ಯುಪಿಯಲ್ಲಿ ಅಡಿಕೆ ನಿಷೇಧವಿಲ್ಲ, ಬೆಳೆಗಾರರಿಗೆ ಯೋಗಿ ಭರವಸೆ
ಲಕ್ನೋ, ಸೆಪ್ಟೆಂಬರ್ 27: ಉತ್ತರ ಪ್ರದೇಶದಲ್ಲಿ ಅಡಿಕೆಯನ್ನು ನಿಷೇಧಿಸುವುದಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭರವಸೆ ನೀಡಿದ್ದಾರೆ. ಇದರಿಂದ ಅಡಿಕೆ ಬೆಳೆಗಾರರು ನಿರಾಳರಾಗಿದ್ದಾರೆ.
ಇತ್ತೀಚೆಗೆ 'ಕೇಂದ್ರೀಯ ಅಡಿಕೆ ಮತ್ತು ಕೋಕೊ ಮಾರಾಟ ಹಾಗೂ ಸಂಸ್ಕರಣಾ ಸಹಕಾರಿ ಸಂಘ' (ಕ್ಯಾಂಪ್ಕೊ)ದ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರನ್ನು ಭೇಟಿಯಾಗಿದ್ದರು.

ಈ ಸಂಬಂಧ ಕ್ಯಾಂಪ್ಕೊ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ, 'ಉತ್ತರ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಅಡಿಕೆ ನಿಷೇಧ ಮಾಡುವುದಿಲ್ಲ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ' ಎಂದು ಹೇಳಲಾಗಿದೆ.
ದೆಹಲಿಯಲ್ಲಿ ಆದಿತ್ಯನಾಥ್ ಹಾಗೂ ಉತ್ತರ ಪ್ರದೇಶದ ಆರೋಗ್ಯ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ರನ್ನು ಕರ್ನಾಟಕ ರಾಜ್ಯ ಅಡಿಕೆ ಮಾರಾಟ ಸಹಕಾರಿ ಸಂಘದ ಅಧ್ಯಕ್ಷ ಎಚ್.ಎಸ್ ಮಂಜಪ್ಪ ಜತೆಯಲ್ಲಿ ಕಳೆದ ಸೆಪ್ಟೆಂಬರ್ 21ರಂದು ಸತೀಶ್ಚಂದ್ರ ಭೇಟಿಯಾಗಿದ್ದರು.
ಭೇಟಿ ವೇಳೆ ಅಡಿಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ನಾಯಕರ ಜತೆ ಚರ್ಚಿಸಲಾಗಿದೆ. ಈ ಸಂದರ್ಭ ಅಡಿಕೆ ಮಾರಾಟದ ಮೇಲೆ ಉತ್ತರ ಪ್ರದೇಶದಲ್ಲಿ ಹೇರಲಾಗುತ್ತಿರುವ ಎಪಿಎಂಸಿ ಸೆಸ್ ರದ್ದು ಪಡಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿಯನ್ನೂ ಸಲ್ಲಿಸಲಾಗಿದೆ.
ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಮಾತ್ರವಲ್ಲದೆ, ಅಡಿಕೆ ಬೆಳೆಗಾರರ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಕ್ಯಾಂಪ್ಕೊ ತಿಳಿಸಿದೆ.
ಅಡಿಕೆ ಬೆಳೆಗಾರರ ಪಾಲಿಗೆ ಉತ್ತರ ಪ್ರದೇಶ ಪ್ರಮುಖ ಮಾರುಕಟ್ಟೆಯಾಗಿದ್ದು, ಒಂದೊಮ್ಮೆ ರಾಜ್ಯದಲ್ಲಿ ಅಡಿಕೆ ನಿಷೇಧಿಸಿದರೆ ಬೆಳೆಗಾರರಿಗೆ ಭಾರೀ ಹೊಡೆತ ಬೀಳುತ್ತಿತ್ತು. ಇದೀಗ ಯೋಗಿ ಆದಿತ್ಯನಾಥ್ ಭರವಸೆಯಿಂದ ಅಡಿಕೆ ಬೆಳೆಗಾರರು ನಿರಾಳರಾಗಬಹುದಾಗಿದೆ.












Click it and Unblock the Notifications