ಮಾ.22ಕ್ಕೆ ರೈತ ಸಂಯುಕ್ತ ಹೋರಾಟದಿಂದ ಬೃಹತ್ ವಿಧಾನಸೌಧ ಚಲೋ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ, ರೈತರು, ದಲಿತರು, ಕಾರ್ಮಿಕರು, ವಿದ್ಯಾರ್ಥಿ, ಯುವಜನ ಮತ್ತು ಮಹಿಳೆಯರ ಜ್ವಲಂತ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಮಾ.22ರಂದು "ಬೃಹತ್ ವಿಧಾನಸೌಧ ಚಲೋ" ಹೋರಾಟ ಹಮ್ಮಿಕೊಳ್ಳಲಾಗಿದೆ.
ಈ ಹೋರಾಟವನ್ನು "ಸಂಯುಕ್ತ ಹೋರಾಟ-ಕರ್ನಾಟಕ' ಸಂಘಟಿಸುತ್ತಿದ್ದು, ರಾಜ್ಯದ ರೈತರು, ದಲಿತರು, ಕಾರ್ಮಿಕರು, ವಿದ್ಯಾರ್ಥಿ, ಯುವಜನರು ಮತ್ತು ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು "ಸಂಯುಕ್ತ ಹೋರಾಟ-ಕರ್ನಾಟಕ" ಮನವಿ ಮಾಡಿದೆ. ಮಾ.22ರ ಬೆಳ್ಳಿಗೆ 11 ಗಂಟೆಗೆ ಬೆಂಗಳೂರು ನಗರ ರೈಲ್ವೆ ನಿಲ್ದಾಣದಿಂದ ಮೆರವಣಿಗೆ ಆರಂಭವಾಗಿ ಫ್ರೀಡಂ ಪಾರ್ಕ್ ನಲ್ಲಿ ಮಧ್ಯಾಹ್ನ 1 ಗಂಟೆಗೆ ಬಹಿರಂಗ ಸಭೆಯಾಗಿ ಏರ್ಪಡಲಿದೆ.
ರಾಕೇಶ್ ಸಿಂಗ್ ಟಿಕಾಯತ್ ಭಾಗವಹಿಸಲಿದ್ದಾರೆ
ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಹತ್ತಾರು ಸಾವಿರ ಜನರು ಭಾಗವಹಿಸಲಿರುವ ಈ ಬೃಹತ್ ಹೋರಾಟದಲ್ಲಿ ದೆಹಲಿಯ ರೈತ ಹೋರಾಟಗಾರರಾದ ರಾಕೇಶ್ ಸಿಂಗ್ ಟಿಕಾಯತ್, ಡಾ.ದರ್ಶನ್ ಪಾಲ್, ಯುದ್ಧವೀರ್ ಸಿಂಗ್ ಹಾಗೂ "ಸಂಯುಕ್ತ ಹೋರಾಟ-ಕರ್ನಾಟಕ"ದ ಮುಖಂಡರು ಅಲ್ಲದೆ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಾಣೇಹಳ್ಳಿ ಮಠ, ರೈತ ಮುಖಂಡರಾದ ಬಾಬಾಗೌಡ ಪಾಟೀಲ್, ಚುಕ್ಕಿ ನಂಜುಂಡಸ್ವಾಮಿ, ಡಾ.ಟಿ.ಎನ್ ಪ್ರಕಾಶ್, ಕುರುಬೂರ್ ಶಾಂತಕುಮಾರ್ ಹಾಗೂ ಬಿ.ಆರ್ ಪಾಟೀಲ್ರನ್ನು ಸಹ ಆಹ್ವಾನಿಸಲಾಗಿದೆ.
ರೈತ ಮುಖಂಡರ ಆತ್ಮಾವಲೋಕನಕ್ಕೆ ಸಕಾಲ...
ರೈತರು, ದಲಿತರು, ಕಾರ್ಮಿಕರ ಸಂಘಟನೆ
ರಾಜ್ಯದ ಬಹುತೇಕ ರೈತರು, ದಲಿತರು, ಕಾರ್ಮಿಕರು, ವಿದ್ಯಾರ್ಥಿ, ಯುವಜನರು, ಮಹಿಳಾ ಸಂಘಟನೆಗಳನ್ನು ಒಳಗೊಂಡು ರಚನೆಯಾಗಿರುವ "ಸಂಯುಕ್ತ ಹೋರಾಟ-ಕರ್ನಾಟಕ" ಈ ಹೋರಾಟದ ಮೂಲಕ ಮತ್ತಷ್ಟು ಸಂಘಟನೆಗಳನ್ನು ಒಳಗೊಂಡು ಇನ್ನಷ್ಟು ಪ್ರಬಲ ಚಳವಳಿಯನ್ನು ಸಂಘಟಿಸಲು ಮುಂದಾಗಿದೆ. ಈ ರೈತ ಪರ ಪ್ರಯತ್ನಗಳಿಗೆ ಹಾಗೂ ಹೋರಾಟಗಳಿಗೆ ರಾಜ್ಯದ ದುಡಿಯುವ ಜನತೆ ಮತ್ತಷ್ಟು ಶಕ್ತಿ ತುಂಬಬೇಕೆಂದು "ಸಂಯುಕ್ತ ಹೋರಾಟ-ಕರ್ನಾಟಕ" ವಿನಂತಿಸಿದೆ.
ಭರವಸೆಗಳನ್ನು ನೀಡಿದ್ದ ಬಿಜೆಪಿಯಿಂದ ಉಲ್ಟಾ
ತಾನು ಅಧಿಕಾರಕ್ಕೆ ಬಂದರೆ ರೈತರು ಮತ್ತಿತರೆ ದುಡಿಯುವ ಜನರು, ವಿದ್ಯಾರ್ಥಿ, ಯುವಜನ ಮತ್ತು ಮಹಿಳೆಯರ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವುದಾಗಿ ಭರವಸೆಗಳನ್ನು ನೀಡಿದ್ದ ಬಿಜೆಪಿಯು, ಕೇಂದ್ರ ಮತ್ತು ರಾಜ್ಯದಲ್ಲಿ ಕೃಷಿ ಭೂಮಿ, ಕೃಷಿ ಉತ್ಪಾದನೆ, ಕೃಷಿ ಮಾರುಕಟ್ಟೆ, ಚಿಲ್ಲರೆ ವ್ಯಾಪಾರ, ದೇಶದ ಬಾರಿ ದೊಡ್ಡ ಆಸ್ತಿಗಳಾದ ವಿದ್ಯುತ್, ಸಾರ್ವಜನಿಕ ಕ್ಷೇತ್ರದ ಬ್ಯಾಂಕ್, ವಿಮೆ, ರೈಲ್ವೆ, ಬಿ.ಇ.ಎಂ.ಎಲ್. ಇತ್ಯಾದಿಗಳನ್ನು ಮೂರು ಕಾಸಿಗೆ ಕಾರ್ಪೋರೇಟ್ ಕಂಪನಿಗಳಿಗೆ ಮಾರಾಟ ಮಾಡುತ್ತಿದೆ.
ರೈತ ಚಳವಳಿಯನ್ನು ರೈತ ಮುಖಂಡರೇ ಮುಂದುವರೆಸಲಿ; ಸಾಮಾಜಿಕ ಹೋರಾಟಗಾರರು ಕೊಂಚ ದೂರ ನಿಲ್ಲಿ...
ಮೂರು ಕೃಷಿ ಕಾಯ್ದೆಗಳು ಜಾರಿ
ಇದಕ್ಕೆ ಪೂರಕವಾಗಿ ಮೂರು ಕೃಷಿ ಕಾಯ್ದೆಗಳು, ವಿದ್ಯುತ್ ಮಸೂದೆ-2020, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿಗಳನ್ನು ಮಾಡಿದೆ. ಇವುಗಳ ಮೂಲಕ ದೇಶದ "ರೈತಾಪಿ ಕೃಷಿ"ಯನ್ನು ನಾಶ ಮಾಡಿ "ಕಂಪನಿ ಕೃಷಿ"ಯನ್ನು ಜಾರಿಗೆ ತರುತ್ತಿದೆ ಮಾತ್ರವಲ್ಲದೆ, ಇಡೀ "ಕೃಷಿ" "ಸಾರ್ವಜನಿಕ ಕೇತ್ರ"ವನ್ನು ಕಾರ್ಪೋರೇಟ್ ಕಂಪನಿಗಳಿಗೆ ಧಾರೆ ಎರೆಯುತ್ತಿದೆ ಎಂದು ಸಂಯುಕ್ತ ಹೋರಾಟ-ಕರ್ನಾಟಕ ಆರೋಪಿಸಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ
ಈ ನೀತಿಗಳ ಮುಂದುವರಿದ ಭಾಗವಾಗಿ, ಕಾರ್ಪೋರೇಟ್ ಕಂಪನಿಗಳು ತಮ್ಮ ಲೂಟಿಯನ್ನು ದೊಡ್ಡ ರೀತಿಯಲ್ಲಿ ಮುಂದುವರಿಸಲು ನೂರಾರು ವರ್ಷಗಳ ಧೀಮಂತ ಹೋರಾಟಗಳಿಂದ ಗಳಿಸಿದ್ದ ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ. ಅಸಂಘಟಿತ ವಲಯದಲ್ಲಿ ಕೋಟ್ಯಂತರ ಕಾರ್ಮಿಕರಿಗೆ ಕೆಲಸದ ಭದ್ರತೆ, ಕನಿಷ್ಠ ವೇತನದ ಪ್ರಶ್ನೆಗಳನ್ನು ಗಾಳಿಗೆ ತೂರಲಾಗುತ್ತಿದೆ. ಡಿಸೇಲ್, ಪೆಟ್ರೋಲ್ ಬೆಲೆ ಲೀಟರ್'ಗೆ ನೂರು ರೂ.ಗಳಿಗೆ ಸಮೀಪಿಸಿದೆ. ಅಲ್ಲದೆ ಸಾಮಾನ್ಯ ಜನರು ಬಳಸುವ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಪರೀತವಾಗಿ ಜನರು ತತ್ತರಿಸುತ್ತಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟ
ಇಂತಹ ನೀತಿಗಳಿಂದ ಆಕ್ರೋಶಗೊಂಡಿರುವ ಜನರ ಗಮನವನ್ನು ಬೇರೆಡೆ ತಿರುಗಿಸಲು ಗೋಹತ್ಯೆ ನಿಷೇಧ ಕಾಯ್ದೆ, ರಾಮ ಮಂದಿರ ನಿರ್ಮಾಣದ ಪ್ರಶ್ನೆ ಇತ್ಯಾದಿ ಭಾವನಾತ್ಮಕ ವಿಷಯಗಳನ್ನು ದೊಡ್ಡ ಪ್ರಮಾಣದಲ್ಲಿ ಎತ್ತಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸುಮಾರು ನಾಲ್ಕು ತಿಂಗಳುಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟದ ಭಾಗವಾಗಿ, ರಾಷ್ಟ್ರದ ಪ್ರಶ್ನೆಗಳ ಜೊತೆಗೆ ರಾಜ್ಯದ ಪ್ರಶ್ನೆಗಳನ್ನು ಆಧಾರಿಸಿ ಈ ಹೋರಾಟ ನಡೆಯುತ್ತಿದೆ ಎಂದು ಸಂಯುಕ್ತ ಹೋರಾಟ ತಿಳಿಸಿದೆ.
Recommended Video
ಮಾ.26ಕ್ಕೆ ಭಾರತ್ ಬಂದ್
ದೆಹಲಿಯ ರೈತ ಹೋರಾಟಕ್ಕೆ ಮಾರ್ಚ್ 26, 2021ಕ್ಕೆ ನಾಲ್ಕು ತಿಂಗಳು ತುಂಬಲಿದೆ. ರೈತರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಕೇಂದ್ರ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಾರ್ಚ್ 26, 2021ಕ್ಕೆ "ಭಾರತ್ ಬಂದ್"ಗೆ ದೆಹಲಿಯ "ಸಂಯುಕ್ತ ಕಿಸಾನ್ ಮೋರ್ಚಾ(ಎಸ್ಕೆಎಂ)" ಕರೆ ನೀಡಿದೆ.
ಈ ಬಗ್ಗೆ ಮಾರ್ಚ್ 22, 2021 ರ "ವಿಧಾನ ಸೌಧ ಚಲೋ" ಹೋರಾಟದ ಸಂದರ್ಭದಲ್ಲಿ ರಾಷ್ಟ್ರ ನಾಯಕರೊಂದಿಗೆ ಸಮಾಲೋಚಿಸಿ, "ಭಾರತ್ ಬಂದ್" ಭಾಗವಾಗಿ "ಕರ್ನಾಟಕ ಬಂದ್" ಮಾಡುವುದರ ಬಗ್ಗೆ ಅಂತಿಮ ಘೋಷಣೆಯನ್ನು ಮಾಡಲಾಗುವುದು.
"ರೈತಾಪಿ ಕೃಷಿ"ಯನ್ನು ಉಳಿಸುವ, ದೇಶ ಅಮೂಲ್ಯ ಆಸ್ತಿಗಳಾದ "ಸಾರ್ವಜನಿಕ ಉದ್ದಿಮೆ"ಗಳನ್ನು ರಕ್ಷಿಸುವ, ಆ ಮೂಲಕ ದೇಶದ ಸ್ವಾತಂತ್ರ್ಯ, ಸಾರ್ವಭೌಮತೆಯನ್ನು ಬಲಪಡಿಸುವ ಈ ದೇಶಪ್ರೇಮಿ ಹೋರಾಟವನ್ನು ಎಲ್ಲಾ ದೇಶ ಪ್ರೇಮಿಗಳು ಬೆಂಬಲಿಸಿ ಭಾಗವಹಿಸಬೇಕೆಂದು "ಸಂಯುಕ್ತ ಹೋರಾಟ-ಕರ್ನಾಟಕ" ಮನವಿ ಮಾಡಿದೆ.