ಚಳಿಗಾಲದ ಬೆಳೆ ಕಲ್ಲಂಗಡಿ: ಸುಧಾರಿತ ಬೇಸಾಯ ಕ್ರಮದ ಕುರಿತು ರೈತರಿಗೆ ಸಲಹೆಗಳು
ಕೊಪ್ಪಳ, ಡಿಸೆಂಬರ್ 28: ಕಲ್ಲಂಗಡಿ ಒಂದು ಚಳಿಗಾಲದ ಬೆಳೆಯಾಗಿದೆ. ಅಕ್ಟೋಬರ್ನಿಂದ ಜನವರಿ ತನಕ ಈ ಬೆಳೆಯು ಉತ್ತಮ ಇಳುವರಿಯನ್ನು ನೀಡುತ್ತದೆ. ಇತ್ತೀಚೆಗೆ ಕಲ್ಲಂಗಡಿಯನ್ನು ವರ್ಷಪೂರ್ತಿ ಬೆಳೆಯಲಾಗುತ್ತಿದ್ದು, ಹಲವಾರು ಕಂಪನಿಗಳು ರೈತಿಗೆ ಬೀಜವನ್ನು ಪೂರೈಕೆ ಮಾಡುತ್ತದೆ. ರೈತರು ಲಾಭದಾಯಕವಾಗಿ ಕಲ್ಲಂಗಡಿ ಕೃಷಿ ಕೈಗೊಳ್ಳುವುದು ಹೇಗೆ? ಎಂದು ಸಲಹೆಗಳನ್ನು ನೀಡಲಾಗಿದೆ.
ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿ ಕಲ್ಲಂಗಡಿ ಒಂದು ಮುಖ್ಯವಾದ ಬೆಳೆಯಾಗಿದ್ದು, ಅತ್ಯಂತ ಲಾಭದಾಯಕವಾದ ಅಲ್ಪಾವಧಿ ಬೆಳೆಯಾಗಿದೆ. ರೈತರು ಹೆಚ್ಚಿನ ಕಡೆ ಕಲ್ಲಂಗಡಿಯನ್ನು ಬೆಳೆಯುತ್ತಿದ್ದಾರೆ. ಕಲ್ಲಂಗಡಿ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಕುರಿತು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ರೈತರಿಗೆ ಸಲಹೆಗಳನ್ನು ಕೊಡಲಾಗಿದೆ.

ಜನವರಿಯಲ್ಲಿ ನಡೆಯುವ ಶ್ರೀ ಗವಿಸಿದ್ದೇಶ್ವರ ಜಾತ್ರೆಗೆ ಹಣ್ಣುಗಳನ್ನು ಮಾರಾಟ ಮಾಡುವ ಆಲೋಚನೆ ಹಾಕಿಕೊಂಡಿದ್ದಲ್ಲಿ ರೈತರಿಗೆ ಹೆಚ್ಚಿನ ಲಾಭ ದೊರೆಯಲಿದೆ. ಕಲ್ಲಂಗಡಿಯನ್ನು ಸಾಮಾನ್ಯವಾಗಿ ಮಸಾರಿ ಮತ್ತು ಮರಳು ಮಿಶ್ರಿತ ಕಪ್ಪು ಮಣ್ಣು ಮತ್ತು ನೀರು ಬಸಿದು ಹೋಗುವ ಮಣ್ಣು ಮತ್ತು ಕೆರೆ ಹಾಗೂ ನದಿ ತೀರ ಪ್ರದೇಶಗಳಲ್ಲಿ ಉತ್ತಮವಾಗಿ ಬೆಳೆಯಬಹುದಾಗಿದೆ.
ಮಣ್ಣಿನ ರಸ ಸಾರ 6 ರಿಂದ 7, ಉಷ್ಣಾಂಶ 15 ಡಿಗ್ರಿ ಸೆಲ್ಸಿಯಸ್ನಿಂದ 40 ಡಿಗ್ರಿ ಸೆಲ್ಸಿಯಸ್ ಆರ್ದ್ರತೆ ಶೇ. 60 ರಿಂದ 70 ಮತ್ತು ಮಳೆಯ ಪ್ರಮಾಣ 200 ಮಿ. ಮೀ. ಇಂದ 650 ಮಿ. ಮೀ, ಹೆಚ್ಚು ಉಷ್ಣ ಹಾಗೂ ಬಿಸಿಲು ಇರುವ ವಾತಾವರಣ ಕಲ್ಲಂಗಡಿ ಬೆಳೆಯಲು ಸೂಕ್ತ ಎಂದು ಮಾಹಿತಿ ನೀಡಲಾಗಿದೆ.
ಕಲ್ಲಂಗಡಿ ಮುಖ್ಯವಾದ ತಳಿಗಳು: ಕಲ್ಲಂಗಡಿಯಲ್ಲಿ ಮುಖ್ಯವಾದ ತಳಿಗಳು ಎರಡು. ನಾಮಧಾರಿತರಹದ ತಳಿಗಳು, ಕಪ್ಪು ಬಣ್ಣದ ಕೆಂಪು ಮತ್ತು ಕಡು ಕೆಂಪು ತಿರುಳು ಹೊಂದಿರುವ ತಳಿಗಳು. ಅಲ್ಲದೇ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಿಂದ ಅರ್ಕಾ ಮಾಣಿಕ್ ಮತ್ತು ಅರ್ಕಾ ಮುತ್ತು ಎನ್ನುವ ತಳಿಗಳು ಪ್ರಮುಖವಾಗಿವೆ.
ಅನೇಕ ಖಾಸಗಿ ಕಂಪನಿಗಳ ಸಂಕರಣ ತಳಿಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ. ಕಲ್ಲಂಗಡಿ ಬೆಳೆಯನ್ನು 2.5 ಮೀ ರಿಂದ 3 ಮೀ * 1 ಮೀ ಅಂತರದಲ್ಲಿ ಏರು ಮಡಿ ಮಾಡಿ ಪ್ಲಾಸ್ಟಿಕ್ ಹೊದಿಕೆ ಹಾಕಿ ಬೆಳೆಯುವುದು ಆಧುನಿಕ ಪದ್ದತಿಯಾಗಿದೆ. ಇದರಿಂದ ಕೀಟ ಮತ್ತು ರೋಗಗಳ ಪರಿಣಾಮಕಾರಿ ನಿಯಂತ್ರಣ ಮಾಡಬಹುದಾಗಿದೆ. ಎಕರೆಗೆ ಬೇಕಾಗುವ ಬೀಜಗಳ ಪ್ರಮಾಣ ಸಂಕರಣ ತಳಿಗಳಾದಲ್ಲಿ 300 ರಿಂದ 400 ಗ್ರಾಂ ಮತ್ತು ಇತರೆ ತಳಿಗಳಾದಲ್ಲಿ 750 ಗ್ರಾಂ.
ಆದಷ್ಟು ಕೊಟ್ಟಿಗೆ ಮತ್ತು ಸಾವಯವ ಗೊಬ್ಬರ ಅಲ್ಲದೇ ಎರೆಹುಳು ಗೊಬ್ಬರಗಳನ್ನು ಜೈವಿಕ ಗೊಬ್ಬರಗಳಾದ ಸೂಡೊಮೋನಾಸ್ ಮತ್ತು ವ್ಯಾಮ್ ನೊಂದಿಗೆ ಸಮೃದ್ಧಿಗೊಳಿಸಿ ಬಳಸುವುದರಿಂದ ರೋಗ ಮತ್ತು ಕೀಟದ ಬಾಧೆಯನ್ನು ತಡೆಗಟ್ಟಬಹುದು. ಪ್ರತಿ ಎಕರೆಗೆ 1 ಕ್ವಿಂಟಾಲ್ ಬೇವಿನ ಹಿಂಡಿ ಬೆರೆಸುವುದು ಸೂಕ್ತ. ಬಿತ್ತನೆ ಮಾಡಿದ 20 ರಿಂದ 30 ದಿನಗಳೊಳಗೆ ಕುಡಿ ಚಿವುಟುವದರಿಂದ ಹೆಚ್ಚಿನ ಇಲುಕುಗಳು ಬಿಟ್ಟು ಇಳುವರಿ ಹೆಚ್ಚಾಗುವುದು ಅಲ್ಲದೇ ಕೀಟಗಳ ಬಾಧೆಯನ್ನು ತಡೆಗಟ್ಟಬಹುದು. ಬಳ್ಳಿಗೆ 7 ರಿಂದ 8 ಗಿಣ್ಣುಗಳ ಬಿಡುವ ಹೂವುಗಳು ಫಲಪ್ರದವಾಗಿರುತ್ತವೆ ಮತ್ತು 11 ಗಿಣ್ಣಿನ ನಂತರ ಬರುವ ಹೆಣ್ಣು ಹೂವುಗಳನ್ನು ತೆಗೆಯುವುದು ಸೂಕ್ತ.
ಹೆಚ್ಚಿನ ಇಳುವರಿಗಾಗಿ ಥ್ರಿಪ್ಸ್ ನುಸಿಯನ್ನು ಆರಂಭ ಹಂತದಿಂದಲೇ ನಿಯಂತ್ರಿಸುವುದು ಬಹಳ ಮುಖ್ಯ. ಕಸ ರಹಿತ ತೋಟ ಕೀಟಗಳನ್ನು ಹತೋಟಿ ಮಾಡುತ್ತದೆ. ಹೊಲದ ಸುತ್ತಲೂ 1 ತಿಂಗಳ ಮೊದಲೇ ಮೆಕ್ಕೆ ಜೋಳ ಅಥವಾ ಸಜ್ಜೆ ಬೀಜಗಳನ್ನು 4 ಸಾಲು ಬಿತ್ತನೆ ಮಾಡಬೇಕು. ಎರಡು ವರ್ಷಗಳ ನಂತರ ಬೆಳೆ ಪರಿವರ್ತನೆ ಮಾಡಬೇಕು ಇದಕ್ಕಾಗಿ ದ್ವಿದಳ ಧಾನ್ಯಗಳನ್ನು ಬೆಳೆಯುವುದು ಸೂಕ್ತ. ಕೀಟ ನಾಶಕಗಳನ್ನು ಬಳಸುವಾಗ ಬಳ್ಳಿಗಳ ತುದಿಗಳ ಮೇಲೆ ಸಿಂಪಡಿಸಬೇಕು. 2 ರಿಂದ 3 ಬಾರಿ ಬಳ್ಳಿಯ ತುದಿಗಳನ್ನು ಅಂತರ ವ್ಯಾಪಿ ಕೀಟ ನಾಶಕಗಳಲ್ಲಿ ಅದ್ದಿ ತೆಗೆಯಬೇಕು.
ಎಕರೆಗೆ 4 ರಿಂದ 6 ಹಳದಿ ಮತ್ತು ನೀಲಿ ಬಣ್ಣದ ಅಂಟು ಕಾರ್ಡುಗಳನ್ನು ಬಳಸಬೇಕು. ಲಘು ಪೋಷಕಾಂಶಗಳಾದ ಬೋರಾನ್ ಮತ್ತು ಕ್ಯಾಲ್ಸಿಯಂನ್ನು ತಜ್ಞರ ಸಲಹೆಯಂತೆ ಬಳಸಬೇಕು. ನೀರಿನ ನಿರ್ವಹಣೆ ಬಹಳ ಮುಖ್ಯವಾಗಿರುವುದರಿಂದ ಹೂವಾಡವು ಹಂತದಲ್ಲಿ, ಹಣ್ಣು ಬಿಡುವ ಹಂತದಲ್ಲಿ ಮತ್ತು ಹಣ್ಣು ಬಲಿಯುವ ಹಂತದಲ್ಲಿ ಮಣ್ಣನ್ನು ಆಧರಿಸಿ ನೀರು ಕೊಡಬೇಕು. ಬಿತ್ತನೆ, ನಾಟಿ ಮಾಡಿದ 15 ದಿನಗಳ ನಂತರ ನೀರಿನಲ್ಲಿ ಕರಗುವ ಗೊಬ್ಬರಗಳನ್ನು ಸಿಂಪಡಿಸುವುದರಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದಾಗಿದೆ.
ಪ್ರತಿ ಎಕರೆಗೆ 1 ರಿಂದ 2 ಜೇನು ಪೆಟ್ಟಿಗೆಗಳನ್ನು ಇಡುವುದರಿಂದ ಉತ್ತಮ ಇಳುವರಿ ಪಡೆಯಬಹುದು. ಪ್ರತಿ ಬಳ್ಳಿಗೆ 2 ಆರೋಗ್ಯಯುತ ಕಾಯಿಗಳನ್ನು ಬಿಟ್ಟು ಉಳಿದವುಗಳನ್ನು ಕತ್ತರಿಸಬೇಕು. ಕಾಯಿಗಳು ನಿಂಬೆಹಣ್ಣಿನ ಗಾತ್ರದಲ್ಲಿದ್ದಾಗ ಜಿಬ್ಬರ್ಲಿಕ್ ಆಮ್ಲ 20 ಪಿ.ಪಿ.ಎಮ್. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಆಸಕ್ತ ರೈತರು ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಂ. ವಿ. ರವಿ ಅವರನ್ನು 9480247745 ಸಂಖ್ಯೆಯ ಮೂಲಕ ಮತ್ತು ಸಹಾಯಕ ಪ್ರಾಧ್ಯಾಪಕ ವಾಮನಮೂರ್ತಿ ಅವರನ್ನು 8217696837 ಸಂಖ್ಯೆಯ ಮೂಲಕ ಸಂಪರ್ಕಿಸಬಹುದು.












Click it and Unblock the Notifications