ಕೊಡಗಿನಲ್ಲಿ ಮುಂದುವರಿದ ಮಳೆ; ಕೃಷಿ ಚಟುವಟಿಕೆಯಲ್ಲಿ ರೈತರು
ಮಡಿಕೇರಿ, ಜು.9: ಕೊಡಗಿನಲ್ಲಿ ಮಳೆ ಮುಂದುವರೆದಿದ್ದು, ಅಬ್ಬರಿಸದಿದ್ದರೂ ಉತ್ತಮವಾಗಿ ಮಳೆಯಾಗುತ್ತಿದೆ. ಇದರಿಂದಾಗಿ ಕೃಷಿಕರು ತಮ್ಮ ಚಟುವಟಿಕೆಯನ್ನು ಮುಂದುವರೆಸಿದ್ದಾರೆ. ಮಳೆಗಾಲದಲ್ಲಿ ಮಳೆಯ ನೀರನ್ನೇ ನಂಬಿ ಇಲ್ಲಿನ ಕೃಷಿಕರು ಭತ್ತ ಬೆಳೆಯುವುದರಿಂದಾಗಿ ಭತ್ತದ ಕೃಷಿ ಚಟುವಟಿಕೆ ಸಮಾರೋಪಾದಿಯಲ್ಲಿ ಸಾಗಿದೆ.
ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಚುರುಕುಗೊಂಡಿದೆ. ನದಿ, ಹಳ್ಳ-ಕೊಳ್ಳಗಳು, ಕೆರೆ-ಕಟ್ಟೆಗಳಿಗೆ ಹರಿದುಬರುತ್ತಿರುವ ನೀರಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ. ಹಾಗಾಗಿ ಕೊಡಗಿನ ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದಾರೆ.
ನಾಪೊಕ್ಲು, ಭಾಗಮಂಡಲ,ಮೂರ್ನಾಡು, ವಿರಾಜಪೇಟೆ, ಗೋಣಿಕೊಪ್ಪ ಹಾಗೂ ಪೊನ್ನಂಪೇಟೆಯಲ್ಲಿ ಕೃಷಿ ಚಟುವಟಿಕೆ ಆರಂಭವಾಗಿದೆ. 30,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲು ರೈತರು ನಿರ್ಧರಿಸಿದ್ದಾರೆ. ಈ ಬಾರಿ ಉತ್ತಮ ಮಳೆಯಾಗುತ್ತಿರುವುದರಿಂದ ಉತ್ತಮ ಇಳುವರಿಯನ್ನು ನಿರೀಕ್ಷಿಸಿದ್ದಾರೆ. ಹಾರಂಗಿ ಜಲಾಶಯವು ಭರ್ತಿಯಾಗಿದ್ದು, ಚಿಕ್ಕಹೊಳೆ ತುಂಬಿ ಹರಿಯುತ್ತಿದೆ.

ಭತ್ತದ ಕೃಷಿಯತ್ತ ರೈತರ ಚಿತ್ತ
ಹಲವಡೆ ಸಸಿ ಮಡಿಯ ತಯಾರಿ ನಡೆಸಿದ್ದರೆ, ಮತ್ತೆ ಕೆಲವೆಡೆ ನೀರಿನ ಅನುಕೂಲವಿರುವ ಪ್ರದೇಶಗಳಲ್ಲಿ ಈಗಾಗಲೇ ಪೈರುಗಳು ಸಿದ್ಧವಾಗಿದ್ದು ಕೆಲವೇ ದಿನಗಳಲ್ಲಿ ನಾಟಿ ಕಾರ್ಯ ಆರಂಭಿಸಲು ಸಿದ್ಧತೆಯನ್ನು ನಡೆಸಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ತೊರೆ ನದಿಗಳು ತುಂಬಿ ಹರಿಯುತ್ತಿದೆ. ಮಳೆಯ ಕಾರಣದಿಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜತೆಗೆ ಪ್ರವಾಹ ಪರಿಸ್ಥಿತಿಯನ್ನು ಸಮಾರೋಪಾದಿಯಲ್ಲಿ ನಿಭಾಯಿಸಲು ವ್ಯವಸ್ಥೆ ಮಾಡಲಾಗಿದ್ದು, ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದೆ.

ಕಳೆದ ವರ್ಷಕ್ಕಿಂತ ಎರಡರಷ್ಟು ಹೆಚ್ಚು ಮಳೆ
ಇನ್ನು ಮಳೆಯ ಪ್ರಮಾಣವನ್ನು ನೋಡುವುದಾದರೆ ಇಂದು ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಒಂದು ದಿನದ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 66.96 ಮಿ.ಮೀ. ಮಳೆ ಸುರಿದಿದೆ. (ಕಳೆದ ವರ್ಷ ಇದೇ ದಿನ 3.37 ಮಿ.ಮೀ. ಮಳೆಯಾಗಿತ್ತು) ಜನವರಿಯಿಂದ ಇಲ್ಲಿಯವರೆಗೆ 1602.42 ಮಿ.ಮೀ, ಮಳೆಯಾಗಿದೆ. (ಕಳೆದ ವರ್ಷ ಇದೇ ಅವಧಿಯಲ್ಲಿ 806.47 ಮಿ.ಮೀ ಮಳೆಯಾಗಿತ್ತು) ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಎರಡರಷ್ಟು ಮಳೆಯಾಗಿರುವುದು ಗೋಚರಿಸುತ್ತಿದೆ.
ಇದೇ ರೀತಿ ಮಳೆಯ ಆರ್ಭಟ ಮುಂದುವರೆದರೆ ಕೊಡಗಿನಲ್ಲಿ ಜನ ಜೀವನ ಅಸ್ತವ್ಯಸ್ತವಾಗಲಿದ್ದು, ಇಲ್ಲಿನ ಕೃಷಿಯ ಮೇಲೆಯೂ ಭಾರೀ ಪರಿಣಾಮ ಬೀರುವ ಸಾಧ್ಯತೆಯಿದೆ. ತೇವಾಂಸ ಹೆಚ್ಚಾಗಿ ಕಾಯಿ ಕಟ್ಟಿದ ಕಾಫಿ ಉದುರುವ ಹಾಗೂ ಕೊಳೆರೋಗ ಬರುವ ಸಾಧ್ಯತೆಯಿದೆ. ಇನ್ನು ಕರಿ ಮೆಣಸಿಗೆ ಸೊರಗುರೋಗ ತಗಲುವ ಲಕ್ಷಣಗಳು ಕಂಡು ಬರುತ್ತಿದೆ.

ಹಾರಂಗಿಯಿಂದ 8584 ಕ್ಯುಸೆಕ್ ನೀರು ಬಿಡುಗಡೆ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, 11675 ಕ್ಯುಸೆಕ್ ನೀರು ಹರಿದು ಬರುತ್ತಿರುವುದರಿಂದ 2857.43 ಅಡಿಗಳ ಮಟ್ಟವನ್ನು ಕಾಯ್ದುಕೊಂಡು ಜಲಾಶಯದಿಂದ ನದಿಗೆ 8584 ಕ್ಯುಸೆಕ್ ಹಾಗೂ ನಾಲೆಗೆ 350 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ.
ಹಾರಂಗಿ ಜಲಾಶಯದ ತಗ್ಗು ಪ್ರದೇಶದಲ್ಲಿರುವ ಜನರಿಗೆ ಎಚ್ಚರವಾಗಿರುವಂತೆಯೂ ಈಗಾಗಲೇ ಸೂಚಿಸಲಾಗಿದೆ. ಮಳೆಯಿಂದಾಗಿ ಅಲ್ಲಲ್ಲಿ ಮರಗಳು ಬಿದ್ದು ಒಂದಷ್ಟು ನಷ್ಟಗಳು ಸಂಭವಿಸಿದೆ. ಇನ್ನು ಜಿಲ್ಲೆಯಾದ್ಯಂತ ಇರುವ ಜಲಪಾತಗಳು ತುಂಬಿ ಹರಿಯುತ್ತಿದ್ದು, ನೋಡಲು ಪ್ರವಾಸಿಗರ ದಂಡು ಬರತೊಡಗಿದೆ.

ಜನರ ನೆರವಿಗೆ ಕಂಟ್ರೋಲ್ ರೂಂ
ಇನ್ನು ಜಿಲ್ಲೆಯಲ್ಲಿ ಪ್ರವಾಹದಿಂದ ಏನಾದರೂ ತೊಂದರೆಯಾದಲ್ಲಿ ತಕ್ಷಣವೇ ನೆರವಿಗೆ ಕಂಟ್ರೋಲ್ ರೂಂನ್ನು ಸಂಪರ್ಕಿಸಬಹುದಾಗಿದ್ದು, ವಿವರ ಹೀಗಿದೆ. ಜಿಲ್ಲಾಧಿಕಾರಿ ಕಚೇರಿ-08272-221077, ಜಿಲ್ಲಾ ಅಗ್ನಿಶಾಮಕ ಕಚೇರಿ-101, 08272-229299, ಮಡಿಕೇರಿ ತಾಲೂಕು ಕಚೇರಿ-08272-228396, ನಗರಸಭೆ-08272-220111, ಸೋಮವಾರಪೇಟೆ ತಾಲೂಕು ಕಚೇರಿ-08276-282045, ವಿರಾಜಪೇಟೆ ತಾಲೂಕು ಕಚೇರಿ- 08274-256328.
ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಸಮಸ್ಯೆಗಳಿದ್ದಲ್ಲಿ ಕರೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಹೇಳಿದ್ದಾರೆ.












Click it and Unblock the Notifications