ಕೋವಿಡ್ ಸಂಕಷ್ಟದಲ್ಲಿ ಮೀನುಗಾರಿಕೆ ಭವಿಷ್ಯದ ಬಗ್ಗೆ ರಾಷ್ಟ್ರೀಯ ವೆಬಿನಾರ್
ಕೋವಿಡ್ ಸಂಕಷ್ಟದ ಸಮಯದಲ್ಲಿ ಮೀನುಗಾರಿಕೆ ಮತ್ತು ಅಕ್ವಾಕಲ್ಚರ್ (ಜಲಚರ ಸಾಕಣೆ) ಸವಾಲುಗಳು ಹಾಗೂ ಮುಂದಿನ ಹಾದಿಯ ಬಗ್ಗೆ ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ (ASSOCHAM), The Marine Products Development Exports Authority, ಕರ್ನಾಟಕ ಸರ್ಕಾರ, ಮಿಜೋರಾಮ್ ಸರ್ಕಾರದ ಮೀನುಗಾರಿಕೆ ಇಲಾಖೆ, ನಬಾರ್ಡ್ ಇನ್ನಿತರ ಸಂಸ್ಥೆಗಳ ಸಹಯೋಗದೊಂದಿಗೆ ರಾಷ್ಟ್ರೀಯ ವೆಬಿನಾರ್ ಅನ್ನು ಗುರುವಾರ, ಜುಲೈ 16ರಂದು ಹಮ್ಮಿಕೊಳ್ಳಲಾಗಿತ್ತು.
ರಾಷ್ಟ್ರ ಮಟ್ಟದ ಈ ವೆಬಿನಾರ್ ನಲ್ಲಿ ದೇಶದ ಪ್ರಮುಖ ಉದ್ದಿಮೆದಾರರು, ರಫ್ತುದಾರರು, ಅಧಿಕಾರಿಗಳು, ಶಿಕ್ಷಣ ತಜ್ಞರು, ರೈತ ಉತ್ಪಾದಕ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಡೈರಿ ಸಚಿವ ಪ್ರತಾಪ್ ಚಂದ್ರ ಸಾರಂಗಿ ಭಾಗವಹಿಸಿದ್ದು, ಮೀನುಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಹಿತಿಗಳನ್ನು ಹಂಚಿಕೊಂಡರು.
ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆ (PMMSY) ಅಡಿಯಲ್ಲಿ ಮೀನುಗಾರಿಕೆ ಹಾಗೂ ಜಲಚರ ಸಾಕಾಣೆಗಾಗಿ ಮೀಸಲಿಟ್ಟಿರುವ 20,000 ಕೋಟಿ ರೂಪಾಯಿ ಈ ಕ್ಷೇತ್ರಕ್ಕೆ ಸಹಾಯವಾಗಲಿದೆ. ಈ ಯೋಜನೆಯ ಅಡಿಯಲ್ಲಿ ಅನೇಕ ಉಪಯೋಗಗಳಿವೆ. ಈ ಯೋಜನೆಯು ಮೀನುಗಾರಿಕೆ ಕ್ಷೇತ್ರವನ್ನು ಸ್ವಾವಲಂಬಿಯನ್ನಾಗಿಸುತ್ತದೆ. ಸುಮಾರು 50 ಲಕ್ಷ ಜನರಿಗೆ ಉದ್ಯೋಗವನ್ನೂ ಒದಗಿಸುತ್ತದೆ ಎಂದು ಹೇಳಿದರು.

PMMSY ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಇಲಾಖೆಯ ಕಾರ್ಯದರ್ಶಿ ಡಾ.ರಾಜೀವ್ ರಾಜನ್ "ಈ ಯೋಜನೆ ಮೇ 2020ರಲ್ಲಿ ಆರಂಭವಾಯಿತು. ಇದರಲ್ಲಿ ಸುಮಾರು 100 ವೈವಿಧ್ಯಮಯ ಚಟುವಟಿಕೆಗಳಿವೆ (ಉಪಯೋಜನೆಗಳಿವೆ). ಯೋಜನಾ ಬಜೆಟ್ ಗಾತ್ರ 20,050 ಕೋಟಿ ರೂ.ಗಳು. ಮೀನುಗಾರಿಕೆಗೆ ಸಂಬಂಧಿಸಿದ ಎಲ್ಲಾ ಪಾಲುದಾರರೊಂದಿಗಿನ ಸಹಭಾಗಿತ್ವ ಯೋಜನಾ ಗುರಿ ತಲುಪಲು ಬಹಳ ಮುಖ್ಯ. ಒಂದು ಲಕ್ಷ ಕೋಟಿ ಮೌಲ್ಯದ ರಫ್ತು ಗುರಿ ಇಟ್ಟುಕೊಳ್ಳಲಾಗಿದೆ. ಹೆಚ್ಚುವರಿ 70 ಲಕ್ಷ ಟನ್ ಉತ್ಪಾದನೆ ಗುರಿ ಹೊಂದಿದ್ದೇವೆ. 55 ಲಕ್ಷ ಉದ್ಯೋಗ ಸೃಷ್ಟಿಯೂ ಯೋಜನೆಯ ಉದ್ದೇಶಗಳಲ್ಲೊಂದು ಎಂದು ವಿವರಿಸಿದರು.

ದಿ ಮರೈನ್ ಪ್ರಾಡಕ್ಟ್ಸ್ ಎಕ್ಸ್ಪೋರ್ಟ್ ಡೆವಲಪ್ಮೆಂಟ್ ಅಥಾರಿಟಿಯ ಅಧ್ಯಕ್ಷ ಕೆ.ಎಸ್. ಶ್ರೀನಿವಾಸ್ ಮಾತನಾಡಿ, ತಮ್ಮ ಸಂಸ್ಥೆಯು ಕೋವಿಡ್ ಸಂಕಷ್ಟ ಕಾಲದಲ್ಲಿ ಇಡೀ ಕ್ಷೇತ್ರದ ಬಿಕ್ಕಟ್ಟುಗಳನ್ನು ಪರಿಹರಿಸಲು ಕಾಲಕಾಲಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆಹಾರ ಭದ್ರತೆಯ ವಿಚಾರವಾಗಿ ನಮ್ಮ ಆದ್ಯತೆಯಿದೆ ಎಂದರು.












Click it and Unblock the Notifications