ಕಲಬುರಗಿ ಜಿಲ್ಲೆಯ ರೈತರಿಗೆ ಸಿಹಿ ಸುದ್ದಿ: ಇಲ್ಲಿದೆ ವಿವರ
ಕಲಬುರಗಿ, ಜನವರಿ 29: ಇತ್ತೀಚಿಗೆ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ನಾಟಿ ಮಾಡುವ ಯಂತ್ರ, ಕಟಾವು ಯಂತ್ರ, ಕೀಟನಾಶಕ ಸಿಂಪಡಣೆ ಯಂತ್ರ ಹೀಗೆ ಅನೇಕ ಯಂತ್ರಗಳ ಸಹಾಯವನ್ನು ರೈತರು ಪಡೆದುಕೊಳ್ಳುತ್ತಿದ್ದು, ಇದರಿಂದ ಕೃಷಿ ಕಾರ್ಮಿಕರ ಕೊರತೆ ನೀಗುತ್ತಿದೆ. ಇನ್ನು ಇತ್ತೀಚಿಗೆ ಕೃಷಿ ಡ್ರೋನ್ಗಳು ಸಹ ಮಾರುಕಟ್ಟೆಗೆ ಬಂದಿದ್ದು, ಕೆಲವೇ ಕೆಲ ರೈತರಷ್ಟೇ ಇದರ ಉಪಯೋಗ ಪಡೆಯುತ್ತಿದ್ದಾರೆ. ದುಬಾರಿ ವೆಚ್ಚ ಭರಿಸಲಾಗದೇ ಕೃಷಿ ಡ್ರೋನ್ ಬಳಕೆಗೆ ಹಿಂದೇಟು ಹಾಕುತ್ತಿರುವ ರೈತರ ಸಹಾಯಕ್ಕಾಗಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಕೃಷಿ ಡ್ರೋನ್ ಸಿಂಪಡಣೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸದ್ಯ ಕಲಬುರಗಿ ಜಿಲ್ಲೆಯಲ್ಲಿ ನಾಲ್ಕು ಕೃಷಿ ಡ್ರೋನ್ ಸಿಂಪಡಣೆ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.

ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ, ಕಲಬುರಗಿ ಜಿಲ್ಲೆಯ ರೇವೂರ್ ಬಿ, ಉಡಗಿ, ನಾಲವಾರ ಮತ್ತು ಕಮಲಾಪುರ ಹೋಬಳಿ ಮಟ್ಟದಲ್ಲಿ ನಾಲ್ಕು ಕೃಷಿ ಡ್ರೋನ್ ಸಿಂಪಡಣೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಯೋಜನೆಗೆ ನೆರವಾಗಲು 16 ಕೃಷಿ ಡ್ರೋನ್ಗಳು, 15 ಬ್ಯಾಟರಿ ಚಾಲಿತ ತ್ರಿಚಕ್ರ ವಾಹನಗಳು ಮತ್ತು ಮೂರು ಜನರೇಟರ್ಗಳು ಸೇರಿದಂತೆ 34 ಅತ್ಯಾಧುನಿಕ ಯಂತ್ರಗಳನ್ನು ಖರೀದಿಸಲಾಗಿದೆ.
ಬಾಡಿಗೆ ಆಧಾರದ ಮೇಲೆ ಕೈಗೆಟುಕುವ ಡ್ರೋನ್ ಸೇವೆಗಳನ್ನು ಒದಗಿಸುವ ಮೂಲಕ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬೆಂಬಲ ನೀಡುವುದು, ಕೀಟಗಳು ಹಾಗೂ ರೋಗಬಾಧೆಗಳನ್ನು ನಿರ್ವಹಿಸಲು ಸಹಾಯ ಮಾಡುವುದು, ಬೆಳೆ ನಷ್ಟ ತಗ್ಗಿಸುವುದು, ಇಳುವರಿ ಸುಧಾರಿಸುವುದು ಮತ್ತು ಕೀಟನಾಶಕಗಳು ಹಾಗೂ ರಸಗೊಬ್ಬರಗಳ ಅತ್ಯುತ್ತಮ ಬಳಕೆಯ ಮೂಲಕ ನಿಖರ ಕೃಷಿಯನ್ನು ಉತ್ತೇಜಿಸುವುದು ಈ ಯೋಜನೆಯ ಗುರಿಯಾಗಿದೆ.

ಇದು ಕೃಷಿಯಲ್ಲಿನ ಕಾರ್ಮಿಕರ ಕೊರತೆಯಂತಹ ಪ್ರಮುಖ ಸಮಸ್ಯೆಗೆ ಕೂಡ ಪರಿಹಾರ ನೀಡುತ್ತದೆ. ಅಲ್ಲದೇ, ರೈತರು ಕೀಟನಾಶಕಗಳಿಗೆ ಒಡ್ಡಿಕೊಳ್ಳುವಂತಹ ಅಪಾಯವನ್ನು ಕಡಿಮೆ ಮಾಡುತ್ತದೆ. ಮತ್ತು ಉತ್ತಮ ಸುರಕ್ಷತೆ ಹಾಗೂ ದಕ್ಷತೆಯನ್ನು ಖಾತರಿಪಡಿಸುತ್ತದೆ. ರೈತರು ಆನ್ಲೈನ್ ಪ್ಲಾಟ್ಫಾರ್ಮ್ಗಳು ಅಥವಾ ಕ್ಯೂಆರ್ ಕೋಡ್ಗಳ ಮೂಲಕ ಈ ಸೇವೆಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು.
ಈ ಕಾರ್ಯಕ್ರಮವನ್ನು ಕಲಬುರಗಿ ಜಿಲ್ಲೆಯ ಎಲ್ಲಾ 32 ಹೋಬಳಿಗಳಿಗೆ ವಿಸ್ತರಿಸುವ ಗುರಿ ಇದೆ. ಅತ್ಯಾಧುನಿಕ ಕೃಷಿ ತಂತ್ರಜ್ಞಾನವನ್ನು ನೇರವಾಗಿ ರೈತರ ಮನೆ ಬಾಗಿಲಿಗೆ ತರುವ ಗುರಿ ನಮ್ಮದಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.












Click it and Unblock the Notifications