ಟೊಮೆಟೋ ಬೆಲೆ ಕುಸಿತ: ದೇವದುರ್ಗ ತಾಲೂಕು ವ್ಯಾಪ್ತಿಯ ಅನ್ನದಾತರು ಕಂಗಾಲು
ರಾಯಚೂರು, ಡಿಸೆಂಬರ್, 20: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ವ್ಯಾಪ್ತಿಯಲ್ಲಿ ಕಳೆದ ತಿಂಗಳಿನಿಂದ ಟೊಮೆಟೋ ಬೆಲೆಯಲ್ಲಿ ಭಾರಿ ಕುಸಿತ ಆಗಿದ್ದು, ಟೊಮ್ಯಾಟೋ ಬೆಳೆದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಇದರಿಂದ ಟೊಮೆಟೋ ಬೆಳೆಯಲು ಮಾಡಿದ ಖರ್ಚು ಸಹ ಬರುತ್ತಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಪ್ರತಿ 25 ಕೆ.ಜಿ.ಯ ಟೊಮೆಟೋ ಕ್ಯಾನ್ ಕೇವಲ 70 ರೂಪಾಯಿಗೆ ಮಾರಾಟ ಆಗುತ್ತಿದೆ. ಇದರಿಂದ ಟೊಮೆಟೋ ತೆಗೆಯಲು ಹಾಗೂ ಸಾಗಿಸಲು ತಗಲುವ ಖರ್ಚು, ವೆಚ್ಚ ಸಹ ಬರುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಕಬ್ಬಿಗೆ ಬೆಲೆ ನಿಗದಿ ಮಾಡದ ಸರ್ಕಾರ: ಮಂಡ್ಯದಲ್ಲಿ ರೈತರಿಂದ ಚಡ್ಡಿ ಮೆರವಣಿಗೆ, ಆಕ್ರೋಶ
ಬೆಲೆ ಕುಸಿತದಿಂದ ಆತಂಕಕ್ಕೊಳಗಾದ ಅನ್ನದಾತ
ತಾಲೂಕಿನ ಅರಕೇರಾ, ಇರಬಗೇರ, ಮಾನಸಗಲ್, ಕೋತಿಗುಡ್ಡ, ಗೌರಂಪೇಟ, ಇಂದಿರಾನಗರ ಸೇರಿದಂತೆ ಇನ್ನಿತರ ತಾಂಡ ಮತ್ತು ದೊಡ್ಡಿಯ ಕೆಲವು ರೈತರು ಟೊಮೆಟೋ ಬೆಲೆ ಕುಸಿತದಿಂದ ಆತಂಕಕ್ಕೆ ಒಳಗಾಗಿದ್ದಾರೆ. ಬೆಲೆ ಕುಸಿತದಿಂದ ಮಾರುಕಟ್ಟೆಗೆ ಸಾಗಿಸುವ ವೆಚ್ಚವೂ ಸಹ ಬರುವುದಿಲ್ಲವೆಂದು ಕಟಾವು ಮಾಡದೇ ಹೊಲದಲ್ಲಿಯೇ ಬಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಳೆಗೆ ತಕ್ಕಂತೆ ಸರಿಯಾದ ದರ ಸಿಗುತ್ತಿಲ್ಲ
12 ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೋ ಬೆಳೆಯನ್ನು ಬೆಳೆದಿದ್ದೇನೆ. ಇಳುವರಿಯೂ ಕೂಡ ಚೆನ್ನಾಗಿ ಬಂದಿದೆ. ಆದರೆ ಬೆಳೆಗೆ ತಕ್ಕಂತೆ ಸರಿಯಾದ ದರ ಸಿಗುತ್ತಿಲ್ಲ. ಇದರಿಂದಾಗಿ 15ರಿಂದ 20 ಲಕ್ಷ ರೂಪಾಯಿ ನಷ್ಟವಾಗಿದೆ. ಸ್ಥಳೀಯ ಮಾರುಕಟ್ಟೆಯವರು ಟೊಮೆಟೋ ಖರೀದಿಗೆ ಮುಂದೆ ಬಾರದ ಹಿನ್ನೆಲೆ ಹೈದರಾಬಾದ್ ಮೂಲದ ಮಾರುಕಟ್ಟೆಗೆ 70 ರೂಪಾಯಿಗೆ ಒಂದು ಕ್ಯಾನ್ (25 ಕೆ.ಜಿ) ನೀಡುತ್ತಿದ್ದೇನೆ. ಇದರಿಂದ ಬಂದಂತಹ ಹಣ ಕೂಲಿಯವರಿಗೆ ನೀಡಲೂ ಸಾಕಾಗುವುದಿಲ್ಲ ಎಂದು ಗೌರಂಪೇಟ ರೈತ ಶ್ಯಾಸಯ್ಯ ರೆಡ್ಡಿ ಬೇಸರ ವ್ಯಕ್ತಪಡಿಸಿದರು.
ಟೊಮೆಟೋ ಬೆಳೆದ ರೈತರು ಕಂಗಾಲು
ಟೊಮೆಟೋ ಬೆಳೆಯಲು ಭೂಮಿ ಹದ ಮಾಡುವುದು, ಬಿತ್ತನೆ ಬೀಜ, ಔಷಧ ಸಿಂಪಡಣೆ ಸೇರಿದಂತೆ 2 ರಿಂದ 3 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಖರ್ಚು ಮಾಡಿದ್ದೇನೆ. ಆದರೆ, ಬೆಲೆ ಕುಸಿತದಿಂದಾಗಿ ಖರ್ಚು ಮಾಡಿದ ಹಣ ಕೂಡ ಕೈಗೆ ಸಿಗದಂತಾಗಿದೆ ಎಂದು ರೈತ ಆಸಿಫ್ ಅಳಲು ತೋಡಿಕೊಂಡರು. ಸದ್ಯ ಇದೀಗ ಮಾರುಕಟ್ಟೆಗೆ ನೆರೆಯ ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಜಿಲ್ಲೆಯ ಎಲ್ಲ ಭಾಗಗಳಿಂದ ಟೊಮೆಟೋ ಬಂದಿದೆ. ಸಾರ್ವಜನಿಕರ ಬೇಡಿಕೆಗಿಂತ ದುಪ್ಪಟ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ. ಆದರೆ ಮಾರುಕಟ್ಟೆಯಲ್ಲಿ ನಾವು ಬೆಳೆದ ಟೊಮೆಟೋ ಕೇಳುವವರೇ ಇಲ್ಲದಂತಾಗಿದೆ ಎಂದು ತರಕಾರಿ ವ್ಯಾಪಾರಿ ಹನುಮಂತ ಬಲ್ಲಿದ ಅಳಲು ತೋಡಿಕೊಂಡು.