ಹೋದ್ಯಾ ಪಿಶಾಚಿ ಅಂದ್ರೆ… ಬಂದೆ ಗವಾಕ್ಷೀಲಿ… ಎಂದ ಮಿಡತೆಗಳು
ಮತ್ತೆ ಮತ್ತೆ ಮಿಡತೆಗಳ ಹಾವಳಿ ಎದುರಾಗುತ್ತಿದೆ, ಮುಂದುವರೆಯುತ್ತಿದೆ. ಬೆಳೆ ನಷ್ಟ ಹೆಚ್ಚೇನೂ ಆಗಿಲ್ಲವಾದರೂ ಇವುಗಳ ಉಪಟಳ ತಪ್ಪಿಲ್ಲ. ನೂರಾರು ಕಾರ್ಯಪಡೆಗಳು, ಹತ್ತಾರು ವಿಜ್ಞಾನಿಗಳು, ಆರೇಳು ದೇಶಗಳಲ್ಲಿ ಈ ಮಿಡತೆಗಳ ಸಮೂಹವನ್ನು ಎದುರಿಸಲು ಕಾರ್ಯೋನ್ಮುಖವಾಗಿದ್ದಾರೆ. ಮಿಡತೆಗಳ ವಿರುದ್ಧ ಸಮರ ಮುಂದುವರೆದಿದೆ.
ದೊಡ್ಡ ಸಂಕಷ್ಟ ಎದುರಾದರೆ ಸಣ್ಣ ಪುಟ್ಟ ಸಮಸ್ಯೆಗಳು ಮರೆಯಾಗುವ ಹಾಗೆ ಕೊರೊನಾ ಬಿಕ್ಕಟ್ಟಿನ ನಡುವೆ ಮಿಡತೆಗಳ ಹಾವಳಿ ಗೌಣವಾಗಿದೆ. ಹಾಗಂತ ನಿಯಂತ್ರಣ ಕಾರ್ಯಕ್ರಮಗಳು ನಿಂತಿಲ್ಲ.
ಜುಲೈ ಮಧ್ಯದಲ್ಲಿ ಮತ್ತೆ ಮರುಭೂಮಿ ಮಿಡತೆಗಳ ದಾಳಿ; ನಿಯಂತ್ರಣಕ್ಕೆ ಏನೆಲ್ಲಾ ಆಗಿದೆ?
ಈಚಿನ ವರದಿ ಹೀಗಿದೆ...
ಏಪ್ರಿಲ್ 11 ರಿಂದ ಆಗಸ್ಟ್ 18ರವರೆಗೆ ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್, ಗುಜರಾತ್, ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳಲ್ಲಿ 2,76,267 ಹೆಕ್ಟೇರ್ ಪ್ರದೇಶದಲ್ಲಿ ಮಿಡತೆಗಳ ನಿಯಂತ್ರಣ ಕಾರ್ಯಕ್ರಮಗಳನ್ನು (ಸಿಂಪರಣೆ) ಜಾರಿಗೊಳಿಸಲಾಗಿದೆ.
ಕೇಂದ್ರ ಸರ್ಕಾರದ 200 ಸಿಬ್ಬಂದಿ ಹಾಗೂ 104 ಮಿಡತೆ ನಿಯಂತ್ರಣ ಪಡೆಗಳು ಕಾರ್ಯನಿರ್ವಹಿಸುತ್ತಿವೆ. ರಾಜಸ್ಥಾನದ ಬಾರ್ಮೆರ್, ಜೈಸ್ಲಮಿರ್, ಬಿಕನೆರ್, ನಾಗೂರ್ ಮತ್ತು ಫಲೋಡಿ ಪ್ರದೇಶಗಳಲ್ಲಿ ಕೀಟನಾಶಕಗಳನ್ನು ಸಿಂಪಡಿಸಲು 15 ಡ್ರೋನ್ ಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಅಗತ್ಯವಿದ್ದಾಗ ಬಳಸಲೆಂದು ಬೆಲ್ ಹೆಲಿಕ್ಯಾಪ್ಟರ್ ಕೂಡ ಸಿದ್ಧವಿದೆ.ರಾಜಸ್ಥಾನದಲ್ಲಿ ಸ್ವಲ್ಪ ಪ್ರಮಾಣದ ಬೆಳೆ ನಷ್ಟ
ರಾಜಸ್ಥಾನದಲ್ಲಿ ಕೆಲವು ಕಡೆ ಸ್ವಲ್ಪ ಪ್ರಮಾಣದ ಬೆಳೆ ನಷ್ಟವಾಗಿರುವುದನ್ನು ಬಿಟ್ಟರೆ ಗುಜರಾತ್, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಛತ್ತೀಸ್ ಘಡ, ಬಿಹಾರ ಮತ್ತು ಹರಿಯಾಣ ರಾಜ್ಯಗಳಲ್ಲಿ ಹೆಚ್ಚಿನ ಬೆಳೆ ನಷ್ಟವಾಗಿಲ್ಲ.
"CALM BEFORE STORM" ಎಂಬಂತೆ ಮುಂದಿನ ದಿನಗಳಲ್ಲಿ ಮಿಡತೆಗಳ ದಾಳಿ ಭೀಕರವಾಗಲಿದೆ
ಭಾರತ, ಪಾಕಿಸ್ತಾನ ಗಡಿಯಲ್ಲಿ ಮತ್ತೆ ಮಿಡತೆ ಹಾವಳಿ?
ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಕಾರ (14 ಆಗಸ್ಟ್ 2020) ಆಫ್ರಿಕಾದಲ್ಲಿ ಮಿಡತೆ ಸಮೂಹಗಳ ದಾಳಿ ಮುಂದುವರೆಯುತ್ತಿದೆ. ಯಮೆನ್ ಪ್ರಾಂತ್ಯದಲ್ಲಿ ಉತ್ತಮ ಮಳೆಯಾಗಿದೆ. ಇಲ್ಲಿ ಹೆಚ್ಚಿನ ಮಿಡತೆ ಮರಿಗಳು ಹಾಗೂ ಮಿಡತೆ ಸಮೂಹಗಳು ಗರಿಗೆದರುವ ಸಾಧ್ಯತೆ ಹೆಚ್ಚಿದೆ, ಅಲ್ಲದೆ ಭಾರತ ಮತ್ತು ಪಾಕಿಸ್ತಾನ ಗಡಿ ಪ್ರದೇಶಗಳತ್ತ ಹಾರಿಬರುವ ಸಾಧ್ಯತೆಯೂ ಹೆಚ್ಚಿದೆ.
ಜಾರಿಯಲ್ಲಿದೆ ಮಿಡತೆ ನಿಯಂತ್ರಣ ಕಾರ್ಯಯೋಜನೆ
ಮಿಡತೆಗಳನ್ನು ಸಮರ್ಥವಾಗಿ ನಿಯಂತ್ರಿಸಲು ಆಫ್ಘಾನಿಸ್ತಾನ, ಭಾರತ, ಇರಾನ್ ಮತ್ತು ಪಾಕಿಸ್ತಾನಗಳ ನಡುವೆ ಪ್ರತಿ ವಾರ ಆನ್ ಲೈನ್ ಮೀಟಿಂಗ್ ಗಳು ನಡೆಯುತ್ತಿವೆ. ಈವರೆಗೆ 22 ತಜ್ಞರ ಸಭೆಗಳು ನಡೆದಿರುವುದಾಗಿ ಎಫ್ ಎಒ ಹೇಳಿದೆ. ಮಿಡತೆ ನಿಯಂತ್ರಣ ಕಾರ್ಯಯೋಜನೆ ಜಾರಿಯಲ್ಲಿದೆ.