ಸರ್ಕಾರದ ಪ್ರಸ್ತಾವ ತಿರಸ್ಕಾರ: ರೈತರಿಂದ ಮತ್ತಷ್ಟು ಪ್ರತಿಭಟನೆ ಎಚ್ಚರಿಕೆ
ನವದೆಹಲಿ, ಡಿಸೆಂಬರ್ 9: ಕೃಷಿ ಕಾಯ್ದೆಗಳಲ್ಲಿ ಒಂದಷ್ಟು ತಿದ್ದುಪಡಿ ತರುವ ಸಂಬಂಧ ಕೇಂದ್ರ ಸರ್ಕಾರ ನೀಡಿದ್ದ ಲಿಖಿತ ಪ್ರಸ್ತಾವವನ್ನು ರೈತ ಒಕ್ಕೂಟಗಳು ಬುಧವಾರ ತಿರಸ್ಕರಿಸಿದ್ದು, ಡಿಸೆಂಬರ್ 14ರಂದು ದೇಶದಾದ್ಯಂತ ಧರಣಿ ಪ್ರತಿಭಟನೆಗೆ ಕರೆ ನೀಡಿವೆ.
ಕೃಷಿ ಕಾಯ್ದೆಗಳನ್ನು ಯಾವ ಕಾರಣಕ್ಕೂ ವಾಪಸ್ ಪಡೆಯುವುದಿಲ್ಲ ಎಂದು ಕೇಂದ್ರ ಸರ್ಕಾರ ಪಟ್ಟು ಹಿಡಿದಿರುವ ಬೆನ್ನಲ್ಲೇ, ತಿದ್ದುಪಡಿ ಪ್ರಸ್ತಾವಗಳನ್ನು ತಾವು ಕೂಡ ಒಪ್ಪುವುದಿಲ್ಲ ಎಂದುರೈತರು ಸಹ ಪಟ್ಟು ಬಿಗಿಗೊಳಿಸಿದ್ದಾರೆ. ಡಿಸೆಂಬರ್ 12ರಂದು ದೆಹಲಿ-ಜೈಪುರ ಮತ್ತು ದೆಹಲಿ ಆಗ್ರಾ ಹೆದ್ದಾರಿಗಳನ್ನು ತಡೆಯುವ ಮೂಲಕ 'ದೆಹಲಿ ಘೆರಾವ್' ಯೋಜನೆ ರೂಪಿಸುವುದಾಗಿ ಮತ್ತು ದೇಶದ ಪ್ರತಿ ಟೋಲ್ ಪ್ರದೇಶಗಳನ್ನು ಮುಕ್ತಗೊಳಿಸುವುದಾಗಿ ತಿಳಿಸಿದ್ದಾರೆ.
ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್ ಸಿಸಿ), ಕೇಂದ್ರ ಸರ್ಕಾರದ ಪ್ರಸ್ತಾವಗಳ ಕುರಿತಂತೆ ಬುಧವಾರ ಹೇಳಿಕೆ ಬಿಡುಗಡೆ ಮಾಡಿದ್ದು, ಹಳೆಯ ಪ್ರಸ್ತಾವಗಳಿಗೆ ಹೊಸ ಬಟ್ಟೆ ತೊಡಿಸಲಾಗಿತ್ತು ಎಂದು ಟೀಕಿಸಿದೆ. ಮುಂದೆ ಓದಿ.

ಹಳೆ ಪ್ರಸ್ತಾವಕ್ಕೆ ಹೊಸ ಉಡುಪು
'ಮೋದಿ ಸರ್ಕಾರವು ರೈತರ ಬೇಡಿಕೆಗಳನ್ನು ಈಡೇರಿಸುವಲ್ಲಿ ಅಪ್ರಾಮಾಣಿಕವಾಗಿದೆ ಮತ್ತು ಸೊಕ್ಕು ಪ್ರದರ್ಶಿಸುತ್ತಿದೆ. ಹೊಸ ಉಡುಪು ಧರಿಸಿದ ಹಳೆಯ ಪ್ರಸ್ತಾವಗಳನ್ನು ಎಲ್ಲ ರೈತ ಸಂಘಟನೆಗಳೂ ಸರಿಯಾಗಿ ತಿರಸ್ಕರಿಸಿವೆ. ಎಐಕೆಎಸ್ಸಿಸಿ ಮತ್ತು ಇತರೆ ಎಲ್ಲ ರೈತ ಒಕ್ಕೂಟಗಳು ಮೂರು ಕೃಷಿ ಕಾಯ್ದೆಗಳು ಹಾಗೂ ಇಬಿ 2020ಯನ್ನು ರದ್ದುಗೊಳಿಸುವಂತೆ ಪುನರುಚ್ಚರಿಸಿವೆ' ಎಂದು ಅದು ತಿಳಿಸಿದೆ.

ಮತ್ತಷ್ಟು ರೈತರು ಸೇರಲಿದ್ದಾರೆ
ಡಿಸೆಂಬರ್ 8ರಂದು ನಡೆದ ಭಾರತ್ ಬಂದ್, ರೈತರ ಪ್ರತಿಭಟನೆಯ ಜನಪ್ರಿಯತೆಯನ್ನು ಎಲ್ಲ ಅನುಮಾನಗಳಾಚೆ ಸಾಬೀತುಪಡಿಸಿದೆ. ಬೆಂಬಲಕ್ಕಾಗಿ ಸಮಾಜದ ಎಲ್ಲ ವಿಭಾಗಗಳನ್ನೂ ಅಭಿನಂದಿಸುತ್ತೇವೆ. ಪ್ರತಿಭಟನೆ ಮುಂದುವರಿಯಲಿದೆ. ದೆಹಲಿಯಲ್ಲಿ ಮತ್ತಷ್ಟು ರೈತರು ಜತೆಗೂಡಲಿದ್ದಾರೆ. ಎಲ್ಲ ರಾಜ್ಯಗಳಲ್ಲಿಯೂ ಜಿಲ್ಲಾ ಮಟ್ಟದ ಧರಣಿಗಳು ಶುರುವಾಗಲಿವೆ ಎಂದು ಹೇಳಿದೆ.

ಜಿಯೋ ಸಿಮ್ ಬಹಿಷ್ಕಾರ
ಸರ್ಕಾರದ ಪ್ರಸ್ತಾವದಲ್ಲಿ ಹೊಸತೇನೂ ಇಲ್ಲ. ಹೀಗಾಗಿ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ಮುಂದುವರಿಯಲಿದೆ ಎಂದು ರೈತ ಮುಖಂಡ ಪ್ರಹ್ಲಾದ್ ಸಿಂಗ್ ಭರುಖೇಡಾ ತಿಳಿಸಿದ್ದಾರೆ. ಇದೇ ವೇಳೆ ದೇಶದ ಎಲ್ಲ ರೈತರೂ ಜಿಯೋ ಸಿಮ್ ಬಹಿಷ್ಕಾರ ಮಾಡಲಿದ್ದಾರೆ ಎಂದು ಸಂಘಟನೆಗಳು ತಿಳಿಸಿವೆ.

ಎಲ್ಲ ರಾಜ್ಯಗಳಲ್ಲಿಯೂ ಪ್ರತಿಭಟನೆ
ಡಿಸೆಂಬರ್ 12ರಂದು ದೇಶದ ಎಲ್ಲ ಟೋಲ್ಗಳನ್ನೂ ರೈತರು ಮುಕ್ತಗೊಳಿಸುತ್ತಾರೆ. ದೆಹಲಿ-ಜೈಪುರ ಹೆದ್ದಾರಿ ಬಂದ್ ಆಗಲಿದೆ. ಡಿ. 14ರಂದು ದೆಹಲಿ, ಹರ್ಯಾಣ, ಪಂಜಾಬ್, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಉತ್ತರಾಖಂಡಗಳ ರೈತರು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಒಂದು ದಿನದ ಮುಷ್ಕರ ನಡೆಸುತ್ತಾರೆ. ಹಾಗೆಯೇ ಇತರೆ ರಾಜ್ಯಗಳ ರೈತರು ಡಿ. 14ರಿಂದ ನಿರಂತರ ಪ್ರತಿಭಟನೆ ಆರಂಭಿಸಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.












Click it and Unblock the Notifications