ನೈಸ್ ಗೌಡರ ಪಾಪದ ಕೂಸು : ರೈತರ ಆಕ್ರೋಶ
ಸರಕಾರದ ಭೂಸ್ವಾಧೀನ ಪ್ರಕ್ರಿಯೆಯಿಂದ ರೈತರಿಗೆ ಅನ್ಯಾಯವಾಗುತ್ತಿದೆ, ಜೀವ ಹೋದರೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ನೂರಾರು ಸಂಖ್ಯೆಯಲ್ಲಿ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.
ನೈಸ್ ರಸ್ತೆ ನಿರ್ಮಾಣಕ್ಕಾಗಿ ರೈತರಿಂದ ಹೆಚ್ಚುವರಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳಬಾರದು, ಸ್ವಾಧೀನಪಡಿಸಿಕೊಂಡ ಭೂಮಿಗೆ ನಿಗದಿಪಡಿಸಿದ ಸರಕಾರಿ ದರದಂತೆ ಪರಿಹಾರವನ್ನು ನೀಡಬೇಕು ಮತ್ತು ಟೌನ್ ಶಿಪ್ ನಿರ್ಮಾಣ ಮಾಡಬಾರದು ಎಂಬುದು ರೈತರ ಪ್ರಮುಖ ಆಗ್ರಹಗಳು.
ಎಲ್ಲ ಸಮಸ್ಯೆಗಳು ಪರಿಹಾರವಾಗುವವರೆಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಮತ್ತು ತಕ್ಷಣ ಮುಖ್ಯಮಂತ್ರಿ ಯಡಿಯೂರಪ್ಪನವರು ರೈತರೊಂದಿಗೆ ಮಾತುಕತೆಗೆ ಬರಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು. ಕೇಂದ್ರ ಕೂಡಲೆ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು ಎಂದು ಅವರು ಕೋರಿದರು.
ರೈತ ನಾಯಕ ಪುಟ್ಟಣ್ಣಯ್ಯ ಮಾತನಾಡಿ, ಭೂದರ ನಿಗದಿಪಡಿಸಲು ಇದೇ 18ರಂದು ನಡೆಯುತ್ತಿರುವ ಜಿಲ್ಲಾಧಿಕಾರಿಗಳ ಸಭೆಯನ್ನು ರೈತರೆಲ್ಲ ಬಹಿಷ್ಕರಿಸುತ್ತೇವೆ. ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಯುವವರೆಗೆ ಭೂಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ. ಭೂಸ್ವಾಧೀನ ಪ್ರಕ್ರಿಯೆ ನಿಲ್ಲಿಸುವಂತೆ ರಾಜ್ಯಪಾಲರಿಗೂ ಮನವಿ ಮಾಡುವುದಾಗಿ ಹೇಳಿದರು.
ರೈತರನ್ನು ಮಹಾರಾಣಿ ಕಾಲೇಜಿನ ಬಳಿಯಿರುವ ಫ್ರೀಡಂ ಪಾರ್ಕ್ ಬಳಿಯೇ ಪೊಲೀಸರು ತಡೆಹಿಡಿದಿದ್ದರಿಂದ ರಸ್ತೆಯಲ್ಲಿಯೇ ರೈತರು ಪ್ರತಿಭಟನೆ ನಡೆಸಿದರು. ಇದರಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಸಂಜೆಯವರೆಗೆ ಪ್ರತಿಭಟನೆ ನಡೆಸಿ ನಂತರ ರಾಜಭವನದತ್ತ ರೈತರು ಧಾವಿಸಿದರು.