ಕರಾವಳಿಯಲ್ಲಿ ಅತಿವೃಷ್ಠಿ, ಉಳಿದ ಕಡೆ ಅನಾವೃಷ್ಟಿ, 75 ತಾಲ್ಲೂಕುಗಳಲ್ಲಿ ಬರ
ಬೆಂಗಳೂರು, ಆಗಸ್ಟ್ 22: ರಾಜ್ಯದಲ್ಲಿ ಒಂದೆಡೆ ಅತಿಯಾದ ಮಳೆಯಿಂದಾಗಿ ಜನರು ಸಂಕಷ್ಟದಲ್ಲಿ ಸಿಲುಕಿದ್ದರೆ ಮತ್ತೊಂದು ಕಡೆ ಮಳೆ ಕೊರತೆಯಿಂದಾಗಿ ರೈತನು ಕಷ್ಟಗಳನ್ನು ಎದುರಿಸುತ್ತಿದ್ದಾರೆ.
ರಾಜ್ಯದ ಒಟ್ಟು 75 ತಾಲ್ಲೂಕುಗಳಲ್ಲಿ ಮಳೆ ಕೊರತೆ ಕಂಡು ಬಂದಿದ್ದು, ಬರ ಪೀಡಿತ ತಾಲ್ಲೂಕುಗಳನ್ನು ಗುರುತಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕುಮಾರಸ್ವಾಮಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಕಂದಾಯ, ಕೃಷಿ, ಹವಾಮಾನ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿರುವ ಮುಖ್ಯಮಂತ್ರಿಗಳು ಎಲ್ಲ ತಾಲ್ಲೂಕುಗಳಿಂದ ಮಾಹಿತಿ ತರಿಸಿಕೊಂಡು ಬರಪೀಡಿತ ತಾಲ್ಲೂಕುಗಳ ಘೋಷಣೆ ಮಾಡುವಂತೆ ಹೇಳಿದ್ದಾರೆ. ಈ ವರೆಗಿನ ಮಾಹಿತಿ ಪ್ರಕಾರ ರಾಜ್ಯದ 75 ತಾಲ್ಲೂಕು ಮಳೆಯ ಕೊರತೆ ಎದುರಿಸಿದೆ.

ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆ
ಕೊಡಗಿನಲ್ಲಿ ಅತಿಯಾದ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದರೆ, ಕರಾವಳಿಯ ಇತರ ಜಿಲ್ಲೆಗಳಲ್ಲಿ ಮಳೆಯಿಂದ ಜನಜೀವನ ಅಸ್ಥವ್ಯಸ್ಥಗೊಂಡಿದೆ. ಆದರೆ ರಾಜ್ಯದ ಒಳನಾಡು, ಉತ್ತರ ಕರ್ನಾಟಕದ ಕೆಲವು ತಾಲ್ಲೂಕುಗಳು, ಮಧ್ಯ ಕರ್ನಾಟಕದ ಕೆಲವು ತಾಲ್ಲೂಕಿನಲ್ಲಿ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದೆ ಬಿತ್ತನೆ ಕಾರ್ಯಕ್ಕೆ ಅಡ್ಡಿಯಾಗಿದೆ.

ಕರಾವಳಿಯಲ್ಲಿ ಮಾತ್ರವೇ ಮಳೆ
ಕರಾವಳಿ ಜಿಲ್ಲೆಯಲ್ಲಿ ಮಾತ್ರವೇ ಈ ಬಾರಿ ವಾಡಿಕೆಗಿಂತ ಹೆಚ್ಚಿಗೆ ಮಳೆ ಆಗಿದೆ. ಆದರೆ ರಾಜ್ಯದ ಉಳಿದ ಕೆಲ ಭಾಗಗಳಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆ ಆಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಉತ್ತರ ಒಳನಾಡಿನಲ್ಲಿ 305 ಮಿ.ಮೀ ವಾಡಿಕೆ ಮಳೆ ಆಗಬೇಕಿತ್ತು. ಆದರೆ 221 ಅಷ್ಟೆ ಮಳೆ ಆಗಿದೆ. 28% ಕಡಿಮೆ ಮಳೆ ಆಗಿದೆ.

74 ತಾಲ್ಲೂಕುಗಳಲ್ಲಿ ಮಳೆ ಕೊರತೆ
ಕಳೆದ ವರ್ಷ ಈ ಅವಧಿಯಲ್ಲಿ ಶೇ.27ರಷ್ಟು ಮಳೆ ಕೊರತೆಯಾಗಿತ್ತು. ರಾಜ್ಯದ 27 ತಾಲ್ಲೂಕು, 166 ಹೋಬಳಿಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದ ವರದಿಯಾಗಿದೆ. 74 ತಾಲ್ಲೂಕುಗಳ 299 ಹೋಬಳಿಗಳಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಿದೆ. 75 ತಾಲ್ಲೂಕು 317 ಹೋಬಳಿಗಳಲ್ಲಿ ಮಳೆ ಕೊರತೆ ಉಂಟಾಗಿದ್ದು, 15 ಹೋಬಳಿಗಳಲ್ಲಿ ಮಳೆಯ ತೀವ್ರ ಕೊರತೆ ಕಂಡುಬಂದಿದೆ. ಮುಂಗಾರು ಹಂಗಾಮಿನಲ್ಲಿ 74.69 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆಯಾಗಬೇಕಿತ್ತು. ಆದರೆ ಇದುವರೆಗೂ 53.83 ಲಕ್ಷ ಹೆಕ್ಟೇರ್ನಲ್ಲಿ ಮಾತ್ರ ಬಿತ್ತನೆಯಾಗಿದೆ.

ಬೆಂಗಳೂರು ನಗರ 30% ಮಳೆ ಕೊರತೆ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆ ಎದುರಿಸುತ್ತಿದೆ. ರಾಯಚೂರು ಶೇ.50, ವಿಜಯಪುರ ಶೇ.43, ಯಾದಗಿರಿ ಶೇ.40, ಗದಗ ಶೇ.36, ಬೆಂಗಳೂರು ನಗರ ಶೇ.30, ಬೀದರ್ ಶೇ.29, ಚಿಕ್ಕಬಳ್ಳಾಪುರ, ಕಲಬುರಗಿ, ಕೊಪ್ಪಳ ಶೇ.27ರಷ್ಟು , ಬಳ್ಳಾರಿ ಶೇ.26, ಬಾಗಲಕೋಟೆ, ಹಾವೇರಿ ಶೇ.23ರಷ್ಟು ಮಳೆ ಕೊರತೆಯನ್ನು ಎದುರಿಸುತ್ತಿವೆ.

ತಾಲ್ಲೂಕುಗಳಲ್ಲಿ ಮಳೆ ಕೊರತೆ
ದಕ್ಷಿಣ ಕರ್ನಾಟಕದ ಹೊಸಕೋಟೆ, ಚಿಂತಾಮಣಿ, ಶ್ರೀನಿವಾಸಪುರ, ಮಾಲೂರು, ಮುಳಬಾಗಿಲು, ಗುಡಿಬಂಡೆ, ಚಿಕ್ಕಬಳ್ಳಾಪುರ, ಕೊರಟಗೆರೆ, ಕುಣಿಗಲ್, ಕೋಲಾರ, ಬಂಗಾರಪೇಟೆ, ಆನೇಕಲ್, ಬಾಗೇಪಲ್ಲಿ, ಶಿಢ್ಲಘಟ್ಟ, ಬೆಂಗಳೂರು ಉತ್ತರ, ದಕ್ಷಿಣ, ಬೆಂಗಳೂರು ಪೂರ್ವ ತಾಲ್ಲೂಕುಗಳು ಕೂಡ ಮಳೆ ಕೊರತೆಯನ್ನು ಎದುರಿಸುತ್ತಿದ್ದು, ಬರದ ಛಾಯೆ ಆವರಿಸುವ ಸಾಧ್ಯತೆಗಳಿವೆ.












Click it and Unblock the Notifications