ಆಲಿಕಲ್ಲೇಟು: ಸಕಾಲದಲ್ಲಿ ರೈತನ ಕೈಹಿಡಿದ ರಾಜ್ಯ ಸರ್ಕಾರ
ಬೆಂಗಳೂರು, ಮಾರ್ಚ್ 27- ಬಿರು ಬೇಸಿಗೆಗೂ ಮುನ್ನ ಅಕಾಲಿಕವಾಗಿ ಆಲಿಕಲ್ಲು ಮಳೆ ಬಿದ್ದು ಅನ್ಯಾಯವಾಗಿ ರೈತರ ಬದುಕನ್ನು ಕಿತ್ತುಕೊಂಡ ಮಹಾಮಳೆಗೆ ರೈತ ಹಿಡಿಶಾಪ ಹಾಕುತ್ತಾ ತಲೆ ಮೇಲೆ ಕೈಹೊತ್ತು ಕುಳಿತಿದ್ದರೆ ಇತ್ತ ಚುನಾವಣಾಮುಖಿ ರಾಜ್ಯ ಸರಕಾರವು ರೈತನ ಬೆನ್ನುದಡವಿ, ಮೇಲೆಬ್ಬಿಸಿದೆ.
ಸಕಾಲದಲ್ಲಿ ರೈತನ ಕೈಹಿಡಿದ ಸರಕಾರ:
ಧರಾಶಾಯಿಯಾದ ರೈತನ ಕೈಹಿಡಿದಿರುವ ರಾಜ್ಯ ಸರಕಾರವು ಹೆಕ್ಟೇರಿಗೆ 25,000 ರೂ.ನಂತೆ ಪರಿಹಾರ ನೀಡಲು ನಿರ್ಧರಿಸಿದೆ. ನಿನ್ನೆ ರಾಜ್ಯ ಸಂಪುಟ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ನಿರ್ಣಯ ಕೈಗೊಳ್ಳುವ ಮೊದಲು ಚುನಾವಣೆ ಆಯೋಗದ ಅನುಮತಿ ಪಡೆದಿದೆ ಎಂದು ಸರಕಾರದ ಮೂಲಗಳು ಸ್ಪಷ್ಟಪಡಿಸಿವೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಬಿಜಾಪುರ, ಬೆಳಗಾವಿ, ಬಾಗಲಕೋಟೆ, ಯಾದಗಿರಿ, ಗುಲ್ಬರ್ಗ, ಬೀದರ್, ರಾಯಚೂರು, ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ ಸುರಿದು ಕೃಷಿ ಬೆಳೆಗಳು ಸಂಪೂರ್ಣ ನೆಲಕಚ್ಚಿದ್ದವು. ಸುಮಾರು ಇಪ್ಪತ್ತು ಮಂದಿ ಜೀವಕ್ಕೂ ಆಪತ್ತು ಇದಗಿತ್ತು. 500ಕ್ಕೂ ಹೆಚ್ಚು ಜಾನುವಾರುಗಳು ಪ್ರಾಣ ಕಳೆದುಕೊಂಡಿದ್ದವು.
ಸುಮಾರು 680 ಕೋಟಿ ಪರಿಹಾರ:
15,298 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ನಾಶವಾಗಿ 435.76 ಕೋಟಿ ರೂ. ಹಾಗೂ 1.68 ಲಕ್ಷ ಹೆಕ್ಟೇರಿನಲ್ಲಿ ಕೃಷಿ ಬೆಳೆ ನಾಶವಾಗಿದ್ದರಿಂದ 243.85 ಕೋಟಿ ರೂ. ನಷ್ಟ ಉಂಟಾಗಿತ್ತು ಎಂದು ಕಂದಾಯ ಇಲಾಖೆ ವರದಿ ಸಿದ್ಧಪಡಿಸಿತ್ತು. ಸರಕಾರದ ಮುಖ್ಯ ಕಾರ್ಯದರ್ಶಿಗಳು ಇದನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಸಲ್ಲಿಸಲಾಗಿ, ಅವರಿಂದ ಅನುಮತಿ ದೊರೆತಿತ್ತು.
ಸಂಪುಟದ ಕೊನೆಗೆ ರಾಜಕೀಯ ಸಭೆ:
ಸಂಪುಟದ ಕೊನೆಗೆ ಅಧಿಕಾರಿಗಳನ್ನು ಹೊರಕಳುಹಿಸಿದ ಸಿದ್ದರಾಮಯ್ಯ ಅವರು ಸಹೋದ್ಯೋಗಿಗಳೊಂದಿಗೆ ರಾಜಕೀಯ ಸಭೆ ನಡೆಸಿದರು. ಪ್ರಸಕ್ತ ಚುನಾವಣೆಯಲ್ಲಿ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಅವಕಾಶವಿದ್ದು, ಎಲ್ಲ ಸಚಿವರೂ ಪಕ್ಷದ ಪರ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಅವರು ಸಂಪುಟದ ಸದಸ್ಯರಿಗೆ ತಾಕೀತು ಮಾಡಿದರು ಎಂದು ತಿಳಿದುಬಂದಿದೆ.
ಸಚಿವರಿಗೆ ಸಿದ್ದು ಟಾರ್ಗೆಟ್-20:
ಸಚಿವರ ಜೊತೆ ದೀರ್ಘಕಾಲ ರಾಜಕೀಯ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿದ ಸಿದ್ದರಾಮಯ್ಯ ಅವರು ಮುಖ್ಯವಾಗಿ ಚುನಾವಣಾ ಪ್ರಚಾರದ ವೇಳೆ ಅನಗತ್ಯವಾಗಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಲ್ಲಿ ಸಿಕ್ಕಿಕಾಹಿಕೊಳ್ಳದಂತೆ ಎಚ್ಚರಿಕೆ ವಹಿಸುವಂತೆಯೂ ಸೂಚನೆ ನೀಡಿದರು ಎನ್ನಲಾಗಿದೆ.
'ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಆಗಬಾರದು. ಆ ರೀತಿ ಆದರೆ ಸರ್ಕಾರಕ್ಕೆ ಮುಜುಗರ ಆಗುತ್ತದೆ. ಎಲ್ಲ ಸಚಿವರೂ ಚುನಾವಣಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಆಯಾ ಜಿಲ್ಲೆಗಳಲ್ಲಿ ಸ್ಥಳೀಯ ಮುಖಂಡರ ನಡುವೆ ಸಮನ್ವಯದಿಂದ ಕೆಲಸ ಮಾಡಬೇಕು' ಎಂದು ಮುಖ್ಯಮಂತ್ರಿ ಕಿವಿಮಾತು ಹೇಳಿದರು ಎಂದು ಮೂಲಗಳು ತಿಳಿಸಿವೆ.












Click it and Unblock the Notifications