ರೈತ ಚಳವಳಿಯ ಮುಂದಿನ ದಾರಿ, ಮಾರ್ಗೋಪಾಯ ಅವಲೋಕನ
ಮೈಸೂರು, ನವೆಂಬರ್ 14: ಕರ್ನಾಟಕ ರೈತರ ಬೇಡಿಕೆಗಳನ್ನು ಮುಂಚೂಣಿಗೆ ತರುವ ಜೊತೆಗೆ ಜನಪ್ರತಿನಿಧಿಗಳವರೆಗೆ ತಲುಪಿಸಲು ಸಾಧ್ಯವಾದ 'ಕಿಸಾನ್ ಆಂದೋಲನ'ದ ಕುರಿತು ವಿವಿಧ ರೈತ ಸಂಘಟನೆಗಳನ್ನು ಪ್ರತಿನಿಧಿಸುವ ಮಧ್ಯಸ್ಥಗಾರರು ಅವಲೋಕಿಸಿದರು ಹಾಗೂ ಮುಂದಿನ ಮಾರ್ಗೋಪಾಯಗಳ ಕುರಿತು ಚರ್ಚಿಸಿದರು.
ಭಾನುವಾರ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ '5ನೇ ಕಿಸಾನ್ ಸ್ವರಾಜ್ ಸಮ್ಮೇಳನ' ಮುಕ್ತಾಯಗೊಂಡಿದೆ. ಈ ಸಮ್ಮೇಳನದಲ್ಲಿ ಕರ್ನಾಟಕದಲ್ಲಿ ರೈತರ ಚಳವಳಿ ರೈತ ಮುಖಂಡರು, ಮಧ್ಯಸ್ತಗಾರರು (ಸ್ಟೇಕ್ಹೋಲ್ಡರ್ಸ್) ಕುರಿತು ಚರ್ಚೆ ನಡೆಸಿದರು. ಹಲವು ಮಹತ್ವದ ನೀರ್ಣಯಗಳನ್ನು ಕೈಗೊಂಡರು.
ಈ ವೇಳೆ ಮಾತನಾಡಿದ ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಟಿ.ಎನ್.ಪ್ರಕಾಶ್ ಕಮ್ಮರಡಿ, ''ಕೃಷಿ ಉತ್ಪಾದನೆಗೆ ಮನ್ನಣೆ ಇದ್ದರೂ ರೈತರ ವಂಚನೆಗೆ ಒಳಗಾಗುವುದು ತಪ್ಪುತ್ತಿಲ್ಲ. ಉತ್ಪಾದನೆಯಲ್ಲಿ ಹೆಚ್ಚಳದ ಪರಿಸ್ಥಿತಿ ಇದ್ದರೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ'' ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಉತ್ಪಾದನೆ ಹೆಚ್ಚಿದ್ದರು ರೈತರಿಗೆ ಅನ್ಯಾಯ
ಕೊರೊನಾ ಸಾಂಕ್ರಾಮಿಕ ರೋಗದ ಕಾಲದಲ್ಲಿಯೂ ರೈತರು ಕೃಷಿ ಉತ್ಪಾದನೆಯಲ್ಲಿ ಬೆಳವಣಿಗೆ ಸಾಧಿಸಿದ್ದಾರೆ. ಹೀಗಿದ್ದರೂ ಕೃಷಿ ಉತ್ಪಾದನೆಗೆ ತಕ್ಕ ಬೆಲೆ, ರೈತರಿಗೆ ನ್ಯಾಯ ದೊರೆಯವ ನಿಟ್ಟಿನಲ್ಲಿ ದೇಶದಲ್ಲಿ 'ಶ್ರೀಲಂಕಾದಂತಹ' ಪರಿಸ್ಥಿತಿ ಇಲ್ಲ. ಇಂತಹ ವಿಷಯಗಳು ಸೇರಿದಂತೆ ಹವಾಮಾನ ಬದಲಾವಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ರೈತರ ಕಿಸಾನ್ ಆಂದೋಲನದಲ್ಲಿ ಅವಲೋಕನ ನಡೆಸಬೇಕು ಎಂದು ಕಮ್ಮರಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಭಾರತದ ಕೃಷಿಗೆ ಆಹಾರ ಭದ್ರತೆ ಸಾಮರ್ಥ್ಯವಿದೆ
ಕರ್ನಾಟಕ ರಾಜ್ಯ ರೈತ ಸಂಘದ ಗಂಗಾಧರ್ ಮಾತನಾಡಿ, ರೈತ ಚಳವಳಿ ಆರಂಭವಾದಾಗ ದೇಶದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳು, ಸುಸ್ಥಿರ ಕೃಷಿ ಮತ್ತು ಜೀವ ವೈವಿಧ್ಯ ಸಂರಕ್ಷಣೆ ಕುರಿತು ಚರ್ಚೆಯಾಗುತ್ತಲೇ ಇವೆ. ಕೃಷಿಯಲ್ಲಿ ಹೂಡಿಕೆ ಮಾಡಲು ಎಂಎನ್ಸಿಗಳನ್ನು ಆಹ್ವಾನಿಸಿರುವ ಸರ್ಕಾರ ನಡೆಯನ್ನು ಅವರು ಪ್ರಶ್ನಿಸಿದರು.
ಆಹಾರ ಭದ್ರತೆಯೊಂದಿಗೆ ರೈತರ ಕೃಷಿ ಬೀಜ ಸಾರ್ವಭೌಮತ್ವವೂ ಮುಖ್ಯವಾಗಿದೆ. ಭಾರತದ ಕೃಷಿಯು ಉದ್ಯೋಗವನ್ನು ಖಾತ್ರಿಪಡಿಸುವುದರ ಜೊತೆಗೆ ಆಹಾರ ಭದ್ರತೆಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇಂತಹ ಅಭಿವೃದ್ಧಿಗೆ ಮಾರಕವಾಗಿರುವ ವಿವಾದಾತ್ಮಕ ಕೃಷಿ ಮತ್ತು ಭೂಸುಧಾರಣಾ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ರೈತರ ಚಳವಳಿ ಬಯಸಿದೆ ಎಂದು ಅವರು ತಿಳಿಸಿದರು.

ವಿವಿಧ ರಂಗಗಳ ಮೇಲೆ ರೈತಾಂದೋಲನ ಪ್ರಭಾವ
ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕುರುಬೂರು ಶಾಂತಕುಮಾರ್ ಮಾತನಾಡಿ, ''ಭಾರತ ದೇಶವು ಆಹಾರದ ಮಿತವ್ಯಯ ಮತ್ತು ರಫ್ತು ರಾಷ್ಟ್ರವಾಗಿ ರೂಪುಗೊಂಡಿದೆ. ಇದರ ಶ್ರೇಯಸ್ಸು ರೈತರಿಗೆ ಸಲ್ಲಬೇಕು. ಆದರೆ ಇದೇ ಸಮಯದಲ್ಲಿ ರೈತರ ಸ್ಥಿತಿ ಅತಂತ್ರವಾಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ರೈತ ಚಳವಳಿ, ಅದರ ಉದ್ದೇಶಗಳ ಬಗ್ಗೆ ರಾಜಕೀಯ ಸ್ಪಷ್ಟತೆಯನ್ನು ಹೊಂದಬೇಕು. ಆಂದೋಲನವು ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದೆ'' ಎಂದು ವಿವರಿಸಿದರು.

ರೈತರಿಗೆ ಅಸ್ತಿತ್ವದ ಬಿಕ್ಕಟ್ಟು ಕಾಡುತ್ತಿದೆ
ರೈತ ಚಳವಳಿಯ ನೇತೃತ್ವ ವಹಿಸಿರುವ ಪರಿಸರವಾದಿ ಹಾಗೂ ರೈತರ ಹಕ್ಕುಗಳ ಹೋರಾಟಗಾರ ಚುಕ್ಕಿ ನಂಜುಂಡಸ್ವಾಮಿ ಅವರು, ರೈತರ ತಳಮಟ್ಟದ ಹೋರಾಟವು ಇದೀಗ ವಿಭಿನ್ನ ಸ್ವರೂಪಗಳನ್ನು ಪಡೆದುಕೊಂಡಿದೆ. ಹವಾಮಾನ ಬದಲಾವಣೆಯಿಂದ ಉಂಟಾಗುತ್ತಿರುವ ಸಂಕಷ್ಟವನ್ನು ರೈತರ ಎದುರಿಸುತ್ತಿದ್ದಾರೆ. ನೀರಾವರಿ, ಸುಸ್ಥಿರ ಬೆಳೆ ಬೆಳೆಸುವುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ರೈತರಿಗೆ ಅಸ್ತಿತ್ವದ ಬಿಕ್ಕಟ್ಟು ಕಾಡುತ್ತಿದೆ. ಚಳವಳಿಯು ಸಂಕುಚಿತ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಬಾರದು. ಈ ಹೋರಾಟ ಕೇವಲ ವಿಧಾನಸೌಧ ಅಥವಾ ಡಿಸಿ ಕಚೇರಿಗೆ ಮುತ್ತಿಗೆ ಹಾಕುವುದಕ್ಕೆ ಸೀಮಿತವಾಗಬಾರದು ಎಂದು ತಿಳಿ ಹೇಳಿದರು.
ಈ ಸಮ್ಮೇಳನದಲ್ಲಿ ರೈತರ ಎಲ್ಲ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ದೊರೆಯಬೇಕು. ನಿಜವಾದ ರೈತರನ್ನು ಸರ್ಕಾರ ಗುರುತಿಸಬೇಕು. ಕೃಷಿ ಭೂಮಿಯ ಅನ್ಯ ಉದ್ದೇಶ ಬಳಕೆಗೆ ಕಡಿವಾಣ ಹಾಕಬೇಕು. ಮಹಿಳಾ ರೈತರು, ಕೃಷಿ ಕಾರ್ಮಿಕರನ್ನು ಗುರುತಿಸುವುದು ಸೇರಿದಂತೆ ಹಕ್ಕೋತ್ತಾಯ ಸರ್ಕಾರದ ಮುಂದಿಡುವ ಮಹತ್ವದ ನಿರ್ಣಯ ಅಂಗೀಕರಿಸಲಾಯಿತು.












Click it and Unblock the Notifications