Get Updates
Get notified of breaking news, exclusive insights, and must-see stories!

ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ಬಹಿರಂಗ ಪತ್ರ

Siddaramaiah
ಸನ್ಮಾನ್ಯ ಮುಖ್ಯಮಂತ್ರಿಯವರೆ,

ರಾಜ್ಯದ ಬಡಜನರಿಗೆ ಸಾಮಾಜಿಕ ಮತ್ತು ಅರ್ಥಿಕ ಭದ್ರತೆಯನ್ನು ಒದಗಿಸುತ್ತಿದ್ದ, ವೃದ್ಧಾಪ್ಯ ವೇತನ, ವಿಧವಾ ವೇತನ ಮತ್ತು ಅಂಗವಿಕಲ ಸಂಧ್ಯಾ ಸುರಕ್ಷಾ ಯೋಜನೆಯ ಫಲಾನುಭವಿಗಳಿಗೆ ಫೆಬ್ರವರಿ - 2011ರ ತಿಂಗಳಿನಿಂದ ಮಾಸಿಕ ವೇತನವನ್ನು ನೀಡುತ್ತಿಲ್ಲ. ಸಂಧ್ಯಾ ಸುರಕ್ಷಾ ಯೋಜನೆಯ ಫಲಾನುಭವಿಗಳ ವಯೋಮಿತಿಯನ್ನು ಕೇಂದ್ರ ಸರ್ಕಾರವು 60 ವರ್ಷಕ್ಕೆ ಇಳಿಸಿದ್ದು, ರಾಜ್ಯ ಸರ್ಕಾರವು ಈ ವಯೋಮಿತಿಯನ್ನು ಈವರೆಗೂ ಇಳಿಸಿರುವುದಿಲ್ಲ.

ಹಳ್ಳಿಗಳಲ್ಲಿ ವಾಸಿಸುತ್ತಿರುವ ಈ ನಿರ್ಗತಿಕ, ಅವಕಾಶ ವಂಚಿತ, ಸಾಮಾಜಿಕವಾಗಿ ಶೋಷಣೆಗೊಳಪಟ್ಟ ಇಂತಹ ದುರ್ಬಲ ವರ್ಗದ ಬಡಜನರಿಗೆ ನ್ಯಾಯಯುತವಾಗಿ ನೀಡಬೇಕಾದ ಸೌಲಭ್ಯವನ್ನು ಕಳೆದ ಐದು ತಿಂಗಳಿನಿಂದ ವಂಚನೆ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶಂಸಿಸಬೇಕೆ? ಯೋಗ್ಯ ಫಲಾನುಭವಿಗಳ ಆಯ್ಕೆಯ ನೆಪವನ್ನೊಡ್ಡಿ, ಇಂತವರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಸೌಲಭ್ಯವನ್ನು ನೀಡದೇ ಇರುವುದು ತಮ್ಮ ಆಡಳಿತ ವೈಫಲ್ಯವಲ್ಲವೇ? ಈ ಯೋಜನೆಗಳ ಫಲಾನುಭವಿಗಳಿಗೆ ಕೂಡಲೇ ಮಾಸಿಕ ಸೌಲಭ್ಯಗಳನ್ನು ವಿತರಿಸಲು ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಾ, ಈ ತಿಂಗಳಿನಿಂದಲೇ ಎಲ್ಲಾ ಅರ್ಹರಿಗೂ ಅವರು ಪಡೆಯಬೇಕಾದ ಸೌಲಭ್ಯವನ್ನು ನೀಡುವುದು. ಈ ಯೋಜನೆಗಳಿಗೆ ಕೇಂದ್ರಸರ್ಕಾರವು ಬಿಡುಗಡೆಮಾಡಿರುವ ಅನುದಾನವನ್ನು ರಾಜ್ಯ ಸರ್ಕಾರವು ಉಪಯೋಗಿಸಿಕೊಂಡಿರುವುದಿಲ್ಲ.

2010-11 ಮತ್ತು 2011-12ನೇ ಸಾಲಿನ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಗಳನ್ನು ವಿತರಿಸಿರುವುದಿಲ್ಲ ಹಾಗೂ ನೋಂದಣಿಯನ್ನು ಸಹ ಸ್ಥಗಿತಗೊಳಿಸಿರಲಾಗಿರುತ್ತದೆ. ಈ ಯೋಜನೆಯು ಸಂಪೂರ್ಣ ವಿಫಲತೆಯತ್ತ ಸಾಗುತ್ತಿದೆ. ಈ ಯೋಜನೆಯ ಫಲವನ್ನು ಪಡೆಯಲು ಬಿ.ಪಿ.ಎಲ್ ಕಾರ್ಡ್ ಕಡ್ಡಾಯ ಮಾಡಿರುವುದರಿಂದ ಸಾಕಷ್ಟು ಅರ್ಹರು ಭಾಗ್ಯಲಕ್ಷ್ಮಿ ಯೋಜನೆಯಿಂದ ವಂಚಿತರಾಗುತ್ತಾರೆ. ತಹಶೀಲ್ದಾರ್ ರಿಂದ ಪಡೆದ ಆದಾಯ ಪ್ರಮಾಣಪತ್ರವನ್ನು ಪರಿಗಣಿಸಿ ಯೋಜನೆಯಲ್ಲಿ ನೋಂದಾಯಿಸಲು ಕ್ರಮವಹಿಸಿ ತ್ವರಿತವಾಗಿ ಬಾಂಡ್ ಗಳನ್ನು ಬಿಡುಗಡೆ ಮಾಡಿ ನೊಂದಣಿ ಪುನರ್ ಪ್ರಾರಂಭಿಸಲು ಆಗ್ರಹಿಸಿದೆ. ಈ ಜನಪ್ರಿಯ ಯೋಜನೆಗಳ ಹೆಸರುಗಳನ್ನು ಬಳಸಿಕೊಂಡು ಸರ್ಕಾರವು ಅಗ್ಗದ ಪ್ರಚಾರ ಪಡೆಯುವ ಹುನ್ನಾರವನ್ನು ನಡೆಸಿದೆ.

ಅರ್ಹ ಕುಟುಂಬದವರನ್ನು ಗುರುತಿಸುವ ಪ್ರಕ್ರಿಯೆಯ ನೆಪವೊಡ್ಡಿ, ರಾಜ್ಯದ ಜನತೆಗೆ ಎಲ್ಲಾ ವಿಧದ ಪಡಿತರ ಚೀಟಿಗಳ ವಿತರಣೆಯನ್ನು ಸ್ತಗಿತಗೊಳಿಸಿರುವುದು ಒಂದು ದುರದೃಷ್ಟಕರ ಕ್ರಮವಾಗಿರುತ್ತದೆ. ಬಡತನ ರೇಖೆಗಿಂತ ಕೆಳಗಿರುವ ಸಾಕಷ್ಟು ಅರ್ಹ ಬಿ.ಪಿ.ಎಲ್ ಕುಟುಂಬಗಳಿಗೆ ಪಡಿತರ ಪಡೆಯಲು ತೊಂದರೆ ಆಗುತ್ತಿರುವುದಲ್ಲದೇ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಕಳೆದ ಲೋಕಸಭೆಯ ಚುನಾವಣೆಯ ವೇಳೆ ನೆಮ್ಮದಿ ಕೇಂದ್ರದ ಮುಖಾಂತರ ತಾತ್ಕಾಲಿಕ ಪಡಿತರ ಚೀಟಿಗಳನ್ನು ಪಡೆದಿರುವ ಅರ್ಹ ಕುಟುಂಬದವರಿಗೆ ಖಾಯಂ ಪಡಿತರ ಚೀಟಿಯನ್ನು ವಿತರಿಸಲು ಆಗ್ರಹಿಸುತ್ತಾ ಕೂಡಲೇ ಎಲ್ಲಾ ಅರ್ಹರಿಗೆ ಎ.ಪಿ.ಎಲ್ ಅಥವಾ ಬಿ.ಪಿ.ಎಲ್ ಪಡಿತರ ಚೀಟಿ ವಿತರಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸುತ್ತೇನೆ. ಸರ್ಕಾರದಿಂದ ಮಕ್ಕಳಿಗೆ ಪಡಿತರವನ್ನು ನೀಡುತ್ತಿರುವುದಿಲ್ಲವೆಂದು ತಿಳಿಸುತ್ತಾ, 12 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ನ್ಯಾಯಬೆಲೆ ಅಂಗಡಿದಾರರು ಇಲಾಖೆಯ ಅಧಿಕಾರಿಗಳ ಜೊತೆ ಶಾಮೀಲಾಗಿ, ಮಕ್ಕಳಿಗೆ ನೀಡುವ ಪಡಿತರವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಇದನ್ನು ಕೂಡಲೇ ನಿಲ್ಲಿಸಿ, ಮಕ್ಕಳಿಗೂ ಸಹ ಪಡಿತರವನ್ನು ವಿತರಿಸಲು ಕ್ರಮವಹಿಸುವಂತೆ ಕೋರುತ್ತೇನೆ.

ರಾಜ್ಯದಲ್ಲಿ ರೈತರು ಬೆಳೆದಿರುವ ಹಲವಾರು ಬೆಳೆಗಳಿಗೆ ವೈಜ್ಙಾನಿಕ ದರವನ್ನು ಪಡೆಯದೇ ಇರುವುದರಿಂದ ರೈತರು ಹತಾಶರಾಗಿ ಆತ್ಮಹತ್ಯೆ ಮಾಡಿಕೊಳ್ಳುವತ್ತ ಅವರನ್ನು ದೂಡುತ್ತಿರುವುದು ಆತಂಕದ ವಿಷಯವಾಗಿರುತ್ತದೆ. ಮುಕ್ತ ಮಾರುಕಟ್ಟೆಯಲ್ಲಿ ಭತ್ತ, ಆಲೂಗಡ್ಡೆ, ಟೊಮ್ಯಾಟೋ, ಬೆಳೆಗಳ ಬೆಲೆಯು ತೀರ ಕಡಿಮೆ ಇದ್ದು, ರಾಜ್ಯ ಸರ್ಕಾರವು ಈ ಕೂಡಲೇ ಮಧ್ಯ ಪ್ರವೇಶಿಸಿ, ಈ ಬೆಳೆಗಳ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸುವುದು ಅತ್ಯಗತ್ಯ. ಈ ಸಾಲಿನಲ್ಲಿ ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಬೆಲೆಯನ್ನು ಪಡೆಯದೇ ಇರುವುದರಿಂದ ರಾಜ್ಯದ ಹಲವೆಡೆ ಧರಣಿ, ಪ್ರತಿಭಟನೆಗಳು ನಡೆಯುತ್ತಿದ್ದರೂ ರಾಜ್ಯ ಸರ್ಕಾರವು ಕಣ್ಣುಮುಚ್ಚಿ ಕುಳಿತಿರುವ ಕ್ರಮದ ಒಳಮರ್ಮವೇನು? ಉದಾಹರಣೆಗೆ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಲು ವಿಳಂಬನೀತಿ ಅನುಸರಿಸುತ್ತಿರುವ ಆಹಾರ ಇಲಾಖೆಯ ಅಧಿಕಾರಿಗಳ ಅಸಡ್ಡೆ ಮತ್ತು ರೈತ ವಿರೋಧಿ ಧೋರಣೆಯನ್ನು ಖಂಡಿಸುವುದಲ್ಲದೇ ಕೂಡಲೇ ಅಗತ್ಯ ಕ್ರಮ ವಹಿಸಿ, ರಾಜ್ಯದಲ್ಲಿ ಭತ್ತವನ್ನು ಬೆಳೆಯುವ ಎಲ್ಲಾ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲು ಆಗ್ರಹಿಸಿದೆ. ಭತ್ತದ ಖರೀದಿ ಕೇಂದ್ರಗಳನ್ನು ಸ್ಥಾಪಿಸಲು ರಾಜಕಾರಣವನ್ನು ಮಾಡದೇ ರೈತರಿಗೆ ಸಹಕಾರವಾಗುವ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆಯನ್ನು ಮಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ.

ಪ್ರತಿ ಕ್ವಿಂಟಾಲ್ ಭತ್ತಕ್ಕೆ ರೈತರು ಸುಮಾರು 1500ರಿಂದ 1800 ರೂ. ಗಳನ್ನು ನೀಡಲು ಆಗ್ರಹಿಸುತ್ತಿದ್ದರೂ ಸರ್ಕಾರವು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ತೋರಿಸುತ್ತಿರುವ ಔಚಿತ್ಯವೇನು? ವೈಜ್ಙಾನಿಕ ದರವನ್ನು ನೀಡಿ ಭತ್ತವನ್ನು ಖರೀದಿಸಲು ಸರ್ಕಾರವು ಮುಂದಾಗಬೇಕು. ಇದಕ್ಕಾಗಿ ಸರ್ಕಾರವು ತನ್ನ ರಾಜ್ಯ ಸರ್ಕಾರದ ಆವರ್ತ ನಿಧಿಯನ್ನು ಹೆಚ್ಚಿಸಿ, ರೈತರಿಗೆ ಸಹಾಯ ಹಸ್ತ ಚಾಚಲು ಮುಂದಾಗಬೇಕೆಂದು ಆಗ್ರಹಿಸುತ್ತೇನೆ. ರಾಜ್ಯಾದ್ಯಂತ ಬಿತ್ತನೆ ಕಾರ್ಯವು ಪ್ರಾರಂಭವಾಗಿರುವುದರಿಂದ ಬಿತ್ತನೆ ಬೀಜ ಮತ್ತು ರಸಗೊಬ್ಬರದ ತೀವ್ರ ಅಭಾವ ತಲೆದೋರಿದ್ದು ರೈತರು ಸಂಕಷ್ಟಕ್ಕೀಡಾಗಿರುತ್ತಾರೆ. ರಾಜ್ಯದ ಎಲ್ಲಾ ಕಡೆ ರೈತರು ಆಕ್ರೋಶಗೊಂಡು ಸಮಸ್ಯೆ ಬಿಗಡಾಯಿಸುವ ಮುನ್ನ ತುರ್ತಾಗಿ ಕ್ರಮವಹಿಸುವುದು ಇಂದಿನ ಅಗತ್ಯತೆ. ಉದಾಹರಣೆಗೆ ಬಿತ್ತನೆ ಸಮಯದಲ್ಲಿ ಬೇಕಾಗುವ ಡಿ.ಎ.ಪಿ ಗೊಬ್ಬರವು ರೈತರಿಗೆ ಬೇಕಿರುತ್ತದೆ. ಆದರೆ ಈ ಗೊಬ್ಬರವು ಕಾಳಸಂತೆಕೋರರ ಕೈಸೇರಿ ಪ್ರತಿ ಮೂಟೆ 500ರಿಂದ 700 ರೂಪಾಯಿ ನೀಡಿದರೆ ರೈತರಿಗೆ ದೊರೆಯುತ್ತದೆ. ಇದು ಅಧಿಕಾರಿಗಳ ಮೇಲಿರುವ ಸರ್ಕಾರದ ಹಿಡಿತವೇ?

ಅದೇ ರೀತಿ ಹತ್ತಿ ಬೀಜ ಪಡೆಯಲು ರೈತರ ಬವಣೆಯನ್ನು ವಿವರಿಸಲು ಅಸಾಧ್ಯ. ಹಾವೇರಿ ಗೋಲಿಬಾರ್ ಪ್ರಕರಣ ಮರುಕಳಿಸದಂತೆ ಕೂಡಲೇ ಕ್ರಮವಹಿಸಿ ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಿಸಲು ಸೂಕ್ತ ಕ್ರಮ ವಹಿಸುವಂತೆ ಆಗ್ರಹಿಸಿದೆ. ಕಾಳಸಂತೆಕೋರರ ಜೊತೆ ಶಾಮೀಲಾಗಿ ಇಲಾಖೆಯ ಅಧಿಕಾರಿಗಳು ಅಕ್ರಮವಾಗಿ ಗೊಬ್ಬರ ಮತ್ತು ಬೀಜಗಳನ್ನು ದಾಸ್ತಾನು ಮಾಡುತ್ತಿರುವುದನ್ನು ಪತ್ರಿಕೆಗಳಲ್ಲಿ ಹಾಗೂ ಪ್ರಸಾರ ಮಾಧ್ಯಮಗಳಲ್ಲಿ ಗಮನಿಸಿದ್ದು, ಸರ್ಕಾರ ಈ ಬಗ್ಗೆ ಏನು ಕ್ರಮ ತೆಗೆದುಕೊಂಡಿರುತ್ತದೆ? ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ತಾವು ರೈತರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂಧಿಸದೆ ಆಣೆ ಪ್ರಮಾಣ ಮಾಡುವುದರಲ್ಲಿ ಸಮಯ ವ್ಯರ್ಥ ಮಾಡುತ್ತಿರುವುದು ಸರಿಯೇ?

ಮೇಲ್ಕಂಡ ಎಲ್ಲಾ ಸಮಸ್ಯೆಗಳ ಬಗ್ಗೆ ಕೂಡಲೇ ತಾವು ಸೂಕ್ತ ಕ್ರಮವಹಿಸುವಂತೆ ಒತ್ತಾಯ ಮಾಡುತ್ತಾ, ದೇವಸ್ಥಾನಗಳಲ್ಲಿ ಆಣೆ ಪ್ರಮಾಣ ಮಾಡುತ್ತಾ ಬರೀ ಪೊಳ್ಳು ಘೋಷಣೆಗಳನ್ನು ರಾಜ್ಯದ ಜನತೆಗೆ ನೀಡುತ್ತಾ ಕಾಲಾಹರಣ ಮಾಡದೇ ರಾಜ್ಯದ ರೈತರ ಮತ್ತು ಜನತೆಯ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವತ್ತ ತಮ್ಮ ಗಮನಹರಿಸುವಂತೆ ಕೋರುತ್ತೇನೆ.

ಗೌರವಗಳೊಂದಿಗೆ,

ತಮ್ಮ ವಿಶ್ವಾಸಿ, ಸಿದ್ದರಾಮಯ್ಯ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+