ಪುಷ್ಪ ಕೃಷಿಯಿಂದ ಲಾಭಗಳಿಸಿದ ಕೊಪ್ಪಳ ರೈತ
ಕೊಪ್ಪಳ, ಆಗಸ್ಟ್ 14 : ತೋಟಗಾರಿಕೆ ಇಲಾಖೆ ವತಿಯಿಂದ ಸಹಾಯಧನ ಸೌಲಭ್ಯ ಪಡೆದು ಪುಷ್ಪ ಕೃಷಿಯಿಂದ ಆರ್ಥಿಕ ಅಭಿವೃದ್ಧಿ ಹೊಂದಿರುವ, ಕೊಪ್ಪಳ ಜಿಲ್ಲೆಯ ನವಲಿ ಗ್ರಾಮದ ರೈತ ಬಸವರಾಜ ಬೋಳಾಡೆಪ್ಪ ಅವರು ಇತರ ರೈತರಿಗೆ ಮಾದರಿಯಾಗಿದ್ದಾರೆ.
ನವಲಿ ಗ್ರಾಮದ ಬಸವರಾಜ ಈರಪ್ಪ ಬೋಳಾಡೆಪ್ಪ ಅವರು ಕಳೆದ ಹಲವಾರು ವರ್ಷಗಳಿಂದ ಕೃಷಿ ಮಾಡುತ್ತಿದ್ದಾರೆ. ಕೃಷಿ ಬೆಳೆಗಳಾದ ಶೇಂಗಾ, ಮೆಕ್ಕೆ ಜೋಳ ಬೆಳೆಯುತ್ತಾರಲ್ಲದೇ, ತೋಟಗಾರಿಕೆ ಬೆಳೆಗಳಾದ ತರಕಾರಿಗಳನ್ನು ಬೆಳೆಯುತ್ತಾ ಬಂದಿದ್ದಾರಾದರೂ ಹೆಚ್ಚಿನ ಲಾಭ ಗಳಿಸಿರಲಿಲ್ಲ.
ರೈತರ ಸಾಲ ಮನ್ನಾ ಯಾರಿಗೆ ಸಿಗುತ್ತೆ, ಯಾರಿಗೆ ಸಿಗಲ್ಲ? ಇಲ್ಲಿದೆ ವಿವರ
ತರಕಾರಿಗಳಿಂದ ಲಾಭ ಗಳಿಸಿದ್ದರೂ ಬೆಲೆ ಕುಸಿತ, ಮಾರುಕಟ್ಟೆಯ ಏರು ಪೇರಿನಿಂದಾಗಿ ಲಾಭದಾಯಕ ಆದಾಯ ಬಂದಿರಲಿಲ್ಲ. ತೋಟಗಾರಿಕೆ ಇಲಾಖೆ ಜೊತೆ ಸತತ ಸಂಪರ್ಕ ಇಟ್ಟುಕೊಂಡಿರುವ ರೈತ ಬಸವರಾಜ ಅವರು ಹೊಸದೇನಾದರೂ ಬೆಳೆಯಿಂದ ಹೆಚ್ಚಿನ ಲಾಭ ಮಾಡಿಕೊಳ್ಳುವ ಬಗ್ಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ದುರ್ಗಾಪ್ರಸಾದ ರೊಡನೆ ಚರ್ಚೆ ನಡೆಸಿದ್ದರು.
ಬಿಡಿ ಹೂವಿನ ಬೆಳೆಗಳಿಗೆ ಇಲಾಖೆಯಲ್ಲಿ ಸಹಾಯಧನ ಇರುವುದನ್ನು ಅರಿತುಕೊಂಡರು. ಪುಷ್ಪ ಕೃಷಿಗೆ ಕೈ ಹಾಕಿದರು. ಕಡಿಮೆ ನಿರ್ವಹಣೆ, ಹೆಚ್ಚು ಲಾಭ ತರುವ ಬಹುವಾರ್ಷಿಕ ಪುಷ್ಪ ಬೆಳೆಯಾದ ಕಾಕಡ ಜಾತಿಯ ಮಲ್ಲಿಗೆ ಬೆಳೆಯನ್ನು ಬೆಳೆಯಲು ನಿರ್ಧರಿಸಿದರು.
ಸಹಕಾರಿ ಬ್ಯಾಂಕ್ ಸಾಲ ಮನ್ನಾ: ಷರತ್ತುಗಳು ಅಷ್ಟು ಸಲೀಸಲ್ಲ!
ಸಹಾಯಕ ತೋಟಗಾರಿಕೆ ಅಧಿಕಾರಿ ಶಿವಕುಮಾರ ಗಾಂಜಿ ಹಾಗೂ ತಾಂತ್ರಿಕ ಅಧಿಕಾರಿ ಅಜರುದ್ದೀನ ಅವರ ಸಲಹೆಯಂತೆ 6*4 ಅಡಿ ಅಂತರದಲ್ಲಿ ನಾಟಿ ಮಾಡಿ ಅದಕ್ಕೆ ಆಧುನಿಕ ಪದ್ಧತಿಯಾಗಿ ಹನಿ ನೀರಾವರಿ ಅಳವಡಿಸಿಕೊಂಡಿದ್ದು ವಿಶೇಷ.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿ ಶೇ.90 ರಷ್ಟು ಸಹಾಯಧನ ಪಡೆದಿದ್ದಾರೆ. ಒಟ್ಟಾರೆಯಾಗಿ ತಮ್ಮ 1 ಎಕರೆ (35ಗುಂಟೆ ಮಾತ್ರ) ಜಮೀನಿನಲ್ಲಿ 2015-16 ನೇ ಸಾಲಿನಲ್ಲಿ ಸುಮಾರು 1000 ಕ್ಕೂ ಹೆಚ್ಚಿನ ಸಂಖೆಯಲ್ಲಿ ಕಾಕಡ ಮಲ್ಲಿಗೆ ಸಸಿಗಳನ್ನು ತಮಿಳುನಾಡಿನಿಂದ ಖರೀದಿಸಿ ನಾಟಿ ಮಾಡಿದ್ದಾರೆ.
ಪ್ರತಿ ಕೆ.ಜಿ. ಗೆ ಸರಾಸರಿ ರೂ. 150 ರಂತೆ ದರ ದೊರೆತಿದೆ. ಈ ರೀತಿ ತೋಟಗಾರಿಕೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪುಷ್ಪ ಕೃಷಿ ಕೈಗೊಂಡ ಬಸವರಾಜರವರಿಗೆ 2017-18 ರಲ್ಲಿ ಒಟ್ಟು ಲಾಭ 3 ಲಕ್ಷ ರೂ. ಆದಾಯ ಬಂದಿದೆ.
'ಒಂದು ವರ್ಷದಲ್ಲಿ ಒಂದೇ ಬೆಳೆಯಿಂದ ಇಷ್ಟೊಂದು ಆದಾಯ ನಿರೀಕ್ಷಿಸಿರಲಿಲ್ಲ. ನನ್ನ ನಾಲ್ಕು ಎಕರೆ ಜಮೀನಿನಲ್ಲಿ ತರಕಾರಿ ಜೊತೆಗೆ ಅನೇಕ ಬೆಳೆಗಳನ್ನು ಬೆಳೆಯುತ್ತಿದ್ದೇನೆ. ಇದೆಲ್ಲ ನನ್ನ ಖರ್ಚು ನೀಗಿಸುವುದಕ್ಕೆ ಮಾತ್ರವಾಗಿದೆ. ಕಾಕಡ ಮಲ್ಲಿಗೆಯಿಂದ ನನಗೆ ಉತ್ತಮ ಆದಾಯ ಬಂದಿದೆ' ಎನ್ನುತ್ತಾರೆ. ರೈತ ಬಸವರಾಜ ಈರಪ್ಪ ಬೋಳಾಡೆಪ್ಪ.
ತೋಟಗಾರಿಕೆ ವಿಷಯ ತಜ್ಞರು ರೈತರ ತೋಟಕ್ಕೆ ಭೇಟಿ ನೀಡಿದಾಗ ಮೈಟ್ನುಸಿ ಕಾಣಿಸಿಕೊಂಡಿತ್ತು. ಇದರ ನಿಯಂತ್ರಣಕ್ಕೆ ಸಲಹೆ ನೀಡಿದ ವಾಮನಮೂರ್ತಿ ಅವರು ಇತರೇ ಪುಷ್ಪಗಳಾದ ಕನಕಾಂಬರ, ಸುಗಂಧರಾಜ ಬೆಳೆದು ಹೆಚ್ಚಿನ ಆದಾಯ ಪಡೆಯಲು ಸಲಹೆ ನೀಡಿದ್ದರು.
ಪುಷ್ಪ ಕೃಷಿಯಲ್ಲಿ ಸಾಧನೆ ಮಾಡಿ, ಇತರ ರೈತರಿಗೆ ಮಾದರಿಯಾಗಿದ್ದಾರೆ ರೈತ ಬಸವರಾಜರವರು. ಕಡಿಮೆ ನೀರಿದ್ದರೂ ಹನಿ ನೀರಾವರಿ ಅಳವಡಿಸಿಕೊಂಡು ಉತ್ತಮವಾದ ಆದಾಯ ಪಡೆದಿದ್ದಾರೆ.