ಕೋಟಿ ರು. ಪಿಎಂ ಕಿಸಾನ್ ಯೋಜನೆ ಮೋದಿಗೆ ಅದೃಷ್ಟ ತರಬಲ್ಲದೆ?
ನವದೆಹಲಿ, ಫೆಬ್ರವರಿ 22 : ಕೇಂದ್ರದ ಮಧ್ಯಂತರ ಬಜೆಟ್ ನಲ್ಲಿ ವಾಗ್ದಾನ ನೀಡಿದಂತೆ 54.7 ಲಕ್ಷ ಸಣ್ಣ ಮತ್ತು ಮಧ್ಯಮ ರೈತರಿಗೆ ತಲಾ 2000 ರುಪಾಯಿ ಹಸ್ತಾಂತರಿಸುವ ಮಹತ್ವಾಕಾಂಕ್ಷಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆ, ಲೋಕಸಭೆಗೂ ಮುನ್ನ ಭಾರತೀಯ ಜನತಾ ಪಕ್ಷಕ್ಕೆ ಭರ್ಜರಿ ಫಲಸು ತಂದುಕೊಟ್ಟರೆ ಅಚ್ಚರಿಯಿಲ್ಲ.
ಫೆಬ್ರವರಿ 24, ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಆದರೆ, ಪಬ್ಲಿಕ್ ಫೈನಾನ್ಶಿಯಲ್ ಮ್ಯಾನೇಜ್ಮೆಂಟ್ ಸಿಸ್ಟೆಂ (ಪಿಎಫ್ಎಂಎಸ್) ನೀಡುವ ಅಂಕಿಅಂಶಗಳ ಆದಾರದ ಮೇಲೆ ಅರ್ಹ ರೈತರ ಸಂಖ್ಯೆ 1 ಕೋಟಿಗೂ ಜಾಸ್ತಿಯಾಗುವ ಸಂಭವನೀಯತೆ ಇದೆ.
ವಿಶ್ಲೇಷಣೆ : ಪ್ರಜಾತಂತ್ರದಲ್ಲಿ ಮೋದಿಯ ಬಜೆಟ್ ತಂತ್ರ ಪರಿಣಾಮ ಬೀರುತ್ತಾ?
ಈ ಯೋಜನೆಯ ಫಲಾನುಭವಿಗಳನ್ನು ಗುರುತಿಸುವ ಮತ್ತು ಡೇಟಾಬೇಸ್ ಗೆ ಸೇರಿಸುವ ಕಾರ್ಯದಲ್ಲಿ ಹಲವಾರು ರಾಜ್ಯಗಳು ಸಕಾರಾತ್ಮಕವಾಗಿ ಭಾಗಿಯಾಗಿದ್ದು, 2.2 ಕೋಟಿಗೂ ಹೆಚ್ಚು ಸಣ್ಣ ಮತ್ತು ಮಧ್ಯಮ ರೈತರ ಮಾಹಿತಿಯನ್ನು ಕಲೆಹಾಕಲಾಗಿದೆ.
ಚಿತ್ರವಿವರ: ಚುನಾವಣೆಯ ದಿಕ್ಕು ಬದಲಿಸೀತು ಬಜೆಟ್ ನ ಈ 5 ಘೋಷಣೆ
ಹಂಗಾಮಿ ಹಣಕಾಸು ಸಚಿವರಾಗಿದ್ದ ಪಿಯೂಶ್ ಗೋಯಲ್ ಅವರು ಮಂಡಿಸಿದ್ದ ಮಧ್ಯಂತರ ಬಜೆಟ್ ನಲ್ಲಿ, ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಡಿಯಲ್ಲಿ, 5 ಎಕರೆಗಿಂದ ಕಡಿಮೆ ಜಮೀನು ಇರುವ, 12 ಕೋಟಿ ಸಣ್ಣ ಮತ್ತು ಮಧ್ಯಮ ರೈತರಿಗೆ ನೇರವಾಗಿ 6000 ರು.ಗಳನ್ನು ಮೂರು ಕಂತುಗಳಲ್ಲಿ ನೀಡುವುದಾಗಿ ಪ್ರಕಟಿಸಿದ್ದರು.
ನೇರವಾಗಿ ರೈತರ ಬ್ಯಾಂಕಿಗೆ ಹಣ
ಈ ಯೋಜನೆಯನ್ನು 2018ರ ಡಿಸೆಂಬರ್ 1ರಿಂದಲೇ ಜಾರಿಯಾಗುವಂತೆ ಮಾಡಲಾಗಿದ್ದು, ಮಾರ್ಚ್ ತಿಂಗಳೊಳಗೆ ಮೊದಲ ಕಂತು ರೈತರ ಬ್ಯಾಂಕನ್ನು ನೇರವಾಗಿ ಸೇರಲಿದೆ. ಮೊದಲ ಹಂತದಲ್ಲಿ ನಡೆಸಲಾದ ತಪಾಸಣೆಯಲ್ಲಿ, ಮೊದಲ ಹಂತದಲ್ಲಿ 43 ಲಕ್ಷ ರೈತರನ್ನು ಅನರ್ಹಗೊಳಿಸಲಾಗಿದೆ. ಎರಡನೇ ಹಂತದಲ್ಲಿ ಪಿಎಫ್ಎಂಎಸ್ ವೆಬ್ ಅಪ್ಲಿಕೇಷನ್ ಮೂಲಕ, ರೈತರ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿ 58 ಲಕ್ಷ ರೈತರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಕರ್ನಾಟಕದಲ್ಲಿ ಅರ್ಹ ರೈತರಿಲ್ಲವೆ?
ಉತ್ತರ ಪ್ರದೇಶ, ಮಹಾರಾಷ್ಟ್ರ, ಗುಜರಾತ್, ಆಸ್ಸಾಂ, ಹರ್ಯಾಣಾ ರಾಜ್ಯಗಳು ಅತೀಹೆಚ್ಚು ರೈತರ ಪಟ್ಟಿಯನ್ನು ನೀಡಿವೆ. ಕರ್ನಾಟಕ, ಪಶ್ಚಿಮ ಬಂಗಾಳ, ರಾಜಸ್ಥಾನ ರಾಜ್ಯಗಳು ಬುಧವಾರದವರೆಗೆ ವೆಬ್ ಸೈಟಿನಲ್ಲಿ ಯಾವುದೇ ರೈತರ ಮಾಹಿತಿಯನ್ನು ದಾಖಲಿಸಿಲ್ಲ. ಈ ಮೂರು ರಾಜ್ಯಗಳಲ್ಲಿ ಬಿಜೆಪಿಯೇತರ ಸರಕಾರವಿರುವುದು ವಿಶೇಷ. ಮಧ್ಯ ಪ್ರದೇಶ ಸಲ್ಲಿಸಿರುವ ರೈತರ ಎಲ್ಲ ಮಾಹಿತಿಗಳು ತಿರಸ್ಕೃತವಾಗಿವೆ. ಇನ್ನು ಕಾಂಗ್ರೆಸ್ ಅಧಿಕಾರದಲ್ಲಿರುವ ಛತ್ತೀಸ್ ಗಢ ಸರಕಾರ ಕೇವಲ 83 ರೈತರ ಮಾಹಿತಿ ದಾಖಲಿಸಿದೆ. ಯಾಕೆ, ಕರ್ನಾಟಕದಲ್ಲಿ ಯಾವುದೇ ರೈತರು ಈ ಯೋಜನೆಯ ಫಲಾನುಭವಿಗಳಾಗಲು ಅರ್ಹತೆ ಪಡೆದಿಲ್ಲವೆ?
ಕೇಂದ್ರ ಮಧ್ಯಂತರ ಬಜೆಟ್ 2019: ಸಣ್ಣ ರೈತರಿಗೆ ಆರ್ಥಿಕ ನೆರವಿನ ಕೊಡುಗೆ ಘೋಷಣೆ
ಇವರನ್ನು ಅನರ್ಹಗೊಳಿಸಲು ಕಾರಣಗಳೇನು?
ರೈತ ಬಂಧು ಎಂಬ ಭೂಮಿಯ ಕಡತಗಳನ್ನು ಸಂಗ್ರಹಿಸುವ ಡಿಜಿಟಲ್ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿರುವ ತೆಲಂಗಾಣ ರಾಜ್ಯ 15 ಲಕ್ಷ ರೈತರ ಮಾಹಿತಿಯಲ್ಲಿ 4.2 ಲಕ್ಷ ರೈತರನ್ನು ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ ಅನರ್ಹಗೊಳಿಸಲಾಗಿದೆ. ಆದರೆ, ಅಷ್ಟು ದೊಡ್ಡ ಪ್ರಮಾಣದಲ್ಲಿ ಇವರನ್ನು ಅನರ್ಹಗೊಳಿಸಲು ಕಾರಣಗಳೇನು ಎಂಬುದನ್ನು ಕೇಂದ್ರ ನಮೂದಿಸಿಲ್ಲ ಎಂದು ಫೈನಾನ್ಶಿಯಲ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಎರಡು ವರ್ಷ ಮೊದಲೇ ಆರಂಭಿಸಬೇಕಿತ್ತು
ರಾಜ್ಯ ಸರಕಾರದ ಬಳಿ ಫಲಾನುಭವಿ ರೈತರ ದತ್ತಾಂಶವೇ ಇಲ್ಲದಿದ್ದರೆ ಈ ಹಣವನ್ನು ಯಾವ ರೈತರಿಗೆ ನೀಡುವುದು? ಈ ಯೋಜನೆಯನ್ನು ಕೇಂದ್ರ ಸರಕಾರ ಎರಡು ವರ್ಷಗಳ ಹಿಂದೆಯೇ ಆರಂಭಿಸಬೇಕಾಗಿತ್ತು. ಈಗ ಎಲ್ಲವೂ ಕಲಸುಮೇಲೋಗರವಾಗಿ ಯಾರು ಬೇಕಾದರೂ ಈ ಹಣ ಪಡೆಯುವಂತಾಗಬಾರದು. ಇದು ಸಂಕಷ್ಟದಲ್ಲಿರುವ ರೈತರಿಗೆ ಯಾವುದೇ ರೀತಿಯಲ್ಲಿ ಸಹಾಯವಾಗುವುದಿಲ್ಲ. ಈಗ ತುಂಬಾ ತಡವಾಗಿದೆ ಎಂದು ಆರ್ಥಿಕ ತಜ್ಞ ಅಶೋಕ್ ಗುಲಾಟಿ ಪ್ರತಿಕ್ರಿಯಿಸಿದ್ದಾರೆ.
ಮಧ್ಯಂತರ ಬಜೆಟ್ 2019: ಮಧ್ಯಮ ವರ್ಗ, ರೈತರು, ಸ್ಟಾರ್ಟಅಪ್ ವಲಯಕ್ಕೆ ಬಂಪರ್ ಕೊಡುಗೆ!