'ಆ ನಾಯಿಗಳು ಬೊಗಳುತ್ತಿದ್ದವು': ರೈತರ ಬಗ್ಗೆ ಹೀಗೆ ಹೇಳುವುದೇ ಮಿನಿಸ್ಟರ್!?
ನವದೆಹಲಿ, ಆಗಸ್ಟ್ 23: ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ನಡೆದ ಅಪಘಾತಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ನೀಡಿರುವ ಪ್ರತಿಕ್ರಿಯೆ ಹೊಸ ವಿವಾದಕ್ಕೆ ಕಾರಣವಾಗಿದೆ.
ಕಳೆದ ವರ್ಷ ನಾಲ್ವರು ರೈತರ ಸಾವಿಗೆ ಕಾರಣವಾಗಿದ್ದ ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದಲ್ಲಿ ತಮ್ಮ ಪುತ್ರ ಆಶಿಶ್ ಮಿಶ್ರಾ ಕೈವಾಡವಿರುವ ಆರೋಪದ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವೇಳೆ ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ಟಿಕಾಯತ್ ಬಗ್ಗೆ ಮಾತನಾಡಿದ್ದು, ಆತ ಎರಡು ಪೈಸೆ ಕಿಮ್ಮತ್ತಿಲ್ಲದ ವ್ಯಕ್ತಿ ಎಂದು ಹೀಗಳೆದಿದ್ದಾರೆ.
ತನ್ನ ಪುತ್ರನ ವಿರುದ್ಧ ಕೇಳಿ ಬಂದಿರುವ ಆರೋಪಗಳನ್ನು ತಳ್ಳಿ ಹಾಕಿರುವ ಸಚಿವ ಅಜಯ್ ಮಿಶ್ರಾ ಉದ್ಧಟತನದ ಹೇಳಿಕೆ ಕೊಟ್ಟಿದ್ದಾರೆ. ರೈತರನ್ನು ಶ್ವಾನಗಳಿಗೆ ಹೋಲಿಸಿದ ಸಚಿವರು ರೈತ ನಾಯಕರ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದಾರೆ. ಆ ದಿನ ಲಖೀಂಪುರ್ ಖೇರಿಯಲ್ಲಿ ಏನೆಲ್ಲಾ ನಡೆಯಿತು?, ಲಖೀಂಪುರ್ ಖೇರಿ ಘಟನೆ ಬಗ್ಗೆ ಮಿನಿಸ್ಟರ್ ಮಹಾನುಭಾವ ಹೇಳಿದ್ದೇನು?, ಅಸಲಿಗೆ ಲಖೀಂಪುರ್ ಖೇರಿಯಲ್ಲಿ ನಡೆದಿದ್ದು ಏನು?, ಅದೇ ಘಟನೆಯಲ್ಲಿ ಸಚಿವರ ಪುತ್ರನ ಪಾಲುದಾರಿಗೆ ಹೇಗಿತ್ತು?, ಈ ಘಟನೆಯ ನಂತರ ಏನೆಲ್ಲಾ ಆಯಿತು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಅನ್ನದಾತರನ್ನು ಶ್ವಾನಕ್ಕೆ ಹೋಲಿಸಿದ ಮಿನಿಸ್ಟರ್
"ಒಳ್ಳೆಯ ವೇಗದಲ್ಲಿ ಬರುವ ಕಾರಿನಲ್ಲಿ ನಾನು ಲಕ್ನೋಗೆ ಹೋಗುತ್ತಿದ್ದೇನೆ ಎಂದಿಟ್ಟುಕೊಳ್ಳಿ, ರಸ್ತೆಯಲ್ಲಿ ನಾಯಿಗಳು ಬೊಗಳುತ್ತವೆ ಅಥವಾ ಕಾರನ್ನು ಹಿಂಬಾಲಿಸುತ್ತವೆ, ಅದು ಅವುಗಳ ಸ್ವಭಾವ, ನಮ್ಮಲ್ಲಿ ಈ ಸ್ವಭಾವವಿಲ್ಲ. ನಾನು ಅದರ ಬಗ್ಗೆ ಏನನ್ನೂ ಹೇಳುವುದಿಲ್ಲ. ಈ ವಿಷಯಗಳು ಮುನ್ನೆಲೆಗೆ ಬಂದಾಗ, ನಾನು ಎಲ್ಲರಿಗೂ ಉತ್ತರ ನೀಡುತ್ತೇನೆ. ನಿಮ್ಮ ಬೆಂಬಲದಿಂದಾಗಿ ನಾನು ತುಂಬಾ ವಿಶ್ವಾಸವನ್ನು ಹೊಂದಿದ್ದೇನೆ ಎಂದು ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಹೇಳಿದ್ದಾರೆ. ಆ ಮೂಲಕ ರೈತರನ್ನು ಶ್ವಾನಗಳಿಗೆ ಹೋಲಿಸಿ ಉದ್ಧಟತನ ಪ್ರದರ್ಶಿಸಿದ್ದಾರೆ.

ಪತ್ರಕರ್ತರನ್ನು ಮೂರ್ಖರು ಎಂದು ಕರೆದ ಅಜಯ್ ಮಿಶ್ರಾ
"ಲಖೀಂಪುರ್ ಖೇರಿ ಪ್ರಕರಣದ ಬಗ್ಗೆ ಜನರು ಪ್ರಶ್ನೆಗಳನ್ನು ಎತ್ತುತ್ತಲೇ ಇದ್ದಾರೆ. ಪತ್ರಿಕೋದ್ಯಮದ ಜೊತೆಗೆ ಯಾವುದೇ ಸಂಬಂಧವಿಲ್ಲದ ಮೂರ್ಖ ಪತ್ರಕರ್ತರು ಸಹ ಇದ್ದಾರೆ. ಅಂಥವರು ಆಧಾರವಿಲ್ಲದ ವಿಷಯಗಳ ಬಗ್ಗೆ ಮಾತನಾಡುವ ಮೂಲಕ ಗೊಂದಲ ಸೃಷ್ಟಿಸಲು ಬಯಸುತ್ತಾರೆ," ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಹೇಳಿದ್ದಾರೆ.

ಈ ಮಿನಿಸ್ಟರ್, ಆ ರೈತ ನಾಯಕನ ಬಗ್ಗೆ ಹೇಳಿದ್ದೇನು?
"ರಾಕೇಶ್ ಟಿಕಾಯತ್ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಆ ಮನುಷ್ಯನಿಗೆ ಎರಡು ಪೈಸೆ ಕಿಮ್ಮತ್ತು ಇಲ್ಲ. ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಅವನು, ಠೇವಣಿಯನ್ನೂ ಕಳೆದುಕೊಂಡಿದ್ದನು. ಒಂದು ವೇಳೆ ಇಂಥ ವ್ಯಕ್ತಿಯು ಮತ್ತೊಬ್ಬರ ಬಗ್ಗೆ ದೂಷಿಸುವುದಾದರೆ, ಅದಕ್ಕೆ ಯಾವುದೇ ತೂಕ ಇರುವುದಿಲ್ಲ. ಅಂಥ ವ್ಯಕ್ತಿಗಳು ಮಾಡುವ ಆರೋಪಗಳಿಗೆ ನಾನು ಪ್ರತಿಕ್ರಿಯೆ ನೀಡುವುದೂ ಇಲ್ಲ," ಎಂದು ಅಜಯ್ ಮಿಶ್ರಾ ಹೇಳಿದ್ದಾರೆ.

ಲಖೀಂಪುರ್ ಖೇರಿಯಲ್ಲಿ ರಾಕೇಶ್ ಟಿಕಾಯತ್ ಪ್ರತಿಭಟನೆ
ಕಳೆದ ವಾರ ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ರಾಕೇಶ್ ಟಿಕಾಯತ್ ನೇತೃತ್ವದ ಭಾರತೀಯ ಕಿಸಾನ್ ಒಕ್ಕೂಟವು ಪ್ರತಿಭಟನೆ ನಡೆಸಿತು. 75 ಗಂಟೆಗಳ ನಿರಂತರ ಹೋರಾಟದ ಮೂಲಕ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಗಿತ್ತು. ಇದರ ಜೊತೆ ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ರಾಜೀನಾಮೆ ಪಡೆಯುವಂತೆ ಆಗ್ರಹಿಸಲಾಗಿತ್ತು.

ಲಖೀಂಪುರ್ ಖೇರಿಯಲ್ಲಿನ ಹಿಂಸಾಚಾರದ ಹಿನ್ನೆಲೆ
ಕಳೆದ 2021ರ ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು, ಒಬ್ಬ ಪತ್ರಕರ್ತ ಸೇರಿದಂತೆ ಎಂಟು ಮಂದಿ ಪ್ರಾಣ ಬಿಟ್ಟಿದ್ದರು. ಈ ಸಂಬಂಧ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ವಿರುದ್ಧ ರೈತರ ಮೇಲೆ ಕಾರು ಹರಿಸಿದ ಆರೋಪ ಮಾಡಲಾಗಿದ್ದು, ಅಕ್ಟೋಬರ್ 9ರಂದು ಪೊಲೀಸರು ಆರೋಪಿಗಳನ್ನು ಬಂಧಿಸಲಾಗಿತ್ತು.
ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಭೇಟಿಯನ್ನು ವಿರೋಧಿಸಿ ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಗುಂಪಿನ ಮೇಲೆ ಎಸ್ಯುವಿ ಹರಿದು ನಾಲ್ವರು ರೈತರು ಮೃತಪಟ್ಟಿದ್ದರು.












Click it and Unblock the Notifications