ರೈತರನ್ನು ಉದ್ದೇಶಿಸಿ ಇಂದು ಪ್ರಧಾನಿ ಮೋದಿ ಭಾಷಣ
ನದೆವಹಲಿ, ಡಿಸೆಂಬರ್ 18: ರೈತರ ಜತೆಗೆ ಮಾತುಕತೆ ನಡೆಸುವಂತೆ ಸುಪ್ರೀಂಕೋರ್ಟ್ ಹೇಳಿದ ಬೆನ್ನಲ್ಲೇ ಕೇಂದ್ರ ಸರ್ಕಾರವು ಪ್ರತಿಭಟನಾನಿರತ ರೈತರನ್ನು ತಲುಪುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಅದರ ಭಾಗವಾಗಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಎಂಟು ಪುಟಗಳ ಸುದೀರ್ಘ ಪತ್ರವನ್ನು ರೈತರಿಗೆ ಬರೆದಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಿಯೂಷ್ ಗೋಯಲ್, ನಿರ್ಮಲಾ ಸೀತಾರಾಮನ್, ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ ಅವರೊಂದಿಗೆ ನಡೆದ ಸಭೆಯ ಬಳಿಕ ತೋಮರ್ ಅವರು ಈ ಪತ್ರವನ್ನು ಬಿಡುಗಡೆ ಮಾಡಿದ್ದಾರೆ.
ಈ ಪತ್ರವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, 'ರೈತ ಸಹೋದರರು ಮತ್ತು ಸಹೋದರಿಯರಿಗೆ ವಿನಮ್ರ ಮಾತುಕತೆಯ ಪ್ರಯತ್ನ ನಡೆಸುವ ವಿಚಾರವಾಗಿ ನರೇಂದ್ರ ಸಿಂಗ್ ತೋಮರ್ ಅವರು ತಮ್ಮ ಭಾವನೆಗಳನ್ನು ಪತ್ರ ಮುಖೇನ ವ್ಯಕ್ತಪಡಿಸಿದ್ದಾರೆ. ಎಲ್ಲ ಇದನ್ನು ಓದಬೇಕು ಎಂದು ಮನವಿ ಮಾಡುತ್ತೇನೆ. ಇದನ್ನು ಸಾಧ್ಯವಾದಷ್ಟು ಹೆಚ್ಚು ಜನರಿಗೆ ತಲುಪುವಂತೆ ದೇಶದ ಜನರು ಮಾಡಿ ಎಂದು ಕೋರುತ್ತೇನೆ' ಎಂದು ಮೋದಿ ಹೇಳಿದ್ದಾರೆ.

ಈ ನಡುವೆ ಮೋದಿ ಅವರು ಮಧ್ಯಪ್ರದೇಶದ ರೈತರನ್ನು ಉದ್ದೇಶಿಸಿ ಶುಕ್ರವಾರ ಆನ್ಲೈನ್ ಸಭೆಯಲ್ಲಿ ಮಾತನಾಡಲಿದ್ದಾರೆ. ವಿಡಿಯೋ ಸಂಪರ್ಕದ ಮೂಲಕ ಮೋದಿ ಅವರು ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಾತನಾಡಲಿದ್ದು, ಇದು 23,000 ಹಳ್ಳಿಗಳಲ್ಲಿಯೂ ಪ್ರಸಾರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ಕೃಷಿ ಕಾನೂನುಗಳ ವಿರುದ್ಧ ನಿರಂತರವಾಗಿ ಆಂದೋಲನ ನಡೆಸುತ್ತಿರುವ ರೈತರು ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ಮೇಲೆ ನಂಬಿಕೆ ಇಡಿ ಎಂದು ನರೇಂದ್ರ ತೋಮರ್ ಅವರು ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಪರಿಚಯಿಸಲಾದ ಹೊಸ ಕೃಷಿ ಕಾನೂನುಗಳು ದೇಶದ ಮತ್ತು ರೈತರ ಹಿತಕ್ಕಾಗಿ ರಚಿಸಲಾಗಿದೆ. ಆದರೆ ಅನಾವಶ್ಯಕವಾಗಿ ಹೊಸ ಕಾನೂನುಗಳ ಬಗ್ಗೆ ಗೊಂದಲ ಸೃಷ್ಟಿಸಲಾಗಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications