂದ ಆ ಹೆಣ್ಣುಮಗಳು (ಹಂಡಿಭಾಗ್ ಪತ್ನಿ)ಗೆ ಕೆಲಸ ಸಿಕ್ಕಿತು ಎಂದು ಹೇಳಿದರು.

ಎತ್ತಿನಹೊಳೆ ಏನು ಮಾಡಿದ್ರಿ?
ರಾಜ್ಯ ಸರಕಾರಕ್ಕೆ ಚಾಟಿ ಬೀಸಿದ ಕುಮಾರಸ್ವಾಮಿ ಎತ್ತಿನ ಹೊಳೆ ಯೋಜನೆ ಏನು ಮಾಡಿದಿರಿ? ಒಂದು ವರ್ಷದಲ್ಲಿ ಪೂರ್ಣ ಗೊಳಿಸುತ್ತೇವೆ ಎಂದು ಹೇಳಿ 4 ವರ್ಷ ಕಳೆಯಿತು. ಚಿಕ್ಕಬಳ್ಳಾಪುರ, ಕೋಲಾರ, ರಾಮನಗರಕ್ಕೆ ನೀರು ಹರಿಯಿತಾ? ನಿಮಗೆ ಕೃಷ್ಣಾ 'ಬಿ ಸ್ಕೀಮ್' ಇನ್ನೂ ಜಾರಿಗೊಳಿಸಲು ಆಗಿಲ್ಲ. ಇನ್ನು 50 ವರ್ಷ ಆದರೂ ನಿಮ್ಮಿಂದ ಜಾರಿಗೆ ತರಲು ಆಗಲ್ಲ. ದೇವೇಗೌಡರು ಇರುವಾಗ ಕೃಷ್ಣಾ ಎ ಸ್ಕೀಮ್ ಮೂಲಕ ರೈತರಿಗೆ ನೀರು ಹರಿಸಿದ್ದಾರೆ. ಅಧಿಕಾರಕ್ಕೆ ಬಂದರೆ ಶಾಶ್ವತ ನೀರಾವರಿ ಯೋಜನೆಗಳನ್ನೆಲ್ಲಾ ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.

ಬಿಜೆಪಿ ಬೇಕಾ?
ಬೆಂಗಳೂರಿಗೆ ಕುಡಿಯುವ ನೀರಿಗೆ 9 ಟಿಎಂಸಿ ಎತ್ತಿಡುವಂತೆ ಮಾಡಿದವರು ದೇವೇಗೌಡರು. ಕಾವೇರಿ ಪ್ರಾಧಿಕಾರ ಸ್ಥಾಪನೆಯಾಗಲಿದ್ದಾಗ ವಿಧಾನಸೌಧದ ಮುಂದಿನ ಗಾಂಧಿ ಪ್ರತಿಮೆ ಬಳಿ ಉಪವಾಸ ಕೂತು ರಚನೆಯಾಗದಂತೆ ತಡೆದವರು ದೇವೇಗೌಡರು. ಪ್ರಧಾನಿಯಿಂದ ಕಾವೇರಿ, ಮಹಾದಾಯಿಗೆ ನ್ಯಾಯ ಕೊಡಿಸಲು ಸಾಧ್ಯವಾ? ಎಂದು ಪ್ರಶ್ನಿಸಿದರು. ಇವತ್ತು ರಾಜ್ಯದಾದ್ಯಂತ ಬರಗಾಲ ಇದೆ. ಬರ ಪರಿಹಾರ ಕೊಡಿ ಅಂತ ಕೇಳಿದರೆ 450 ಕೋಟಿ ಕೊಡ್ತೀರಿ. ನಮ್ಮನ್ನೇನು ಬಿಕ್ಷುಕರು ಎಂದು ತಿಳಿದುಕೊಂಡಿದ್ದೀರಾ ಎಂದು ಕೇಂದ್ರ ಸರಕಾರದ ವಿರುದ್ದ ಹರಿಹಾಯ್ದರು.

ಕಿಂದರಿ ಜೋಗಿ ಮಾತಿಗೆ ಮರುಳಾಗಬೇಡಿ
ಉತ್ತರಪ್ರದೇಶದ ಚುನಾವಣೆಯ ಗೆಲುವಿನ ಬಳಿಕ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಕರ್ನಾಟಕಕ್ಕೆ ಲಗ್ಗೆ ಇಡುತ್ತಿದ್ದಾರೆ ಎನ್ನುತ್ತಿದ್ದಾರೆ. ಮೋದಿ ಕನಸುಗಾರ. ಅವರ ಕನಸುಗಳನ್ನೇ ಮಾರಾಟ ಮಾಡುತ್ತಾರೆ. ಹಳ್ಳಿಯಲ್ಲಿ ಎಲ್ಲೋ ಜೋಗಪ್ಪ ನಿನ್ನ ಅರಮನೆ ... ಎಂಬ ಜಾನಪದ ಗೀತೆ ಇದೆ. ಈ ಗೀತೆಯಲ್ಲಿ ಕಿಂದರಿ ಜೋಗಿ ಹಾಡು ಹೇಳುವ ಸಮಯದಲ್ಲಿ ಹಳ್ಳಿಯ ಹೆಣ್ಣು ಮಗಳೊಬ್ಬಳು ಅರಮನೆ ಬೇಕು ಎಂದು ಗಂಡ, ಮಕ್ಕಳನ್ನು ಬಿಟ್ಟು ಅವನ ಹಿಂದೆ ಹೋಗುತ್ತಾಳೆ. ಆದರೆ ಕೊನೆಗೆ ಅವಳು ಮೋಸ ಹೋದ ವಿಚಾರ ಅರಿವಾಗುತ್ತದೆ. ಈ ಹಾಡಿನ ರೀತಿಯಲ್ಲಿ ಮೋದಿ ಅವರು ಅರಮನೆ ತೋರಿಸುತ್ತೇನೆ ಎನ್ನುತ್ತಿದ್ದಂತೆ ಜನ ಮತ ಹಾಕುತ್ತಿದ್ದಾರೆ ಎಂದು ದೂರಿದರು.

ರಾಜ್ಯಕ್ಕೆ ಪದೇ ಪದೇ ಅನ್ಯಾಯ
ರಾಜ್ಯಕ್ಕೆ ಕಾವೇರಿ, ಮಹದಾಯಿ, ಬರ ಪರಿಹಾರ ಸೇರಿದಂತೆ ಎಲ್ಲಾ ವಿಚಾರಗಳಲ್ಲೂ ಪದೇ ಪದೇ ಅನ್ಯಾಯವಾಗುತ್ತಿದೆ ಎಂದು ಅವರು ಹೇಳಿದರು. ರಾಜ್ಯದ ಜನ ನರೇಂದ್ರ ಮೋದಿಯವರ ಮಾತಿಗೆ ಮರುಳಾಗಬಾರದು ಈ ರಾಜ್ಯಕ್ಕೆ ಇಲ್ಲಿವರೆಗೆ ಬೇರೆ ಬೇರೆ ವಿಚಾರಗಳಲ್ಲಿ ಅವರಿಂದ ಏನಾಗಿದೆ ಎಂದು ಗೊತ್ತು ಎಂದು ಕಿಡಿ ಕಾರಿದರು.

25 ಕೋಟಿ ಉದ್ಯೋಗ ಸೃಷ್ಟಿ ಸುಳ್ಳು
2025ಕ್ಕೆ ದೇಶದಲ್ಲಿ 25 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದು ನರೇಂದ್ರ ಮೋದಿ ಹೇಳುತ್ತಿದ್ದಾರೆ. ಆದರೆ ಸೃಷ್ಟಿಸುವುದಲ್ಲ25 ಕೋಟಿ ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ. ಇವತ್ತು ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದವರು ಉದ್ಯೋಗವಿಲ್ಲದೆ ಕುಳಿತಿದ್ದಾರೆ ಎಂದು ಅವರು ಹೇಳಿದರು.

ಅಶ್ವಮೇಧದ ಕುದುರೆ ಕಟ್ಟಿ ಹಾಕಲಿದ್ದೇವೆ
8-10 ತಿಂಗಳು ಕಾರ್ಯಕರ್ತರ ಪಾಲಿಗೆ ಅಗ್ನಿ ಪರೀಕ್ಷೆ. ನರೇಂದ್ರ ಮೋದಿ ಮತ್ತು ಅವರ ಗೆಳೆಯ ಅಮಿತ್ ಶಾ ಉತ್ತರ ಪ್ರದೇಶ ಗೆಲುವಿನ ನಂತರ ರಾಜ್ಯಕ್ಕೆ ಬರಲಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ನರೇಂದ್ರ ಮೋದಿಯವರ ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕುವ ಶಕ್ತಿ ಜೆಡಿಎಸ್ ಗೆ ಇದೆ. ಕಾರ್ಯಕರ್ತರು ನಮ್ಮ ಮೇಲಿಟ್ಟಿರುವ ಗೌರವ ಹಾಗೂ ಕಾರ್ಯಕರ್ತರೇ ನಮ್ಮ ಶಕ್ತಿ ಎಂದು ಹೇಳಿದ್ದಾರೆ.

ಯಾರೊಂದಿಗೂ ಹೊಂದಾಣಿಕೆ ಇಲ್ಲ
ಮಾಧ್ಯಮಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮಹಾಘಟಿಬಂಧನ್ ಮಾಡುತ್ತೇವೆ ಎಂಬ ಸುದ್ದಿ ಬರುತ್ತಿದೆ. ಈ ಮೂಲಕ ಬಿಜೆಪಿ ಎದುರಿಸಲು ಹೊರಟಿದ್ದೇವೆ ಎನ್ನುತ್ತಿದ್ದಾರೆ. ಯಶವಂತಪುರ ಮತ್ತು ರಾಜರಾಜೇಶ್ವರಿ ನಗರ ಸೀಟು ಹೊಂದಾಣಿಕೆ ಆಗುತ್ತಿದೆ ಎನ್ನುತ್ತಿದ್ದಾರೆ. ಆದರೆ ಇದೆಲ್ಲಾ ಸುಳ್ಳು. ನಾವು ಏಕಾಂಗಿಯಾಗಿ ಚುನಾವಣೆ ಎದುರಿಸುತ್ತೇವೆ. ಕಾಂಗ್ರೆಸ್ ಆಗಲಿ ಯಾವುದೇ ಪಕ್ಷದ ಜತೆಗೂ ನಮಗೆ ಹೊಂದಾಣಿಕೆ ಅಗತ್ಯವಿಲ್ಲ. ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು.

ಅಂಗನವಾಡಿ ಧರಣಿ, ಇಂಥ ಸರಕಾರ ಬೇಕಾ?
10,000 ಕ್ಕೂ ಅಧಿಕ ಅಂಗನವಾಡಿ ಕಾರ್ಯಕರ್ತೆಯರು ಬೀದಿಯಲ್ಲಿ ಮಲಗಿದ್ದಾರೆ. ಇಂಥಹ ಅಧಿಕಾರ ನಮಗೆ ಬೇಕಾ? ಸದನದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದರೆ ಒಬ್ಬರು ಕೇಂದ್ರದ ಮೇಲೆ ಮತ್ತೊಬ್ಬರು ರಾಜ್ಯದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕನಿಷ್ಠ ವೇತನ 10,000 ಕೊಡಲು ನಿಮಗೆ ಯೋಗ್ಯತೆ ಇಲ್ಲ. ಇಂಥ ಆಡಳಿತ ಬೇಕಾ? ಎಂದು ಪ್ರಶ್ನಿಸಿದರು.
ಯಡಿಯೂರಪ್ಪನವರಿಗೆ ನಂಜನಗೂಡು ಗೆಲ್ಲುವುದೇ ಮುಖ್ಯವಾಗಿದೆ. ಕೂತು ಸಮಾಧಾನ ಪಡಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದ ಪಕ್ಷಗಳು ಚೆಲ್ಲಾಟ ಆಡುತ್ತಿವೆ ಎಂದು ದೂಷಿಸಿದರು.

ಸಾಲ ಮನ್ನಾ ಮಾಡಲು ಏನು?
ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ಕಳೆದ 5 ವರ್ಷಗಳಲ್ಲಿ ರಾಜ್ಯದ 2500 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದ ಸಂಪತ್ತನ್ನು ಹೈಕಮಾಂಡ್ಗೆ ರವಾನಿಸಿದ್ದಾರೆ. ಆ ಹಣವನ್ನು ರೈತರ ಸಾಲಕ್ಕೆ ವಿನಿಯೋಗಿಸಿದರೆ ರೈತರ ಆತ್ಮಹತ್ಯೆ ತಪ್ಪಿಸಬಹುದಿತ್ತು. ಅಡಿಕೆ, ತೆಂಗಿಗೆ ಬೆಂಬಲ ಬೆಲೆ ನೀಡಿಲ್ಲ ಎಂದು ಟೀಕಿಸಿದರು.

ಯಡಿಯೂರಪ್ಪ ಬೊಗಳೆ
ನಂಜನಗೂಡು ಉಪಚುನಾವಣೆ ಪ್ರಚಾರದ ವೇಳೆ ಯಡಿಯೂರಪ್ಪ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಿದ್ದಾರೆ. ಆದರೆ ಇದೇ ಯಡಿಯೂರಪ್ಪನವರು ಸಾಲ ಮನ್ನಾಗೆ ವಿರೋಧಿಸಿದ್ದರು. ಬಿಜೆಪಿ ಅಧಿಕಾರದಲ್ಲಿದ್ದ ಸಮಯದಲ್ಲಿ ರೈತರ ಸಾಲಮನ್ನಾ ಮಾಡಿ ಎಂದಾಗ ನಾಮ್ಮ ಬಳಿ ನೋಟ್ ಪ್ರಿಂಟ್ ಮಾಡುವ ಯಂತ್ರ ಇಲ್ಲ ಎಂದಿದ್ದರು. ಕೊನೆಗೆ ಅಧಿಕಾರ ಮುಗಿಯುವ ವೇಳೆ ಹಣ ಮೀಸಲಿಡದೆ ಜಗದೀಶ್ ಶೆಟ್ಟರ್ ಸಾಲ ಮನ್ನಾ ಮಾಡಿದರು. ಈ ಹಣ ವಸೂಲಿಗೆ ಮತ್ತೆ ನಿಮಗೆ ವ್ಯಾಟ್ ಹಾಕಿದರು ಎಂದು ಅವರು ಹೇಳಿದರು.

ಪಾದಯಾತ್ರೆ
ರೈತರ ಸಾಲ ಮನ್ನಾ ಮಾಡಬೇಕೆಂಬ ವಿಚಾರವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೇನೆ. ಸರ್ಕಾರ ನೀರಾವರಿ ಯೋಜನೆಗೆ ದೊಡ್ಡ ಮಟ್ಟದ ಖರ್ಚು ಮಾಡುವ ಬದಲು, 3500 ಬಸ್ ಖರೀದಿ ಬಿಟ್ಟು ರೈತರ ಸಾಲ ಮನ್ನಾ ಮಾಡಬಹುದಿತ್ತು. ಮುಖ್ಯಮಂತ್ರಿಗಳು ಸಾಲಮನ್ನಾ ವಿಚಾರವಾಗಿ ನಿರ್ಧಾರ ಕೈಗೊಳ್ಳದಿದ್ದರೆ ಸರ್ಕಾರದ ವಿರುದ್ಧ ಜೂನಿನಿಂದ ಪಾದಯಾತ್ರೆ ನಡೆಸುತ್ತೇನೆ ಎಂದರು.

ಯುಗಾದಿ ಹಬ್ಬಕ್ಕೆ ಆ್ಯಪ್
ಯುಗಾದಿ ಹಬ್ಬದಂದು ಓಲಾ, ಉಬರ್ ಚಾಲಕರ ಸಮಸ್ಯೆಗೆ ಪರಿಹಾರ ನೀಡುತ್ತೇನೆ ಎಂದು ಹೇಳಿದ್ದೆ. ಈ ವಿಚಾರವಾಗಿ ಆ್ಯಪ್ ತಯಾರಿ ನಡೆಯುತ್ತಿದೆ. ಈಗಾಗಲೇ ಕೆಲಸಗಳು ಪ್ರಾರಂಭವಾಗಿವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

500 ಕೋಟಿ ಬಾಂಬ್
ಡಿಮಾನಟೈಸೇಷನ್ ಮಾಡಿ ಸುಮಾರು 100ಕ್ಕಿಂತ ಹೆಚ್ಚು ಜನರು ಸತ್ತರು ಇವರ ಬಗ್ಗೆ ಪ್ರಧಾನಿಗೆ ಕನಿಷ್ಟ ಕನಿಕರವೂ ಇಲ್ಲ. ಭ್ರಷ್ಟಾಚಾರ ನಿಲ್ಲಿಸ್ತೇನೆ ಎಂದು ಹೇಳಿ ಈಗ ಗಣಿಧಣಿ ಕೇಸನ್ನೇ ಕೈ ಬಿಡಲಾಗಿದೆ. ಮುಂದಿನ ವಿಧಾನಸಭೆ ಚುನಾವಣೆಗೆ ಬಿಜೆಪಿಗೆ 500 ಕೋಟಿ ನೀಡುವ ಡೀಲ್ ನಡೆದಿದೆ. ಇಲ್ಲಿನ ಸರಕಾರವೂ ಸಂತೋಷ್ ಹೆಗ್ಡೆ ವರದಿಗೆ ಎಳ್ಳು ನೀರು ಬಿಟ್ಟಿದೆ ಎಂದು ಪರೋಕ್ಷವಾಗಿ ಜನಾರ್ಧನ್ ರೆಡ್ಡಿ ಮೇಲೆ ದಾಳಿ ನಡೆಸಿದರು.

ಸವಾಲು ಸ್ವೀಕರಿಸಿದ್ದೇವೆ
ನಾವು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸಿನ ಸವಾಲನ್ನು ಸ್ವೀಕರಿಸಿದ್ದೇವೆ. ಪಕ್ಷವನ್ನು ಸದೃಢವಾಗಿ ಬೆಳೆಸಿ 6 ಕೋಟಿ ಜನರ ವಿಶ್ವಾಸಗಳಿಸಲು ನೀವಿಲ್ಲಿ ಪಣ ತೊಡಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.












Click it and Unblock the Notifications