ಪಶುಸಂಗೋಪನೆಗೆ ವರದಾನವಾದ ಜಲಕೃಷಿ!
ಬೆಂಗಳೂರು, ಅಕ್ಟೋಬರ್ 18 : ಇತ್ತೀಚಿನ ದಿನಗಳಲ್ಲಿ ರೈತರು ಗೋ ಸಾಕಣೆಯಿಂದ ಹಿಂದೆ ಸರಿಯುತ್ತಿದ್ದಾರೆ. ಇದಕ್ಕೆ ಅತಿ ಮುಖ್ಯ ಕಾರಣ ಮೇವು ಪೂರೈಕೆ ಮಾಡುವಲ್ಲಿನ ತೊಡಕುಗಳು. ಹೈಡ್ರೋಪೋನಿಕ್ಸ್ (ಜಲಕೃಷಿ) ರೈತರಿಗೆ ವರದಾನವಾಗಿದ್ದು, ಮೇವಿನ ಸಮಸ್ಯೆಯನ್ನು ಬಗೆಹರಿಸುತ್ತದೆ.
ಜಾನುವಾರುಗಳನ್ನು ಸಾಕುವವರು ಕೆಲವೊಮ್ಮೆ ಹಸಿರು ಮೇವಿನ ಕೊರತೆ, ಮೇವಿನಲ್ಲಿನ ಪೌಷ್ಟಿಕಾಂಶದ ಕೊರತೆ, ಮೇವು ಬೆಳೆಯುವಲ್ಲಿ ಬೇಕಾಗಬಹುದಾದ ಜಾಗದ ಸಮಸ್ಯೆಗಳು, ನೀರು ಹೀಗೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಎಲ್ಲ ಸಮಸ್ಯೆಗೆ ಪರಿಹಾರವೇ ಜಲಕೃಷಿ.

ಹೆಸರೇ ಹೇಳುವಂತೆ ಜಲಕೃಷಿಯು, ಮಣ್ಣನ್ನು ಬಳಸದೆ, ನೀರಿನಲ್ಲಿ ಖನಿಜ ಪುಷ್ಟಿಕಾರಿ ದ್ರಾವಣವನ್ನು ಬಳಸಿಕೊಂಡು ಸಸ್ಯಗಳನ್ನು ಬೆಳೆಸುವ ವಿಧಾನವಾಗಿದೆ. ಕೃತಕವಾಗಿ ಸಸ್ಯಕ್ಕೆ ಸರಬರಾಜಾಗಿರುವ ನೀರಿಗೆ ಅಗತ್ಯವಿದ್ದಷ್ಟು ಖನಿಜ ಪೌಷ್ಟಿಕಗಳನ್ನು ಸೇರಿಸಿದಾಗ, ಸಸ್ಯವು ಹುಲುಸಾಗಿ ಬೆಳೆಯುತ್ತದೆ ಮಣ್ಣಿನ ಅಗತ್ಯ ಇರುವುದಿಲ್ಲ.
ಜಲಕೃಷಿಯಲ್ಲಿ ಬಹುತೇಕವಾಗಿ ಭೂಮಿಯ ಮೇಲೆ ಬೆಳೆಯುವ ಯಾವುದೇ ಸಸ್ಯವು ಬೆಳವಣಿಗೆಯಾಗುತ್ತದೆ. ಒಂದರ ಮೇಲೊಂದರಂತೆ ಟ್ರೇಗಳನ್ನು ಬಳಸಿ ಹಸಿರನ್ನು ಬೆಳೆಸಲಾಗುತ್ತದೆ ಇದರಿಂದ ಸ್ಥಳದ ಮರು ಉಪಯೋಗವಾಗುವುದು. ಇದು ಅತಿ ಸುಲಭವಾದ ಕೃಷಿ ವಿಧಾನವೂ ಆಗಿದೆ.
ಈ ಕೃಷಿ ವಿಧಾನದಲ್ಲಿ ಕಡಿಮೆ ಬೀಜಗಳನ್ನು ಬಳಸಿ ಅಧಿಕ ಇಳವರಿಯನ್ನು ತೆಗೆಯಬಹುದು. ಉತ್ಪಾದನೆಯ ಸರಾಸರಿಯು 1:8, ಉದಾಹರಣೆಗೆ ಹೇಳುವುದಾದರೆ, 1 ಕೆಜಿ ಜೋಳದ ಬೀಜಗಳಿಂದ, 8 ಕೆಜಿ ಜೋಳದ ಹುಲ್ಲಿನ ಇಳುವರಿ ತೆಗೆಯಬಹುದು. ಇದಕ್ಕೆ ತಗಲುವ ಸಮಯವೂ 8 ರಿಂದ 9 ದಿನಗಳು ಮಾತ್ರ.

ನೀರಿನಲ್ಲಿರುವ ಪೌಷ್ಟಿಕಾಂಶದ ಪ್ರಮಾಣವನ್ನು ನಿಯಂತ್ರಣಗೊಳಿಸಿ, ಉತ್ಪಾದನೆಗೊಳ್ಳಲಿರುವ ಹಸಿರು ಮೇವಿನ ಪೌಷ್ಟಿಕಾಂಶದ ನಿಯಂತ್ರಣ ಸಾಧ್ಯ. ನೀರನ್ನು ಮರುಬಳಕೆ ಮಾಡಬಹುದು, ಹಾಗೂ ಅತೀ ಹೆಚ್ಚು ನೀರಿನ ಬಳಕೆಯೂ ಇಲ್ಲದಿರುವುದರಿಂದ, ನೀರು ಪೂರೈಕೆಯ ಸಮಸ್ಯೆಗೂ ಇದೊಂದು ಪರಿಹಾರವಾಗಿದೆ.
ಇತ್ತೀಚೆಗೆ ಮೇವಿನ ಕೊರತೆಯಿಂದ ಸಾವಿನತ್ತ ಮುಖಮಾಡಿದ್ದ ಮಲೆಮಹದೇಶ್ವರದ ಗೋವುಗಳಿಗೆ ಶ್ರೀರಾಮಚಂದ್ರಾಪುರ ಮಠದಿಂದ ಪೂರೈಸಲಾದ ಮೇವಲ್ಲಿ ಕೆಲವು ಟನ್'ಗಳಷ್ಟು ಮೇವನ್ನು ಅಲ್ಲೇ ಪ್ರಾರಂಭಿಸಲಾದ ಜಲಕೃಷಿ ಘಟಕವು ಪೂರೈಸಿದ್ದನ್ನು ನೆನಪಿಸಿಕೊಳ್ಳಬಹುದು.












Click it and Unblock the Notifications