ಗೋಧಿ ಹಿಟ್ಟಿನ ರಫ್ತು ನೀತಿಗೆ ಅನುಮೋದನೆ ನೀಡಿದ ಕೇಂದ್ರ ಸಂಪುಟ
ಬೆಂಗಳೂರು ಆಗಸ್ಟ್ 25: ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಗೋಧಿ ಅಥವಾ ಮಸ್ಲಿನ್ ಹಿಟ್ಟಿಗೆ ರಫ್ತು ನಿಬಂಧನೆ ಮತ್ತು ನಿಷೇಧದಿಂದ ವಿನಾಯಿತಿ ನೀಡುವ ನೀತಿ ತಿದ್ದುಪಡಿ ಪ್ರಸ್ತಾವಕ್ಕೆ ಗುರುವಾರ ಅನುಮೋದನೆ ನೀಡಿದೆ.
ಕೇಂದ್ರ ಸಂಪುಟದ ಈ ಅನುಮೋದನೆಯಿಂದ ಗೋಧಿ ಹಿಟ್ಟಿನ ರಫ್ತಿನ ಮೇಲೆ ನಿರ್ಬಂಧ ಹೇರಲು ಅನುಕೂಲವಾಗಲಿದೆ. ಇದು ಏರಿಕೆಯಾಗುತ್ತಿರುವ ಗೋಧಿ ಹಿಟ್ಟಿನ ಬೆಲೆಗಳನ್ನು ನಿಯಂತ್ರಿಸಲು ಸಹಕಾರಿಯಾಗುವ ಜತೆಗೆ ಸಮಾಜದ ಅತ್ಯಂತ ದುರ್ಬಲ ವರ್ಗಗಳ ಆಹಾರ ಭದ್ರತೆಯನ್ನು ಖಾತ್ರಿಪಡಿಸುತ್ತದೆ. ಜತೆಗೆ ಮಾರುಕಟ್ಟೆಯ ಪರಿಸ್ಥಿತಿಗೆ ಅನುಗುಣವಾಗಿ ಗೋಧಿ ಹಿಟ್ಟಿನ ರಫ್ತುಗಳನ್ನು ಪರಿಶೀಲಿಸಲು ಕೇಂದ್ರಕ್ಕೆ ಅವಕಾಶ ನೀಡುತ್ತದೆ.
ಭಾರತದಲ್ಲೇ ಸಾಕಷ್ಟು ಗೋಧಿ ದಾಸ್ತಾನಿದೆ, ಆಮದು ಅಗತ್ಯವಿಲ್ಲ
ರಷ್ಯಾ ಮತ್ತು ಉಕ್ರೇನ್ ಎರಡು ರಾಷ್ಟ್ರಗಳು ಜಾಗತಿಕವಾಗಿ ಗೋಧಿ ವ್ಯಾಪಾರದ ಪ್ರಮುಖ ರಫ್ತುದಾರ ರಾಷ್ಟ್ರಗಳಾಗಿವೆ. ಆ ದೇಶಗಳು ಜಾಗತಿಕವಾಗಿ ರಫ್ತು ವ್ಯಾಪಾರದ 1/4 ರಷ್ಟು ಗೋಧಿ ರಫ್ತು ಮಾಡುತ್ತವೆ. ಕೆಲವು ತಿಂಗಳುಗಳ ಹಿಂದೆ ನಡೆದ ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷವು ಜಾಗತಿಕ ಗೋಧಿ ಪೂರೈಕೆ ಮೇಲೆ ಪ್ರಭಾವ ಬೀರಿತು. ಇದರಿಂದಲೇ ಭಾರತೀಯ ಗೋಧಿಗೆ ಬೇಡಿಕೆ ಹೆಚ್ಚಾಗಿದೆ.
ಬೆಲೆ ನಿಯಂತ್ರಿಸಲು ನಿಷೇಧ ನಿರ್ಧಾರ
ಬೇಡಿಕೆ ಹೆಚ್ಚಾಗಿದ್ದರ ಪರಿಣಾಮವಾಗಿ ದೇಶೀಯ ಮಾರುಕಟ್ಟೆಯಲ್ಲಿ ಗೋಧಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ದೇಶದ 1.4 ಶತಕೋಟಿ ಜನರ ಆಹಾರ ಭದ್ರತೆಯನ್ನು ಖಾತ್ರಿಪಡಿಸುವ ಸಲುವಾಗಿ 2022ರ ಮೇ ತಿಂಗಳಲ್ಲಿ ಗೋಧಿ ರಫ್ತಿನ ಮೇಲೆ ನಿಷೇಧ ಹೇರಲು ಕೇಂದ್ರ ಸರ್ಕಾರ ನೀರ್ಧರಿಸಿತ್ತು. ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೆಲೆಗಳನ್ನು ನಿಯಂತ್ರಿಸಲು ಮತ್ತು ದೇಶದಲ್ಲಿ ಆಹಾರ ಭದ್ರತೆ ಖಾತ್ರಿಪಡಿಸುವ ಉದ್ದೇಶದಿಂದ ನಿಷೇಧ ಹೇರುವ ನಿರ್ಧಾರ ಕೈಗೊಳ್ಳಲಾಗಿದೆ.
ಆದರೆ ಗೋಧಿಯ ರಫ್ತಿನ ಮೇಲಿನ ನಿಷೇಧದಿಂದ ಗೋಧಿ ಹಿಟ್ಟಿನ ಬೇಡಿಕೆಯು ವಿದೇಶಿ ಮಾರುಕಟ್ಟೆಗಳಲ್ಲಿ ಹೆಚ್ಚಾಗಿದೆ. ಇದು ಭಾರತದಿಂದ ಬೇರೆಡೆಗೆ ರಫ್ತು ಆಗುತ್ತಿದ್ದ ಈ ಹಿಂದಿನ ವರ್ಷವಾದ 2021ರ ಅವಧಿಗೆ ಹೋಲಿಸಿದರೆ ಅಧಿಕ ರಫ್ತು ಎನ್ನಬಹುದು. ಪ್ರಸಕ್ತ 2022ರ ಏಪ್ರಿಲ್-ಜುಲೈ ತಿಂಗಳಲ್ಲಿ ಶೇ.200ರಷ್ಟು ರಫ್ತಿನಲ್ಲಿ ನಾವು ಪ್ರಗತಿ ಸಾಧಿಸಿದ್ದೇವೆ ಎಂದು ವಿದೇಶಿ ವ್ಯಾಪಾರ ಕುರಿತ ಮಹಾನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಗೋಧಿಗೆ ಬೇಡಿಕೆಯು ಅಧಿಕ ಬೆಲೆಯೂ ಹೆಚ್ಚು
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೋಧಿ ಹಿಟ್ಟಿಗೆ ಬೇಡಿಕೆ ಹೆಚ್ಚಾಗಿರುವುದು ದೇಶೀಯ ಮಾರುಕಟ್ಟೆಯಲ್ಲಿ ಗೋಧಿ ಹಿಟ್ಟಿನ ಬೆಲೆ ಗಮನಾರ್ಹ ಏರಿಕೆ ಆಗಲು ಕಾರಣವಾಗಿದೆ.
ಈ ಹಿಂದೆ ಗೋಧಿ ಹಿಟ್ಟಿನ ರಫ್ತಿನ ಮೇಲೆ ನಿಷೇಧ ಅಥವಾ ಯಾವುದೇ ನಿರ್ಬಂಧ ಹಾಕಬಾರದೆಂಬ ನೀತಿ ಇತ್ತು. ಆದಾಗಿಯೂ ಕೇಂದ್ರ ಸರ್ಕಾರ ನಿರ್ಬಂಧಕ್ಕೆ ಮುಂಗಾಗಿತ್ತು. ಆದರೆ ಇದೀಗ ಸಮರ್ಪಕ ಆಹಾರ ಭದ್ರತೆಯ ಖಚಿತಪಡಿಸಿಕೊಳ್ಳಲು ಮತ್ತು ದೇಶದಲ್ಲಿ ಗೋಧಿ ಹಿಟ್ಟಿನ ಹೆಚ್ಚುತ್ತಿರುವ ಬೆಲೆಗಳನ್ನು ನಿಯಂತ್ರಿಸಲು ಗೋಧಿ ಹಿಟ್ಟಿನ ರಫ್ತಿನ ಮೇಲಿನ ನಿಷೇಧ/ ನಿರ್ಬಂಧಗಳಿಗೆ ವಿನಾಯಿತಿ ನೀಡುವ ನೀತಿಗೆ ಅನುಮೋದನೆ ನೀಡಿದೆ. ಈ ಮೂಲಕ ಗೋಧಿ ರಫ್ತು ನೀತಿಗೆ ಮಾರ್ಪಾಡು ಮಾಡುವ ಪ್ರಯತ್ನ ಇದಾಗಿದೆ ಎನ್ನಬಹುದು.
ಕೇಂದ್ರ ಸರ್ಕಾರದ ಅಧಿಕಾರಿಗಳು ವಿವಿಧ ಕಾರಣ ಒಡ್ಡಿ ಗೋಧಿಯನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವ ಬಗ್ಗೆ ಚಿಂತಿಸಿದ್ದಾರೆ ಎಂದು ವರದಿಯಾಗಿತ್ತು. ಈ ಬಗ್ಗೆ ಭಾನುವಾರ ಸ್ಪಷ್ಟಪಡಿಸಿರುವ ಕೇಂದ್ರ ಸರ್ಕಾರ, ಭಾರತದಲ್ಲಿ ಅಗತ್ಯದಷ್ಟು ಗೋಧಿ ಪೂರೈಸುವ ಸಾಮಾರ್ಥ್ಯ ಹೊಂದಿದ್ದೇವೆ. ಈ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಸದ್ಯಕ್ಕೆ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿಲ್ಲ. ಭಾರತೀಯ ಆಹಾರ ನಿಗಮವು ಸಾರ್ವಜನಿಕ ವಿತರಣೆಗಾಗಿ ಸಾಕಷ್ಟು ದಾಸ್ತಾನುಗಳನ್ನು ಹೊಂದಿದೆ ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಸ್ಪಷ್ಟನೆ ನೀಡಿದೆ.