ಬೇಸಿಗೆ ಹಂಗಾಮಿನಲ್ಲಿ ಭತ್ತದ ಬೇಸಾಯ; ಸಲಹೆಗಳು

ದಾವಣಗೆರೆ, ಜನವರಿ 04; ಮುಂಗಾರು ಹಂಗಾಮಿನಲ್ಲಿ ಮಾತ್ರವಲ್ಲ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಬೇಸಿಗೆಯಲ್ಲಿಯೂ ರೈತರು ಭತ್ತದ ಬೆಳೆ ಬೆಳೆಯುತ್ತಾರೆ. ಕೃಷಿ ಇಲಾಖೆ ಭತ್ತದ ಬೇಸಾಯದ ಕುರಿತು ರೈತರಿಗೆ ಸಲಹೆಗಳನ್ನು ನೀಡಿದೆ.

ಬೇಸಿಗೆ ಹಂಗಾಮಿನಲ್ಲಿ ದಾವಣಗೆರೆ ಜಿಲ್ಲೆಯಾದ್ಯಂತ ವಿವಿಧ ನೀರಾವರಿ ಮೂಲಗಳಿಂದ ಸುಮಾರು 50,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಈ ಸಮಯದಲ್ಲಿ ರೈತರು ಸಸಿ ಮಡಿ ತಯಾರಿಸುವ ತಯಾರಿಯಲ್ಲಿದ್ದಾರೆ. ಈ ಸಮಯದಲ್ಲಿ ಬೆರಕೆ ಭತ್ತ ನಿರ್ವಹಣೆ ಬಗ್ಗೆ ನಿಗಾ ವಹಿಸುವುದು ತುಂಬಾ ಮುಖ್ಯ ಎಂದು ತಜ್ಞರು ಹೇಳಿದ್ದಾರೆ.

ಮುಂಗಾರು ಅವಧಿಯಲ್ಲಿ ವಿವಿಧ ತಳಿಗಳನ್ನು ರೈತರು ನಾಟಿ ಮಾಡಿದ್ದು, ಭತ್ತದ ಬೆಳೆಯನ್ನು ಕಾಲಾವಧಿಗನುಗುಣವಾಗಿ ನವೆಂಬರ್ ತಿಂಗಳ ಅಂತ್ಯದಿಂದ ಡಿಸೆಂಬರ್ ತನಕ ಕಟಾವು ಮಾಡಿದ್ದಾರೆ.

Paddy Cultivation In Summer Suggestions To Farmers

ಈಗ ಬಹುತೇಕ ಭತ್ತದ ಕೊಯ್ಲ ಯಂತ್ರದ ಮೂಲಕ ಮಾಡುವುದರಿಂದ ಸಾಕಷ್ಟು ಪ್ರಮಾಣದ ಭತ್ತದ ಬೀಜಗಳು ಗದ್ದೆಯಲ್ಲಿ ಉದುರುತ್ತವೆ. ಹೀಗೆ ಉದುರಿದ ಕಾಳುಗಳು ಬೇಸಿಗೆ ಹಂಗಾಮಿನಲ್ಲಿ ಬೆಳೆದು ನಿಂತು ಇತರೆ ತಳಿಯೊಂದಿಗೆ ಬೆರಕೆಯಾಗುತ್ತವೆ.

ಕೊಯ್ಲು ಏರುಪೇರು; ಬೇಸಿಗೆ ಹಂಗಾಮಿನಲ್ಲಿ ಭತ್ತದ ಬೇಸಾಯ ಕೈಗೊಂಡಾಗ ಬೆರಕೆ ಭತ್ತ ಗದ್ದೆಯಲ್ಲಿ ಇದ್ದಲ್ಲಿ ಬೇಸಾಯ ಹಾಗೂ ಕೊಯ್ಲು ನಿರ್ವಹಣೆ ಏರು ಪೇರಾಗುತ್ತದೆ. ಹೀಗಾಗಿ ಮುಂಜಾಗ್ರತೆ ಕ್ರಮವಾಗಿ ಉತ್ತಮ ಭೂಮಿ ಸಿದ್ಧತೆ ಅತ್ಯಗತ್ಯ. ಮುಂಗಾರಿನಲ್ಲಿ ಬೆಳೆದ ತಳಿಯನ್ನೇ ಬೇಸಿಗೆಯಲ್ಲಿ ಬೆಳೆದಲ್ಲಿ ಸಮಸ್ಯೆಯಾಗುವುದಿಲ್ಲ. ಆದರೆ ಇತರೆ ತಳಿಗಳನ್ನು ಬೆಳೆಯವುದಾದರೆ ಮುಂಜಾಗ್ರತೆ ವಹಿಸಬೇಕಾಗುತ್ತದೆ.

ಮುಂಗಾರು ಹಂಗಾಮಿನ ಭತ್ತ ಕಟಾವು ಮಾಡಿದ ತಕ್ಷಣ ಗದ್ದೆಯಲ್ಲಿರುವ ತೇವಾಂಶ ಬಳಸಿಕೊಂಡು ನೇಗಿಲು ಅಥವಾ ಟ್ರಾಕ್ಟರ್‌ನಿಂದ ಒಂದು ಸಾರಿ ಉಳುಮೆ ಮಾಡಿ ನಂತರ 8-10 ದಿನದವರೆಗಾದರೂ ನೀರು ನಿಲ್ಲಿಸಿ ಕೊಳೆಯಲು ಬಿಡಬೇಕು, ಹೀಗೆ ಮಾಡುವುದರಿಂದ ಮುಂಗಾರು ಹಂಗಾಮಿನಲ್ಲಿ ಗದ್ದೆಯಲ್ಲಿ ಉದುರಿದ ಬೀಜಗಳು ಸುಪ್ತಾವಸ್ಥೆ ಮುಗಿಸಿ ಮೊಳಕೆಯೊಡೆಯುತ್ತವೆ.

ನಂತರ ಮತ್ತೊಮ್ಮೆ ಟ್ರ್ಯಾಕ್ಟರ್‌ನಿಂದ ರೊಳ್ಳೆ ಹೊಡೆದು ಮೊಳಕೆಯೊಡೆದ ಭತ್ತವನ್ನು ಭೂಮಿಗೆ ಸೇರಿಸುವುದರಿಂದ ಬೆರಕೆ ಭತ್ತ ಸಮಸ್ಯೆಯನ್ನು ನಿರ್ವಹಿಸಬಹುದು ಎಂದು ರೈತರಿಗೆ ಸಲಹೆ ನೀಡಲಾಗಿದೆ.

ಪಿಎಂ ಕಿಸಾನ್ ಸಮ್ಮಾನ್‌ ಯೋಜನೆ ಮಾಹಿತಿ; ಭಾರತ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಿದೆ. ಅರ್ಹ ರೈತರು (ಸಣ್ಣ, ಅತಿ ಸಣ್ಣ, ಮಧ್ಯಮ, ದೊಡ್ಡ ರೈತರು) ಯೋಜನೆಯ ಲಾಭ ಪಡೆದುಕೊಳ್ಳಲು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.

ಯೋಜನೆಯ ಮಾರ್ಗಸೂಚಿಯಂತೆ ಭೂ ಒಡೆತನ ಹೊಂದಿರುವ ಪ್ರತಿ ಅರ್ಹ ರೈತ ಕುಟುಂಬಕ್ಕೆ ಒಂದು ವರ್ಷಕ್ಕೆ 6000 ರೂ.ಗಳನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2000 ರೂ. ನಂತೆ ಮೂರು ಕಂತುಗಳಲ್ಲಿ ನೀಡಲಾಗುತ್ತದೆ.

ಈಗಾಗಲೇ ಕೇಂದ್ರ ಸರ್ಕಾರದಿಂದ ಹಲವು ಕಂತುಗಳು ಬಿಡುಗಡೆಯಾಗಿವೆ. ತಮ್ಮ ಕೊನೆಯ ಕಂತು ಪಾವತಿಯಾಗದೇ payment stopped by state on request ಎಂಬ ಸಂದೇಶ ಬಂದಿದ್ದಲ್ಲಿ ಕೂಡಲೇ ತಮ್ಮ ಸೂಕ್ತ ದಾಖಲೆಗಳೊಂದಿಗೆ (ಜಮೀನು ಖಾತೆ, ಪಹಣಿ, ಸರ್ವೇ ನಂ, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ) ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ರೈತರಿಗೆ ಮಾಹಿತಿ ನೀಡಲಾಗಿದೆ.

ಜೆಸಿಬಿ ಚಾಲನಾ ತರಬೇತಿ; ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ದಾಂಡೇಲಿ ಹಾಗೂ ಜೆಸಿಬಿ ಇವರ ಜಂಟಿ ಸಹಯೋಗದಲ್ಲಿ 30 ದಿನಗಳ ಉಚಿತ ಜೆಸಿಬಿ ಚಾಲನಾ ತರಬೇತಿಗೆ ಅರ್ಜಿ ಕರೆಯಲಾಗಿದೆ. ಅಭ್ಯರ್ಥಿಗಳಿಗೆ 18 ರಿಂದ 45 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ.

ಆಸಕ್ತರು ತಮ್ಮ ಹೆಸರು, ಜನ್ಮ ದಿನಾಂಕ, ಪೂರ್ಣ ಪೋಸ್ಟಲ್ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ತರಬೇತಿಯ ಅವಶ್ಯಕತೆ, ಈಗ ಮಾಡುತ್ತಿರುವ ಕೆಲಸ ಇತ್ಯಾದಿ ವಿವರಗಳನ್ನು ಒಳಗೊಂಡ ಮಾಹಿತಿಯನ್ನು 2022ರ ಜನವರಿ 10 ರೊಳಗೆ ಸಲ್ಲಿಸಬೇಕು.

ಅರ್ಜಿಯನ್ನು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ವಿಸ್ತರಣಾ ಕೇಂದ್ರ ಹಸನಮಾಳ, ದಾಂಡೇಲಿ-581325 ಈ ವಿಳಾಸಕ್ಕೆ ತಲುಪಿಸಬಹುದಾಗಿದೆ. ತರಬೇತಿ ಉಟ, ವಾಸ್ತವ್ಯದೊಂದಿಗೆ ಸಂಪೂರ್ಣ ಉಚಿತವಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08284-298547, 9449782425, 96632143217.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+