ಸಚಿವರಿಗೆ ಹೊಸ ಕಾರು, ನಿವಾಸ ನವೀಕರಣ ಇಲ್ಲ; ಎಚ್ಡಿಕೆ ಖಡಕ್ ನಿರ್ಧಾರ
ಬೆಂಗಳೂರು, ಜೂನ್ 21: ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ನಿರ್ಧರಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಸಚಿವರು ಹೊಸ ಕಾರು ಖರೀದಿ, ನಿವಾಸ, ಕಚೇರಿ ನವೀಕರಣ ಮಾಡಿಕೊಳ್ಳದಂತೆ ಸೂಚಿಸಿದ್ದಾರೆ.
ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಈ ಬಗ್ಗೆ ಮೌಖಿಕ ಆದೇಶ ಮಾಡಿರುವ ಮುಖ್ಯಮಂತ್ರಿಗಳು ಹೊಸ ಕಾರು ಕರೀದಿ, ನಿವಾಸ ಅಥವಾ ಕಚೇರಿ ನವೀಕರಣದ ಅರ್ಜಿಗಳು ಬಂದರೆ ಮಾನ್ಯ ಮಾಡದಂತೆ ಸೂಚಿಸಿದ್ದಾರೆ.
ದುಂದುವೆಚ್ಚ ಕಡಿವಾಣಕ್ಕಾಗಿ ಪಣ ತೊಟ್ಟಿರುವ ಮುಖ್ಯಮಂತ್ರಿಗಳೂ ತಾವೂ ಸಹ ಮಿತವ್ಯಯ ಮಾಡುವ ಮೂಲಕ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಮಾದರಿಯಾಗುವ ಪ್ರಯತ್ನ ಮಾಡುತ್ತಿದ್ದಾರೆ.

ಹೊಸ ಕಾರಿಗೆ 20 ಕೋಟಿ ಖರ್ಚು
ಹೊಸ ಸರ್ಕಾರ ಬಂದಾಗ ಸಚಿವರು ಹಳೆ ಕಾರು ಬಿಟ್ಟು ಹೊಸ ಕಾರು ಖರೀದಿ ಮಾಡುವ ಪರಿಪಾಟ ಮುಂಚಿನಿಂದ ಇದೆ ಆದರೆ ಪ್ರಸ್ತುತ ಸಂಪುಟದಲ್ಲಿ 27 ಸದಸ್ಯರಿದ್ದಾರೆ ಎಲ್ಲರಿಗೂ ಹೊಸ ಕಾರು ಖರೀದಿ ಮಾಡಬೇಕೆಂದರೆ ಸರ್ಕಾರಕ್ಕೆ ಸುಮಾರು 20 ಕೋಟಿ ಖರ್ಚಾಗುತ್ತದೆ.

ಸಾಲಮನ್ನಾಕ್ಕೆ ಸಂಪನ್ಮೂಲ ಕ್ರೂಡೀಕರಣ
ರೈತ ಸಾಲಮನ್ನಾ, ಹಿರಿಯರ ಮಾಸಾಶನ ಹೆಚ್ಚಳದಂತಹಾ ಭಾರಿ ಸಂಪನ್ಮೂಲ ಬೇಡುವ ಯೋಜನೆಗಳಿಗೆ ಕೈ ಹಾಕಿರುವ ಸರ್ಕಾರ ಸಂಪನ್ಮೂಲ ಕ್ರೂಡೀಕರಣಕ್ಕಾಗಿ ಒದ್ದಾಡುತ್ತಿದ್ದು ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಲೇ ಬೇಕಿರುವ ಕಾರಣ ಮುಖ್ಯಮಂತ್ರಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ.

ತಾವೂ ಮಿತವಾಗಿ ಖರ್ಚು ಮಾಡುತ್ತಿದ್ದಾರೆ ಎಚ್ಡಿಕೆ
ಖರ್ಚು ವೆಚ್ಚ ಗತ್ತಿಸುವ ನಿರ್ಣಯ ಕೈಗೊಂಡಿರುವ ಕುಮಾರಸ್ವಾಮಿ ಅವರು ಸ್ವತಃ ತಾವೂ ಕೂಡ ಮಿತವ್ಯಯದ ಖರ್ಚುಗಳನ್ನು ಮಾಡಿ ಸಂಪುಟ ಸಹೋದ್ಯೋಗಿಗಳಿಗೆ ಮಾದರಿಯಾಗಿದ್ದಾರೆ. ಎರಡು ಬಾರಿ ದೆಹಲಿಗೆ ತೆರಳಿದ್ದರೂ ವಿಶೇಷ ವಿಮಾನ ಬಳಸದೆ ಸಾಮಾನ್ಯ ಪ್ರಯಾಣಿಕರಿಂದ ಪ್ರಯಾಣಿಸಿದ್ದರು. ವಿಶೇಷ ಸಂದರ್ಭಗಳಲ್ಲಿ ಅಲ್ಲದೆ ವಿಶೇಷ ವಿಮಾನವನ್ನು ಬಳಸುವುದಿಲ್ಲ ಎಂದು ಅವರು ನಿರ್ಧರಿಸಿದ್ದಾರೆ.

ಸ್ವಂತ ಕಾರನ್ನೇ ಬಳಸುತ್ತಿರುವ ಸಿಎಂ
ಕುಮಾರಸ್ವಾಮಿ ಅವರು ಸರ್ಕಾರ ನೀಡಿದ ಕಾರು ಬಳಸುವುದು ಬಿಟ್ಟು ತಮ್ಮದೇ ಕಾರನ್ನು ಬಳಸುತ್ತಿದ್ದಾರೆ. ಅಲ್ಲದೆ ಅದರ ಇಂಧನ ವೆಚ್ಚವನ್ನೂ ತಾವೇ ಭರಿಸುತ್ತಿರುವುದಾಗಿಯೂ ಹಿಂದೆ ಹೇಳಿಕೆ ನೀಡಿದ್ದರು. ತಮ್ಮ ಮುಂಗಾವಲು ಹಾಗೂ ಬೆಂಗಾವಲು ವಾಹನಗಳ ಕಡಿತಕ್ಕೂ ಅವರು ಮನವಿ ಮಾಡಿದ್ದಾರೆ.

ನಿವಾಸ, ಕಚೇರಿ ನವೀಕರಣವೂ ಬೇಡ
ಸಚಿವರುಗಳಾದವರು ತಮಗೆ ನಿಡಲಾಗುವ ಸರ್ಕಾರಿ ನಿವಾಸವನ್ನು ಅಥವಾ ಕಚೇರಿಯನ್ನು ತಮ್ಮಿಷ್ಟದಂತೆ, ವಾಸ್ತು ಪ್ರಕಾರ ನವೀಕರಣಗೊಳಿಸಿಕೊಳ್ಳುವ ಪದ್ಧತಿಯೂ ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಕಳೆದ ಸರ್ಕಾರದಲ್ಲಿ ಕೂಡ ಕೆಲವು ಸಚಿವರು ಈ ರೀತಿ ನವೀಕರಣ ಮಾಡಿ ಕೊಂಡಿದ್ದರು ಇದು ವಿವಾದ ಕೂಡಾ ಆಗಿತ್ತು. ಆದರೆ ಈ ಬಾರಿ ಕುಮಾರಸ್ವಾಮಿ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ನವೀಕರಣಕ್ಕೆ ಕೋಟ್ಯಂತರ ವೆಚ್ಚವಾಗುವ ಕಾರಣ ಅನುಮತಿಯನ್ನು ನಿರಾಕರಿಸುವಂತೆ ಸೂಚಿಸಿದ್ದಾರೆ.












Click it and Unblock the Notifications