ಶಿವಮೊಗ್ಗ; ಇನ್ನೂ ಮೂರು ದಿನ ಅಕಾಲಿಕ ಮಳೆ? ರೈತರಲ್ಲಿ ಮತ್ತೆ ಆತಂಕ
ಶಿವಮೊಗ್ಗ, ಡಿಸೆಂಬರ್ 2: ಕೆಲವೇ ತಿಂಗಳ ಹಿಂದೆ ಇಡೀ ಜಿಲ್ಲೆಯನ್ನೇ ಬೆಚ್ಚುವಂತೆ ಮಾಡಿದ್ದ ಮಳೆ ಮಲೆನಾಡಿನ ರೈತರನ್ನು ಇನ್ನೂ ಸಂಕಷ್ಟದಿಂದ ಪಾರು ಮಾಡಿಲ್ಲ. ಭಾರೀ ಮಳೆಯಿಂದಾಗಿ ಪ್ರವಾಹ ಸಂಭವಿಸಿ ಅನುಭವಿಸಿದ ಕಷ್ಟ ನಷ್ಟಗಳಿಂದ ಚೇತರಿಕೆ ಕಾಣುವ ರೈತರ ಭರವಸೆಯನ್ನು ಈಗ ಬೀಳುತ್ತಿರುವ ಅಕಾಲಿಕ ಮಳೆ ಮತ್ತೆ ಕಿತ್ತುಕೊಂಡಿದೆ.
ಮಳೆಯಿಂದಾಗಿ ರೈತರ ಮನೆ, ಬೆಳೆ ಎಲ್ಲವೂ ನೀರುಪಾಲಾಗಿದ್ದವು. ಮಳೆ ನಿಂತ ಮೇಲೆ ಅನೇಕ ರೈತರು ಮರು ಬೆಳೆ ಬಿತ್ತನೆ ಮಾಡಿದ್ದರು. ಆದರೆ ಅದಕ್ಕೂ ಈಗ ಕಂಟಕ ಎದುರಾಗಿದೆ.

ಅಳಿದುಳಿದ ಬೆಳೆ ಮೇಲೂ ಮಳೆರಾಯನ ಕಣ್ಣು
ಈ ಹಿಂದೆ ಆದ ಮಹಾ ಪ್ರವಾಹದಿಂದ ಜಿಲ್ಲೆಯಲ್ಲಿ ಬೆಳೆಸಿದ್ದ ಲಕ್ಷಾಂತರ ಪ್ರಮಾಣದ ಭತ್ತ, ಮೆಕ್ಕೆಜೋಳ ಬೆಳೆ ಹಾನಿಯಾಗಿದ್ದವು. ನಂತರ ಅಳಿದುಳಿದ ಬೆಳೆ ಅಲ್ಪಸ್ವಲ್ಪ ಮಟ್ಟಿಗೆ ಬದುಕಿಗೆ ಆಸರೆಯಾಗುತ್ತದೆ ಎಂದು ರೈತರು ಭಾವಿಸಿದ್ದರು. ಆದರೆ ಈಗ ಕೆಲ ದಿನಗಳಿಂದ ಆ ಬೆಳೆಯನ್ನೂ ಮತ್ತೆ ಮಳೆ ಕಿತ್ತುಕೊಳ್ಳುತ್ತಿದೆ. ನಿನ್ನೆ ರಾತ್ರಿಯಿಂದ ಜಿಲ್ಲೆಯ ಹಲವೆಡೆ ಮಳೆ ಪ್ರಾರಂಭವಾಗಿದ್ದು, ಮತ್ತೆ ಆತಂಕ ಎದುರಾಗಿದೆ.

ಬೆಳೆ ಕಟಾವು ಸಮಯ
ಶಿವಮೊಗ್ಗದ ತೀರ್ಥಹಳ್ಳಿ, ಭದ್ರಾವತಿ, ಶಿಕಾರಿಪುರ, ಹೊಸನಗರಗಳಲ್ಲಿ ಬಹುತೇಕ ಭತ್ತದ ಬೆಳೆ ಕಟಾವಿಗೆ ಬಂದಿದ್ದವು. ಇದು ಕಟಾವು ಮಾಡುವ ಸಮಯವಾಗಿದ್ದು, ಮೆಕ್ಕೆಜೋಳದ ಕಟಾವು ಕಾರ್ಯ ಈಗಾಗಲೇ ಆರಂಭವಾಗಿದೆ. ಆದರೆ ರೈತರ ಬೆಳೆಗೆ ಸರಿಯಾದ ಬೆಲೆ ಸಿಗದೆ ನಲುಗುತ್ತಿದ್ದಾರೆ.
ಮಳೆಯಾಗುತ್ತಿರುವುದರಿಂದ ಭತ್ತ, ಮೆಕ್ಕೆಜೋಳ ಬೆಳೆ ಸರಿಯಾಗಿ ಒಣಗದೇ ವ್ಯಾಪಾರಿಗಳು ಬೆಳೆಗೆ ಬೇಕಾಬಿಟ್ಟಿ ಬೆಲೆ ಕಟ್ಟುತ್ತಿದ್ದು, ರೈತರ ಸಾಲಕ್ಕೆ ಬಡ್ಡಿಗಾದರೂ ಆಗಲಿ ಎಂದು ಬಂದಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಮಳೆಯಿಂದಾಗಿ ರೈತರ ಬದುಕು ಬೆಳೆಯ ಜೊತೆಗೇ ಕೊಳೆಯುವ ಹಂತಕ್ಕೆ ಬಂದಿದೆ.

ಹೆಚ್ಚುತ್ತಿದೆ ರೈತರ ಆತ್ಮಹತ್ಯೆ
ಮಳೆಯು ಮಹಾ ಮಾರಿಯಂತೆ ರೈತನ ಬದುಕನ್ನು ನಾಶ ಮಾಡುತ್ತಿದ್ದು, ಜಿಲ್ಲೆಯಲ್ಲಿ ಈ ಒಂದು ತಿಂಗಳಲ್ಲಿಯೇ 3-4 ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ದಾಖಲಾಗಿದೆ. ರೈತರ ಕುಟುಂಬವೂ ಇದರಿಂದ ಬೀದಿಗೆ ಬೀಳುತ್ತಿವೆ. ಆದರೆ ಇದರೆಡೆಗೆ ಗಮನ ಕೊಡುವವರೂ ಇಲ್ಲವಾಗಿದ್ದಾರೆ.

ಇನ್ನೂ ಬಂದಿಲ್ಲ ಸರ್ಕಾರದಿಂದ ಪರಿಹಾರ
ಕೇಂದ್ರ, ರಾಜ್ಯ ಸರ್ಕಾರಗಳು ಭರವಸೆಗಳಲ್ಲಿಯೇ ಪರಿಹಾರ ನೀಡುತ್ತಿವೆ. ಈವರೆಗೂ ಯಾವುದೇ ಪರಿಹಾರ ಹಣ ಬಂದಿಲ್ಲ. ಇದರಿಂದ ರೈತರು ಸಾಕಷ್ಟು ಸಮಸ್ಯೆ ಯನ್ನು ಅನುಭವಿಸುತ್ತಿದ್ದು ಸರ್ಕಾರ ಹಾಗೂ ವಿರೋಧ ಪಕ್ಷಗಳು ಉಪ ಚುನಾವಣಾ ಕಡೆಗೆ ತಮ್ಮ ಸಂಪೂರ್ಣ ಗಮನ ನೀಡಿದ್ದಾರೆ. ಇತ್ತ ರೈತರ ಗೋಳನ್ನು ಕೇಳುವವರಿಲ್ಲದಂತಾಗಿದೆ. ಸರ್ಕಾರದಿಂದ ರೈತರ ಬೆಳೆಗೆ ಪ್ರೋತ್ಸಾಹ ಧನ ಘೋಷಣೆಯಾಗಿದ್ದರೂ ಖರೀದಿ ಕೇಂದ್ರಗಳನ್ನು ತೆರೆದಿಲ್ಲ.
ಇನ್ನೂ ಮೂರು ದಿನ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಸದ್ಯಕ್ಕೆ ಅಡಿಕೆ, ಭತ್ತ, ಮೆಕ್ಕೆಜೋಳ ಕೊಯ್ಲು ನಡೆಯುತ್ತಿದ್ದು, ರೈತರು ಆತಂಕದಲ್ಲೇ ಕೆಲಸ ಮುಂದುವರೆದಿದ್ದಾರೆ.












Click it and Unblock the Notifications