ರೈತ ಮುಖಂಡನ ಸಾವಿಗೆ ಬೆಲೆಯೇ ಇಲ್ಲ

ಧರಣಿಯ ವೇಳೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ ಚಂದ್ರುಗೆ ನೀಡಿದ ಚಿಕಿತ್ಸೆ ಫಲಕಾರಿಯಾಗಲೇ ಇಲ್ಲ. ಭಾನುವಾರ ತಡರಾತ್ರಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರು ಹಿರೇಕೆರೂರು ತಾಲೂಕಿನ ಮಾವಿನತೋಪ ಗ್ರಾಮದಲ್ಲಿ ಅಸಂಖ್ಯ ರೈತ ಮುಖಂಡರು, ಗ್ರಾಮಸ್ಥರು ನಡುವೆ ಅಂತಿಮ ಕ್ರಿಯೆ ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ಜಿಟಿ ಜಿಟಿ ಮಳೆ ಈ ರೈತನ ಸಾವಿಗೆ ಅಶ್ರುತರ್ಪಣ ಸುರಿಸಿತು.
ರೈತರ ಆಕ್ರೋಶ: ಕರ್ನಾಟಕ ರೈತ ಸಂಘದ ಮಹಾ ಪ್ರಧಾನ ಕಾರ್ಯದರ್ಶಿ ಬಸವರಾಜಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ಚಂದ್ರು ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಹಾಗೆಯೇ ತುಂಗಾ ಮೇಲ್ದಂಡೆ ಯೋಜನೆಗೆ ಭೂಮಿ ಕಳೆದುಕೊಂಡ ರೈತ ಸಮುದಾಯಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಹುಸಿ ಭರವಸೆ, ಸಿಗದ ಪರಿಹಾರ: ಎಲ್ಲಾ ತಾಂತ್ರಿಕ ತೊಂದರೆಗಳನ್ನು ನಿವಾರಿಸಿ, ಯೋಜನೆ ಜಾರಿಗೊಳಿಸಲಾಗುವುದು. ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿ ವರ್ಷ ಕಳೆದಿದೆ. ಆದರೆ, ರೈತರಿಗೆ ದಮಡಿ ಕಾಸು ಸಿಕ್ಕಿಲ್ಲ. ಭೂಮಿ ಕಳೆದುಕೊಂಡ ರೈತರಿಗೆ 97 ಲಕ್ಷ ರು ಪರಿಹಾರ ಒದಗಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದರು.
ರೈತ ಪರ ದನಿಯಾಗಿದ್ದ ಚಂದ್ರು: ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ್ ಅವರ ಪುತ್ರ ಚಂದ್ರು, ರಟ್ಟಹಳ್ಳಿಯ ತುಂಗಾ ಮೇಲ್ದಂಡೆ ಯೋಜನೆ ಕಚೇರಿ ಎದುರು ರಾತ್ರೋರಾತ್ರಿ ಧರಣಿ ನಡೆಸಿ, ದಶಕಕ್ಕೂ ಹಳೆಯದಾದ ಪ್ರತಿಭಟನೆಗೆ ಹೊಸ ಹುರುಪು ತಂದರು. ಅ.23 ರಂದು ಶಿವಮೊಗ್ಗ ಕಚೇರಿ ಎದುರು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಚಂದ್ರು, ರೈತರಿಗೆ ಸ್ಫೂರ್ತಿಯಾಗಿದ್ದರು.











Click it and Unblock the Notifications