'ಭಾರತ್ ಬ್ರಾಂಡ್' ಹೆಸರಿನಡಿ ಗೊಬ್ಬರ ಮಾರಾಟಕ್ಕೆ ಕೇಂದ್ರ ಸೂಚನೆ
ನವದೆಹಲಿ ಆಗಸ್ಟ 26: ರಸಗೊಬ್ಬರದ ಬ್ರಾಂಡ್ಗಳಲ್ಲಿ ಏಕರೂಪ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ 'ಒಂದು ರಾಷ್ಟ್ರ ಒಂದು ರಸಗೊಬ್ಬರ' ಯೋಜನೆಯಡಿ 'ಭಾರತ್ ಬ್ರಾಂಡ್' ಎಂಬ ಹೆಸರಿನಲ್ಲಿ ಗೊಬ್ಬರ ಮಾರಾಟ ಮಾಡುವಂತೆ ಎಲ್ಲ ಗೊಬ್ಬರ ಕಂಪನಿಗಳಿಗೆ ಸೂಚಿಸಿದೆ.
ಈ ಕುರಿತು ಕೇಂದ್ರ ರಸಗೊಬ್ಬರ ಮತ್ತು ರಸಾಯನಿಕ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ. ಅದರಂತೆ ಎಲ್ಲ ಬ್ರಾಂಡ್ನ ಗೊಬ್ಬರ ಕಂಪನಿಗಳು ಯೂರಿಯಾ ಅಥವಾ ಡಿ ಅಮೋನಿಯಂ ಫಾಸ್ಟೇಟ್ (ಡಿಎಪಿ), ಮ್ಯೂರಿಯೇಟ್ ಆಫ್ ಓಟಾಶ್ (ಎಂಓಪಿ) ಅಥವಾ ಎನ್ಪಿಕೆ ಒಳಗೊಂಡಿರುವ ಎಲ್ಲ ರಸಗೊಬ್ಬರ ಚೀಲಗಳು ಚೀಲಗಳು 'ಭಾರತ್ ಡಿಎಪಿ, 'ಭಾರತ್ ಎಂಓಪಿ' ಎಂದು ಭಾರತ್ ಹೆಸರಿನ ಬ್ರಾಂಡ್ ಹೊಂದಿರಬೇಕು. ಈ ನಿಯಮವನ್ನು ಖಾಸಗಿ ಮತ್ತು ಸಾರ್ವಜನಿಕ ಗೊಬ್ಬರ ಕಂಪನಿಗಳು ಅನುಸರಿಸಬೇಕು ಎಂದು ನಿರ್ದೇಶಿಸಿದೆ. ಆದರೆ ಇದಕ್ಕೆ ಹಲವು ಕಂಪನಿಗಳು ವಿರೋಧ ವ್ಯಕ್ತಪಡಿಸಿವೆ.
ಕೇಂದ್ರ ಸರ್ಕಾರ ವಾರ್ಷಿಕವಾಗಿ ರಸಗೊಬ್ಬರ ಕಂಪನಿಗಳಿಗೆ ಸಬ್ಸಿಡಿ ನೀಡುವ ಯೋಜನೆಯಾದ ಪ್ರಧಾನಮಂತ್ರಿ ಭಾರತೀಯ ಜನರ್ವರಕ್ ಪರಿಯೋಜನೆ (ಪಿಎಂ ಬಿಜೆಪಿ)ಯ ಏಕೈಕ ಬ್ರಾಂಡ್ ಹೆಸರು, ಬ್ರಾಂಡ್ ಲೋಗೋವನ್ನು ಕಂಪನಿಗಳು ಗೊಬ್ಬರ ಚೀಲಗಳ ಮೇಲೆ ಬಳಸಬೇಕು. ಚೀಲದ ಒಂದು ಬದಿಗೆ ಕಂಪನಿ ಹೆಸರನ್ನು ಸಣ್ಣದಾಗಿ ಹಾಕುವಂತೆ ಅಧಿಸೂಚನೆಯಲ್ಲಿ ತಿಳಿಸಿದೆ.
2ಲಕ್ಷ ಕೋಟಿ ಮೀರಲಿದೆ ಸಬ್ಸಿಡಿ ಬಿಲ್
ರಷ್ಯಾ ಮತ್ತು ಉಕ್ರೇನ್ನ ಮಧ್ಯದ ಯುದ್ಧವು ಜಾಗತಿಕ ಶಕ್ತಿ ಮತ್ತು ರಾಸಾಯನಿಕ ಪೋಷಕಾಂಶಗಳ ಬೆಲೆಗಳ ಹೆಚ್ಚಳಕ್ಕೆ ಕಾರಣವಾಯಿತು. ಈ ಕಾರಣದಿಂದಲೇ ಕಳೆದ ಮೇ ತಿಂಗಳಲ್ಲಿ ಸಹಕಾರಿ ಸಂಸ್ಥೆಗಳ ಸದಸ್ಯರ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ರಸಗೊಬ್ಬರ ಸಬ್ಸಿಡಿ ಬಿಲ್ ಈ ಹಣಕಾಸು ವರ್ಷದಲ್ಲಿ 2 ಲಕ್ಷ ಕೋಟಿ ರೂ.ಮೀರಬಹುದು ಎಂದು ಅಂದಾಜಿಸಿರುವುದಾಗಿ ತಿಳಿಸಿದ್ದರು. ಇದೇ ಬಿಲ್ ಹಿಂದಿನ ವರ್ಷ 1.6 ಲಕ್ಷ ಕೋಟಿ ಇತ್ತು. ಈ ವರ್ಷ ಈ ಬಿಲ್ ಪ್ರಮಾಣ ಶೇ.25ರಷ್ಟು ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.
ಏನಿದು 'ಒಂದು ರಾಷ್ಟ್ರ ಒಂದು ರಸಗೊಬ್ಬರ'
ಒಂದು ರಾಷ್ಟ್ರ ಒಂದು ರಸಗೊಬ್ಬರ ಯೋಜನೆಯಡಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಕಂಪನಿಗಳು ಒಂದೇ ಬ್ರಾಂಡ್ ಹೆಸರಿನಲ್ಲಿ ಸಬ್ಸಿಡಿ ರಸಗೊಬ್ಬರಗಳನ್ನು ಮಾರಾಟ ಮಾಡಬೇಕಾಗುತ್ತದೆ, ಭಾರತ್ ಬ್ರಾಂಡ್ ಹೆಸರು, ಲೋಗೋ ಸಹಿತ ಪ್ರಧಾನ ಮಂತ್ರಿಯ ಸಾರ್ವಜನಿಕ ರಸಗೊಬ್ಬರ ಯೋಜನೆ ಅಥವಾ ಪಿಎಂ ಬಿಜೆಪಿ ಹೊಸ ರಸಗೊಬ್ಬರ ಚೀಲಗಳ ಮುಂಭಾಗದ ಮೂರನೇ ಎರಡರಷ್ಟು ಭಾಗವನ್ನು ಒಳಗೊಂಡಿರಲಿದೆ. ಚೀಲದ ಮುಂಭಾಗದಲ್ಲಿ ಉಳಿದಿರುವ ಸ್ಥಳವು ಹೆಸರು, ಲೋಗೋ, ವಿಳಾಸ ಮತ್ತು ಇತರ ಶಾಸನಬದ್ಧ ಮಾಹಿತಿ ಸೇರಿದಂತೆ ತಯಾರಕರ ಬಗ್ಗೆ ಮಾಹಿತಿಯನ್ನು ಪ್ರದರ್ಶಿಸಬೇಕು ಎಂಬುದು ಕೇಂದ್ರದ ಅಧಿಸೂಚನೆಯ ಉದ್ದೇಶವಾಗಿದೆ.
ಅ.2ರಿಂದ ಹೊಸ ಗೊಬ್ಬರ ಚೀಲ ಮಾರುಕಟ್ಟೆಗೆ
ಅಧಿಸೂಚನೆ ಪ್ರಕಾರ ಹೊಸ ರಸಗೊಬ್ಬರ ಚೀಲಗಳನ್ನು ಮುಂದಿನ ತಿಂಗಳ ಅಕ್ಟೋಬರ್ 2ರಿಂದ ಚಲಾವಣೆಗೆ ಪರಿಚಯಿಸಲಿದೆ. ಸೆಪ್ಟೆಂಬರ್ 15 ರಿಂದ ಹಳೆಯ ವಿನ್ಯಾಸವನ್ನು ಹೊಂದಿರುವ ಚೀಲಗಳನ್ನು ಖರೀದಿಸದಂತೆ ರಸಗೊಬ್ಬರ ಕಂಪನಿಗಳಿಗೆ ಸರ್ಕಾರ ಈಗಾಗಲೇ ಸೂಚಿಸಿದೆ. ಎಲ್ಲ ಹಳೆಯ ಪ್ಯಾಕೇಜಿಂಗ್ ಅನ್ನು ಖಾಲಿ ಮಾಡಲು ಡಿಸೆಂಬರ್ ಅಂತ್ಯದವರೆಗೆ ಕಂಪನಿಗಳಿಗೆ ಅವಕಾಶ ಸಹ ನೀಡಲಾಗಿದೆ.
ಗೊಬ್ಬರ ಯೋಜನೆ ಪಿಎಂ ಹೆಸರಿನ ಯೋಜನೆಗೆ ಸೇರ್ಪಡೆ
ಈಗಾಗಲೇ ಆಹಾರ ಮತ್ತು ಕೃಷಿ ಕ್ಷೇತ್ರದಲ್ಲಿನ ಕೇಂದ್ರದ ಅನೇಕ ಯೋಜನೆಗಳಲ್ಲಿ ಪ್ರಧಾನ ಮಂತ್ರಿಗಳ ಕಚೇರಿ ಹೆಸರನ್ನು ಹೊಂದಿವೆ. ಈ ಪೈಕಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆ (ರೈತರಿಗೆ ನೇರ ನಗದು ವರ್ಗಾವಣೆ ಯೋಜನೆ), ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ರೈತರಿಗೆ ಬೆಳೆ ವಿಮೆ ಯೋಜನೆ), ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಉಚಿತ ಆಹಾರ ನೆರವು ಯೋಜನೆ)ಗಳು ಒಳಗೊಂಡಿವೆ. ಈ ಸಾಲಿಗೆ ಇದೀಗ ಗೊಬ್ಬರ ಸಬ್ಸಿಡಿ ಯೋಜನೆ ಸೇರಿಕೊಂಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಜಯ್ ಪಾಂಡಾ ಅವರು, ಒಂದು ರಾಷ್ಟ್ರ ಒಂದು ರಸಗೊಬ್ಬರ ಯೋಜನೆಯನ್ನು 'ಹೊಸ ಭಾರತದ ಕರೆ' ಎಂದು ಕರೆದಿದ್ದಾರೆ. ಕೇಂದ್ರ ಸರ್ಕಾರದ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಭಾರತ್ ಬ್ರಾಂಡ್' ಇದೊಂದು ನವಭಾರತ ನಿರ್ಮಾಣದ ಕರೆಯಾಗಿದೆ. ರಾಷ್ಟ್ರ ಮಹತ್ತರ ಅಭಿವೃದ್ಧಿಗೆ ಈ ಯೋಜನೆಗಳು ಪೂರಕವಾಗಿರಲಿವೆ. ಎಂದು ಅವರು ತಿಳಿಸಿದ್ದಾರೆ.