ಕೃಷಿ ಸಚಿವ ಬಿ. ಸಿ. ಪಾಟೀಲ್ ದಿಟ್ಟ ನಡೆ; ರೈತರನ್ನು ವಂಚಿಸುವವರಿಗೆ ನಡುಕ
ಬೆಂಗಳೂರು, ಏಪ್ರಿಲ್ 29 : ಲಾಕ್ ಡೌನ್ ಸಂದರ್ಭದಲ್ಲಿ ರೈತರ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಂದು ಕಡೆ ವ್ಯಾಪಾರಿಗಳು ರೈತನ್ನು ವಂಚಿಸುತ್ತಿದ್ದಾರೆ. ರೈತರಿಗೆ ವಂಚಿಸುವವರಿಗೆ ತಕ್ಕ ಪಾಠ ಕಲಿಸಲು ಕೃಷಿ ಸಚಿವರು ಮುಂದಾಗಿದ್ದಾರೆ.
ನಕಲಿ ಬಿತ್ತನೆ ಬೀಜ, ನಕಲಿ ಗೊಬ್ಬರ, ಗೊಬ್ಬರಗಳ ಅಕ್ರಮ ದಾಸ್ತಾನು ಮುಂತಾದವುಗಳ ಮೂಲಕ ಕೆಲವು ವ್ಯಾಪಾರಿಗಳು ರೈತರನ್ನು ವಂಚನೆ ಮಾಡುತ್ತಿದ್ದಾರೆ. ಈ ಕುರಿತು ರೈತರು ಕೃಷಿ ಸಚಿವರಿಗೆ ನೇರವಾಗಿ ದೂರು ಸಲ್ಲಿಸಬಹುದಾಗಿದೆ.
ಕೃಷಿ ಸಚಿವ ಬಿ. ಸಿ. ಪಾಟೀಲ್ ರೈತರು ನೇರವಾಗಿ ದೂರು ನೀಡಲು ವಾಟ್ಸಪ್ ನಂಬರ್ ಬಿಡುಗಡೆ ಮಾಡಿದ್ದಾರೆ. ರೈತರನ್ನು ವಂಚಿಸುವಂತಹ ಪ್ರಕರಣಗಳು ಕಂಡು ಬಂದರೆ ತಕ್ಷಣ ನನ್ನ ಗಮನಕ್ಕೆ ತನ್ನಿ ಎಂದು ಸಚಿವರು ಮನವಿ ಮಾಡಿದ್ದಾರೆ.

ಕಳೆದ ವಾರ ಹುಬ್ಬಳ್ಳಿ-ಧಾರವಾಡದ ಅಮರಗೋಳದ ಜಗಜ್ಯೋತಿ ಶ್ರೀ ಬಸವೇಶ್ವರ ಎಪಿಎಂಸಿ ಆವರಣದಲ್ಲಿರುವ ವಿಜಯಾ ಶೀಥಲೀಕರಣ ಘಟಕದಲ್ಲಿ ಅಕ್ರಮವಾಗಿ ನಕಲಿ ಬೀಜಗಳನ್ನು ದಾಸ್ತಾನು ಮಾಡಲಾಗಿತ್ತು.
ಕೃಷಿ ಇಲಾಖೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅಂದಾಜು 270.6 ಕ್ವಿಂಟಲ್ ಮೆಕ್ಕೆಜೋಳದ ನಕಲಿ ಬಿತ್ತನೆ ಬೀಜವನ್ನು ವಶಪಡಿಸಿಕೊಂಡಿದ್ದರು. ನಕಲಿ ಬೀಜಗಳ ಮಾರಾಟ ಕಂಡುಬಂದರೆ ಸಚಿವರಿಗೆ ದೂರು ನೀಡಬಹುದಾಗಿದೆ.
ಹಾವೇರಿ ಜಿಲ್ಲೆ ಬ್ಯಾಡಗಿಯ ನವಲೆ ಪುಂಡಿಕೊಪ್ಪ ಕೋಲ್ಡ್ ಸ್ಟೋರೇಜ್ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 1500 ಕ್ವಿಂಟಾಲ್ ನಕಲಿ ಮೆಕ್ಕೆಜೋಳ ಬೀಜಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.
"ಸತ್ತ ಬೀಜಗಳನ್ನು, ನಕಲಿ ಬೀಜಗಳನ್ನು ಮಾರಾಟ ಮಾಡುವ ಪ್ರಕರಣ ಪತ್ತೆಯಾದರೆ ಇಂತಹ ನಕಲಿ ಬಿಡಿ ಬೀಜ ಮಾರಾಟಗಾರರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು" ಎಂದು ಕೃಷಿ ಸಚಿವರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ಕೃಷಿ ಸಚಿವರು ಲಾಕ್ ಡೌನ್ ಸಂದರ್ಭದಲ್ಲಿ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದು, ರೈತರ ಅಹವಾಲುಗಳನ್ನು ಆಲಿಸುತ್ತಿದ್ದಾರೆ. ಕೃಷಿ ಚಟುವಟಿಕೆಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ.












Click it and Unblock the Notifications