ಕರಾವಳಿಯಲ್ಲಿ ಬಿರುಗಾಳಿ ಸಹಿತ ಮಳೆ: ಧರೆಗುರುಳಿದ ಮರಗಳು
ಮಂಗಳೂರು, ಜುಲೈ.17: ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಭಾರೀ ಮಳೆ ಆರಂಭಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ ತಾಲೂಕಿನಾದ್ಯಂತ ಮಳೆ ಎಡೆಬಿಡದೆ ಸುರಿಯಲಾರಂಭಿಸಿದೆ. ಮಳೆಯ ಜೊತೆ ಜೊತೆಗೆ ಭಾರೀ ಗಾಳಿಯೂ ಬೀಸುತ್ತಿರುವ ಪರಿಣಾಮ ಹಲವು ಅಡಿಕೆ ತೋಟಗಳು ಧ್ವಂಸಗೊಂಡಿವೆ.
ಭಾರೀ ಗಾಳಿ ಮಳೆಯಿಂದಾಗಿ ಸಾವಿರಾರು ಅಡಿಕೆ ಮರಗಳು ತುಂಡಾಗಿ ಬಿದ್ದಿದ್ದು, ಅಡಿಕೆ ಕೃಷಿಕರಿಗೆ ಭಾರೀ ನಷ್ಟ ಉಂಟಾಗಿದೆ. ಅದಲ್ಲದೆ ಭಾರೀ ಗಾಳಿ ಬೀಸುತ್ತಿರುವ ಕಾರಣ ಬೆಳ್ಳಾರೆ ಮೊದಲಾದ ಕಡೆಗಳಲ್ಲಿ ವಿದ್ಯುತ್ ಕಂಬಗಳು ತುಂಡಾಗಿ ಬಿದ್ದು ವಿದ್ಯುತ್ ಸಂಪರ್ಕದಲ್ಲೂ ಅಡಚಣೆಯುಂಟಾಗಿದೆ.

ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವ ಹಿನ್ನಲೆಯಲ್ಲಿ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಸ್ತೆಯ ಹೊಸ್ಮಠ ಸೇತುವೆ ಮತ್ತೆ ಮುಳುಗಡೆಯಾಗಿದೆ. ಇದರಿಂದಾಗಿ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆಯಾಗಿದ್ದು, ಈ ಭಾಗದ ಜನ ಪರ್ಯಾಯ ರಸ್ತೆ ಅವಲಂಬಿಸುವಂತಾಗಿದೆ.

ಭಾರೀ ಮಳೆ ಗಾಳಿಯಿಂದಾಗಿ ಮಂಗಳೂರು ಹೊರವಲಯದ ವಾಮಂಜೂರು ,ಅಡ್ಯಾರ್ , ಕೆತ್ತಿಕಲ್ , ಪರಾರಿ ಪ್ರದೇಶದಲ್ಲೂ ಮರಗಳು ಧರೆಗುರುಳಿದ ಪರಿಣಾಮ ಹಲವಾರು ವಿದ್ಯುತ್ ಕಂಬಗಳು ತುಂಡಾಗಿವೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕಕ್ಕೆ ತಡೆಯುಂಟಾಗಿದೆ. ಕೆಲವೆಡೆ ಅಂಗಡಿ ಮಳಿಗೆಗಳ ಮೇಲೆ ಮರಗಳು ಉರುಳಿರುವ ಪರಿಣಾಮ ಅಪಾರ ಹಾನಿ ಸಂಭವಿಸಿದೆ.












Click it and Unblock the Notifications