ಮುಂಗಾರು ಹಂಗಾಮು ಬೆಳೆ ವಿಮೆ; ನೋಂದಣಿಗೆ ಜುಲೈ 31 ಕೊನೆ ದಿನ
ಕೊಪ್ಪಳ, ಜೂನ್ 26; ಈ ಸಾಲಿನ ಮುಂಗಾರು ಹಂಗಾಮಿನ ಬೆಳೆವಿಮೆ ಯೋಜನೆಗೆ ರೈತರು ಹೆಸರು ನೋಂದಾಯಿಸುವಂತೆ ಕೊಪ್ಪಳ ಜಂಟಿ ಕೃಷಿ ನಿರ್ದೇಶಕರಾದ ಟಿ. ಎಸ್. ರುದ್ರೇಶಪ್ಪ ತಿಳಿಸಿದ್ದಾರೆ. ಹೆಸರು ನೋಂದಾಯಿಸಲು ಜುಲೈ 31 ಕೊನೆಯ ದಿನವಾಗಿದೆ.
2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆವಿಮೆ ಯೋಜನೆಯಡಿ ನೀರಾವರಿ ಹತ್ತಿ ಮತ್ತು ಮಳೆಯಾಶ್ರಿತ ಹೆಸರು ಬೆಳೆಗಳಿಗೆ ಬೆಳೆವಿಮೆಗೆ ಹೆಸರು ನೋಂದಾಯಿಸಲು ಜುಲೈ 15 ಹಾಗೂ ಇತರೆ ಎಲ್ಲಾ ಅಧಿಸೂಚಿತ ಬೆಳೆಗಳಿಗೆ ನೋಂದಾಯಿಸಲು ಜುಲೈ 31 ಕೊನೆಯ ದಿನವಾಗಿದೆ.

ಜಿಲ್ಲೆಯ ಎಲ್ಲಾ ರೈತ ಭಾಂಧವರು ಕೂಡಲೇ ಬೆಳೆವಿಮೆ ನೋಂದಾಯಿಸಿ, ಯೋಜನೆ ಲಾಭ ಪಡೆಯಬೇಕು ಎಂದು ಕರೆ ನೀಡಲಾಗಿದೆ. ಬೆಳೆವಿಮೆ ಮಾಡಿಸಿದಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ರೈತರಿಗೆ ನೆರವಿಗೆ ಬರಲಿದೆ. ಆದ್ದರಿಂದ ರೈತರು ನೋಂದಣಿ ಮಾಡಿಸಬೇಕು ಎಂದು ಮನವಿ ಮಾಡಲಾಗಿದೆ.
ಎಲ್ಲಿ ಮಾಹಿತಿ ಸಿಗಲಿದೆ?; ರೈತರು ಬೆಳೆ ವಿಮೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆಯಲು ಕೊಪ್ಪಳ ಜಿಲ್ಲೆಗೆ ಆಯ್ಕೆಯಾದ ಪ್ಯೂಚರ್ ಜನರಲ್ ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿಗಳನ್ನು ಸಂಪರ್ಕಿಸಬಹುದಾಗಿದೆ. ಈ ಕಂಪನಿಯ ಪ್ರತಿನಿಧಿಗಳು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಲ್ಲಿ ಲಭ್ಯವಿದ್ದು, ರೈತರಿಗೆ ಬೆಳೆವಿಮೆ ಯೋಜನೆಯ ಬಗ್ಗೆ ಮಾಹಿತಿ ನೀಡುತ್ತಾರೆ.
ತಾಲೂಕವಾರು ಕಂಪನಿಯ ಪ್ರತಿನಿಧಿಗಳಾದ ಕೊಪ್ಪಳ ತಾಲೂಕಿನ ಸತೀಶ ಸುರೊಜಿ 8861468340, ಕುಷ್ಟಗಿಯ ಸುನೀಲ್ ಇಟಿನಿ 7996453241, ಯಲಬುರ್ಗಾದ ಸಂಗಪ್ಪ ಬೆಣ್ಣಿ 9964397577, ಗಂಗಾವತಿಯ ವಿಶಾಲ್ ಹೆಚ್ 9008078851, ಕಾರಟಗಿಯ ಮಹೇಂದ್ರ ಎಸ್ 9590642324, ಕನಕಗಿರಿಯ ಚಂದ್ರಶೇಖರ 9611682356 ಹಾಗೂ ಕುಕನೂರು ತಾಲೂಕಿನ ಕಳಕಪ್ಪ 8497074017 ಇವರನ್ನು ಸಂಪರ್ಕಿಸಬಹುದಾಗಿದೆ.
ರೈತರು ಖುದ್ದಾಗಿ ತಾಲೂಕು ಕಚೇರಿಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ. ಪ್ಯೂಚರ್ ಜನರಲ್ ಇನ್ಸೂರೆನ್ಸ್ ಕಂಪನಿಯ ಕೊಪ್ಪಳ ಜಿಲ್ಲೆಯ ಪ್ರಧಾನ ಕಛೇರಿಯು ಬ್ಯಾಂಕ್ ಆಫ್ ಬರೋಡಾ ಪಕ್ಕದಲ್ಲಿ, ನಾಸವಾಲೆ ಬಿಲ್ಡಿಂಗ್, 1ನೇ ಮಹಡಿ, ಕೊಪ್ಪಳ. ಈ ವಿಳಾಸದಲ್ಲಿದೆ. ಜಿಲ್ಲೆಯ ರೈತ ಬಾಂಧವರು ನೇರವಾಗಿ ಬ್ಯಾಂಕ್ ಅನ್ನು ಸಹ ಸಂಪರ್ಕಿಸಬಹುದಾಗಿದೆ.
ಧಾರವಾಡ ಜಿಲ್ಲೆಗೆ ಯಾವ ಬೆಳೆಗಳು?; 2023ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಧಾರವಾಡ ಜಿಲ್ಲೆಯ 8 ತಾಲ್ಲೂಕಿನ ಎಲ್ಲಾ 14 ಹೋಬಳಿಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಆಸಕ್ತ ರೈತರು ಬೆಳೆ ವಿಮೆ ಪಡೆಯಲು ಕೃಷಿ ಇಲಾಖೆ ಕರೆ ನೀಡಿದೆ.
ಧಾರವಾಡ ಜಿಲ್ಲೆಯಲ್ಲಿ ಯೋಜನೆಯ ವ್ಯಾಪ್ತಿಗೆ ಭತ್ತ (ನೀ.), ಭತ್ತ (ಮ.ಆ.), ಮುಸುಕಿನ ಜೋಳ (ನೀ.), ಮುಸುಕಿನ ಜೋಳ (ಮ.ಆ.), ಜೋಳ(ಮ.ಆ.), ಸಾವೆ (ಮ.ಆ), ಉದ್ದು (ಮ.ಆ.), ತೊಗರಿ (ಮ.ಆ.), ಹೆಸರು (ಮ.ಆ.), ಸೋಯಾಅವರೆ (ಮ.ಆ.), ನೆಲಗಡಲೆ (ಶೇಂಗಾ) (ಮ.ಆ.), ನೆಲಗಡಲೆ (ಶೇಂಗಾ) (ನೀ.), ಹತ್ತಿ (ಮ.ಆ.), ಹತ್ತಿ (ನೀ.), ಈರುಳ್ಳಿ (ಮ.ಆ.), ಈರುಳ್ಳಿ (ನೀ.), ಆಲೂಗಡ್ಡೆ (ನೀ.), ಆಲೂಗಡ್ಡೆ (ಮ.ಆ.), ಟೊಮ್ಯಾಟೊ, ಕೆಂಪು ಮೆಣಸಿನಕಾಯಿ (ಮ.ಆ.) ಮತ್ತು ಕೆಂಪು ಮೆಣಸಿನಕಾಯಿ (ನೀ.) ಬೆಳೆಗಳು ಸೇರಿವೆ.
ಧಾರವಾಡ ಮತ್ತು ಅಳ್ನಾವರ ತಾಲ್ಲೂಕು ವ್ಯಾಪ್ತಿಗೆ ಭತ್ತ (ಮಳೆ ಆಶ್ರಿತ), ಕಲಘಟಗಿ ತಾಲ್ಲೂಕು ಭತ್ತ (ಮಳೆ ಆಶ್ರಿತ), ಮುಸುಕಿನಜೋಳ (ಮಳೆ ಆಶ್ರಿತ) ಹುಬ್ಬಳ್ಳಿ, ಹುಬ್ಬಳ್ಳಿ ನಗರ ತಾಲ್ಲೂಕುಗಳಿಗೆ ನೆಲಗಡಲೆ (ಶೇಂಗಾ) (ಮಳೆ ಆಶ್ರಿತ) ಕುಂದಗೋಳ ತಾಲ್ಲೂಕು ನೆಲಗಡಲೆ (ಶೇಂಗಾ) (ಮಳೆ ಆಶ್ರಿತ) ಮತ್ತು ಹತ್ತಿ (ಮಳೆ ಆಶ್ರಿತ) ನವಲಗುಂದ ಮತ್ತು ಅಣ್ಣಿಗೇರಿ ತಾಲೂಕು ಮುಸುಕಿನಜೋಳ (ಮಳೆಆಶ್ರಿತ), ಹೆಸರು (ಮಳೆ ಆಶ್ರಿತ) ಬೆಳೆಗಳನ್ನು ಪಟ್ಟಿ ಮಾಡಲಾಗಿದೆ.
ಬೆಳೆಸಾಲ ಪಡೆಯುವ ಹಾಗೂ ಪಡೆಯದ ರೈತರಿಗೆ, ಇತರೆ ಬೆಳೆಗಳಿಗೆ ಜುಲೈ 31 ಮತ್ತು ಕೆಂಪು ಮೆಣಸಿನಕಾಯಿ (ನೀರಾವರಿ ಹಾಗೂ ಮಳೆ ಆಶ್ರಿತ) ಬೆಳೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 16 ಕೊನೆಯ ದಿನವಾಗಿದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಎಸ್ಬಿಐ ಜನರಲ್ ಇನ್ಷ್ಯೂರೆನ್ಸ್ ಕಂಪನಿ, 2ನೇ ಮಹಡಿ, ಕಲಬುರ್ಗಿ ಹಾಲ್ ಮಾರ್ಕ, ಪಿಂಟೋ ರೋಡ್, ದೇಸಾಯಿ ಕ್ರಾಸ್ ದೇಶಪಾಂಡೆ ನಗರ, ಹುಬ್ಬಳ್ಳಿ, ಸ್ಥಳೀಯ ತೋಟಗಾರಿಕೆ ಇಲಾಖೆ, ಕಂದಾಯ, ಗ್ರಾಮೀಣ ಅಭಿವೃದ್ಧಿ, ಕೃಷಿ ಇಲಾಖೆ ಸಿಬ್ಬಂದಿಗಳನ್ನು ಸಂಪರ್ಕಿಸಬಹುದು.












Click it and Unblock the Notifications