ಫಸಲ್ ಭೀಮಾ ಯೋಜನೆಯಡಿ ತೋಟಗಾರಿಕೆ ಬೆಳೆ ವಿಮೆ ನೋಂದಣಿ ಆರಂಭ
ಬಳ್ಳಾರಿ, ಜೂನ್. 26: ತೋಟಗಾರಿಕೆ ಇಲಾಖೆಯಿಂದ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆ ಅನುಷ್ಠಾನಗೊಳಿಸಲು ರೈತರು ಬೆಳೆ ವಿಮೆ ನೋಂದಣಿ ಮಾಡಿಸಲು ಸೂಚನೆ ನೀಡಲಾಗಿದೆ. ಬೆಳೆ ವಿಮೆ ಯೋಜನೆಗೆ ನೋಂದಾಯಿಸಿಕೊಳ್ಳಲು ಜುಲೈ 31 ಕೊನೆಯ ದಿನವಾಗಿದೆ.
ಬಳ್ಳಾರಿ, ಕುರುಗೋಡು ಮತ್ತು ಕಂಪ್ಲಿ ತಾಲ್ಲೂಕುಗಳ ಹೋಬಳಿ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೆಂಪು ಮೆಣಸಿನಕಾಯಿ (ನೀರಾವರಿ) ಬೆಳೆ ಬೆಳೆಯಲಾಗಿದ್ದು, ರೈತರಿಂದ ಬೆಳೆ ವಿಮೆ ನೋಂದಣಿ ಮಾಡಿಕೊಳ್ಳಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ರತ್ನ ಯರಗಲ್ಲ ತಿಳಿಸಿದ್ದಾರೆ.

ಕೆಂಪು ಮೆಣಸಿನಕಾಯಿ (ನೀರಾವರಿ) ಬೆಳೆಯಾಗಿದ್ದು, ವಿಮಾ ಮೊತ್ತ ಪ್ರತಿ ಎಕರೆಗೆ ರೂ.43,505 ರೂಪಾಯಿಯಿದೆ. ರೈತರ ವಿಮಾ ಕಂತು (ಪ್ರತಿ ಎಕರೆಗೆ) ರೂ.2,175 ಆಗಿದೆ. ಪಿಪ್ರಧಾನ ಮಂತ್ರಿ ಫಸಲ್ ಭೀಮಾ ವಿಮಾ (ಪರಿಷ್ಕೃತ) ಮಾರ್ಗಸೂಚಿಯನ್ವಯ ಬ್ಯಾಂಕಿನಲ್ಲಿ ಬೆಳೆ ಸಾಲ ಮಂಜೂರಾದ ಎಲ್ಲಾ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಡಿ ಒಳಪಡಿಸಲಾಗುತ್ತದೆ.
ಬೆಳೆ ಸಾಲ ಪಡೆದ ರೈತರು ಈ ಯೋಜನೆಯಡಿ ಭಾಗವಹಿಸಲು ಇಚ್ಛಿಸದಿದ್ದಲ್ಲಿ ಈ ಕುರಿತು ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿಯ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರ ನೀಡಬೇಕು. ಅಂತಹ ರೈತರನ್ನು ಬೆಳೆ ವಿಮೆ ನೋಂದಣಿ ಯೋಜನೆಯಿಂದ ಕೈಬಿಡಲಾಗುವುದು.

ಶೇ.75 ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡರೆ ವಿಮಾ ಗರಿಷ್ಟ ಶೇ.25 ರಷ್ಟು ಪರಿಹಾರ ನಿಡಲಾಗುತ್ತದೆ. ವಿಮಾ ಸಂಸ್ಥೆಯು ವಿಮಾ ಮಾಡಿಸಿದ ಎಲ್ಲಾ ರೈತರಿಗೆ ಇತ್ಯರ್ಥಪಡಿಸಿ ಮುಂದಿನ ಅವಧಿಗೆ ಅವರ ಬೆಳೆ ವಿಮೆ ರದ್ದುಪಡಿಸಲಾಗುವುದು. ಜುಲೈ 31ರ ಒಳಗೆ ರೈತರು ಬೆಳೆ ವಿಮೆ ಯೋಜನೆಗೆ ನೋಂದಾಯಿಸಿಕೊಳ್ಳಬೇಕು.
ತೋಟಗಾರಿಕೆ ಇಲಾಖೆ; ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
ತೋಟಗಾರಿಕೆ ಇಲಾಖೆ ವತಿಯಿಂದ ಪ್ರಸ್ತಕ ಸಾಲಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ ಮೆಗಾ ಮೈಕ್ರೋ ಯೋಜನೆಯಡಿ ಅಗ್ರಿ ಕಲ್ಚರಲ್ ಸಿಸ್ಟಮ್ ಅಭಿವೃದ್ಧಿ ಪಡಿಸಲು ಸಹಾಯಧನ ನೀಡಲು ಉದ್ದೇಶಿಸಿದೆ. ಹೀಗಾಗಿ ಅರ್ಹ ಬಳ್ಳಾರಿ, ಕುರುಗೋಡು ಮತ್ತು ಕಂಪ್ಲಿ ತಾಲ್ಲೂಕಿನ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದ ಅಡಿ ಮಾವು, ಸೀತಾಫಲ, ಸೀಬೆ, ಗೇರು, ಹುಣಸೆ, ನೇರಳೆ, ಬೆಣ್ಣೆ ಹಣ್ಣು, ಎಳೆ ನೀರು, ತೆಂಗಿನಕಾಯಿಗಳ ಪ್ರದೇಶ ವಿಸ್ತರಣೆ, ತರಕಾರಿ, ಹೂ ಬೆಳೆ ಪ್ರದೇಶ ವಿಸ್ತರಣೆ, ಜೀವಸಾರ ಘಟಕ ಸ್ಥಾಪನೆ, ಅರಣ್ಯ ಬೆಳೆ ಮುಂತಾದ ಘಟಕಗಳಿಗೆ ಸಹಾಯಧನವನ್ನು ನೀಡಲಾಗುತ್ತದೆ.
ಮೇಲಿನ ಎಲ್ಲಾ ಘಟಕಗಳನ್ನು ರೈತರು ತಮ್ಮ ತಾಕಿನಲ್ಲಿ ಕಡ್ಡಾಯವಾಗಿ ಅಳವಡಿಸಿಕೊಂಡಲ್ಲಿ ನಿಯಮಾನುಸಾರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸಹಾಯಧನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಅಥವಾ ದೂ.08392-278177 ಗೆ ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ರತ್ನ ಯರಗಲ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications