ಅಡಿಕೆ ಬೆಳೆಗೆ ಕೊಳೆರೋಗ, ಆತಂಕದಲ್ಲಿ ಬೆಳೆಗಾರರು
ಮಂಗಳೂರು, ಜುಲೈ 23: ಕರಾವಳಿ ಜಿಲ್ಲೆಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆ ಇಲ್ಲಿನ ಕೃಷಿಕರನ್ನು ಕಂಗೆಡಿಸಿದೆ. ಅದರಲ್ಲೂ ದಕ್ಷಿಣಕನ್ನಡ ಜಿಲ್ಲೆಯ ಕೃಷಿಕರ ಪ್ರಮುಖ ಬೆಳೆಯಾದ ಅಡಿಕೆ ಮಳೆಯಿಂದಾಗಿ ಸಂಪೂರ್ಣ ಹಾನಿಯಾಗುವ ಆತಂಕದಲ್ಲಿದ್ದಾರೆ ರೈತರು.
ಕಳೆದ 50 ದಿನಗಳಿಂದ ಎಡೆಬಿಡದೆ ಮಳೆಯಾದ ಕಾರಣ ಕೃಷಿಕರಿಗೆ ಅಡಿಕೆಗೆ ಔಷಧಿ ಸಿಂಪಡಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಜಿಲ್ಲೆಯ ಬಹುತೇಕ ಎಲ್ಲಾ ಅಡಿಕೆ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ.
ದಕ್ಷಿಣಕನ್ನಡ ಜಿಲ್ಲೆಯ ಸಾವಿರಾರು ಕುಟುಂಬಗಳು ಅಡಿಕೆಯನ್ನೇ ನೆಚ್ಚಿಕೊಂಡು ಜೀವನ ಸಾಗಿಸುತ್ತಿದೆ. ಆದರೆ ಮಳೆ ಈ ಬಾರಿ ಈ ಕೃಷಿಕರನ್ನು ಮತ್ತೆ ಸಂಕಷ್ಟಕ್ಕೆ ತಂದೊಡ್ಡುವ ಲಕ್ಷಣಗಳು ಗೋಚರಿಸಲಾರಂಭಿಸಿದೆ. ಸಾಮಾನ್ಯವಾಗಿ ಅಡಿಕೆ ಹಿಂಗಾರ ಒಡೆದು ಎಳೆ ಅಡಿಕೆ ಬರುವ ಈ ಸಮಯದಲ್ಲಿ ಇವುಗಳಿಗೆ ಬೋಡೋ ದ್ರಾವಣ ಸಿಂಪಡಿಸುವುದು ವಾಡಿಕೆ.

ಜುಲೈ ತಿಂಗಳಿಗೆ ಸಾಮಾನ್ಯವಾಗಿ ಎರಡನೇ ಬಾರಿಗೆ ಅಡಿಕೆಗೆ ಬೋಡೋ ದ್ರಾವಣ ಸಿಂಪಡಣೆಯನ್ನು ಕೃಷಿಕರು ಮಾಡಬೇಕಿತ್ತು. ಆದರೆ ಭಾರೀ ಮಳೆಯಿಂದಾಗಿ ಒಂದು ಬಾರಿಯೂ ಸಿಂಪಡಣೆ ಮಾಡಲಾರದ ಸ್ಥಿತಿಯನ್ನು ಮಳೆ ತಂದೊಡ್ಡಿದೆ. ಈ ಕಾರಣಕ್ಕಾಗಿ ಅಡಿಕೆ ಗಿಡಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ.
ಪುತ್ತೂರು, ಸುಳ್ಯ, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಈ ಎಲ್ಲಾ ಭಾಗಗಳ ತೋಟದಲ್ಲಿರುವ ಅಡಿಕೆ ಗಿಡಗಳಿಂದ ಎಳೆ ಅಡಿಕೆಗಳು ಇದೀಗ ಉದುರಲಾರಂಭಿಸಿದೆ.

ಅಡಿಕೆ ಗಿಡದಲ್ಲಿ ಹಿಂಗಾರ ಅರಳುವ ಸಮಯದಿಂದ ಮೊದಲುಗೊಂಡು ಹಣ್ಣು ಅಡಿಕೆ ಆಗುವವರೆಗೆ ಸರಿ ಸುಮಾರು ಮೂರು ಬಾರಿಯಾದರೂ ಬೋಡೋ ದ್ರಾವಣವನ್ನು ಸಿಂಪಡಿಸಬೇಕಾಗುತ್ತದೆ. ಆದರೆ ಈ ಬಾರಿ ಕೆಲವು ಕೃಷಿಕರು ಒಂದು ಬಾರಿಯೂ ದ್ರಾವಣವನ್ನು ಸಿಂಪಡಿಸಿಲ್ಲ. ಈ ಕಾರಣಕ್ಕಾಗಿ ಜಿಲ್ಲೆಯ ಸಾವಿರಾರು ಎಕರೆ ಪ್ರದೇಶಗಳಲ್ಲಿ ಬೆಳೆದ ಅಡಿಕೆ ತೋಟಗಳಲ್ಲಿ ಕೊಳೆರೋಗ ಕಾಣಿಸಿ ಕೊಂಡಿದೆ.
ಕಳೆದ ಬಾರಿಯಂತೆ ಈ ಬಾರಿಯೂ ಅಡಿಕೆ ಕೃಷಿಕರು ಕೊಳೆರೋಗದಿಂದ ಕಂಗೆಡುವ ಲಕ್ಷಣಗಳು ಗೋಚರಿಸಲಾರಂಭಿಸಿದೆ. ಕೂಡಲೇ ಸರಕಾರ ಅಡಿಕೆ ಬೆಳೆಗಾರರಿಗೆ ಪರಿಹಾರ ನೀಡಬೇಕೆಂಬ ಆಗ್ರಹವೂ ಕೇಳಿ ಬರುತ್ತಿದೆ.












Click it and Unblock the Notifications