ಹುಬ್ಬಳ್ಳಿಯಲ್ಲಿ ಬೆಳೆ ಹಾನಿಗೆ ಸರ್ಕಾರ ನೀಡಿದ ಪರಿಹಾರ ಬರೋಬ್ಬರಿ 1 ರೂ.!
ಹುಬ್ಬಳ್ಳಿ, ಜೂನ್ 9: ಮಳೆ ಕೊರತೆಯಿಂದ ಸತತ ಬರಗಾಲದಿಂದ ಬೇಸತ್ತಿರುವ ಧಾರವಾಡ ಜಿಲ್ಲೆಯ ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಅದೆಷ್ಟೋ ಕುಟುಂಬಗಳು ಉದ್ಯೋಗಕ್ಕಾಗಿ ಊರು ತೊರೆದಿವೆ. ಇಷ್ಟಾದರೂ ಕೇವಲ ಪರಿಹಾರದ ಭರವಸೆಯಲ್ಲಿ ದಿನಕಳೆಯುತ್ತಿರುವ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದತ್ತ ಬೆರಳು ಮಾಡುತ್ತಿರುವುದು ಈಗ ಹೊಸದೇನಲ್ಲ.
ಇದರ ಮಧ್ಯೆಯೂ ಸ್ವಾವಲಂಬಿ ಜೀವನ ನಡೆಸುತ್ತಿರುವ ರೈತರಿಗೆ ರಾಜ್ಯ ಸರ್ಕಾರ ಬೆಳೆ ಪರಿಹಾರ ರೂಪದಲ್ಲಿ ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ಕೆಲ ರೈತರ ಖಾತೆಗಳಿಗೆ ಕೇವಲ 1/-, 10/-, 70/-, 130/- ರೂಪಾಯಿಗಳನ್ನು ಜಮೆ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆದಿದೆ![ಹುಬ್ಬಳ್ಳಿಯಲ್ಲಿ ಎಮ್ಮೆಯೊಂದಿಗೆ ಪ್ರತಿಭಟನೆ, ಮರ ಏರಿದ ಹೋರಾಟಗಾರ]
ಹೌದು, 2016 ರಲ್ಲಿ ಮುಂಗಾರು ವಿಫಲವಾಗಿದ್ದರಿಂದ ಸರ್ಕಾರ ಧಾರವಾಡ ತಾಲೂಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಿತ್ತು. ಅದರಂತೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಂದ ತಾಲೂಕಿನಾದ್ಯಂತ ಬೆಳೆ ಹಾನಿ ಸಮೀಕ್ಷೆಯನ್ನೂ ಆರಂಭಿಸಿತ್ತು. ಇದರ ಭಾಗವಾಗಿ ಇತ್ತೀಚೆಗೆ ಬೆಳೆ ಪರಿಹಾರದ ರೂಪದಲ್ಲಿ ತಾಲೂಕಿನ ಹಾರೋಬೆಳವಡಿ ಗ್ರಾಮದ ರೈತ ಸಂಗನಗೌಡ ಕಡ್ಲಿ ಅವರ ಖಾತೆ ಕೇವಲ 1/- ರೂಪಾಯಿ ಜಮೆ ಮಾಡಿದೆ![ಸಾಲಮನ್ನಾ ನೆಪದಲ್ಲಿ ಬ್ಯಾಂಕ್ ದರೋಡೆ ಯತ್ನ: ಹುಬ್ಬಳ್ಳಿಯಲ್ಲಿ ಇಬ್ಬರ ಬಂಧನ]
ಇದು ಕೇವಲ ಸಂಗನಗೌಡ ಅವರ ಕಥೆ ಅಲ್ಲ. ತಾಲೂಕಿನ ಹಲವು ರೈತರ ಖಾತೆಗಳಿಗೂ ಇದೇ ರೀತಿ ಅತೀ ಕಡಿಮೆ ಹಣ ಜಮೆಯಾಗಿದೆ. 10/-, 70/-, 130 /- ಹೀಗೆ ಸಣ್ಣ ಮೊತ್ತದ ಹಣವನ್ನು ಜಿಲ್ಲಾಡಳಿತ ಬೆಳೆ ಪರಿಹಾರ ರೂಪದಲ್ಲಿ ರೈತರ ಖಾತೆಗಳಿಗೆ ಜಮೆ ಮಾಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.[ಜನೌಷಧ ಕೇಂದ್ರ ಘಟಕ ಸ್ಥಾಪಿಸಲು ಹುಬ್ಬಳ್ಳಿಯನ್ನು ಗುರುತಿಸಿದ ಕೇಂದ್ರ]

ಬ್ಯಾಂಕ್ ಅಧಿಕಾರಿಗಳ ಪ್ರತಿಕ್ರಿಯೆ
ಈ ಕುರಿತು ಬ್ಯಾಂಕಿನ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಇದು ನಮ್ಮಿಂದ (ಬ್ಯಾಂಕಿನಿಂದ) ಆಗಿರುವ ಸಮಸ್ಯೆ ಅಲ್ಲ, ಜಿಲ್ಲಾಡಳಿತ ಎಷ್ಟು ಬಿಡುಗಡೆ ಮಾಡಿರುತ್ತದೆಯೋ ಅಷ್ಟನ್ನ ಸಂಬಂಧಿಸಿದ ಖಾತೆಗೆ ಜಮಾ ಮಾಡುವುದಷ್ಟೇ ಬ್ಯಾಂಕಿನವರ ಜವಾಬ್ದಾರಿ ಎಂದು ಸಬೂಬು ನೀಡಿದ್ದಾರೆ!

15 ರೈತರಿಗೆ ಕಡಿಮೆ ಮೊತ್ತ ಜಮೆ
ಬೆಳೆ ಪರಿಹಾರದ ರೂಪದಲ್ಲಿ ಕೆಲ ರೈತರ ಖಾತೆಗಳಿಗೆ ಜಮೆಯಾಗಿರುವ ಕಡಿಮೆ ಮೊತ್ತ ಕುರಿತು ಕಂದಾಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಪರಿಶೀಲಿಸುವ ಭರವಸೆ ಸಿಕ್ಕಿದೆಯೇ ವಿನಃ, ಈವರೆಗೂ ಪರಿಹಾರವಾಗಿಲ್ಲ. ಅಲ್ಲದೆ ಮೂಲಗಳ ಪ್ರಕಾರ ಹಾರೋಬೆಳವಡಿ ಗ್ರಾಮದ ಮಡಿವಾಳಪ್ಪ ಏಣಗಿ, ಈರನಗೌಡ ಸಿದ್ಧನಗೌಡ್ರ, ರುದ್ರಪ್ಪ ಮದ್ವಾಣಿ, ಮಾನಪ್ಪ ಪತ್ತಾರ ಸೇರಿದಂತೆ ಒಟ್ಟು 15 ರೈತರ ಖಾತೆಗಳಿಗೆ ಕಡಿಮೆ ಮೊತ್ತದ ಬೆಳೆ ಪರಿಹಾರ ಜಮೆಯಾಗಿರುವುದು ತಿಳಿದು ಬಂದಿದೆ.

1 ರೂ. ಪರಿಹಾರ!
'ಪ್ರತಿ ಹೇಕ್ಟರ್ ಬೆಳೆ ಹಾನಿಗೆ 6800 ರೂ. ಬೆಳೆ ಪರಿಹಾರ ಎಂದು ಸರ್ಕಾರವೇ ನಿಗದಿ ಮಾಡಿದೆ. ಆದರೆ ಕೇವಲ 1/- ರೂಪಾಯಿ ಬೆಳೆ ಪರಿಹಾರ ಪಡೆಯುವಷ್ಟು ಜಮೀನು ಹಾಗೂ ಬೆಳೆ ಹಾನಿ ಸಂಭವಿಸಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರ ಪರಿಸ್ಥಿತಿ ಹದಗೆಟ್ಟಿದೆ' ಎಂದು ಸಂಗನಗೌಡ ಕಡ್ಲಿ ವ್ಯಂಗ್ಯವಾಗಿ ಆರೋಪಿಸಿದ್ದಾರೆ!

ತಾಂತ್ರಿಕ ದೋಷ ಕಾರಣವೇ?
ಈ ಕುರಿತು ಕಂದಾಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಇದಕ್ಕೆ ತಾಂತ್ರಿಕ ದೋಷ ಕಾರಣವಾಗಿದೆ. ಈ ಮೊದಲು ರೈತರಿಗೆ ಚೆಕ್ ಮೂಲಕ ಬೆಳೆ ಪರಿಹಾರ ವಿತರಿಸಲಾಗುತ್ತಿತ್ತು. ಆದರೆ, ಈಗ ಸರ್ಕಾರ 'ಪರಿಹಾರ' ಎಂಬ ಹೊಸ ತಂತ್ರಾಂಶವನ್ನು ಅಭಿವೃದ್ಧಿಗೊಳಿಸಿದ್ದು, ಇದರ ಮೂಲಕವೇ ಬೆಳೆ ಪರಿಹಾರದ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಅದಕ್ಕೂ ಮೊದಲು ರೈತನ ಜಮೀನು, ಬೆಳೆ ಹಾನಿ ಪ್ರಮಾಣ ಸೇರಿದಂತೆ ಸಮಗ್ರ ವಿವರಗಳನ್ನು ಈ ತಂತ್ರಾಂಶದ ಮೂಲಕ ಸರ್ಕಾರಕ್ಕೆ ಒದಗಿಸಬೇಕು. ಈ ಪ್ರಕ್ರಿಯೆಯಲ್ಲಿ ತಾಂತ್ರಿಕ ದೋಷ ಉಂಟಾಗಿರುವ ಕಾರಣ ಕೆಲ ರೈತರಿಗೆ ಬೆಳೆ ಪರಿಹಾರ ರೂಪದಲ್ಲಿ ಕಡಿಮೆ ಮೊತ್ತ ಜಮೆಯಾಗಿದೆ ಎಂಬುದು ಅಧಿಕಾರಿಗಳ ಸ್ಪಷ್ಟನೆ.

ಗಣ್ಯರು ಏನಂತಾರೆ?
ಈ ಕುರಿತು ಪ್ರತಿಕ್ರಿಯೆ ನೀಡಿರುವ ತಹಶೀಲ್ದಾರ್ ಪ್ರಕಾಶ್ ಕುದರಿ, ರೈತರ ಖಾತೆಗೆ ಬೆಳೆ ಪರಿಹಾರ ರೂಪದಲ್ಲಿ ಅತಿ ಕಡಿಮೆ ಮೊತ್ತ ಜಮೆಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ಹಣ ವರ್ಗಾವಣೆ ಪ್ರಕ್ರಿಯೆ ಆನ್ಲೈನ್ ನಲ್ಲಿ ಇರುವುದುರಿಂದ ತಾಂತ್ರಿಕ ತೊಂದರೆಯಾಗಿದೆ. ಕೂಡಲೇ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
'ಈ ಕುರಿತು ನನಗೆ ಮಾಹಿತಿ ಇಲ್ಲ. ಸಂಬಂಧಿಸಿದ ತಾಲೂಕಿನ ತಹಶೀಲ್ದಾರ್ ಅವರನ್ನು ವಿಚಾರಿಸಿ ಸಮಸ್ಯೆ ಪರಿಹರಿಸಲಾಗುವುದು. ಆಗಿರುವ ಲೋಪವನ್ನು ಸರಿಪಡಿಸಲು ಪರಿಹಾರ ಕ್ರಮಗಳಿದ್ದು, ರೈತರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು' ಎಂದು ಉಪವಿಭಾಗಾಧಿಕಾರಿ ಮಹೇಶ್ ಕರ್ಜಗಿ ಮನವಿ ಮಾಡಿದರು.












Click it and Unblock the Notifications