ಮಳೆಯ ಅಬ್ಬರ; ಬೆಳೆಗಳಿಗೆ ತಾಗುವ ಹಳದಿ ರೋಗ ನಿಯಂತ್ರಣಕ್ಕೆ ಸಲಹೆ
ಧಾರವಾಡ, ಜುಲೈ 14; ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನೈಋತ್ಯ ಮುಂಗಾರು ಮಳೆಯ ಅಬ್ಬರ ಹೆಚ್ಚಾಗಿದೆ. ರೈತರು ಕೃಷಿ ಚಟುವಟಿಕೆಗಳಲ್ಲಿ ಬ್ಯಸಿಯಾಗಿದ್ದಾರೆ. ಮಳೆಗಾಲದಲ್ಲಿ ಬೆಳೆಗಳಿಗೆ ತಾಗುವ ರೋಗಗಳ ಬಗ್ಗೆಯೂ ಗಮನಹರಿಸಬೇಕಿದೆ.
ಮುಖ್ಯವಾಗಿ ಹಳದಿ ರೋಗ, ತುಕ್ಕು ರೋಗ, ಚುಕ್ಕೆ ಲದ್ದಿ ಹುಳುವಿನ ಬಾಧೆ ನಿಯಂತ್ರಣಕ್ಕೆ ರೈತರು ಮುಂಜಾಗ್ರತೆವಹಿಸಬೇಕು ಎಂದು ಧಾರವಾಡದ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಐ. ಬಿ ರೈತರಿಗೆ ಸಲಹೆ ನೀಡಿದ್ದಾರೆ.
ಜುಲೈ ತಿಂಗಳಿನಲ್ಲಿ 10 ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಈಗಾಗಲೇ ಬಿತ್ತನೆ ಮಾಡಿರುವ ಹೆಸರು, ಸೋಯಾಅವರೆ, ಗೋವಿನ ಜೋಳ, ಶೇಂಗಾ ಮುಂತಾದ ಬೆಳೆಗಳಿಗೆ ಮಳೆ ಅನುಕೂಲವಾಗಿದೆ.

ಆದರೆ ಕಾಳು ಕಾಳಾಗಿ ನಿಧಾನವಾಗಿ ಮತ್ತು ನಿರಂತರವಾಗಿ ಸುರಿಯುತ್ತಿರುವ ಮಳೆಯು ತಡವಾಗಿ ಬಿತ್ತಿರುವ ಬೆಳೆಗಳಿಗೆ ತೊಂದರೆಯುಂಟು ಮಾಡಿದೆ. ಭೂಮಿಯಲ್ಲಿ ಅತಿಯಾದ ತೇವಾಂಶದಿಂದ ಹಾಗೂ ಸೂರ್ಯನ ಕಿರಣಗಳು ಬಿತ್ತಿದ ಬೆಳೆಗಳಿಗೆ ತಾಗದೇ ಇರುವುದರಿಂದ ಸೋಯಾಬಿನ್, ಹೆಸರು, ಉದ್ದು ಇತ್ಯಾದಿ ಬೆಳಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ.
ಈ ಹಿನ್ನಲೆಯಲ್ಲಿ ಕೃಷಿ ಇಲಾಖೆ, ವಿಜ್ಞಾನಿಗಳು, ಕೃಷಿ ವಿಶ್ವವಿದ್ಯಾಲಯ ವಿಸ್ತರಣಾ ಘಟಕವು ನೀಡಿರುವ ಶಿಫಾರಸ್ಸುಗಳನ್ನು ರೈತರು ಬೆಳೆ ನಿರ್ವಹಣೆಯಲ್ಲಿ ಅಳವಡಿಸಿಕೊಳ್ಳಬೇಕೆಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರಾಜಶೇಖರ ಐ. ಬಿ. ಕರೆ ನೀಡಿದ್ದಾರೆ.
ನಿಯಂತ್ರಣ ಕ್ರಮಗಳ ಮಾಹಿತಿ; ಬಿತ್ತನೆ ಮಾಡಿದ ಹೊಲದಲ್ಲಿ, ಒಡ್ಡುಗಳಲ್ಲಿ ನಿಂತಿರುವ ಹೆಚ್ಚುವರಿ ನೀರನ್ನು ಹರಿ ಮಾಡುವುದರ ಮೂಲಕ ಹೊರ ಹಾಕಲು ಪ್ರಯತ್ನ ಮಾಡಬೇಕು. ಈಗಾಗಲೇ ಭೂಮಿಯು ಗರಿಷ್ಟ ಪ್ರಮಾಣದ ತೇವಾಂಶವನ್ನು ಹಿಡಿದಿಟ್ಟುಕೊಂಡಿದ್ದು, ಹೆಚ್ಚುವರಿಯಾಗಿ ಬಿದ್ದ ಮಳೆಯ ನೀರನ್ನು ಹೊಲದಿಂದ ಹೊರಕ್ಕೆ ಹಾಕಲು ರೈತರು ಕ್ರಮ ಕೈಗೊಳ್ಳಬೇಕು.

ಮಳೆ ಕಡಿಮೆಯಾದ ನಂತರ ಹೆಸರು, ಉದ್ದು, ಸೋಯಾಬಿನ್ ಇತ್ಯಾದಿ ಬೆಳೆಗಳು ಹಳದಿ ವರ್ಣಕ್ಕೆ ತಿರುಗುತ್ತಿದ್ದಲ್ಲಿ, ಎಲೆಗಳ ಮೂಲಕ ಪೋಷಕಾಂಶಗಳನ್ನು ಒದಗಿಸುವ ಪ್ರಯತ್ನ ಮಾಡಬೇಕು. ನೀರಿನಲ್ಲಿ ಕರಗುವ ರಸಗೊಬ್ಬರಗಳಾದ 17:44:00 ಅಥವಾ 0:00:50 ಅಥವಾ 13:00:45 ಅಥವಾ 00:52:34 ಅಥವಾ 18:18:18:61 ಅಥವಾ 19:19:19 ಇವುಗಳಲ್ಲಿ ಯಾವುದಾದರೂ ಒಂದನ್ನು ಪ್ರತಿ ಲೀಟರ್ ನೀರಿಗೆ 5 ರಿಂದ 10 ಗ್ರಾಂ. ಬೆರೆಸಿ ಬೆಳೆಗಳ ಮೇಲೆ ಸಿಂಪಡಿಸಬೇಕು. ಕನಿಷ್ಟ 200 ಲೀ. ಸಿಂಪರಣಾ ದ್ರಾವಣ ಪ್ರತಿ ಎಕರೆಗೆ ಬೇಕಾಗುತ್ತದೆ.
ಬಿಳಿ ನೊಣದ ಮೂಲಕ ಹರಡುವಿಕೆ; ಬೆಳೆಯಲ್ಲಿ ಇರುವ ಹಳದಿ ನಂಜಾಣು ಬಾಧಿತ ಸಸಿಗಳನ್ನು ಕಿತ್ತು ಕೈಯಲ್ಲಿ ಹಿಡಿದುಕೊಂಡು ಹೊಲದಲ್ಲಿ ತಿರುಗಾಡಬಾರದು. ಇದೊಂದು ರಸ ಹೀರುವ ಬಿಳಿ ನೊಣದ ಮೂಲಕ ಹರಡುವ ರೋಗವಾಗಿದ್ದು, ರೋಗವಾಹಕ ಕೀಟಗಳು ಎಲ್ಲೆಡೆ ಪಸರಿಸುವ ಸಾಧ್ಯತೆ ಇರುತ್ತದೆ. ಹಳದಿ ನಂಜಾಣು ಬಾಧಿತ ಸಸಿಗಳನ್ನು ಕಿತ್ತುಒಂದು ಚೀಲದಲ್ಲಿ ತುಂಬಿಕೊಂಡು ಹೊಲದಿಂದ ಹೊರಗೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಬೇಕು. ಇಲ್ಲವೇ, ಮಣ್ಣಿನಲ್ಲಿ ಗುಂಡಿತೋಡಿ ಹೂಳಬೇಕು.
ರಾಸಾಯನಿಕ ಉಪಕ್ರಮವಾಗಿ ಪ್ರತಿ ಲೀ. ನೀರಿಗೆ 0.3 ಗ್ರಾಂ. ಅಸಿಟಮಾಪ್ರಿಡ್ ಅಥವಾ 0.5 ಗ್ರಾಂ. ಥಯೋಮೆಥಾಕ್ಸಾಮ್ ಅಥವಾ 2 ಮಿ.ಲೀ. ಪ್ರೊಫೆನ್ಫಾಸ್ ಕೀಟನಾಶಕವನ್ನು ಬೆರೆಸಿ ಸಿಂಪರಣೆ ಕೈಗೊಳ್ಳಬೇಕು.
ಗೋವಿನ ಜೋಳ; ಚುಕ್ಕೆ ಲದ್ದಿ ಹುಳುವಿನ ಬಾಧೆ ಕಂಡುಬಂದಲ್ಲಿ ಪ್ರತಿ ಲೀಟರ್ ನೀರಿಗೆ 1 ಗ್ರಾಂ. ನ್ಯುಮೋರಿಯಾರಿಲೈ ಜೈವಿಕ ಪೀಡೆನಾಶಕವನ್ನು ಬೆರೆಸಿ ಸುಳಿಗೆ ಬೀಳುವಂತೆ ಸಿಂಪಡಿಸಬೇಕು ಅಥವಾ 0.2 ಗ್ರಾಂ. ಇಮಾಮೆಕ್ಟಿನ್ ಬೆಂಝೋಯೇಟ್ ಅಥವಾ 0.5 ಮಿ.ಲೀ. ಸ್ಪೈನೋಟಿರ್ಯಾಮ್ ಅಥವಾ 0.2 ಮಿ.ಲೀ. ಕ್ಲೋರ್ಯಾಂಟ್ರಿನಿ ಲಿಪ್ರೋಲ್ ಕೀಟನಾಶಕವನ್ನು ಸುಳಿಗೆ ಬೀಳುವಂತೆ ಸಿಂಪಡಿಸುವುದು ಸೂಕ್ತವಾಗಿದೆ. ಮತ್ತು ಒಂದೊಂದೇ ಸಾಲು ಹಿಡಿದು ಸಿಂಪರಣೆ ಮಾಡಿದಲ್ಲಿ ಕೀಟದ ನಿರ್ವಹಣೆಯು ಹೆಚ್ಚು ಪರಿಣಾಮಕಾರಿಯಾಗುತ್ತದೆ.
ಗೋವಿನಜೋಳದ ಬೆಳೆಯು ಹಳದಿಯಾದಲ್ಲಿ ಪ್ರತಿ ಲೀಟರ್ ನೀರಿಗೆ 4 ಮಿ.ಲೀ. ನೀರಿನಲ್ಲಿ ಕರಗುವ ನ್ಯಾನೋಯೂರಿಯಾವನ್ನು ಬೆರೆಸಿ ಸಾರಜನಕ ಪೋಷಕಾಂಶವನ್ನು ಎಲೆಗಳ ಮೂಲಕ ಒದಗಿಸಬೇಕು. ಮಳೆ ನಿಂತು ಭೂಮಿ ಹದ ಬಂದಕೂಡಲೇ ಎಡೆಕುಂಟೆ ಹೊಡೆಯಲು ಪ್ರಥಮ ಆಧ್ಯತೆ ನೀಡಬೇಕು. ಕಳೆನಾಶಕ ಬಳಸುವುದಾದಲ್ಲಿ ಸಮೀಪದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ಮಾಹಿತಿ ಪಡೆಯುವುದು ಸೂಕ್ತ.
ಕಬ್ಬಿನ ಬೆಳೆ; ತುಕ್ಕುರೋಗದ ಬಾಧೆ ಕಂಡುಬಂದಿದೆ. ಈ ರೋಗವನ್ನು ನಿಯಂತ್ರಿಸಲು ಕಬ್ಬಿನ ಬೆಳೆಯಲ್ಲಿ ಗಾಳಿಯಾಡುವಂತೆ ವ್ಯವಸ್ಥೆ ಮಾಡಬೇಕು. ರಾಸಾಯನಿಕ ಗೊಬ್ಬರಗಳ ಅದರಲ್ಲೂ ಸಾರಜನಕಯುಕ್ತ ರಸಗೊಬ್ಬರಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು.
ಪ್ರತಿ ಲೀಟರ್ ನೀರಿಗೆ 1 ಮಿ.ಲೀ. ಹೆಕ್ಸಾಕೋನಾಝೋಲ್ ಅಥವಾ 1 ಮಿ.ಲೀ. ಪ್ರೊಪಿಕೋನಾಝೋಲ್ ಅಥವಾ 1 ಮಿ.ಲೀ. ಟೆಬ್ಯುಕೋನಾಝೋಲ್ ಅಥವಾ 0.5 ಗ್ರಾಂ. ಟೆಬ್ಯುಕೋನಾಝೋಲ್ ಹಾಗೂ ಟ್ರಿಫ್ಲಾಕ್ಸಿಸ್ಟ್ರೋಬಿನ್ (ನೇಟಿವೋ) ಸಂಯುಕ್ತ ಶಿಲೀಂದ್ರನಾಶಕವನ್ನು ಸಿಂಪರಣೆ ಮಾಡಬೇಕು ಇದರಿಂದ ಕಬ್ಬಿನ ಬೆಳೆಯ ತುಕ್ಕುರೋಗವನ್ನು ನಿಯಂತ್ರಿಸಬಹುದಾಗಿದೆ.












Click it and Unblock the Notifications