ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ಕೊಟ್ಟಿರುವ ಭರವಸೆ ಏನು?
ಬೆಂಗಳೂರು, ಏ. 12: ಕೊರೊನಾ ವೈರಸ್ ತಂದಿಟ್ಟಿರುವ ಸಂಕಷ್ಟದಿಂದ ಜಗತ್ತು ಸ್ತಬ್ಧವಾಗಿದೆ. ಇದಕ್ಕೆ ನಮ್ಮ ದೇಶವೂ ಹೊರತಾಗಿಲ್ಲ. ಎರಡನೇ ಹಂತದ ಲಾಕ್ಡೌನ್ ಕುರಿತು ಅಧಿಕೃತ ಪ್ರಕಟಣೆ ಮಾತ್ರ ಬಾಕಿಯಿದೆ. ಮೊದಲ ಹಂತದ ಲಾಕ್ಡೌನ್ ನಾಡಿದ್ದು ಏಪ್ರಿಲ್ 14 ರಂದು ಮುಕ್ತಾಯವಾಗಲಿದೆ. ಅದಕ್ಕೂ ಮೊದಲೇ ಎರಡನೇ ಹಂತದ ಲಾಕ್ಡೌನ್ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಕಟ ಮಾಡಲಿದ್ದಾರೆ.
ಇಡೀ ದೇಶಾದ್ಯಂತ ಅಸಂಘಟಿತ ಕಾರ್ಮಿಕರು, ಕೂಲಿ, ಕಟ್ಟಡ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಈ ಸಂಕಷ್ಟಗಳ ಮಧ್ಯೆ ಭಾರತದಲ್ಲಿ ಇನ್ನು ಕೆಲವೆ ದಿನಗಳಲ್ಲಿ ಮುಂಗಾರು ಆರಂಭವಾಗಲಿದೆ. ರೈತರು ಆತಂತಕಕ್ಕೆ ಒಳಗಾಗಿದ್ದಾರೆ. ಬಿತ್ತನೆ ಮಾಡಲು ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳ ಲಭ್ಯತೆ ಬಗ್ಗೆ ಆತಂಕದಲ್ಲಿದ್ದಾರೆ.
ಮೊದಲೇ ಭಾರತದ ಕೃಷಿ ಮಳೆಯೊಂದಿಗಿನ ಜೂಜಾಟವಿದ್ದಂತೆ ಎಂಬುದು ತಿಳಿದಿರುವ ವಿಚಾರ. ಈಗ ಕೊರೊನಾ ವೈರಸ್ ಕೂಡ ರೈತರನ್ನು ಕಂಗೆಡಿಸಿದೆ. ರೈತರಿಗೆ ಸಕಾಲದಲ್ಲಿ ಗೊಬ್ಬರ, ಬೀಜ ಸಿಗದೇ ಇದ್ದರೆ ದೇಶದಲ್ಲಿ ಆಹಾರ ಕೊರತೆ ಕೊರೊನಾಕ್ಕಿಂತ ಭೀಕರವಾಗಲಿದೆ. ಈ ಮಧ್ಯೆ ಕೇಂದ್ರ ಸರ್ಕಾರ ರೈತರಿಗೆ ಕೊಟ್ಟಿರುವ ಭರವಸೆ ಏನು?

ಮಲೆನಾಡು, ಅರೆ ಮಲೆನಾಡು ಹಾಗೂ ಬಯಲು ಸೀಮೆಯಲ್ಲಿ ಬಿತ್ತೆನೆ
ಮುಂಗಾರು ಹಂಗಾಮಿನ ಆರಂಭದಲ್ಲಿ ಬೀಳುವ ಮಳೆಗೆ ಮಲೆನಾಡು, ಅರೆ ಮಲೆನಾಡು ಹಾಗೂ ಬಯಲು ಸೀಮೆಯ ಸ್ವಲ್ಪ ಭಾಗದಲ್ಲಿ ರೈತರು ಬಿತ್ತನೆ ಮಾಡುತ್ತಾರೆ. ಆದರೆ ಈಗ ದೇಶಾದ್ಯಂತ ಕೊರೊನಾ ವೈರಸ್ ತಡೆಯಲು ಜಾರಿಯಲ್ಲಿರುವ ಲಾಕ್ಡೌನ್ ರೈತರ ಮೇಲೂ ಪ್ರಭಾವ ಬೀರಿದೆ. ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕೀಟನಾಶಕಗಳ ಅಂಗಡಿಗಳು ಕೂಡ ಮುಚ್ಚಲ್ಪಟ್ಟಿವೆ. ನಮ್ಮ ರೈತರು ಬೀಜ, ಗೊಬ್ಬರಕ್ಕೆ ಪಟ್ಟಣಗಳ ಮೇಲೆ ಅವಲಂಬಿತರಾಗಿರುವುದರಿಂದ ಸಹಜವಾಗಿಯೆ ಅವರಲ್ಲಿ ಆತಂಕ ಕಾಡುತ್ತಿದೆ.

ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ಗೊಬ್ಬರ ಸಿಗುತ್ತದೆಯಾ?
ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟವಾಗಿ ಹೇಳಿದೆ. ಸುರಕ್ಷಿತ ಸಾಮಾಜಿಕ ಅಂತರ ಕಾಯ್ದುಕೊಂಡು ರೈತರು ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಬಹುದು ಎಂದು ಸೂಚಿಸಲಾಗಿದೆ. ಆದರೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸೇರಿದಂತೆ ಕೀಟನಾಶಕಗಳು ಸಕಾಲದಲ್ಲಿ ಸಿಗುತ್ತವೆಯೊ ಇಲ್ಲವೊ ಎಂಬ ಭೀತಿ ರೈತರನ್ನು ಕಾಡುತ್ತಿದೆ ಇದಕ್ಕೂ ಕೇಂದ್ರ ಸರ್ಕಾರ ಸ್ಪಷ್ಟನೆ ಕೊಟ್ಟಿದೆ.

ಮುಂಗಾರು ಬಿತ್ತನೆಗೆ ಯಾವುದೇ ಕೊರತೆ ಇಲ್ಲ!
ಕರ್ನಾಟಕವೂ ಸೇರಿದಂತೆ ದೇಶದ ಯಾವುದೇ ಭಾಗದಲ್ಲಿ ರಸಗೊಬ್ಬರ ಅಥವಾ ಕೀಟನಾಶಕಗಳ ಕೊರತೆ ಉಂಟಾಗುವುದಿಲ್ಲ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ರೈತರಿಗೆ ಭರವಸೆ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಸದ್ಯ 7.3 ಲಕ್ಷ ಟನ್ ರಸಗೊಬ್ಬರ ದಾಸ್ತುನು ಇದೆ. ಏಪ್ರಿಲ್ ತಿಂಗಳಲ್ಲಿ ರಾಜ್ಯದ ಬೇಡಿಕೆ 2.57 ಲಕ್ಷ ಟನ್ ಮಾತ್ರ. ಹೀಗಾಗಿ ರೈತರು ಈ ಸಲವೂ ಮಾಮೂಲಿಯಾಗಿ ಮುಂಗಾರು ಬಿತ್ತನೆಗೆ ತಯಾರಿ ಮಾಡಿಕೊಳ್ಳಬಹುದು. ಲಾಕ್ಡೌನ್ನಿಂದಾಗಿ ಆರಂಭದಲ್ಲಿ ಒಂದೆರಡು ದಿನ ಸರಕು ಸಾಗಣೆಗೆ ತೊಂದರೆಯಾಗಿತ್ತು. ಆದರೆ ರಸಗೊಬ್ಬರ, ಕೀಟನಾಶಕ ಸೇರಿಂತೆ ಕೃಷಿಸಂಬಂಧಿತ ಎಲ್ಲ ಪರಿಕರಗಳನ್ನು ಅತ್ಯವಶ್ಯಕ ವಸ್ತುಗಳ ಪಟ್ಟಿಗೆ ಸೇರಿಸಿ ಉತ್ಪಾದನೆ ಹಾಗೂ ಸಾಗಣೆ ಮೇಲಿನ ನಿರ್ಬಂಧವನ್ನು ಕೇಂದ್ರ ಸರ್ಕಾರವು ಸಂಪೂರ್ಣ ತೆಗೆದುಹಾಕಿದೆ ಎಂದು ಡಿ ವಿ ಸದಾನಂದಗೌಡ ಅವರು ತಿಳಿಸಿದ್ದಾರೆ.

ರಸಗೊಬ್ಬರ ಸಾಗಣೆಗೆ ಕೇಂದ್ರದ ಕಟ್ಟುನಿಟ್ಟಿನ ಆದೇಶವಿದೆ
ರಸಗೊಬ್ಬರ ತಯಾರಿಕಾ ಕಾರ್ಖಾನೆಗಳು, ಗೋಡಾನುಗಳು, ಬಂದರಗಳು, ವಿತರಣಾ ಕೇಂದ್ರಗಳ ಮಧ್ಯೆ ರಸಗೊಬ್ಬರ ಸಾಗಣೆಗೆ ಬೇಡಿಕೆಗೆ ಅನುಗುಣವಾಗಿ ಗೂಡ್ಸ್ ರೈಲುಗಳನ್ನು ಒದಗಿಸುವಂತೆ ರೇಲ್ವೆ ಇಲಾಖೆಗೆ ಕೇಂದ್ರ ಸರ್ಕಾರವು ಕಟ್ಟುನಿಟ್ಟಿನ ಆದೇಶ ನೀಡಿದೆ. ಆದರಿಂದ ಜಲ ಹಾಗೂ ಭೂಸಾರಿಗೆಗೆ ರಸಗೊಬ್ಬರ, ಕೀಟನಾಶಕ ಮತ್ತಿತರ ಕೃಷಿಸಂಬಂಧಿತ ಸರಕುಗಳನ್ನು ಸಾಗಣೆಗೆ ಮುಕ್ತ ಅನುಮತಿ ನೀಡಲಾಗಿದೆ. ದೇಶದ ಬಹುತೇಕ ರಸಗೊಬ್ಬರ ಕಾರ್ಖಾನೆಗಳು ಪೂರ್ಣ ಪ್ರಮಾಣದಲ್ಲಿ ಉತ್ಪಾದನೆಯಲ್ಲಿ ತೊಡಗಿವೆ. ಈ ಸಂದರ್ಭದಲ್ಲಿ ಲಾಕ್ಡೌನ್ ನಿಯಮಗಳಾದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮುಖಗವಸು ಧರಿಸುವುದು ಇವೇ ಮುಂತಾದವುಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸೂಚಿಸಲಾಗಿದೆ.

ಹಲವು ತಿಂಗಳುಗಳಿಗೆ ಸಾಕಾಗುವಷ್ಟು ರಸಗೊಬ್ಬರ ದಾಸ್ತಾನಿದೆ
ದೇಶದಲ್ಲಿ ಇನ್ನೂ ಹಲವು ತಿಂಗಳಿಗೆ ಸಾಕಾಗುವಷ್ಟು ರಸಗೊಬ್ಬರ ದಾಸ್ತಾನು ಇದೆ. ಸದ್ಯ 86.87 ಲಕ್ಷ ಮೆಟ್ರಿಕ್ ಟನ್ ಯೂರಿಯಾ ದಸ್ತಾನು ಇದೆ. ಆದಾಗ್ಯೂ ಮುಂಜಾಗ್ರತಾ ಕ್ರಮವಾಗಿ 7.57 ಲಕ್ಷ ಟನ್ ಯೂರಿಯಾ ಆಮದು ಮಾಡಿಕೊಳ್ಳಲಾಗುತ್ತಿದೆ. ದೇಶಾದ್ಯಂತ ರಸಗೊಬ್ಬರ ಮಳಿಗೆಗಳೂ ತೆರೆದಿದ್ದು ಎಂದಿನಂತೆ ವಹಿವಾಟು ನಡೆಸಿವೆ. ಕರ್ನಾಟಕದಲ್ಲಿ ಸಾಗಣೆ, ಪೂರೈಕೆಗೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದರೆ ಕೃಷಿ ಸಹಾಯವಾಣಿ ಸಂಖ್ಯೆ: 080-22212818 / 22210237 ಗೆ ಕರೆಮಾಡಿ ಬಗೆಹರಿಸಿಕೊಳ್ಳಬಹುದು ಎಂದು ಸದಾನಂದಗೌಡ ಅವರು ತಿಳಿಸಿದ್ದಾರೆ.

ವದಂತಿಗಳಿಗೆ ಕಿವಿಗೊಡಬೇಡಿ ಎಂದು ಡಿವಿಎಸ್ ಮನವಿ
ನಾನು ಮತ್ತೆ ಸ್ಪಷ್ಟಪಡಿಸುತ್ತಿದ್ದೇನೆ. ರಸಗೊಬ್ಬರ, ಕೀಟನಾಶಕಗಳ ಕೊರತೆ ಇಲ್ಲ. ದಾಸ್ತಾನು ಸಾಕಷ್ಟಿದೆ. ಬೇಕಾದಷ್ಟು ಗೊಬ್ಬರ ಪೂರೈಸುವ ಜವಾಬ್ಧಾರಿ ನಮ್ಮದು. ರೈತಬಾಂಧವರಿಗೆ ನನ್ನ ಮನವಿ. ನೀವು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬೇಡಿ. ನಿರಾತಂಕವಾಗಿ ಮುಂಗಾರು ಬಿತ್ತನೆಗೆ ತಯಾರಿಮಾಡಿಕೊಳ್ಳಿ. ನಿಮಗೆ ಶುಭವಾಗಲಿ ಎಂದು ಕೇಂದ್ರ ಸರ್ಕಾರದ ಪರವಾಗಿ ಸಚಿವ ಸದಾನಂದಗೌಡ ಅವರು ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications