Get Updates
Get notified of breaking news, exclusive insights, and must-see stories!

ಕೀಟ ಬಾಧೆಗಳಿಂದ ತೆಂಗು ಬೆಳೆಗಾರರು ಹೈರಾಣು: ನಿರ್ವಹಣೆ ಹೇಗೆ?

ಕಲ್ಪವೃಕ್ಷ ಎಂದೇ ಕರೆಯುವ ತೆಂಗಿನ ಮರಗಳನ್ನು ನೆಟ್ಟು ಬೆಳೆಸುವುದು ಮತ್ತು ಅದನ್ನು ಕಾಪಾಡಿಕೊಂಡು ಫಸಲು ಪಡೆಯುವುದು ಬೆಳೆಗಾರರಿಗೆ ಸುಲಭವಾಗಿ ಉಳಿದಿಲ್ಲ. ಇತ್ತೀಚೆಗೆ ಅದಕ್ಕೆ ತಗಲುತ್ತಿರುವ ರೋಗಗಳು, ಕೀಟಬಾಧೆಗಳು ಹೈರಾಣ ಮಾಡಿ ಬಿಡುತ್ತಿದೆ. ಹೀಗಾಗಿ ಕೆಲವರು ಅದರತ್ತ ನಿರಾಸಕ್ತಿ ತೋರುವಂತಾಗಿದೆ. ಆದರೂ ಬೆಳೆಗಾರರು ಹೋರಾಟ ಮಾಡಿಕೊಂಡೇ ತೆಂಗನ್ನು ಬೆಳೆಯುತ್ತಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ತೆಂಗಿಗೆ ಉತ್ತಮ ದರ ದೊರೆಯುತ್ತಿದೆ. ಆದರೆ ಕೊಬ್ಬರಿ ಬೆಲೆಯಲ್ಲಿ ಏರು ಪೇರುಗಳು ಕೆಲವೊಮ್ಮೆ ಸಂಕಷ್ಟಕ್ಕೀಡು ಮಾಡುತ್ತಿದೆ. ಎಲ್ಲದಕ್ಕೂ ತೆಂಗು ಅಗತ್ಯವಾಗಿರುವುದರಿಂದ ಅದಕ್ಕೆ ಬೇಡಿಕೆಯಂತು ಕಡಿಮೆಯಾಗುವುದಿಲ್ಲ. ಇತ್ತೀಚೆಗೆ ಎಳನೀರಿಗೆ ಬೇಡಿಕೆ ಇರುವ ಕಾರಣ ರೈತರು ಅದರತ್ತ ಹೆಚ್ಚಿನ ನಿಗಾ ವಹಿಸುತ್ತಿದ್ದಾರೆ.

Tips For Farmers How To Manage Coconut Crops From Agricultural Pests

ಹೀಗಾಗಿ ತೆಂಗಿನ ಕಾಯಿ ಮತ್ತು ಕೊಬ್ಬರಿ ಬಗ್ಗೆ ತಲೆಕೆಡಿಸಿಕೊಳ್ಳದೆ ಎಳನೀರನ್ನು ಪಡೆಯುವಂತಹ ತಳಿಗಳನ್ನು ಬೆಳೆಯುತ್ತಿರುವುದು ಕಂಡು ಬರುತ್ತಿದೆ. ಎಳನೀರಿಗೆ ಎಲ್ಲ ಕಾಲದಲ್ಲಿಯೂ ಬೇಡಿಕೆ ಇರುವ ಕಾರಣ ಅದರಲ್ಲೂ ಬೇಸಿಗೆಯಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಹೊರ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸರಬರಾಜಾಗುತ್ತಿದೆ.

ಎಳನೀರು ಬೆಳೆಗಾರರಿಗೆ ಹೆಚ್ಚಿನ ಆದಾಯ ತರುತ್ತಿದೆ. ಅದು ಒಂದೆಡೆಯಾದರೆ ಈಗಾಗಲೇ ಬೆಳೆದು ನಿಂತಿರುವ ಗಿಡ, ಮರಗಳನ್ನು ಕಾಪಾಡಿಕೊಳ್ಳುವುದು ಬೆಳೆಗಾರರಿಗೆ ಸವಾಲ್ ಆಗಿ ಪರಿಣಮಿಸಿದೆ. ಕಾರಣ ಮರಗಳಿಗೆ ತಗಲುತ್ತಿರುವ ರೋಗಗಳು ಮತ್ತು ಕೀಟಗಳ ಹಾವಳಿಯಿಂದ ಹತ್ತಾರು ವರ್ಷ ಕಷ್ಟಪಟ್ಟು ಬೆಳೆಸಿದ ಮರಗಳು ಸದ್ದಿಲ್ಲದೆ ಸತ್ತು ಹೋಗುತ್ತಿದೆ. ಹೀಗಾಗಿ ಅವುಗಳನ್ನು ರಕ್ಷಿಸುವ ಕಡೆಗೆ ಗಮನಹರಿಸಬೇಕಾಗಿದೆ.

ತೆಂಗು ಕೃಷಿಯಲ್ಲಿ ಎಚ್ಚರಿಕೆ ಅಗತ್ಯ

ಬೆಳೆಗಾರರು ಗಿಡಗಳನ್ನು ನೆಡುವಲ್ಲಿಂದ ಆರಂಭವಾಗಿ ಮರವಾದ ಮೇಲೂ ಅದರತ್ತ ಹೆಚ್ಚಿನ ಆಸಕ್ತಿ ವಹಿಸಿ ಜೋಪಾನವಾಗಿ ನೋಡಿಕೊಳ್ಳಬೇಕಾಗುತ್ತದೆ. ಬರಗಾಲದಲ್ಲೂ ಗಿಡಗಳು ಸದೃಢವಾಗಿರಲು ತೆಂಗಿನ ಸಸಿಗಳನ್ನು ಎರಡು ಅಡಿಗಿಂತಲೂ ಹೆಚ್ಚು ಆಳದ ಗುಂಡಿಗಳಲ್ಲಿ ನೆಡಬೇಕು. ಇದರಿಂದ ಬೇರುಗಳ ಸಂಖ್ಯೆ ಹೆಚ್ಚಾಗುವುದಲ್ಲದೆ. ಮಣ್ಣಿನಲ್ಲಿ ಆಳಕ್ಕೆ ಇಳಿಯುತ್ತದೆ. ಇದಕ್ಕೆ ತದ್ವಿರುದ್ಧವಾಗಿ ತೇಲಿಸಿ ನೆಟ್ಟು ಸಸಿಗಳಲ್ಲಿ ಬೇರುಗಳು ಸರಿಯಾಗಿ ವೃದ್ಧಿಸದೇ, ಭೂಮಿಯ ಮೇಲ್ಮಟ್ಟದಲ್ಲಿ ಕಾಣಿಸಿಕೊಂಡು ಬಿಸಿಲಿನ ಹೊಡೆತಕ್ಕೆ ಸಿಕ್ಕಿ ಸಾಯುವ ಸಾಧ್ಯತೆ ಇರುತ್ತದೆ.

Tips For Farmers How To Manage Coconut Crops From Agricultural Pests

ಬೇಸಿಗೆಯಲ್ಲಿ ಕಾಂಡದ ಮೇಲೆ ಬೀಳುವ ತಾಪವನ್ನು ಕಡಿಮೆಗೊಳಿಸಲು ಬುಡದಿಂದ ಎರಡು ಮೀಟರ್ ಎತ್ತರದವರೆಗೆ ಮರದ ಕಾಂಡಕ್ಕೆ ಸುಣ್ಣವನ್ನು ಬಳಿಯಬೇಕು. ಎಳೆಯ ಗಿಡಗಳಿಗೆ ಗೆದ್ದಲು ಮತ್ತು ಕೊಂಬಿನ ದುಂಬಿ ಬಹಳಷ್ಟು ಹಾನಿಯನ್ನುಂಟು ಮಾಡುತ್ತವೆ. ಅದೇ ರೀತಿ ಸುಳಿಕೊಳೆಯುವ ರೋಗ, ಕಾಂಡದಲ್ಲಿ ದ್ರವ ಸೋರುವುದು, ಎಲೆ ಚುಕ್ಕೆ ಮುಂತಾದವುಗಳು ಹಾನಿಯನ್ನುಂಟು ಮಾಡುತ್ತವೆ. ಇವುಗಳ ಬಗ್ಗೆ ಅರಿತು ಸಕಾಲದಲ್ಲಿ ಅವುಗಳ ಬಾಧೆಯಿಂದ ಗಿಡಗಳನ್ನು ರಕ್ಷಿಸುವ ಕೆಲಸವನ್ನು ಬೆಳೆಗಾರರು ಮಾಡಬೇಕಾಗುತ್ತದೆ.

ಕೆಲವೊಂದು ಕೀಟಗಳು ಮರ ಮತ್ತು ಗಿಡದ ಮೇಲೆ ಗೊತ್ತೇ ಆಗದಂತೆ ದಾಳಿ ಮಾಡುತ್ತವೆ. ಹೀಗಾಗಿ ಗಿಡಗಳನ್ನು ಸೂಕ್ಷ್ಮವಾಗಿ ಗಮನಿಸಿ ಅದಕ್ಕೆ ತಗುಲಿರುವ ರೋಗವೇನು? ಎಂಬುದನ್ನು ಅರಿತು ಔಷಧೋಪಚಾರ ಮಾಡಬೇಕಾಗುತ್ತದೆ.

ಕೆಂಪು ಕಪ್ಪು ಮಿಶ್ರಿತ ರಸ ಸೋರುತ್ತಿದೆಯಾ?

ಗಿಡಗಳಿಗೆ ಗೊಬ್ಬರ ನೀಡುವುದರ ಜತೆಗೆ ಗಿಡವೊಂದಕ್ಕೆ ಇನ್ನೂರೈವತ್ತು ಗ್ರಾಂ ಬೇವಿನ ಹಿಂಡಿ ಕೊಟ್ಟಲ್ಲಿ ಕೀಟಗಳ ಬಾಧೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಇದರ ಜತೆಗೆ ಕೊಂಬಿನ ದುಂಬಿಯ ನಿವಾರಣೆಗೆ ಇಪ್ಪತೈದು ಗ್ರಾಂ ಸೆವೆಡಾಲ್ 8(ಜಿ) ಮತ್ತು ಇನ್ನೂರು ಗ್ರಾಂ ನುಣ್ಣನೆಯ ಮರಳನ್ನು ಮಿಶ್ರ ಮಾಡಿ ಸುಳಿಭಾಗದ ಕಂಕುಳದಲ್ಲಿ ಸುರಿಯಬೇಕು. ಇದೇ ಕೀಟನಾಶಕವನ್ನು ಮಣ್ಣಿಗೆ ಬೆರೆಸಿದರೆ ಗೆದ್ದಲು ನಾಶಗೊಳ್ಳುತ್ತದೆ. ಎಲೆ ಚುಕ್ಕೆ ರೋಗ, ಸುಳಿ ಕೊಳೆಯುವುದು ಮುಂತಾದವುಗಳ ಹತೋಟಿಗೆ ಶೇಕಡಾ 1 ರ ಬೋರ್ಡೊ ಅಥವಾ ಮತ್ತಾವುದಾದರೂ ತಾಮ್ರಯುಕ್ತ ಶಿಲೀಂದ್ರ ನಾಶಕದ ದ್ರಾವಣವನ್ನು ಸಿಂಪಡಿಸುವುದು ಒಳ್ಳೆಯದು.

ಇದೆಲ್ಲದರ ನಡುವೆ ಬೆಳೆದು ನಿಂತ ಮರಗಳಲ್ಲಿ ಗರಿಗಳ ಕೆಳಗಿನ ಭಾಗದಲ್ಲಿ ರಂಧ್ರ ಅಥವಾ ಕೆಲವೊಮ್ಮೆ ಮೇಲ್ಬಾಗದಲ್ಲಿ (ನಮಗೆ ರಂಧ್ರ ಕಾಣಿಸುವುದು ಕಷ್ಟ) ಅಂದರೆ ಗರಿಗಳ ಬುಡಭಾಗದಿಂದ ಕೆಂಪು ಕಪ್ಪು ಮಿಶ್ರಿತ ರಸ ಸೋರುತ್ತಿರುತ್ತದೆ. ರಂಧ್ರಗಳು ಸ್ಪಷ್ಟವಾಗಿದ್ದರೆ, ಅದರಿಂದ ಹೊಟ್ಟು ಉದುರುತ್ತಿರುತ್ತದೆ.

ಈ ವೇಳೆ ಸುಳಿ ಮುರಿದು ಬಿದ್ದ ಮರಗಳನ್ನು ತುಂಡಾಗಿ ಕತ್ತರಿಸಿ ಸಂಪೂರ್ಣವಾಗಿ ಸುಟ್ಟುಹಾಕುವುದು ಇಲ್ಲವೆ 5-6 ಅಡಿ ಆಳವಾದ ಗುಂಡಿ ತೆಗೆದು ಅದರಲ್ಲಿ ಈ ತುಂಡುಗಳನ್ನು ಹಾಕಿ ಮೇಲೆ ಕಲ್ಲು ಸುಣ್ಣ, ಬ್ಲೀಚಿಂಗ್ ಪುಡಿ ಹಾಕಿ, ನಂತರ ಮಣ್ಣಿನಿಂದ ಮುಚ್ಚಬೇಕು ಇಲ್ಲವಾದರೆ, ಅದರ ಕಾಂಡದಲ್ಲಿ ಅಭಿವೃದ್ಧಿ ಹೊಂದಿದ ಹುಳುಗಳು ಊರೆಲ್ಲಾ ಹರಡಬಹುದು.

ಮರಗಳ ಬಲಿಪಡೆಯುವ ಕೆಂಪುಮೂತಿ ಹುಳು

ಇನ್ನು ರಸ ಸೋರುತ್ತಿರುವ ಅಥವಾ ಹೊಟ್ಟು ಉದುರುತ್ತಿರುವ ರಂಧ್ರಗಳಿಗೆ, ಒಂದು ತಂತಿ ಅಥವಾ ಕಡ್ಡಿ ಇಲ್ಲವೇ ದೊಡ್ಡದಿದ್ದರೆ ಕೈ ಹಾಕಿ, ಒಳಗಿರುವ ಮರಿಹುಳುಗಳು, ಕೋಶಗಳು, ದುಂಬಿಗಳು ಮತ್ತು ಮೂತಿಹುಳುಗಳನ್ನು ಹೊರಗೆ ತೆಗೆದು ನಾಶಪಡಿಸಿ, ರಂಧ್ರವನ್ನು ಸ್ವಚ್ಚಗೊಳಿಸಬೇಕು. ನಂತರ ಆ ರಂಧ್ರಕ್ಕೆ ಫಿಪ್ರೋನಿಲ್ ಹರಳುಗಳನ್ನು 5 ರಿಂದ 10 ಗ್ರಾಂ, ಅಥವಾ ಆ ರಂಧ್ರದ ವಿಸ್ತೀರ್ಣಕ್ಕನುಗುಣವಾಗಿ 25 ರಿಂದ 30 ಗ್ರಾಂಗಳವರೆಗೆ ಹೆಚ್ಚಿಸಿ, ಹಾಕಬೇಕು.

ಒಂದು ವೇಳೆ ಫಿಪ್ರೋನಿಲ್ ಹರಳುಗಳು ದೊರಕದಿದಲ್ಲಿ, ಇಮಿಡಾಕ್ಲೋಪ್ರಿಡ್ 10 ಮಿಲಿ ಅಥವಾ ಸ್ಪೆನೋಸಾಡ್ 10 ಮಿಲಿ ಔಷಧವನ್ನು ಪ್ರತೀ ಲೀ ನೀರಿಗೆ ಬೆರೆಸಿ, ಆ ದ್ರಾವಣವನ್ನು ನೇರವಾಗಿ ಹೋಗುವುದಿದ್ದರೇ ರಂಧ್ರದ ಒಳಗೆ ಸುರಿಯಬೇಕು. ಇಲ್ಲವಾದಲ್ಲಿ ಒಂದು ಹತ್ತಿ ಅಥವಾ ಹತ್ತಿಯ ಬಟ್ಟೆ ಅಥವಾ ಗ್ಯಾರೇಜ್ ವೇಸ್ಟ್ ಬಟ್ಟೆಯಲ್ಲಿ ಅದ್ದಿ, ಅದನ್ನು ಒಳಗೆ ಸೇರಿಸಬೇಕು. ನಂತರ ಆ ರಂಧ್ರವನ್ನು ಹಸಿ ಸಗಣಿಯಿಂದ ಮುಚ್ಚಬೇಕು.

ಸಗಣಿಗೆ ಕ್ಲೋರೋಫೈರಿಫಾಸ್ ಮತ್ತು ಸಿಒಸಿ ಬೆರೆಸಿದರೇ ಉತ್ತಮ. ಈ ರಂಧ್ರದಿಂದ ಮತ್ತೆ ರಸ ಸುರಿಯುತ್ತಿದ್ದರೆ, 1-4 ವಾರದ ನಂತರ ಇದೇ ಪ್ರಕ್ರಿಯೆಯನ್ನು ಪುನರಾವರ್ತಿಸಬೇಕು.

ರಸ ಸೋರುವುದು ನಿಂತ ಮೇಲೆ ಮತ್ತೊಮ್ಮೆ ರಂಧ್ರವನ್ನು ಸ್ವಚ್ಚ ಮಾಡಿ, ಸಿಮೆಂಟ್ ಕಾಂಕ್ರೀಟ್ನಿಂದ ಮುಚ್ಚಬೇಕಾಗುತ್ತದೆ. ಮುನ್ನೆಚ್ಚರಿಕಾ ಕ್ರಮವಾಗಿ, ಪ್ರತೀ ಲೀಟರ್ ನೀರಿಗೆ 2.5 ಗ್ರಾಂ ಥಯೋಮೆಥಾಕ್ಸಾಮ್ ಅಥವಾ ಎಮಾಮೆಕ್ಟೀನ್ ಬೆಂಜೋಯೇಟ್ ಹರಳುಗಳನ್ನು ಕರಗಿಸಿ, ಸುಳಿಯ ಕೆಳಗಿರುವ ಗರಿಗಳಲ್ಲಿ ಹನಿ ಹನಿಯಾಗಿ ಬೀಳುವಂತೆ, ಒಂದು ಅಥವಾ ಎರಡು ಲೀ ಪ್ಲಾಸ್ಟಿಕ್ ಬಾಟಲಿಗಳಿಗೆ, ಮೇಲೆ ಮತ್ತು ಕೆಳಗೆ ಸಣ್ಣ ಸೂಜಿಮೊನೆಯಷ್ಟು ರಂಧ್ರ ಮಾಡಿ, ಸುಳಿಯ ಪಕ್ಕದ ಗರಿಗಳ ಕಂಕುಳಲ್ಲಿ ಇಡಬೇಕು.

ಕೆಂಪುಮೂತಿ ಹುಳುಗಳ ಮೋಹಕ ಬಲೆಗಳನ್ನು ತೋಟದ ಹೊರಗೆ ನೆರಳಿನಲ್ಲಿ ಕಟ್ಟಬೇಕು. ತೆಂಗಿನ ಮರಗಳಿಗೆ ಉಳುಮೆ ಮಾಡುವ ಸಂದರ್ಭದಲ್ಲಿ ಅಥವಾ ಕಾಯಿ ಎಳನೀರು ಕೀಳುವ ಸಂದರ್ಭದಲ್ಲಿ ಗಾಯವಾಗದಂತೆ ಎಚ್ಚರವಹಿಸುವುದು ಅತ್ಯವಶ್ಯಕ. ಬುಡದಿಂದ ಕನಿಷ್ಠ 2-3 ಅಡಿ ಆಳವಾಗಿ ಉಳುಮೆ, ಅಗೆತಗಳನ್ನು ಮಾಡದೇ ಇರುವುದು ಬಹಳ ಒಳ್ಳೆಯದು.

ವೈಜ್ಞಾನಿಕ ಕ್ರಮ ಅಳವಡಿಕೆ ಅಗತ್ಯ

ಒಟ್ಟಾರೆಯಾಗಿ ಹೇಳಬೇಕೆಂದರೆ ಇವತ್ತಿನ ಪರಿಸ್ಥಿತಿಯಲ್ಲಿ ತೆಂಗನ್ನು ನೆಟ್ಟು ಬೆಳೆಸಿ ಅದರಿಂದ ಫಸಲು ಪಡೆಯುವುದು ಬೆಳೆಗಾರರಿಗೆ ಅಷ್ಟೊಂದು ಸುಲಭವಾಗಿಲ್ಲ. ಇದೀಗ ಹೊಸದಾಗಿ ತೆಂಗಿನ ತೋಟ ಮಾಡಲು ಹೊರಟವರು ಒಂದೆಡೆಯಾದರೆ, ಇನ್ನೊಂದೆಡೆ ಹಳೆಯ ತೋಟಗಳನ್ನು ನಿರ್ವಹಣೆ ಮಾಡಿಕೊಂಡು ಹೋಗುವವರಿಗೂ ಹಲವು ರೀತಿಯ ಸಮಸ್ಯೆಗಳಿವೆ. ಆದರೆ ಅದೆಲ್ಲವನ್ನು ನಿಭಾಯಿಸಿಕೊಂಡು ಬೆಳೆಗಾರರು ಫಸಲು ಪಡೆಯುವತ್ತ ಗಮನಹರಿಸಬೇಕಾಗಿದೆ. ಹೀಗಾಗಿ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಬಹುಮುಖ್ಯವಾಗಿದೆ. ಮರಗಳಲ್ಲಿ ರೋಗಗಳು ಕಂಡು ಬಂದಾಗ ಸ್ಥಳೀಯ ಕೃಷಿ ಕೇಂದ್ರಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯುವುದು ಅಗತ್ಯವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+