ಮುಂದುವರಿಯಲಿದೆ ಟೊಮೆಟೊ ದರ ಏರಿಕೆ; ತರಕಾರಿಗಳ ಬೆಲೆ ಎಷ್ಟಿದೆ?
ಬೆಂಗಳೂರು, ನವೆಂಬರ್ 26: ಕರ್ನಾಟಕದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ತರಕಾರಿಗಳ ಬೆಲೆ ಗಗನಕ್ಕೇರಿದೆ. ಅದರಲ್ಲೂ ಟೊಮೆಟೊ ಬೆಲೆಯಂತೂ ಶತಕದ ಗಡಿ ದಾಟಿದೆ.
Recommended Video
ಒಂದು ಕಡೆ ಕಡೆಮೆ ಇಳುವರಿಯಿಂದ ರೈತರು ನಷ್ಟ ಅನುಭವಿಸಿದರೆ, ಮತ್ತೊಂದು ಕಡೆ ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ರಾಜ್ಯಾದ್ಯಂತ ಸುರಿದ ಧಾರಾಕಾರ ಮಳೆಯ ಪರಿಣಾಮ ತರಕಾರಿ ಬೆಲೆ ಗಗನಕ್ಕೇರಿದೆ. ಕಳೆದೊಂದು ತಿಂಗಳಿನಿಂದ ನಿರಂತವಾಗಿ ತರಕಾರಿಗಳ ಬೆಲೆ ಏರಿಕೆಯಾಗುತ್ತಿದೆ.
ಟೊಮೆಟೊ ಬೆಲೆ ಗ್ರಾಹಕರ ಜೇಬು ಸುಡುತ್ತಿದ್ದು, ಹೋಲ್ಸೇಲ್ ಟೊಮೆಟೊ ದರವೇ ಮೂರು ಪಟ್ಟು ಏರಿಕೆಯಾಗಿದೆ. ಈ ಹಿಂದೆ 300 ರೂ. ಇದ್ದ 25 ಕೆಜಿ ಟೊಮೆಟೋ ದರ, ಈಗ 1300ರಿಂದ 1500ಕ್ಕೆ ಏರಿಕೆಯಾಗಿದೆ. ನಾಟಿ ಟೊಮೊಟೊ 25 ಕೆಜಿಗೆ 1800 ರೂ. ಇದೆ.

ಇನ್ನೂ ಕೆಲವು ದಿನ ಬೆಲೆ ಏರಿಕೆ
ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲೂ ತೀವ್ರ ಮಳೆ ಪರಿಣಾಮ ಟೊಮೆಟೊ ಬೆಳೆ ನೆಲಕಚ್ಚಿದೆ. ಅದೇ ರೀತಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಟೊಮೆಟೊ ಬೆಳೆಯೂ ಅತಿವೃಷ್ಠಿಯಿಂದ ಹಾನಿಯಾಗಿದೆ. ಹೀಗಾಗಿ ನಿರಂತರವಾಗಿ ಏರಿಕೆಯಾಗುತ್ತಿರುವ ಟೊಮೆಟೊ ಬೆಲೆ ಇನ್ನೂ ಕೆಲವು ದಿನ ಇದೇ ರೀತಿ ಬೆಲೆ ಏರಿಕೆ ಸಾಧ್ಯತೆಯಿದೆ.
ನೆರೆಯ ಮಹಾರಾಷ್ಟ್ರದಲ್ಲಿ ಟೊಮೆಟೊ ಬೆಳೆ ಸಿಕ್ಕರೆ ಮಾತ್ರ ದರ ಇಳಿಕೆಯಾಗಲಿದೆ. ಇಲ್ಲದಿದ್ದರೆ ಇನ್ನಷ್ಟು ದಿನ ದರ ಏರುವ ಸಾಧ್ಯತೆಯಿದೆ. ಸದ್ಯ ಹೋಲ್ಸೇಲ್ 60 ರೂ.ನಿಂದ 80 ರೂ. ಟೊಮೆಟೊ ಮಾರಾಟವಾದರೆ, ರೀಟೇಲ್ 100ರಿಂದ 120 ರೂ.ವರೆಗೂ ಮಾರಾಟವಿದೆ. ಹೀಗಾಗಿ ಜನರ ಬಾಯಿ ಕಹಿ ಮಾಡುತ್ತಿರುವ ಟೊಮೆಟೊ ಜೊತೆಗೆ ಇತರೆ ತರಕಾರಿಗಳ ಬೆಲೆವೂ ದುಬಾರಿಯಾಗಿದೆ.
ಸದ್ಯ ಮಾರುಕಟ್ಟೆಯಲ್ಲಿ ವಿವಿಧ ತರಕಾರಿಗಳ ದರ ಹೀಗಿದೆ (ಪ್ರತಿ 1 ಕೆಜಿ)
ಹುರುಳಿಕಾಯಿ- 106 ರೂ., ಬದನೆಕಾಯಿ ಬಿಳಿ- 108 ರೂ., ಬದನೆಕಾಯಿ ಗುಂಡು- 72 ರೂ., ಬಾಟಲ್ ಬದನೆ - 75 ರೂ., ಬೀಟ್ರೂಟ್- 59 ರೂ., ಸುವರ್ಣಗಡ್ಡೆ- 34 ರೂ., ಹಾಗಲಕಾಯಿ- 60 ರೂ., ಸೌತೆಕಾಯಿ- 70 ರೂ., ಸೀಮೆ ಬದನೆಕಾಯಿ- 22 ರೂ. ಇದೆ.

ಇನ್ನು ಲೋಕಲ್ ಸೌತೆಕಾಯಿ-24 ರೂ., ಇಸ್ರೇಲ್ ಸೌತೆಕಾಯಿ- 74. ರೂ., ಗೋರಿಕಾಯಿ- 80 ರೂ., ಹಸಿ ಮೆಣಸು- 60 ರೂ., ಬಜ್ಜಿ ಮೆಣಸು- 62 ರೂ., ನಾಟಿ ಕ್ಯಾರೇಟ್- 94 ರೂ., ಅಲಸಂದೆ- 75 ರೂ., ಎಲೆಕೋಸು (ದಪ್ಪ) 60 ರೂ., ಹೂಕೋಸು ಸಣ್ಣ- 64 ರೂ., ಟೊಮೆಟೊ- 150 ರೂ., ನುಗ್ಗೆಕಾಯಿ- 270 ರೂ. ಇದೆ.
ಜನಸಾಮಾನ್ಯರ ಜೇಬಿಗೆ ಕತ್ತರಿ
ಈರುಳ್ಳಿ ಬಿಟ್ಟರೆ ಉಳಿದೆಲ್ಲಾ ತರಕಾರಿಗಳು ಮಳೆಯಿಂದಾಗಿ ಹಾಳಾಗಿ ಹೋಗಿದ್ದರಿಂದ ದರ ಜಾಸ್ತಿಯಾಗಿದೆ. ಒಂದು ಕಡೆ ಮಳೆ, ಮತ್ತೊಂದೆಡೆ ಕೆಲಸವೂ ಇಲ್ಲದೆ, ಸಂಬಳವೂ ಇಲ್ಲದೆ ಜನಸಾಮಾನ್ಯರು ಪರಿತಪಿಸುತ್ತಿದ್ದಾರೆ. ಈ ನಡುವೆ ಟೊಮೆಟೊ ಸೇರಿದಂತೆ ಅಗತ್ಯ ತರಕಾರಿಗಳ ದರ 100 ರೂ. ಗಡಿ ದಾಟಿದರೆ ಜೀವನ ಮಾಡುವುದು ಹೇಗೆ ಎಂದು ಚಿಂತಿಸಬೇಕಾಗಿದೆ.
ಇದೇ ರೀತಿ ಮಳೆ ಮುಂದುವರಿದರೆ ತರಕಾರಿ ಮತ್ತು ಹಣ್ಣುಗಳ ಬೆಲೆ ಇನ್ನಷ್ಟು ಏರಿಕೆಯಾಗಲಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಬೆಳೆದಿರುವ ತರಕಾರಿ ನೀರಿನಲ್ಲಿ ಕೊಳೆಯುವಂತಾಗಿದೆ. ಮತ್ತೊಂದು ಕಡೆ ತರಕಾರಿ ಕಟಾವು ಮಾಡಲು ಸಹ ರೈತರಿಗೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಆಗುತ್ತಿದೆ.












Click it and Unblock the Notifications