ದಾವಣಗೆರೆ ಜಿಲ್ಲೆಯಲ್ಲಿ ಮತ್ತೆ ಭಾರೀ ಮಳೆ: ರೈತರು ಕಂಗಾಲು
ದಾವಣಗೆರೆ, ಅಕ್ಟೋಬರ್, 02: ಜಿಲ್ಲೆಯಲ್ಲಿ ಮತ್ತೆ ವರುಣನ ಆರ್ಭಟ ಜೋರಾಗಿದ್ದು, ಅಲ್ಲಲ್ಲಿ ಮತ್ತೆ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ಅಡಿಕೆ ತೋಟಗಳಿಗೆ, ಮನೆಗಳಿಗೆ ನೀರು ನುಗ್ಗಿದ್ದು, ಮತ್ತೆ ಜನರು ಸಂಕಷ್ಟ ಅನುಭವಿಸುವಂತಾಗಿದೆ. ತಾಲೂಕಿನ ಹೆಬ್ಬಾಳು ಸುತ್ತಮುತ್ತ ಹಾಗೂ ಜಗಳೂರಿನಲ್ಲಿ ವರುಣಾಘಾತಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ.
ಕಳೆದ ಮೂರು ದಿನಗಳಿಂದ ಮತ್ತೆ ಧಾರಾಕಾರ ಮಳೆಯಾಗುತ್ತಿದೆ. ಮಳೆ ನಿಂತಿದೆ ಎಂದು ನಿಟ್ಟುಸಿರುಬಿಟ್ಟಿದ್ದ ಜನರು, ಮತ್ತೆ ವರುಣಾರ್ಭಟಕ್ಕೆ ತತ್ತರಿಸಿ ಹೋಗಿದ್ದಾರೆ. ದಾವಣಗೆರೆ ತಾಲೂಕಿನ ಹೆಬ್ಬಾಳು ಕೆರೆ ಮತ್ತೆ ಭರ್ತಿಯಾಗಿದ್ದು, ಒಂದು ದಿನ ಸುರಿದ ಮಳೆಗೆ ಕೆರೆ ಕೋಡಿ ಬಿದ್ದಿದೆ. ನಾಲ್ಕನೇ ಬಾರಿ ತುಂಬಿರುವ ಕೆರೆಯ ನೀರು ಹೆಚ್ಚಾಗಿ ಹೊರಹೋಗುತ್ತಿದ್ದು, ಅಡಿಕೆ ತೋಟಗಳಿಗೆ ನೀರು ನುಗ್ಗಿದೆ. ಅಡಿಕೆ ಕೊಯ್ಲಿಗೆ ಮುಂದಾಗಿದ್ದ ರೈತರು ಭಾರೀ ಸಮಸ್ಯೆ ಎದುರಿಸುವಂತಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಗಗನಕ್ಕೇರುತ್ತಲೇ ಇದೆ ತರಕಾರಿ ದರ; ಗ್ರಾಹಕರು ಕಂಗಾಲು!
ಮಳೆ ಸತತವಾಗಿ ಸುರಿಯುತ್ತಿರುವುದರಿಂದ ಹಳ್ಳ- ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಇದರಿಂದಾಗಿ ಹೆಬ್ಬಾಳು ಕೆರೆಗೆ ಯಥೇಚ್ಛವಾಗಿ ನೀರು ಹರಿದುಬರುತ್ತಿದೆ. ಇದೇ ರೀತಿಯಲ್ಲಿ ಮಳೆ ಮುಂದುವರಿದರೆ ಮತ್ತಷ್ಟು ಹಾನಿಯಾಗುವ ಸಾಧ್ಯತೆ ಇದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಹೆಬ್ಬಾಳು ಗ್ರಾಮದ ಕೆರೆ ಕೋಡಿ ಬಿದ್ದು, ನೂರಾರು ಎಕರೆ ಅಡಿಕೆ ತೋಟ ಜಲಾವೃತವಾಗಿದೆ.
ಶ್ರೀ ರುದ್ರೇಶ್ವರ ಮಠದ ತೋಟ ನೀರುಪಾಲು
ಶ್ರೀ ರುದ್ರೇಶ್ವರ ಮಠಕ್ಕೆ ಸೇರಿದ ಅಡಿಕೆ ತೋಟ ಸಂಪೂರ್ಣ ಜಲಾವೃತವಾಗಿದೆ. ಶ್ರೀ ರುದ್ರೇಶ್ವರ ನರ್ಸರಿ ಮತ್ತು ಪ್ರೌಢಶಾಲೆಯ ಆವರಣ ನೀರಿನಿಂದ ಆವೃತವಾಗಿದೆ. ಇನ್ನು ಜಗಳೂರಿನಲ್ಲಿ ಮಳೆ ರೌದ್ರವಾತಾರ ತೋರಿದ್ದು, ರಸ್ತೆ, ಸೇತುವೆಗಳ ಮೇಲೆ ನೀರು ಚರಂಡಿಯಂತೆ ಹರಿಯುತ್ತಿದೆ. ಜಗಳೂರು ತಾಲೂಕಿನ ಮಾಗಡಿ ಗ್ರಾಮದಲ್ಲಿ ರಸ್ತೆಯ ಮೇಲೆಲ್ಲಾ ನೀರು ಹರಿಯುತ್ತಿದ್ದು, ಜನರು ಪರದಾಡುವಂತಾಗಿದೆ. ಕೆಲ ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿನ ಮಳೆ ನೀರನ್ನು ಹೊರಹಾಕಲು ಜನರು ಪರದಾಡಿದ್ದಾರೆ.
40 ವರ್ಷಗಳ ಬಳಿಕ ಭರ್ತಿಯಾದ ಅಣಜಿ ಕೆರೆ: ಹಲವು ಜಲಮೂಲಗಳಿಗೆ ಆಸರೆಯಾದ ಕೆರೆ
ದೇವನಗರಿಯಲ್ಲಿ ವರುಣನ ಅಟ್ಟಹಾಸ
ಮನೆಯಲ್ಲಿದ್ದ ದವಸ ಧಾನ್ಯಗಳು ನೀರುಪಾಲಾಗಿದ್ದರೆ, ಬಟ್ಟೆಗಳೆಲ್ಲವೂ ಒದ್ದೆಯಾಗಿವೆ. ಮಳೆ ಇದೇ ರೀತಿ ಮುಂದುವರಿದರೆ ರಾತ್ರಿ ವೇಳೆ ಉಳಿದುಕೊಳ್ಳುವುದಾದರೂ ಎಲ್ಲಿ ಎಂಬ ಚಿಂತೆಯಲ್ಲಿ ಜನರು ಜೀವನ ಸಾಗಿಸುವಂತಾಗಿದೆ. ಜಗಳೂರು ತಾಲೂಕಿನ ಹಲವೆಡೆ ಸುರಿದ ಭಾರೀ ಮಳೆಗೆ ಜಮೀನುಗಳು ಜಲಾವೃತವಾಗಿವೆ.
ಕಂಗಾಲಾದ ಜಿಲ್ಲೆಯ ಅನ್ನದಾತರು
ಎರಡನೇ ಬಾರಿ ಮೆಕ್ಕೆಜೋಳ ಬೆಳೆ ಬೆಳೆದಿದ್ದ ರೈತರು ಜಮೀನುಗಳು ಜಲಾವೃತ ಆಗಿರುವುದರಿಂದ ನಷ್ಟ ಅನುಭವಿಸುವಂತಾಗಿದೆ. ಮುಂಗಾರು ಮಳೆ ಹೆಚ್ಚಾಗಿ ಸುರಿದ ಕಾರಣ ಬೆಳೆಗಳೆಲ್ಲ ನೀರುಪಾಲಾಗಿದ್ದವು. ಮತ್ತೆ ಇದೇ ಸಮಸ್ಯೆ ಮುಂದುವರಿದ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಈ ಬಾರಿ ಬೆಳೆಗಳ ಫಸಲು ಚೆನ್ನಾಗಿ ಬಂದಿದ್ದು, ರೈತರು ಮಂದಹಾಸವನ್ನು ಬೀರಿದ್ದರು. ಆದರೆ ವರುಣಾರ್ಭಟ ಮತ್ತೆ ಮುಂದುವರಿದ ಕಾರಣ ರೈತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತೆ ಆಗಿದೆ. ಸಾಲ ತೀರಿಸುವ ಆಸೆ ಹೊಂದಿದ್ದ ಅನ್ನದಾತರಿಗೆ ಮಳೆ ಮತ್ತೆ ತಣ್ಣೀರೆರಚಿದೆ.
ಪವನ್ ಮೃತದೇಹಕ್ಕಾಗಿ ಶೋಧ
ಇನ್ನು ಹರಿಹರ ತಾಲೂಕಿನ ಹರಗನಹಳ್ಳಿ ಸಮೀಪದ ಚೆಕ್ ಡ್ಯಾಂ ಬಳಿ ರೀಲ್ಸ್ ಮಾಡುವ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ನೀರುಪಾಲಾದ ಘಟನೆ ನಡೆದಿದೆ. ಹರಿಹರ ಪಟ್ಟಣದ ಆಶ್ರಯ ಬಡಾವಣೆ ನಿವಾಸಿಗಳಾದ 25 ವರ್ಷದ ಪವನ್ ಹಾಗೂ 24 ವರ್ಷದ ಪ್ರಕಾಶ್ ನೀರುಪಾಲಾದ ಯುವಕರು ಎಂದು ಗುರುತಿಸಲಾಗಿದೆ. ಪ್ರಕಾಶ್ ಹಾಗೂ ಪವನ್ ಸ್ನೇಹಿತರಾಗಿದ್ದು, ಇಬ್ಬರಿಗೂ ರೀಲ್ಸ್ ಮಾಡುವ ಹವ್ಯಾಸ ಇತ್ತು. ಆಕಸ್ಮಿಕವಾಗಿ ನೀರಿಗೆ ಬಿದ್ದ ಪ್ರಕಾಶ್ ನನ್ನು ರಕ್ಷಣೆ ಮಾಡಲು ಹೋದ ಪವನ್ ಸಹ ನೀರುಪಾಲಾಗಿದ್ದಾನೆ. ರಾಘವೇಂದ್ರ ಮಠದ ಸಮೀಪ ಪ್ರಕಾಶ್ ಶವ ಪತ್ತೆಯಾಗಿದ್ದು, ಮತ್ತೋರ್ವನ ಮೃತದೇಹಕ್ಕೆ ಹುಡುಕಾಟ ಮುಂದುವರೆದಿದೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.