ಬೇಬಿ ಕಾರ್ನ್/ಸ್ವೀಟ್ ಕಾರ್ನ್ ಬೆಳೆಯಲು ಸಲಹೆಗಳು
ಬೆಂಗಳೂರು, ಜುಲೈ 24 : ಕೊಪ್ಪಳ ಜಿಲ್ಲೆಯ ರೈತರು ಮುಂಗಾರು ಹಂಗಾಮಿನಲ್ಲಿ ಗೋವಿನಜೋಳ ಬೆಳೆಯುತ್ತಿದ್ದಾರೆ. ಸೂಕ್ತ ಬೇಸಾಯ ಕ್ರಮಗಳನ್ನು ಅನುಸರಿಸುವ ಮೂಲಕ ಬೇಬಿ ಕಾರ್ನ್/ಸ್ವೀಟ್ ಕಾರ್ನ್ ಬೆಳೆಯಲ್ಲಿ ಅಧಿಕ ಲಾಭ ಪಡೆಯಬಹುದು ಎಂದು ತೋಟಗಾರಿಕಾ ಇಲಾಖೆ ಹೇಳಿದೆ.
ಮೆಕ್ಕೆಜೋಳ ಜಾಸ್ತಿ ಪೋಷಕಾಂಶ ಹೀರುವ ಬೆಳೆ. ಬೆಲೆಯೂ ಜಾಸ್ತಿ ಇಲ್ಲ ಅನೇಕ ವರ್ಷಗಳ ನಿರಂತರವಾಗಿ ಬೆಲೆ ಕುಸಿತವಾಗುತ್ತಿದೆ. ಇತ್ತೀಚೆಗೆ ಪ್ಯಾರಾ ವಿಲ್ಟ್ ಎನ್ನುವ ಸೊರಗು ರೋಗದಿಂದಾಗಿ ಮೆಕ್ಕೆಜೋಳ ಬೆಳೆಯದಂತೆ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.
ಆದರೆ, ರೈತರು ಈ ಬೆಳೆಯನ್ನು ಬೆಳೆಯುತ್ತಿದ್ದಾರೆ. ಈ ಬೆಳೆಯನ್ನು ಬೆಳೆಯಲು ಕೆಲವು ಸುಧಾರಿತ ತಳಿಗಳನ್ನು ಆಯ್ಕೆ ಮಾಡುವುದು ಪ್ರಮುಖವಾದ ಅಂಶವಾಗಿದೆ. ಬೇಬಿ ಕಾರ್ನ್ ಎಂದು ಕರೆಯಲ್ಪಡುವ ಮುಸುಕಿನ ಜೋಳದ ಕೆಲವು ತಳಿಗಳು ಬೇಗನೆ ಕೊಯ್ಲಿಗೆ ಬರುತ್ತವೆ.

ಹೆಚ್ಚಿನ ಗೊಬ್ಬರ ಹಾಗೂ ಕೀಟ ನಾಶಕಗಳ ಅವಶ್ಯಕತೆ ಇಲ್ಲದೇ ಕೆಲವು ತಳಿಗಳನ್ನು ಬೆಳೆಯಬಹುದು. ಮುಸುಕಿನ ಜೋಳ ಎಂದು ಕರೆಯಲ್ಪಡುವ ಈ ಬೆಳೆಯ ಕೆಲವು ತಳಿಗಳನ್ನು ಪರಾಗ ಸ್ಪರ್ಶದಿಂದ ಮೊದಲೇ ಕಟಾವು ಮಾಡಿದ್ದಲ್ಲಿ ಒಂದು ಉತ್ತಮ ತರಕಾರಿಯಾಗಿ ಉಪಯೋಗಿಸಬಹುದು.
ಸಲಾಡ್, ಉಪ್ಪಿನಕಾಯಿ, ಸೂಪ್ಗೆ ಇದನ್ನು ಉಪಯೋಗ ಮಾಡುತ್ತಿದ್ದು ಮಾರುಕಟ್ಟೆಯಲ್ಲಿಯೂ ಹೆಚ್ಚಿನ ಬೇಡಿಕೆ ಇರುತ್ತದೆ. ಗೋವಿನಜೋಳಕ್ಕೆ ನೀರಾವರಿಯ ಅನುಕೂಲ ಇದ್ದಲ್ಲಿ ವರ್ಷದ ಎಲ್ಲಾ ಕಾಲದಲ್ಲಿಯೂ ಬೆಳೆಯಬಹುದು. 90 ದಿನದೊಳಗೆ ಈ ಬೆಳೆ ಕಟಾವಿಗೆ ಬರುತ್ತದೆ.
ಪ್ರಮುಖ ತಳಿಗಳು : ಬೆಳೆಯನ್ನು ಬೆಳೆಯುವ ರೈತರು ಗೋಲ್ಡನ್ ಬೇಬಿ, ಸಿಬಿಪಿ 21 ಮುಂತಾದ ತಗಳಿಗಳನ್ನು ಆಯ್ಕೆ ಮಾಡಬಹುದು. ಈ ಬೆಳೆ ಬೆಳೆಯಲು ಆರಂಭಿಸುವುದು ತುಂಬಾ ಲಾಭಕರ.
ಬೇಸಾಯ ಕ್ರಮ : ರೈತರು ಮೊದಲು ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಬೇಕು. ಎಕರೆಗೆ 8 ರಿಂದ 10 ಟನ್ ಕೊಟ್ಟಿಗೆ ಗೊಬ್ಬರವನ್ನು ಜೈವಿಕ ಗೊಬ್ಬರಗಳಿಂದ ಉಪಚರಿಸಿ ಬಿತ್ತನೆಗೆ ತಿಂಗಳ ಮೊದಲೇ ಭೂಮಿಯಲ್ಲಿ ಬೆರೆಸಬೇಕು.
ಎಕರೆಗೆ ಬೇಕಾಗುವ ಬೀಜವನ್ನು (2 ರಿಂದ 2.5 ಕಿ.ಗ್ರಾಂ.) ಶಿಲೀಂದ್ರ ನಾಶಕಗಳಿಂದ ಉಪಚರಿಸಿ ಒಂದು ಮೀಟರ್ ಅಂತರದ ಸಾಲಿನಲ್ಲಿ 10 ಸೆ.ಮೀ. ಒಂದರಂತೆ ಬೀಜಗಳನ್ನು ಊರಬೇಕು. ಬಿತ್ತನೆ ಸಮಯದಲ್ಲಿ ಶಿಫಾರಸು ಮಾಡಿದ ರಾಸಾಯನಿಕ ಗೊಬ್ಬರ (ಸಾ:ರಂ:ಪೋ: 40:25:30) ದಲ್ಲಿ ಅರ್ಧ ಪ್ರಮಾಣದ ಸಾರಜನಕ ಹಾಗೂ ಪೂರ್ತಿ ಪ್ರಮಾಣದ ರಂಜಕ ಮತ್ತು ಪೋಟಾಶ ಗೊಬ್ಬರಗಳ ಜತೆಗೆ ಎಕರೆ 10 ಕಿ.ಗ್ರಾಂ. ಸತುವಿನ ಸಲ್ಫೆಟ್ ನೀಡಬೇಕು.
ಬಿತ್ತನೆ ಮಾಡಿದ 20 ದಿನಗಳ ನಂತರ ಉಳಿದರ್ಧ ಪ್ರಮಾಣದ ಸಾರಕಜನಕವನ್ನು 5 ಸಮ ಪ್ರಮಾಣದಲ್ಲಿ 10 ದಿನಗಳಿಗೊಮ್ಮೆ ನೀಡಿ ಮಣ್ಣು ಏರಿಸಿ ನೀರುಣಿಸಬೇಕು. ಹೊಲವನ್ನು ಕಸದಿಂದ ಮುಕ್ತವಾಗಿಟ್ಟು ಕೀಟ / ರೋಗಗಳ ಹತೋಟಿ ಮಾಡಿ ನೀರಿನ ನಿರ್ವಹಣೆ ಮಾಡಿದಲ್ಲಿ ಒಂದು ಎಕರೆಯಿಂದ 4 ರಿಂದ 5 ಟನ್ಗಳಷ್ಟು ಇಳುವರಿಯಿಂದ ರೂ. 1 ಲಕ್ಷಕ್ಕೂ ಅಧಿಕ ಆದಾಯ ಪಡೆಯಬಹುದು.












Click it and Unblock the Notifications